ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಮಲಾದಾಸ್, ಭಾಗೇಶ್ರೀ, ಕಾಮರೂಪಿ…

ಭಾಗೇಶ್ರೀ

ತಮ್ಮ ಬ್ಲಾಗ್ ನಲ್ಲಿ ಕಮಲಾದಾಸ್ ಗೊಂದು ಸಲಾಂ ಹೇಳಿದ್ದರು. ಅದಕ್ಕೆ ಕಾಮರೂಪಿ ಎಂದೇ ಹೆಸರಾದ ಹಿರಿಯ ಬರಹಗಾರ ಪ್ರಭಾಕರ ಅವರು ಪ್ರತಿಕ್ರಿಯಿಸಿದ್ದಾರೆ.

ಅದು ಭಾಗೇಶ್ರೀ ಬರವಣಿಗೆಯಷ್ಟೇ ಮಹತ್ವದ್ದು ಅನಿಸಿದ್ದರಿಂದ ಇಲ್ಲಿದೆ-

kamarupi-nagerupa

ಚಿತ್ರ: ಶಮ, ನಂದಿಬೆಟ್ಟ

ಪ್ರಿಯ ಶ್ರೀಮತಿ ಬಾಗೇಶ್ರೀ,
ತೀರಿಕೊಂಡ ಕಮಲಾ ದಾಸ್ ಉರುಫ್ ಸುರಯ್ಯ ಬಗ್ಗೆ ನಿಮ್ಮ ಬರವಣಿಗೆ ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳುತ್ತೇನೆ, ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳಲಾರೆ.
ಆದರೆ ಇದಕ್ಕೆ ಮುಂಚೆ ನಿಮ್ಮ ಬರವಣಿಗೆಯ ಬಗ್ಗೆ ಒಂದು ಮಾತು ಹೇಳಲೇಬೇಕು. ಬಹಳ ನೇರವಾದ ಬರವಣಿಗೆ, ಯಾವರೀತಿಯ ಫಾಂಗ್ ಫೂಂಗ್ ಇಲ್ಲದ ಬರವಣಿಗೆ. ಫಾಂಗ್ ಫೂಂಗ್ ಅಸ್ಸಾಮಿಯಾ ಭಾಷೆಯ ಒಂದು idiom, ಇಂಗ್ಲಿಷಿನಲ್ಲಿ ಹೇಳಬೇಕೆಂದರೆ ನಿಮ್ಮ ಬರವಣಿಗೆಯಲ್ಲಿ no beating about the bush, no waffling. ಬರೆಯಬೇಕಾದ್ದನ್ನು ನೇರವಾಗಿ ಬರೆಯುವುದರಲ್ಲಿ ಏನು ತಾನೇ ವೈಶಿಷ್ಟ್ಯ ಅಂತ ನೀವು ಕೇಳಬಹುದು. ಆದರೆ ಹೇಳಬೇಕಾದ್ದನ್ನು, ಬರೆಯಬೇಕಾದ್ದನ್ನು ನೇರವಾಗಿ ಹೇಳುವುದು, ಬರೆಯುವುದು ಇಷ್ಟು ಸಹಜ ಪ್ರವೃತ್ತಿಯಲ್ಲ. ಈ ಗುಣ, ಈ ಬಲಿಷ್ಟತೆ ನಾನಂತೂ ಈವರೆಗೂ ಸಾಧಿಸಿಕೊಂಡಿಲ್ಲ. ಅದಕ್ಕೇ ಈ ಕಳೆದ ಎಂಠತ್ತ್ತು ತಿಂಗಳುಗಳಲ್ಲಿ ನಿಮ್ಮ ಪ್ರತಿಯೊಂದು ಕನ್ನಡ ಪ್ರಬಂಧವೂ ನಾನು ಮತ್ತೆ ಕಲಿಯಬೇಕೆಂದಿರುವ ಕನ್ನಡ ಬರವಣಿಗೆಯಲ್ಲಿ ಸಹಾಯ ಮಾಡಿದೆ, ಮಾಡುತ್ತಿದೆ. ಇದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿದ್ದೇನೆ.

