ಮೂರು ಜರ್ಮನ್ ಕವನಗಳು –
ಬ್ರೆಕ್ಟ್ ನವು ಎರಡು ಮತ್ತು ಬ್ರೆಕ್ಟ್ ಕುರಿತು ಒಂದು.
ಎಲ್ಲ ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯಗಳು!
Frohes Neues Jahr !
ನಿನ್ನೆ ದಿನ ೨೦೧೨ ರ ಮೊದಲ ದಿನ .ಭಾನುವಾರ ಕೂಡಾ. ಜರ್ಮನ್ ಕವನಗಳನ್ನು ಓದುತ್ತಾ ,ಹೊರಗೆ ಹನಿ ಹನಿ ಬೀಳುತ್ತಿದ್ದ ಮಳೆಯ ಕಣ್ಣುಮುಚ್ಚಾಲೆ ಆಟ ನೋಡುತ್ತಾ ,ಹಿಂದಿನ ದಿನ ನಡುರಾತ್ರಿಯಲ್ಲಿ ಇಲ್ಲಿ ವ್ಯೂರ್ತ್ಸ್ ಬುರ್ಗ್ ನಗರದಲ್ಲಿ ಆಕಾಶದಲ್ಲಿ ಸಿಡಿದ ಚಿಮ್ಮಿದ ಬಣ್ಣ ಬಣ್ಣದ ಸಿಡಿಮದ್ದು ಬಾಣ ಬಿರುಸುಗಳನ್ನು ನೆನೆದುಕೊಳ್ಳುತ್ತಾ ೨೦೧೨ರ ಮೊದಲ ದಿನವನ್ನು ಆಚರಿಸಿದೆ. ಬ್ರೆಕ್ಟ್ ಕವನಗಳನ್ನು ಕೆಲವನ್ನು ಕನ್ನಡಕ್ಕೆ ಅನುವಾದಿಸಿದೆ.ಹರ್ಮನ್ ಮುಲ್ಲರ್ ನ ಒಂದು ಕವನವನ್ನು ಕೂಡ.
ಜರ್ಮನ್ ಕವಿ ನಾಟಕಕಾರ ವಿಮರ್ಶಕ ಬೆರ್ತೊಲ್ತ್ ಬ್ರೆಹ್ತ್ ( ಕನ್ನಡದಲ್ಲಿ ’ಬ್ರೆಕ್ಟ್ ‘ ಎಂಬ ಪದ ಬಳಕೆಯಾಗಿದೆ ) ( Bertolt Brecht ,1898-1956 ) ಕವನಗಳಲ್ಲಿ ಎರಡನ್ನು ಕನ್ನಡಕ್ಕೆ ಅನುವಾದಿಸಿದೆ.ಜರ್ಮನ್ ಕವಿ,ನಾಟಕಕಾರ ,ರಂಗ ನಿರ್ದೇಶಕ ಹೈನೆರ್ ಮುಲ್ಲರ್ ( Heiner Muller ,1929-1995 ) ಬ್ರೆಕ್ಟ್ ಕುರಿತು ಬರೆದ ಒಂದು ಕಿರುಕವನವನ್ನು ಕೂಡಾ ಕನ್ನಡಕ್ಕೆ ತಂದಿದ್ದೇನೆ. ಈ ಕವನಗಳು ಅರುವತ್ತು ವರ್ಷಗಳಿಗಿಂತ ಹಿಂದಿನವು .ಆದರೆ ಇವತ್ತಿಗೂ ಈಗ ಬಂದಿರುವ ಹೊಸ ವರ್ಷಕ್ಕೂ ಸಲ್ಲುತ್ತವೆ.
ಬ್ರೆಕ್ಟ್ ನ ಕವನಗಳು : ‘ನೀರು ಚಿಮುಕಿಸು ತೋಟಕ್ಕೆ ‘ ಮತ್ತು ’ ಹಾಲಿವುಡ್ ಶೋಕಗೀತೆ ‘.
ನೀರು ಚಿಮುಕಿಸು ತೋಟಕ್ಕೆ
ನೀರು ಚಿಮುಕಿಸುವುದು ತೋಟಕ್ಕೆ ,ಜೀವ ಕೊಡುವುದು ಹಸುರಿಗೆ !
ನೀರು ಕುಡಿಸುವುದು ಬಾಯಾರಿದ ಮರಗಳಿಗೆ .
ಕುಡಿಸು ನೀರನ್ನು ಹೊಟ್ಟೆ ಬಿರಿಯುವಷ್ಟು ,
ಆದರೆ ಮರೆಯಬೇಡ ಪೊದೆಗಳನು ಅಷ್ಟು
ಕಾಯಿ ಬಿಡದವುಗಳನು ,
ಬಸವಳಿದ ಕರಿಯ ಕೋಲುಗಳನು ಕೂಡಾ .
