ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುರಿ ಮಿತ್ರ ಹಾಗೂ ಒಬ್ಬ 'ಆಡು'ಸಂತ..

manjunath-latha

ಮಂಜುನಾಥ್ ಲತಾ

ಆತ್ಮೀಯರೇ,

ಹದಿನಾಲ್ಕು ವರ್ಷಗಳಿಂದ ಪತ್ರಿಕೋದ್ಯಮದ ವಿವಿಧ ಮಜಲುಗಳಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವ ನಾನು ‘ವಿಜಯವಾಣಿ’ ದಿನಪತ್ರಿಕೆಯಲ್ಲಿ ನಾಲ್ಕು ವರ್ಷಗಳಿಂದ ಹಿರಿಯ ಉಪಸಂಪಾದಕನಾಗಿ ಕೆಲಸ ಮಾಡಿ, ಕಾರಣಾಂತರಗಳಿಂದ ಅಲ್ಲಿಗೆ ರಾಜಿನಾಮೆ ನೀಡಿ ಕಳೆದ ಮೂರು ತಿಂಗಳಿನಿಂದಲೂ ಬಿಡುವಾಗಿದ್ದೇನೆ.

kurimitra2ನನ್ನ ಎಂದಿನ ಹವ್ಯಾಸಗಳಾದ ಪುಸ್ತಕ, ಸಿನಿಮಾ, ನಾಟಕ ಇವುಗಳೊಂದಿಗೆ ಒಡನಾಡಿಕೊಂಡಿಕೊಂಡಿದ್ದರೂ ಹೊಟ್ಟೆಪಾಡಿಗಾಗಿ ಪುಸ್ತಕಗಳ ಮುಖಪುಟ ವಿನ್ಯಾಸ, ಒಳಪುಟಗಳ ವಿನ್ಯಾಸ, ಸಾಕ್ಷ್ಯಚಿತ್ರ ನಿರ್ಮಾಣ, ವಿವಿಧ ಪತ್ರಿಕೆಗಳಲ್ಲಿ ಬರವಣಿಗೆ-ಹೀಗೆ ನನ್ನ ಸೃಜನಶೀಲತೆಗೆ ಸ್ಪಂದಿಸುವ ಎಲ್ಲ ಪ್ರಕಾರಗಳಲ್ಲೂ ತೊಡಗಿಸಿಕೊಂಡಿದ್ದೇನೆ.

ಸದ್ಯಕ್ಕೆ ಕರ್ನಾಟಕ ‘ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ’ದವರು ಹೊರತರುತ್ತಿರುವ ‘ಕುರಿಮಿತ್ರ’ ಎಂಬ ಪತ್ರಿಕೆಗೆ ಪುಟ ವಿನ್ಯಾಸ, ಸಂಚಿಕೆ ರೂಪಿಸುವ ಕೆಲಸಗಳನ್ನು ಮಾಡುತ್ತಿದ್ದೇನೆ.

ಸರ್ಕಾರದ ಪ್ರಾಯೋಜಿತ ಪತ್ರಿಕೆಯಾದ ‘ಕುರಿಮಿತ್ರ’ ಕುರಿತು ಯಾರೂ ಕೊಂಕು ನುಡಿಯಬೇಕಾದ ಅಗತ್ಯವಿಲ್ಲವೆಂದು ಭಾವಿಸಿದ್ದೇನೆ. ಯಾಕೆಂದರೆ ಈ ಪತ್ರಿಕೆಯ ರೂವಾರಿಯಾಗಿ ನಿಂತಿರುವವರು ಪ್ರಗತಿಪರ ಚಳವಳಿಗಳೊಂದಿಗೆ ಒಡನಾಡಿಕೊಂಡು ಬಂದಿರುವ ಡಾ.ರಘುಪತಿ ಸಿ.ಎಸ್ ಎಂಬುವರು (ಇವರ ಕುರಿತು ನನ್ನ ಅನೇಕ ಪ್ರಗತಿಪರ, ಸಾಂಸ್ಕೃತಿಕ ಚಳವಳಿಗಳ ಸಂಗಾತಿಗಳಿಗೆ ಗೊತ್ತಿದೆ ಎಂದು ಭಾವಿಸಿದ್ದೇನೆ).

