
ಬಿ.ಸುರೇಶ
ಕಾಯುತಿಹಳು ನೀಳವೇಣಿ
ಕಂಭಕ್ಕೊರಗಿ,
ಅಂವ ಬರುವನೋ ಬಾರನೋ
ಎಂದು ಕೊರಗಿ.
“ಮೆಚ್ಚಿಸ ಬೇಕಿದ್ದರೆ ಅವನನ್ನ
ಉಡಬೇಕು ಹೊಕ್ಕಳು ಕಾಣುವಂತೆ
ಸೀರೆಯನ್ನ!
ಮುಡಿಯಬೇಕು ಮೂಲೋಕ ಘಮಿಸುವಂತೆ
ತುರುಬುತುಂಬ ಹೂವನ್ನ!”
ಹಾಗಂದಿದ್ದ ಗೆಳತಿಯ ಮಾತನ್ನ
ಮೀರದೆ ಅಲಂಕೃತಳಾಗಿದ್ದಾಳೆ
ಕಾಯುತ್ತ ಅವನ ಹಾದಿಯನ್ನ…
ಶತಮಾನದ ಲೆಕ್ಕವಾಯಿತಾಗಲೇ
ಬಾರದವನ ಹೆಸರಲ್ಲಿ ಕಲ್ಲಾಗಿಹಳು ನೀಳೆ
ಇನ್ನವಳು ಖಾಯಂ ದೇವುಳವಾಸಿ ಆಗಿಹಳೆ
ಕೊರಗುತ್ತಿಹಳು ಜೊತೆಗಾತಿಯಾಗಲೇ
“ಅಂವ ಬರುವನೋ ಬಾರನೋ
ಗಂಡು ಸಂತೆ ನೆರೆಯುವುದು ನೋಡೆಲೇ…!
ಸೊಂಟ ನೇವರಿಸಿ,
ಸಿಂಹಕಟಿ ಎಂದು ಹೆಸರಿಸಿ,
ಸೌಂದರ್ಯ ಪ್ರಜ್ಞೆಯ ಮಾತು ಪೂಸಿ
ಮಾರಿಬಿಡುವರೆಲೆ, ನೀಳೆ
ಮಾತಿಗವಕಾಶವಿಲ್ಲ ಇನ್ನ
ಬಾಯಿಬಿಟ್ಟರೆ, ಕಟ್ಟುತ್ತಾರೆ
ದೇಶದ್ರೋಹಿ ಪಟ್ಟವನ್ನ…
ನಿನ್ನ ತಾವಿನ್ನು ಬಾಗಿಲಲ್ಲೇ…
ಖಾಯಂ ದೀಪದಮೊಲ್ಲೆ
ಇಲ್ಲ… ಎಂದೆಂದಿಗೂ
ಗರ್ಭಗುಡಿ ಪ್ರವೇಶವಿಲ್ಲವಲ್ಲೇ!”
ಮುಖತಿರುವಿ ನಿಂತಿಹಳು ಬಾಲೆ
ಕಣ್ಣೀರು ಕಾಣದ ಹಾಗೆ…
ಕೈಚಾಚಿ ನಿಂತಿಹಳು ಕೋಮಲೆ
ಅವನ ಹಿಡಿತಕ್ಕೆ ಸಿಗುವ ಹಾಗೆ..
ಆದರೆ..
ನವರಂಗದಾಚೆ ನಾಲ್ಕು ಮೊಳ ದೂರದಲ್ಲೇ
ನಿಂತವಗೆ ನಿನ್ನ ದನಿ ಕೇಳದಲ್ಲೇ…!
ಅವನಿಗಾಗಿ ಮತ್ತೆಷ್ಟು ಕಾಯುವೆ ಇಲ್ಲೇ.
ಒಮ್ಮೆ ಕೊಡವಿಬಿಡು ಬಾಲೆ,
ಈ ಕಾಯುವಾಟವು ಎಂದಿಗೂ ಸೋಲೇ!
ಧಿಕ್ಕಾರ ಹೇಳಿಬಿಡು ಈಗಲೇ!
ಈ ಕಲ್ಲಿನಂಗಣದಾಚೆ
ಕಣ್ಣು ಹಾಯಿಸಿದಷ್ಟೂ ಆಗಸವಿದೆಯಲ್ಲೇ!
ಕನಸು ನೇಯುವುದಕ್ಕೆ
ಲೋಕವೇ ಇದೆಯಲ್ಲೇ..!
ಅಳಿಯಲಿ ಬಿಡು ಕಾಯುವ ಖಾಯಿಲೆ
ಉಳಿಯುವಿದಾದರೆ ಉಳಿಯಲಿ ನಿನ್ನ ಲೀಲೆ!





0 Comments