ಮರೆಯಬೇಡ ಹೂಗಿಡಗಳ ನಡುವೆ ಮೊಳೆತ ಕಳೆಗಿಡಗಳನು
ಪಾಪ ,ಅವೂ ಬಾಯಾರಿವೆ ನೋಡು .
ನೀರು ಕೇವಲ ಹಸುರುಹುಲ್ಲಿಗೆ ಕೇವಲ ಬಾಡಿದವುಗಳಿಗೆ ಮಾತ್ರ ಅಲ್ಲ .
ಕುಡಿಸು ನೀರನು ಬಂಜರು ಭೂಮಿಗೆ ಕೂಡಾ
ತಣ್ಣಗಾಗಲಿ ಅದರ ಹೊಟ್ಟೆಯೂ ನೋಡಾ .
ಹಾಲಿವುಡ್ ನ ಶೋಕಗೀತೆ
ಹಾಲಿವುಡ್ ಗ್ರಾಮವನ್ನು ರೂಪಿಸಿದವರು ಅದನ್ನು ಕಲ್ಪಿಸಿದ್ದು
ಅದು ಸ್ವರ್ಗವಾಗಿ ಇರಬೇಕು ಎಂದು.
ಅವರ ಗಟ್ಟಿ ತೀರ್ಮಾನವೆಂದರೆ :
ಸ್ವರ್ಗ ಮತ್ತು ನರಕ ಎಂಬ ಎರಡು ಲೋಕಗಳನು
ದೇವರು ಸೃಷ್ಟಿಸುವ ಅಗತ್ಯ ಇರಲಿಲ್ಲ .
ಒಂದೇ ಸಾಕು ,ಹಾಲಿವುಡ್ ನಂತೆ : ಅದು ಸ್ವರ್ಗ .
ಅದರ ಒಳಗೆಯೇ ಇದೆ ದಾರಿದ್ರ್ಯ ನಿರಾಶೆ
ನರಕದಲಿ ಇರುವಂತೆ !
ಬ್ರೆಕ್ಟ್
– ಹರ್ಮನ್ ಮುಲ್ಲರ್ ಕವನ
ಹೌದು , ಆತ ಬದುಕಿದ್ದು ಕತ್ತಲೆಯ ದಿನಗಳಲ್ಲಿ .
ಈಗ ದಿನಗಳು ಬೆಳಕು ಕಂಡಿವೆ.
ಈಗ ದಿನಗಳು ಕತ್ತಲೆಯಲ್ಲೇ ಇವೆ.
ಬೆಳಕು ಹೇಳುತ್ತಿದೆ , ‘ ನಾನು ಕತ್ತಲೆ’ ಎಂದು ,
ಹೌದು, ಅದು ಸತ್ಯ ಹೇಳುತ್ತಿದೆ !
ಕತ್ತಲೆ ಹೇಳುತ್ತಿದೆ , ‘ ನಾನು ಬೆಳಕು ‘ಎಂದು,
ಹೌದು, ಅದು ಸುಳ್ಳು ಹೇಳುತ್ತಿಲ್ಲ









ಸರ್, ಬ್ರೆಹ್ತ್(ಬ್ರೆಕ್ಟ್)ನ ಕುರಿತ ಕವನವಂತೂ ತುಂಬಾ ಇಷ್ಟವಾಯ್ತು.
ಹಾಗೆಯೇ ಮೊದಲ ಕವನದ
“ನೀರು ಕೇವಲ ಹಸುರುಹುಲ್ಲಿಗೆ ಕೇವಲ ಬಾಡಿದವುಗಳಿಗೆ ಮಾತ್ರ ಅಲ್ಲ .
ಕುಡಿಸು ನೀರನು ಬಂಜರು ಭೂಮಿಗೆ ಕೂಡಾ
ತಣ್ಣಗಾಗಲಿ ಅದರ ಹೊಟ್ಟೆಯೂ ನೋಡಾ.”
ಈ ಸಾಲುಗಳು ಸಹ!
ಹೊಸ ವರ್ಷವನ್ನು ನೀವು ಸ್ವಾಗತಿಸಿದ ಈ ರೀತಿ ಅನುಕರಣೀಯ.
ಮತ್ತೊಮ್ಮೆ ಹೊಸ ವರ್ಷದ ಶುಭಾಶಯ ಸರ್.
ಕುಡಿಸು ನೀರನು ಬಂಜರು ಭೂಮಿಗೂ ಕೂಡ ಎನ್ನವ ಆಶಾಭಾವನೆಯ ಅನುವಾದ ಕವಿತೆ ತುಂಬಾ ಚೆನ್ನಾಗಿದೆ ಸರ್.