ಮಾಧವಿ ಕುಟ್ಟಿ, ಕಮಲಾ ದಾಸ್, ಸುರಯ್ಯ. ಈ ಮಹಿಳೆಯ ಬಹುಮುಖೀ ವ್ಯಕ್ತಿತ್ವ ನಿಮ್ಮ ಪ್ರಬಂಧದಲ್ಲಿ ಎತ್ತಿ ತೋರಿಸಿದ್ದೀರಿ. ಸನ್ ಸಾವಿರದೊಂಭೈನೂರೆಪ್ಪತ್ತೈದನೇ ಇಸವಿ.

ಅದು ತುರ್ತು ಕಾಲೀನ ಪರಿಸ್ಥಿತಿ ಘೋಷಿಸಲ್ಪಟ್ಟ ಸಮಯ. ಆಗ ನಾನು ಮುಂಬೈನಲ್ಲಿ ಚಾಕರಿ ಮಾಡುತ್ತಿದ್ದೆ. ಆಗ ಕವಿಯಿತ್ರಿಯ ಮತ್ತು ಆಕೆಯ ಪತಿಯ ಪರಿಚಯ ಸ್ವಲ್ಪ ಇತ್ತು. ಎರಡು ಬಾರಿ ಅವರ ಫ್ಲಾಟ್ ನಲ್ಲಿ ಅವರನ್ನು ಕಾಣಲು ಹೋಗಿದ್ದ ನೆನಪು. ಆಗಲೇ ನನಗೆ ಅನ್ನಿಸಿತು, ಈ ಪೃಥಿವಿಯಲ್ಲಿ ಎಲ್ಲಾರೀತಿಯಲ್ಲೂ ಎರಡು ವರ್ಗಗಳಿವೆ. ಅವರ ಶ್ರೇಣಿ ಮತ್ತು ನನ್ನಶ್ರೇಣಿ ಎಂದೆಂದಿಗೂ ಬೆರೆಯುವುದಿಲ್ಲ ಅಂತ. ಆ ಅಂತಸ್ತಿನ ಮತ್ತು ಆ ಅಂತಸ್ತಿಗೆ ಬೇಕಾದ ಕ್ಷಮತೆ, ಒಂದು ರೀತಿ ಆರ್ಥಿಕ ಕ್ಷಮತೆಗಿಂತಾ ಮೀರಿದ ಕ್ಷಮತೆ, ಸಂಪಾದಿಸಿ ಕೊಟ್ಟಿದ್ದ, ಒಂದು ನನಗೇ ಅರ್ಥವಾಗದ ಅವರ ಬದುಕಿನ ರೀತಿ ರಿವಾಜುಗಳ ಪರಿವೇಷ ಅವರುಗಳನ್ನು ಭೇಟಿಯಾದ ಕೆಲವೇ ಕ್ಷಣಗಳಲ್ಲಿ ನನಗೆ ಮನದಟ್ಟಾಯಿತು. Real born aristocracy.

ಈ ಸಾಮಾಜಿಕ ಕ್ಷಮತೆಯೇ ಕವಿಯಿತ್ರಿಗೆ ತನ್ನ ಸ್ವ ಇಛ್ಹೆಗಳನ್ನು ಪೂರೈಸಿಕೊಳ್ಲಲು, ಇಷ್ಟ ಬಂದ ರಸ್ತೆಯಲ್ಲಿ ಓಡಾಡಲು, ಏನೇನು ಭಯ ಸಂಕೋಚವಿಲ್ಲದೆ ಯಾರೂ ಖುಲಾಮತ್ತಾಗಿ ಮಾತನಾಡದ ವಿಷಯಗಳಬಗ್ಗೆ ಮಾತನಾದುವುದು, ಇವೆಲ್ಲಕ್ಕೂ ಸಹಾಯ, ಅದಕ್ಕೆ ಬೇಕಾದ ಬಲಿಷ್ಟತೆ ಕೊಟ್ಟಿದ್ದವು.

