ಇದು ನೆನಪು- ನಿನ್ನ ನೆನಪು. ಕಾಡುವ ನೆನಪು. ಕೊಲ್ಲುವ ನೆನಪು. ಓಹ ಎನಿಸುವಂತೆ ಮೂಡಿ ಬಂದ ಒಂದು ಹೊಚ್ಚ ಹೊಸ ಕ್ಯಾಸೆಟ್ ನ ಹೆಸರು- ನಿನ್ನ ನೆನಪು. ‘ಇಲ್ಲಿವೆ ಕೆಲವು ಸೂಕ್ಷ್ಮ ಕವನಗಳು, ಇವುಗಳ ಭಾವನಾತ್ಮಕ ತುಡಿತ, ಅಧುನಿಕ ಸಂಗೀತದ ದ್ವನಿಯಲ್ಲಿ ಹೊಮ್ಮಿದೆ’ ಎನ್ನುತ್ತಾರೆ ಕ್ಯಾಸೆಟ್ ಕನಸು ಕಟ್ಟಿದವರು. ಇದು ಒಂದು ಕನಸುಗಾರರ ಸಾಹಸ. ಹೊಸ ತಲೆಮಾರಿನ, ಹೊಸ ಚಿಂತನೆಯ ಮನಸ್ಸುಗಳು ಒಂದುಗೂಡಿದ ಕಾರಣ ಹೊರಬಿದ್ದ ಸಾಹಸ.
ಎಸ್ ಭಾಗೆಶ್ರೀ ಕವಿತೆಗಳು ಕಾಡುವಂತಿದೆ. ಹೃದಯವನ್ನು ಮೀಟುತ್ತದೆ. ಎಸ್ ಆರ್ ರಾಮಕೃಷ್ಣ ಅವರ ರಾಗ ಸಂಯೋಜನೆ ಹುಬ್ಬೇರುವಂತೆ ಮಾಡುತ್ತದೆ. ಬಿ ಆರ್ ಲಕ್ಷ್ಮಣರಾವ್ ಅವರ ಗೋಪಿ ಮತ್ತು ಗಾಂದಲೀನಾ ಕವಿತೆ ಜಾಲಿ ಬಾರಿನಲ್ಲಿ..ಬಂದ ನಂತರ ಯುವಕರ ಮನಸ್ಸಿಗೆ ಕಿಚ್ಚು ಹಚ್ಚುವ ಇನ್ನೊಂದು ರಾಗ ಸಂಯೋಜನೆ ಬಂದಿರಲಿಕ್ಕಿಲ್ಲ. ಹಾಗೆ ಕಾಡಿ ಕಾಡಿ ಕೊಲ್ಲುವಂತೆ ರಾಗ ಸಂಯೋಜಿಸಿದ್ದಾರೆ. ಕನ್ನಡಕ್ಕೂ ಹೈ ಫೈ ತಾಕತ್ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸುಚಿತ್ರ ಲತಾ ಅಂತೂ ಒಂದೇ ಬಾಣದಲ್ಲಿ ಕೇಳುಗರನ್ನು ಚಿತ್ ಮಾಡುತ್ತಾರೆ. ನಿತಿನ್ ರಘುವೀರ್, ದೀಪು ಕೆ ನಾಯರ್ ಫ್ರೆಶ್.
ಈ ಸಿ ಡಿ ಅಲ್ಲಿಗೇ ನಿಂತಿಲ್ಲ. ಇದಕ್ಕಾಗಿ ಬ್ಲಾಗ್ ಇದೆ. ಹಾಡುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ ಭಾಗೇಶ್ರೀ ಕವನಗಳನ್ನು ಓದಬೇಕಾದರೆ ಬರಹ ರೂಪದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ತಾಣಕ್ಕೆ ಭೇಟಿ ಕೊಡಿ: themusicmint
ಮ್ಯೂಸಿಕ್ ಮಿಂಟ್ ತಯಾರಿಸಿ ಲಹರಿ ಮಾರಾಟ ಮಾಡುತ್ತಿರುವ ಈ ಸಿ ಡಿ ಕೇವಲ ೩೦ ರೂ. ಬೇಕಾದಲ್ಲಿ ಲಹರಿ ಮಳಿಗೆಯಲ್ಲಿ ವಿಚಾರಿಸಿ. ಇಲ್ಲವೇ srramakrishna@gmail.com ಮೈಲ್ ಮಾಡಿ.
ಎಸ್ ಭಾಗೇಶ್ರೀ ಅವರ ಕವಿತೆಯ ಜ್ಹಲಕ್ ಗೊತ್ತಾಗಲು ಒಂದು ಕವಿತೆ ಇಲ್ಲಿದೆ.
ಆದರೂ….
ನಿನ್ನ ಹೆಜ್ಜೆ ದನಿಯಿಲ್ಲ
ನಿನ್ನ ನೆರಳ ಸುಳಿವಿಲ್ಲ
ಆದರೂ
ನನ್ನ ಮಾತೆಲ್ಲ ನಿನ್ನ ಜೊತೆಯಲ್ಲೇ
ನಸುಕು ಬಿದ್ದ ಕನಸಿನಲ್ಲಿ
ನುಸುಳಿ ಬಂದ ಭ್ರಮೆ ನೀನು
ಆದರೂ
ನನ್ನ ಮಾತೆಲ್ಲ ನಿನ್ನ ಜೊತೆಯಲ್ಲೇ
ಸಂಜೆ ಕಡಲ ತೆರೆ ಏರಿ
ಕಳೆದು ಹೋದ ಝಳ ನೀನು
ಆದರೂ
ನನ್ನ ಮಾತೆಲ್ಲ ನಿನ್ನ ಜೊತೆಯಲ್ಲೇ






Blog Link Plzz…
simply Great