ಈ ಪತ್ರಿಕೆಯನ್ನು ನಾಡಿನ ಎಲ್ಲ ತಳಸಮುದಾಯಗಳ ಪ್ರಾತಿನಿಧಿಕ ಸಂಚಿಕೆಯಾಗಿ ರೂಪಿಸಬೇಕೆಂಬುದು ನಮ್ಮೆಲ್ಲರ ಹಂಬಲ (ಇಲ್ಲಿಯೂ ಸರ್ಕಾರದ ರೀತಿ-ರಿವಾಜು, ಮುಲಾಜುಗಳಿರುವುದನ್ನೂ ತಾವೆಲ್ಲರೂ ಬಲ್ಲಿರಿ).

kurimitra3ಆದರೂ ಈ ಒಂದು ಸಣ್ಣ ಹೆಜ್ಜೆಯ ಮೂಲಕವೇ ನನ್ನಂಥವನೊಬ್ಬ, ಡಾ. ರಘುಪತಿಯಂತಹ ಕ್ರಿಯೇಟಿವ್ ಚಿಂತಕರೊಬ್ಬರು ಏನನ್ನಾದರೂ ಕಟ್ಟುವ ಸಾಹಸ, ಉತ್ಸುಕತೆಯಲ್ಲಿದ್ದೇವೆ. ಯಾಕೆಂದರೆ ‘ನಂಬರ್ ಒನ್’ ಎನ್ನುವುದು ಯಾವಾಗಲೂ ಭ್ರಮೆ ಎಂಬುದು ನನಗೆ ಈಗಾಗಲೇ ಅರಿವಾಗಿದೆ.

ಇದನ್ನೊಮ್ಮೆ ತಮ್ಮ ಬಿಡುವಿನ ವೇಳೆಯಲ್ಲಿ ಗಮನಿಸಿ..ನಮ್ಮೊಂದಿಗೆ ಸಮಾನ ಮನಸ್ಕ ಗೆಳೆಯರು ಇರಲೆಂದು ನಮ್ರವಾಗಿ ಕೇಳಿಕೊಳ್ಳುತ್ತೇನೆ..ಯಾಕೆಂದರೆ ಬದುಕೆಂಬುದು ಸಿದ್ಧಾಂತಕ್ಕಿಂತ ದೊಡ್ಡದು…ನಮ್ಮ ಪತ್ರಿಕೆಯ ಪರಿಭಾಷೆಯನ್ನು ಬಲ್ಲ ಯಾರಾದರೂ ‘ಕುರಿಮಿತ್ರ’ಕ್ಕೆ ಬರೆಯಿರಿ…ಶೋಷಿತ ಸಮುದಾಯಗಳನ್ನು ಸಾಕುತ್ತಿರುವ ಆಡು-ಕುರಿಗಳಂತೆ ನೀವೂ ನಮ್ಮೊಂದಿಗಿರಿ ಎಂದು ಪ್ರೀತಿಯಿಂದ ವಿನಂತಿಸುವೆ..

ನೋಡಿದಾಕ್ಷಣ ರಷ್ಯಾದ ಖ್ಯಾತ ಕಾದಂಬರಿಕಾರ ಲಿಯೋ ಟಾಲ್ಸ್ ಟಾಯ್ ನಂತೆ ಕಾಣುವ ಈ ಅಜ್ಜನ ಹೆಸರು ಶಾಹಿ ಶೆಲ್ಜರ್… ಯುನಿವರ್ಸಿಟಿಯಲ್ಲಿ ಮಾಡುತ್ತಿದ್ದ ಪ್ರೊಫೆಸರ್ ಕೆಲಸ ಬಿಟ್ಟು ಹುಚ್ಚು ಶ್ರದ್ಧೆಯೊಂದಿಗೆ ಆಡು ಕಾಯಲು ನಿಂತ ಈ ಸಂತನ ಕುರಿತು ‘ಕುರಿಮಿತ್ರ’ದಲ್ಲಿ ಪ್ರಕಟವಾದ ವಿಶೇಷ ಲೇಖನ ನಿಮ್ಮ ಓದಿಗಾಗಿ ಇಲ್ಲಿದೆ..

ನಿರೂಪಣೆ: ಡಾ. ರಘುಪತಿ ಸಿ.ಎಸ್.