ಈ ಮಾತನ್ನು ನಾನು ಟೀಕೆಯ ರೂಪದಲ್ಲಿ ಹೇಳುತ್ತಿಲ್ಲ; ಎಷ್ಟೋ ಮಂದಿ ಇದಕ್ಕೂ ಮೀರಿದ ಸಾಮಾಜಿಕ ಮತ್ತು ಆರ್ಥಿಕ ಕ್ಷಮತೆಯನ್ನು ಹೊಂದಿದ್ದರೂ ಅದನ್ನು ಕೆಲಸಕ್ಕೆ ತೆಗೆದುಕೊಂಡು ತಮ್ಮದೇ ರಸ್ತೆಯೊಂದರಲ್ಲಿ ಯಾರಿಗೂ (ನೀವೆನ್ನುವಂತೆ) ಕ್ಯಾರೆ ಅನ್ನದೇ ಅಧವಾ ಅನ್ನಿಸಿಕೊಳ್ಳದೇ ಹೋಗುವುದಿಲ್ಲ. ಇರಬಹುದು, ಪರಿಚವಿಲ್ಲದ ರಸ್ತೆ, ಮುಗ್ಗರಿಸಬಹುದು. ಆದರೂ ತಮ್ಮದೇ ರಸ್ತೆಯೊಂದರಲ್ಲಿ ಪಯಣಿಸಿದೆ ಅನ್ನುವ ಹೆಮ್ಮೆ, ಗೌರವ ಕವಿಯಿತ್ರಿಗೆ ಸಲ್ಲಲೇ ಬೇಕು.

ಅನೇಕ ವಿಷಯಗಳ ಬಗ್ಗೆ, , ಅದರಲ್ಲೂ ಆಕೆಯ ಹೆಣ್ಣೂತನ ಮತ್ತು ಅದನ್ನು ಯಾವ ರೀತಿ ವ್ಯವಹರಿಸಿಕೊಂಡರು ಅನ್ನುವ ವಸ್ತುವಿಷಯಗಳ ಬಗ್ಗೆ ಆಕೆಯ ಅರ್ಥಯುಕ್ತ ಸಂಬಂದ್ಧತೆ ಇರಲಿಲ್ಲದ ಮನೋಮತಗಳನ್ನು ನೀವೇ ಉಲ್ಲೇಖಿಸಿದ್ದೀರಿ. ಇದರ ಬಗ್ಗೆ ನಾನು ಹೇಳುವುದೇನೂ ಇಲ್ಲ. ಆದರೂ ಆಕೆಯ ಬರವಣಿಗೆಯನ್ನು ಕುರಿತು ಒಂದೆರಡು ಮಾತು ಹೇಳಿ ಈ ಕಾಮೆಂಟ್ ಮುಗಿಸುತ್ತೇನೆ.

ಆಕೆಯ My Life ನಾನು ಮುಂಬೈಗೆ ಬಂದ ಕೆಲವೇ ತಿಂಗಳುಗಳಲ್ಲಿ ಪ್ರಕಟವಾಯಿತು. ಅದಕ್ಕೆ ಸಾಕಷ್ಟು ಪಬ್ಲಿಸಿಟಿ ಸಹ ದೊರಕಿತು. ಇರಬಹುದು, ಇದು ನನ್ನ snobbery. ಆದರೆ ಭಾರತೀಯ ಬರೆಹಗಾರರ ಇಂಗ್ಲಿಷ್ creative ಬರಣಿಗೆಯಲ್ಲಿ ನನಗೆ ಅಂದಿನ ದಿನಗಳಲ್ಲಿ ಸುತರಾಂ ಆಸಕ್ತಿ ಇರಲಿಲ್ಲ. ಈ ನಾಸಕ್ತಿಗೆ ಕಾರಣ ಪ್ರಾಯಶಃ ನನ್ನ ಇಂಗ್ಲಿಷ್ ಸಾಹಿತ್ಯದ ತಿಳುವಳಿಕೆ. ನಿಜವಾಗಿಯೂ ಹೇಳಬೇಕೆಂದರೆ ಭಾರತೀಯಬರೆಹಗಾರರು ಬರೆಯುತ್ತಿದ್ದ ಇಂಗ್ಲಿಷ್ಶ್ ಸಾಹಿತ್ಯದ ಬಗ್ಗೆ ನನ್ನ ತಿರಸ್ಕಾರ ಪ್ರವೃತ್ತಿಯನ್ನು ನಾನು ಎಂದೂ ಸರಿಯಾಗಿ ಚಿಂತಿಸಿ, ಯೋಚಿಸಿ ಒಂದು ನಿರ್ಧಾರಕ್ಕೆ ಬಂದ ಪ್ರವೃತ್ತಿಯಾಗಿರಲಿಲ್ಲ. ಬರೇ ಪ್ರೆಜುಡಿಸ್. ಆದರೂ ಅಂದಿನ ಕಮಲಾ ದಾಸ್ ಅವರ ಜೀವನ ಚರಿತ್ರೆ, ಕವನಗಳು ಓದಿದಾಗ ಇದೇನು ಅಧ್ವಾನ್ನ ಬರವಣಿಗೆಯಯ್ಯಾ, ಅನ್ನಿಸುತ್ತಿತ್ತು. ಅದರಲ್ಲೂ ಅವರ ಜೀವನಚರಿತ್ರೆ, ಪ್ರಾಯಶಃ ನೂರರಲ್ಲಿ ತೊಂಭತ್ತೊಂಭತ್ತು ಜೀವನಚರಿತೆಗಳಂತೆ ಬರೇ ಒಂದು ಸುಳ್ಳುಗಳ ಸರಪಳಿ ಅನ್ನಿಸಿತು. ಅವರ ಇಂಗ್ಲಿಷ್ ಕವಿತೆಗಳನ್ನಂತೂ ಸೀರಿಯಸ್ಸಾಗಿ ಓದಲು ನನಗೆ ಎಂದೆಂದು ಸಾಧ್ಯವಾಗಲಿಲ್ಲ. ಈ ಮಾತು ಇಂಗ್ಲಿಷಿನಲ್ಲಿ ಕವನ ಹೊಸೆಯುವ ಭಾರತೀಯ ಭಾಷೆಗಳ ಮಿಕ್ಕೆಲ್ಲ ಲೇಖಕರಿಗೂ ಅನ್ವಯಿಸುತ್ತೆ ಅಂತ ಅನ್ನಿಸುತ್ತೆ ಆದರೆ ಇವೆಲ್ಲ ಐವತ್ತು ವರುಷಗಳೆಗೂ ಮೀರಿ ಹಿಂದೆ ಶಬ್ದಭಾಷಾರ್ಜನೆ ಮಾಡಿದ್ದ ಮುದುಕನೊಬ್ಬನ ಮಾತುಗಳು. ಅಂದಿನ ಬಿಗಟ್ರಿಯಿಂದ ಕಳಚಿಕೊಳ್ಳಲು ಈಗ ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ. ಇದರಲ್ಲಿ ನಿಮ್ಮ ಮತ್ತು ನಿಮ್ಮ ಪೀಳಿಗೆಯವರ ಬರವಣಿಗೆಗಳು, ಅದರಲ್ಲೂ ದೆವ್ವಪಿಶಾಚಿಗಳು ಓಡಾಡುವ ಸಮಯದಲ್ಲಿ ಹಠಾತ್ತನೆ ನನ್ನ ಕಂಪ್ಯೂಟರಿನಲ್ಲಿ ಕಣ್ಣಿಗೆ ಬೀಳುವ ಅಪರಿಚಿತ ವ್ಯಕ್ತಿಗಳ ಬರವಣಿಗೆಗಳು ಸಹಾಯ ಮಾಡಿವೆ. ಯಾರಿಗೆ ಗೊತ್ತು, ಕಮಲ ದಾಸ್ ಉರ್ಫ್ ಸುರಯ್ಯ ಅವರ ಬರವಣಿಗೆಗಳನ್ನೂ ನನ್ನ ಪೂರ್ವಗ್ರಹಗಳಿಂದ ಕಳಚಿಕೊಂಡು ಮುಕ್ತನಾಗಿ ಮತ್ತೆ ಓದಿ ಇದುವರೆಗೂ ನಾನು ಕಾಣದಿದ್ದ ಗುಣಗಳನ್ನು ಕಂಡುಕೊಳ್ಳುವುದರಲ್ಲಿ ನಿಮ್ಮ ಪ್ರಬಂಧ ಕೆಲಸಕ್ಕೆ ಬರಬಹುದೇನೋ.
ಇತಿ,
ಪ್ರಭಾಕರ

‍ಲೇಖಕರು avadhi

29 December, 2022

1 Comment

  1. h n eshakumar

    sir nivu nimma prejudicena pakkake tegedittu kamaladas ravara kavanagalanna odi nijakku nimmalondu hosa anubhooti mooduvudaralli samshaya beda

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading