ನಾ ದಿವಾಕರ್
ಕರ್ನಾಟಕದ ಪ್ರಮುಖ ಸಮಸ್ಯೆ ಎಂದರೆ ಭಾಷೆ, ಭಾಷಾ ಮಾಧ್ಯಮ, ಭಾಷೆಯ ಬಳಕೆ ಮತ್ತು ಕನ್ನಡ ಭಾಷೆಯ ಸುತ್ತ ಹಬ್ಬಿಕೊಂಡಿರುವ ಭಾವನಾತ್ಮಕ ಸಂಬಂಧಗಳು. ಇಲ್ಲಿ ತೀವ್ರ ಸ್ವರೂಪದ ಆಂದೋಲನವೇನಾದರೂ ನಡೆಯುವುದಾದರೆ ಅದು ಕನ್ನಡ-ಕನ್ನಡತನ ಮತ್ತು ಕನ್ನಡ-ಕನ್ನಡಿಗರ ಉಳಿವು ಈ ವಿಷಯಗಳ ಬಗ್ಗೆಯೇ ನಡೆಯುತ್ತದೆ. ಇದು ಅವಹೇಳನಕಾರಿ ಮಾತುಗಳಲ್ಲ. ವಾಸ್ತವದ ನುಡಿಗಳು. ಇಂದಿಗೂ ಕಾಗೋಡು ಸತ್ಯಾಗ್ರಹವನ್ನು ಹೊರತುಪಡಿಸಿದರೆ ಕನ್ನಡಿಗರಿಗೆ ನೆನಪಾಗುವುದು ಗೋಕಾಕ್ ಚಳುವಳಿ ಮಾತ್ರ.
1970ರ ದಶಕದ ದಲಿತ , ಬಂಡಾಯ ಮತ್ತು ಎಡಪಂಥೀಯ ಚಳುವಳಿಗಳು ಎಷ್ಟೇ ಪ್ರಖರವಾಗಿದ್ದರೂ ಅವುಗಳ ನೆನಪುಗಳೂ ಸಹ ಇಂದು ಮಾಯವಾಗುತ್ತಿದೆ. ಆದರೆ ಕನ್ನಡಪರ ಹೋರಾಟಗಳ ಕಾವು ಸದಾ ಕಾಡುತ್ತಲೇ ಇರುತ್ತದೆ. ಭಾಷೆಯ ಸುತ್ತಲೂ ನಾವು ನಿಮರ್ಿಸಿಕೊಂಡಿರುವ ಬೇಲಿಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಭಾಷೆಯ ವಿಭಿನ್ನ ಆಯಾಮಗಳನ್ನು ಹಾಗೂ ಭಾಷೆಯ ಬಳಕೆಯ ಸುತ್ತಲಿನ ಭಾವನಾತ್ಮಕ ಪ್ರಪಂಚವನ್ನು ಬಳಸಿಕೊಳ್ಳುವ ಸಂಘಟನೆಗಳ ಸಂಖ್ಯೆ ನೂರಾರು. ಕನ್ನಡ ಭಾಷೆ ಅವಸಾನ ಹೊಂದುತ್ತಿದೆ ಎಂಬ ಮಿಥ್ಯೆಯನ್ನು, ಕನ್ನಡ ಭಾಷೆಯ ಬಳಕೆ ಕ್ಷೀಣಿಸುತ್ತಿದೆ ಎಂಬ ಭ್ರಮೆಯನ್ನು ಜನಮಾನಸದಲ್ಲಿ ಸೃಷ್ಟಿಸಿ ತಮ್ಮ ಕನ್ನಡತನವನ್ನು ಅಥವಾ ವೀರ ಕನ್ನಡಿಗ ಪರಂಪರೆಯನ್ನು ವೈಭವೀಕರಿಸಿಕೊಳ್ಳುವ ವೇದಿಕೆ-ಸಂಘ-ಸಂಸ್ಥೆಗಳಿಗೂ ಪಾರವಿಲ್ಲ.
ಕನ್ನಡ ಮಾಧ್ಯಮ-ಆಂಗ್ಲ ಮಾಧ್ಯಮದ ನಡುವಿನ ಚರ್ಚೆ ಇಂದು ನೆನ್ನೆಯದಲ್ಲ. ಕರ್ನಾಟಕದ ಉದಯವಾದ ದಿನದಿಂದಲೂ ನಡೆದುಬಂದಿದೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಮಾತೃ ಭಾಷೆಯನ್ನು ಕಡ್ಡಾಯವಾಗಿ ಭೋಧಿಸುವ ದೃಢ ನಿರ್ಧಾರ ಕೈಗೊಳ್ಳುವ ಇಚ್ಚಾಶಕ್ತಿ ಇಲ್ಲದ ಆಳುವ ವರ್ಗಗಳು ಆಂಗ್ಲ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಅಳವಡಿಸಲು ಮುಂದಾದಾಗ ಸಹಜವಾಗಿಯೇ ಕನ್ನಡ ಪರ ಮನಸ್ಸುಗಳು ಕೆರಳುತ್ತವೆ. ಏಕೆಂದರೆ ಇಲ್ಲಿ ಭಾವನೆಗಳು ಸಕ್ರಿಯವಾಗಿರುತ್ತವೆ. ಭಾವನೆಗಳು ಮೇಲುಗೈ ಸಾಧಿಸಿದಾಗ ವಾಸ್ತವತೆ ಹಿಂದೆ ಸರಿಯುತ್ತದೆ. ಈ ಹಿಂದೆ ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ಯೋಚಿಸಿದಾಗಲೂ ಕನ್ನಡ ಪರ ದನಿಗಳು ಇದೇ ಕೂಗು ಹಬ್ಬಿಸಿದ್ದವು.

ಇಲ್ಲಿ ಪ್ರಶ್ನೆ ಇರುವುದು ಮತ್ತು ಇರಬೇಕಾದದ್ದು ಭಾಷೆಯ ಉಳಿವು-ಅಳಿವಿನ ಬಗ್ಗೆ ಅಲ್ಲ. ಶಿಕ್ಷಣ ಮಾಧ್ಯಮಕ್ಕೂ ಒಂದು ಭಾಷೆಯ ಉಳಿವಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಭಾವನಾತ್ಮಕ ದೃಷ್ಟಿಯಿಂದ ನೋಡುವುದಕ್ಕಿಂತಲೂ ಸಮಕಾಲೀನ ಸಂದರ್ಭದ ಅನಿವಾರ್ಯತೆ ಮತ್ತು ಪ್ರಜೆಗಳ ಅವಶ್ಯಕತೆಗಳ ದೃಷ್ಟಿಯಿಂದ ನೋಡಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು ಎನ್ನುವ ವಾದ ಸಮಂಜಸ. ಈ ನೆಲೆಯಲ್ಲಿ ಹಮ್ಮಿಕೊಳ್ಳುವ ಹೋರಾಟಗಳೂ ಸಮರ್ಥನೀಯ. ಆದರೆ ಪ್ರಸಕ್ತ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸನ್ನಿವೇಶದಲ್ಲಿ ಮಧ್ಯಮ ಮತ್ತು ಬಡವರ್ಗದ ಜನತೆಗೆ ಅನಿವಾರ್ಯ ಎನಿಸಿರುವ ಅಂಗ್ಲ ಭಾಷೆಯನ್ನು ಬೋಧಿಸಿದಲ್ಲಿ ಅಪಾಯ ಏನುಂಟು ? ಹಿರಿಯ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಜಾರಿಗೊಳಿಸಿದರೆ ಕನ್ನಡ ಭಾಷೆಯ ಬೆಳವಣಿಗೆ ಹೇಗೆ ಕುಂಠಿತವಾಗುತ್ತದೆ ? ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದ ಕೂಡಲೇ ಆಂಗ್ಲ ಮಾಧ್ಯಮ ಬಯಸುವವರ ಸಂಖ್ಯೆ ಕಡಿಮೆಯಾಗುವುದೇ ? ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆರೆಯುವುದರಿಂದ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತದೆ ಎನ್ನುವುದಾದರೆ, ಕರ್ನಾಟಕದಾದ್ಯಂತ ನಾಯಿಕೊಡೆಗಳಂತೆ ಬೆಳೆದಿರುವ ಆಂಗ್ಲ ಮಾಧ್ಯಮದ ಶಾಲೆಗಳ ಭರಾಟೆಯಲ್ಲಿ ಕನ್ನಡ ಎಂದೋ ನಶಿಸಿಹೋಗಬೇಕಿತ್ತು. ಹಾಗಾಗಿಲ್ಲವಲ್ಲ .
ಅಥವಾ ಕನ್ನಡಪರ ಸಂಘಟನೆಗಳು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ವಿರೋಧಿಸುವುದಾದರೆ ಖಾಸಗಿ ಶಾಲೆಗಳು ಏಕೆ ಇರಬೇಕು ? ಆಂಗ್ಲ ಮಾಧ್ಯಮದಲ್ಲಿ ಓದಲಿಚ್ಚಿಸುವ ಮಕ್ಕಳೆಲ್ಲರೂ ಕಡ್ಡಾಯವಾಗಿ ಖಾಸಗಿ ಶಾಲೆಗಳಿಗೇ ಹೋಗಬೇಕೇ ? ಅಥವಾ ಖಾಸಗಿ ಶಾಲೆಗೆ ಹೋಗುವ ಸಾಮರ್ಥ್ಯವಿಲ್ಲದ ಬಡ ಮಕ್ಕಳು ಕನ್ನಡ ಮಾಧ್ಯಮಕ್ಕೇ ಜೋತು ಬೀಳಬೇಕೇ ? ಇಲ್ಲಿ ಉದ್ಭವಿಸುವ ಪ್ರಶ್ನೆ ಆಯ್ಕೆ ಸ್ವಾತಂತ್ರ್ಯದ್ದು. ಆಂಗ್ಲ ಮಾಧ್ಯಮವನ್ನೇ ವಿರೋಧಿಸುವುದಾದರೆ ಕನ್ನಡ ಪರ ಸಂಘಟನೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಖಾಸಗಿ ಶಾಲೆಗಳ ವಿರುದ್ಧವೇ ಆಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ.
ಇಂದು ಎಷ್ಟು ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ ಎಂಬ ಸಮೀಕ್ಷೆಯನ್ನಾದರೂ ಮಾಡಲಾಗಿದೆಯೇ ? ಅಥವಾ ರಾಜ್ಯದ ಜನತೆ ಯಾವ ಮಾಧ್ಯಮವನ್ನು ಬಯಸುತ್ತಾರೆ ಎಂಬ ಸಮೀಕ್ಷೆ ನಡೆಸಲಾಗಿದೆಯೇ ? ಸಂಘಟನಾತ್ಮಕ ಭಾವನೆಗಳು ಜನತೆಯ ಸಮಗ್ರ ಧೋರಣೆಗಳನ್ನು ಪ್ರತಿಬಿಂಬಿಸುತ್ತದೆ ಎಂದ ಅಹಮಿಕೆಯನ್ನು ಬದಿಗಿಟ್ಟು ಯೋಚಿಸಿದಾಗ ಒಂದು ನಿದರ್ಿಷ್ಟ ವಿದ್ಯಮಾನವನ್ನು ಕುರಿತು ಆಂದೋಲನ ರೂಪಿಸುವ ಸಂಘಟನೆಗಳು ಜನತೆ ನೈಜ ಆಶಯಗಳನ್ನು ಅರಿಯಲು ಯತ್ನಿಸುವುದೂ ಪ್ರಜಾತಂತ್ರದ ಲಕ್ಷಣವಲ್ಲವೇ ? ಈ ಕೆಲಸವನ್ನು ಕನ್ನಡ ಪರ ಸಂಘಟನೆಗಳು ಇಂದಿನವರೆಗೂ ಮಾಡಿಲ್ಲ ಎನ್ನುವುದು ವಿಷಾದನೀಯ ಸಂಗತಿ.
ಕನ್ನಡದ ಉಳಿವಿಗಾಗಿ ಶ್ರಮಿಸುವುದು ಇಂದಿನ ತುರ್ತು ಅಗತ್ಯತೆಯೇ ಇರಬಹುದು. ಆದರೆ ಕನ್ನಡ ಅಳಿಸಿಹೋಗುತ್ತಿದೆ ಎಂಬ ಕೂಗು ಅನವಶ್ಯಕ. ಭಾಷೆ ಎಂದಿಗೂ ಅಳಿಯುವುದಿಲ್ಲ. ಕನ್ನಡದಂತಹ ಪ್ರಾಚೀನ ಭವ್ಯ ಪರಂಪರೆಯುಳ್ಳ ಭಾಷೆ ಕ್ಷೀಣಿಸುವುದೂ ಇಲ್ಲ. ಸಮಕಾಲೀನ ಕಾಲಘಟ್ಟದಲ್ಲಿ, ಸಾಮಾಜಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಭಾಷೆಯ ಬಳಕೆಯಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಅದು ಮೇಲ್ನೋಟಕ್ಕೆ ಕಾಣುವ ಚಿತ್ರಣ. ನಗರೀಕೃತ ಮನಸ್ಸುಗಳು ಯೋಚಿಸುವ ರೀತಿಯೇ ಕೆಲವೊಮ್ಮೆ ತಳಮಟ್ಟದ ವಾಸ್ತವಗಳನ್ನು ಮರೆಮಾಚಿಬಿಡುತ್ತವೆ. ಕನ್ನಡ ಪರ ಕೂಗಿಗೂ ಇದು ಅನ್ವಯಿಸುತ್ತದೆ. ಭಾಷೆಯ ಉಳಿವು ಎಂದರೆ ಗ್ರಂಥಗಳಲ್ಲಡಗಿರುವ ಭಾಷಾ ಪಾಂಡಿತ್ಯದ ರಕ್ಷಣೆ ಮಾತ್ರವಲ್ಲ. ಭಾಷಿಕರ ಹಿತಾಸಕ್ತಿಗಳ ರಕ್ಷಣೆಯೂ ಹೌದು. ಕನ್ನಡ ಭಾಷಿಕರೆಂದರೆ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿ ಉನ್ನತ ವ್ಯಾಸಂಗಕ್ಕೆ ಅಡಿಪಾಯ ಹಾಕುವ ಆರ್ಥಿಕ ಸಾಮರ್ಥ್ಯ, ಸಾಮಾಜಿಕ ಸ್ಥಾನಮಾನ ಮತ್ತು ಸಾಂಸ್ಕೃತಿಕ ಅವಕಾಶಗಳುಳ್ಳ ಮಧ್ಯಮ-ಮೇಲ್ ಮಧ್ಯಮ ವರ್ಗಗಳು ಅಥವಾ ಮೇಲ್ಜಾತಿಯವರು ಮಾತ್ರವಲ್ಲ.
ನವ ಉದಾರವಾದ ಸೃಷ್ಟಿಸಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದುಳಿದ ವರ್ಗಗಳಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಆಂಗ್ಲ ಭಾಷಾ ಶಿಕ್ಷಣ ಒಂದು ಅನಿವಾರ್ಯತೆಯಾಗಿರುವುದು ಒಪ್ಪಲೇಬೇಕಾದ ಸತ್ಯ . ಈ ಅನಿವಾರ್ಯತೆಯನ್ನು ಪೂರೈಸುವ ಹೊಣೆಗಾರಿಕೆ ಆಳ್ವಿಕರ ಮೇಲಿದೆ . ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಲಭ್ಯವಾಗುವುದಾದರೆ ಕನ್ನಡ ಭಾಷೆ ನಶಿಸುವುದಿಲ್ಲ ಬದಲಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಬಡವಿದ್ಯಾರ್ಥಿಗಳು ಕನ್ನಡದ ಮತ್ತು ಕರ್ನಾಟಕದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಾರೆ. ಇಲ್ಲಿ ಉಜ್ವಲ ಭವಿಷ್ಯಕ್ಕಾಗಿ ಆಂಗ್ಲ ಭಾಷೆ ಅಗತ್ಯ ಎಂದು ಭಾವಿಸಬೇಕಿಲ್ಲ. ಶೈಕ್ಷಣಿಕ ಪಯಣದಲ್ಲಿ ಮುನ್ನಡೆಯಲು ಲಭ್ಯವಿರುವ ಮೈಲಿಗಲ್ಲುಗಳಲ್ಲಿ ಆಂಗ್ಲ ಭಾಷೆಯೂ ಒಂದು ಎಂಬ ವಾಸ್ತವವನ್ನು ಗ್ರಹಿಸಬೇಕಷ್ಟೆ.
ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮನ್ನಣೆ ನೀಡುವುದೇ ಆದರೆ ಈ ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಿಸುವುದೇ ಸೂಕ್ತ. ಭಾಷಾ ಮಾಧ್ಯಮದ ವಿಚಾರವನ್ನು ಅಸ್ತಿತ್ವಗಳ ನೆಲೆಗಟ್ಟಿನಲ್ಲಿ ನೋಡಿದಾಗ ಭಾವನೆಗಳು ಮೇಲುಗೈ ಸಾಧಿಸುತ್ತವೆ. ವಾಸ್ತವಗಳು ದೂರಾಗುತ್ತವೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಾಂವಿಧಾನಿಕ ದೃಷ್ಟಿಕೋನದಿಂದ ಕೂಡಿದೆ. ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸುವ, ಸಮರ್ಥಿಸುವ ದನಿಗಳು ಈ ತೀರ್ಪಿಗೆ ತಲೆಬಾಗಲೇಬೇಕಾಗುತ್ತದೆ. ಹಾಗಾದರೆ ಕನ್ನಡದ ಪ್ರಶ್ನೆ ಬಗೆಹರಿಯುವುದು ಹೇಗೆ ? ಆಡಳಿತ ವ್ಯವಸ್ಥೆಯ ಇಚ್ಚಾಶಕ್ತಿ ಮತ್ತು ಕನ್ನಡಪರ ದನಿಗಳ ಪ್ರಬುದ್ಧತೆ ಎರಡೂ ಇಲ್ಲಿ ಅಗ್ನಿಪರೀಕ್ಷೆಗೊಳಗಾಗಿರುವುದು ಸ್ಪಷ್ಟ.






0 Comments