ಶಾಹಿ ಶೆಲ್ಜರ್ ನ ಚೀಸ್ ಮಾಡುವ ಗುಹೆ. ಸಂತೋಷದಿಂದ ನಲಿಯುವ, ನ್ಯೂಬಿಯನ್ ಆಂಗ್ಲೋ – ನ್ಯೂಬಿಯನ್ ಮೇಕೆಗಳು. ಇವುಗಳನ್ನು ನೋಡುತ್ತಾ ಅನುಭವಿಸುವ ಶಾಂತಿ, ಸರಳತೆಯ ಅನುಭೂತಿ, ನಮ್ಮನ್ನು ಮೂಲಬೇರುಗಳಿಗೆ ಕೊಂಡೊಯ್ಯುವ ಪರಿಯನ್ನು ಫಾರ್ಜಾನ ಕಂಟ್ರಾಕ್ಟರ್ ತಮ್ಮ ಹುಡುಕಾಟದಲ್ಲಿ ದಾಖಲಿಸಿದ್ದಾರೆ. ಕಂಟ್ರಾಕ್ಟರ್ ಮಾತುಗಳಲ್ಲಿಯೇ ಕೇಳೋಣ…

shahi-sheldzer1ಹಲವು ತಿರುವು, ತಗ್ಗು – ದಿಣ್ಣೆಗಳನ್ನು ಇಳಿದು ಕೊನೆಗೂ ಜೂಡಿಯನ್ ಪರ್ವತಗಳಲ್ಲಿರುವ ಶಾಹಿ ಶೆಲ್ಜರ್ ಗುಹೆ ತಲುಪಿದೆವು. ನಾನೊಬ್ಬನ ಕೈಯಲ್ಲಿ ಗುಹೆಯನ್ನು ಹುಡುಕಲು ಸಾಧ್ಯವಾಗುತ್ತಿತ್ತೆ ಎಂಬ ಅನುಮಾನ ನಿಜವಾಯಿತು. ನನ್ನ ಒಬ್ಬ ಸ್ನೇಹಿತರ ನೆರವಿಲ್ಲದೆ ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ.

ಇಲ್ಲೊಬ್ಬ ಸಂತನಂತಹ ವ್ಯಕ್ತಿ. ನಮ್ಮ ಜೀವನದಲ್ಲಿ ಅಪರೂಪಕ್ಕೆ ಸಿಗುವ, ಕಾಣುವ, ನೋಡಿದರೆ ಸಂತೋಷ ಉಕ್ಕಿಸುವ ಈ ಅಜ್ಜನೇ ಶಾಹಿ ಶೆಲ್ಜರ್. ಸಂತೋಷವಾಗಿ ಕುಣಿಯುವ ಅಂದವಾದ ಆಡುಗಳನ್ನು ಕಾಯುತ್ತಾ ಇರುವ ಈತ ಅದ್ಬುತವಾದ ಚೀಸ್ ಮಾಡುತ್ತಾನೆ. ತಣ್ಣಗಿನ ಗುಹೆಗಳಲ್ಲಿ ಮಾಗುವ ಈ ಚೀಸ್ ಕಾರ್ಪೋರೇಟ್ ಪ್ರಪಂಚಕ್ಕೆ ಸೆಡ್ಡು ಹೊಡೆಯುತ್ತದೆ. ಸಾವಯವ ಆಹಾರ ಚಳುವಳಿಗೆ ಇದು ಚಾಂಪಿಯನ್ ಪದಾರ್ಥವಾಗಿದೆ.

ಶಾಹಿ ಸೃಷ್ಟಿಸಿಕೊಂಡ ಈ ಲೋಕ ಜೆರುಸಲಿಮ್ ನ ಪಶ್ಚಿಮ ಭಾಗದಲ್ಲಿನ ಐಟನ್ ಪರ್ವತ ಪ್ರದೇಶದ ಪೂರ್ವ ಇಳಿ ಜಾರಿನಲ್ಲಿದೆ. ನನಗೆ ಆ ಪ್ರದೇಶದ ಸುತ್ತ ಒಂದು ತರದ ಪ್ರಭಾವಳಿ ಇದೆ ಎನ್ನುವ ಭಾವ ಮೂಡಿಸುತ್ತದೆ. ಹಾಗಾಗಿ ಆಗಾಗ್ಗೆ ನನ್ನನ್ನು ಇದಕ್ಕೆ ಕನೆಕ್ಟ್ ಮಾಡಿಕೊಳ್ಳುತ್ತಿರುತ್ತೇನೆ.

ಇದೊಂದು ತರ ನಮ್ಮ ಮೂಲ ಬೇರುಗಳಿಗೆ ವಾಪಸ್ಸು ಜಾರಿದಂಥ ಅನುಭವದ ಅನುಭೂತಿ ಮೂಡಿಸುತ್ತದೆ. ಮರೆತ ನಿಮ್ಮನ್ನೇ ನೀವು ಸ್ಪರ್ಶಿಸಿದಂತೆ. ಇಂಡಿಯಾದ ಆಧ್ಯಾತ್ಮಿಕ ಗುರು ಒಶೋ ಮತ್ತು ಶಾಹಿ ಈ ಇಬ್ಬರೂ ಒಟ್ಟಿಗೆ ಕುಳಿತು ಆನಂದ ಭರಿತ ಮನಸ್ಸುಗಳೊಂದಿಗೆ ಹರಟೆ ಹೊಡೆಯುತ್ತಿದ್ದಾರೆ. ಆಗ ನಾನು ಅಲ್ಲಿ ಸುಮ್ಮನೆ ಸುಳಿದಾಡುತ್ತಿದ್ದೇನೆ ಎನ್ನಿಸುತ್ತಿದೆ.

ನನ್ನ ಕಷ್ಟದ ಹಾದಿ ಮುಗಿಸಿ ಈ ಎಲ್ಲಾ ಹಾಯ್ ಎನಿಸುವ ಆಡುಗಳಿಗೆ ಹಲೋ ಎನ್ನುವ ಮೂಲಕ ನನ್ನ ಮನಸ್ಸನ್ನು ಇಲ್ಲಿ ನೆಲೆಯೂರಿಸುವ ಪ್ರಯತ್ನ ಮುಂದುವರಿಸಿದೆ.

ಶಾಹಿ, ಈ ಲೋಕ ನಿಮಗೇನು ಕೊಟ್ಟಿದೆ ಎಂದು ಆರಾಮಾಗಿ ಮಾತಿಗಿಳಿದೆ.

“ಹೌದು, ನಾನಿಲ್ಲಿಗೆ ಬಂದು 35 ವರ್ಷಗಳಾದವು. ನಾನೊಂದು ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿದ್ದೆ. ಇದ್ದಕ್ಕಿದ್ದಂತೆ ಒಂದು ದಿನ ಅದು ಸಾಕೆನ್ನಿಸಿತು. ನನ್ನ ಬದುಕಿಗೆ ಇನ್ನೇನೋ ಒಂದು ಒದಗಿ ಬರಬೇಕಿದೆ ಎನಿಸಿತು ಇಲ್ಲಿಗೆ ಬಂದೆ. ಸ್ಥಳೀಯ ಕೆಲವು ಮೇಕೆಗಳೊಂದಿಗೆ ನಿಧಾನವಾಗಿ ನನ್ನ ಹೊಸ ಬದುಕು ಆರಂಭಿಸಿದೆ.

ಈ ಪರ್ವತ ಪ್ರದೇಶಗಳ ಶಕ್ತಿ ಅವಾಹಿಸಿಕೊಂಡು ಮೇಯುತ್ತಾ ನಿಸರ್ಗದೊಡನೆ ನಿತ್ಯ ಒಡನಾಡಿಕೊಂಡು ಬೆಳೆಯುತ್ತಿವೆ ಈ ಮೇಕೆಗಳು “ಸಿರಿಯಾದಿಂದ ಜಾಂಗಬಿ ಆಡುಗಳು, ಆಫ್ರಿಕಾದಿಂದ ನೂಬಿಯನ್ ಆಡುಗಳು, ಬ್ರಿಟನ್ ನಲ್ಲಿ ಅಭಿವೃದ್ಧಿ ಪಡಿಸಿದ ಆಂಗ್ಲೋ ನ್ಯೂಬಿಯನ್ ಆಡುಗಳು ನನ್ನ ಗುಹೆಯನ್ನು ಸೇರಿಕೊಂಡವು. ಆಂಗ್ಲೋ ನ್ಯೂಬಿಯನ್ ಮೇಕೆಗಳೊಂದಿಗೆ ಜಾಂಗಬಿ ಮೇಕೆಗಳನ್ನು ಕೂಡಿಸಿ ಈ ನೆಲಕ್ಕೆ ಒಗ್ಗುವಂತಹ ಸೊಗಸಾದ ತಳಿಯನ್ನು ಪಡೆದಿದ್ದೇನೆ. ಸ್ಥಳೀಯ ತಳಿ ವರ್ಷಕ್ಕೆ 100 ಲೀಟರ್ ಹಾಲು ಕೊಡುತ್ತಿದ್ದರೆ ನನ್ನ ತಳಿ ವರ್ಷಕ್ಕೆ 800 ಲೀಟರ್ ಹಾಲು ಕೊಡುತ್ತಿವೆ. ಇವತ್ತು ನಾನೆಲ್ಲಿಗೆ ತಲುಪಿದ್ದೇನೆ ಎಂದು ಮುಗುಳ್ನಗೆಯ ಲಾಸ್ಯದೊಂದಿಗೆ ತಮ್ಮ ಮಾತು ಮುಗಿಸಿದರು.

shahi-sheldzer3ಈಗ ಇಲ್ಲಿರುವುದು ದೈವಿಕ ಪ್ರಭೆಯ ಚೀಸ್ ಎನಿಸಿತು. ಈಗ ಈ ಚೀಸ್ ಜಾಗತಿಕ ಪ್ರಸಿದ್ಧಿ ಹೊಂದಿದೆ. ಕೆಲವೇ ಕೆಲವು ರೆಸ್ಟೋರೆಂಟ್ ಗಳಿಗೆ ಸರಬರಾಜು ಮಾಡುವುದನ್ನು ಬಿಟ್ಟರೆ ಕಮರ್ಷಿಯಲ್ ಆಗಲೊಲ್ಲದ ಚೀಸ್ ಎಂದಾಗಿದೆ ಇದು.

ಅಷ್ಟೇ ಅಲ್ಲದೇ ಶಾಹಿ ಎಲ್ಲರಿಗೂ ಇಲ್ಲಿಗೆ ಭೇಟಿ ನೀಡುವಂತೆ ಪ್ರೋತ್ಸಾಹಿಸುತ್ತಾರೆ. ಚೀಸ್ ನ ಸವಿಯನ್ನು ಅನುಭವಿಸುತ್ತಾ ಚೀಸ್ ಮಾಡುವ ಬಗೆಯನ್ನು, ಚೀಸ್ ಸವಿಯುವ ಚಂದವನ್ನು ಕಲಿಸಿಕೊಡಲು ಈ ಘಾಟಿ ಮುದುಕ ಯಾವಾಗಲೂ ಉತ್ಸುಕವಾಗಿರುತ್ತಾರೆ.

ನಿಧಾನ, ನಿಧಾನ ಎನ್ನುತ್ತಾ ಚೀಸ್ ಚೂರನ್ನು ನಾಲಿಗೆಗೆ ಹಾಕಿಕೊಂಡು ನಿಧಾನಕ್ಕೆ ಹೊರಳಿಸುತ್ತಾ, ಹೊರಳಿಸುತ್ತಾ ಕರಗುತ್ತಿರುವ ಚೀಸ್ ಅನ್ನು ನಾಲಿಗೆ ತುದಿಗೆ ತಂದುಕೊಂಡು ಅದರ ಸುತ್ತ ನಾಲಿಗೆಯನ್ನು ತಿರುವುತ್ತಾ ಇನ್ನೊಂದು ಲೋಕಕ್ಕೆ ತೇಲಿ ಹೋಗುತ್ತಾರೆ ಶಾಹಿ.

ದೇವರ ಆಣೆಯಾಗಿಯೂ ಇದು ವಿಭಿನ್ನ ಅನುಭವ ಎನಿಸಿತು. ವೈನ್, ಆಲೀವ್ ಆಯಿಲ್, ಟೀ, ಬ್ರೆಡ್, ಹಬ್ಬದ ಅಡುಗೆ ಸವಿದಿದ್ದ ಈ ಮನಸ್ಸಿಗೆ ಈ ಚೀಸ್ ಈ ಲೋಕದ್ದು ಅನಿಸಲೇ ಇಲ್ಲ.

ಅಪೂರ್ವ ಸ್ವಾದಕ್ಕೆ, ಸವಿರುಚಿಗೆ ಇನ್ನೊಂದು ಭಾಷ್ಯ ಬರೆದಿತ್ತು. ನಿಜಕ್ಕೂ ನಾನು ಶಾಹಿ ಮುದುಕನಿಗೆ ಶರಣಾಗಿದ್ದೆ.

‍ಲೇಖಕರು Admin

9 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading