ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಹೆಣ್ಣಿನ ಮೇಲೆ ಅತ್ಯಾಚಾರ ಅನಾದಿಯಿಂದ ನಡೆದು ಬಂದಿದೆ. ದೇಶದ ಮೂಲೆಮೂಲೆಯಲ್ಲೂ ಅಮಾನುಷ ಕೃತ್ಯ ನಡೆಯುತ್ತಿದ್ದರೂ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎರಡು ಘಟನೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ದೇಶಾದ್ಯಂತ ಸ್ತ್ರೀಶೋಷಣೆಯ ಬಗ್ಗೆ ವೈಚಾರಿಕ ವಾಗ್ವಾದಗಳು ಆರಂಭವಾದವು. ‘ಅವಧಿ’ ವೆಬ್ ಸೈಟ್ ನಲ್ಲಿ ಇಂಥ ಒಂದು ವಾಗ್ವಾದ ನಡೆದದ್ದು ಈಗ ಅದು ‘ಹೇಳತೇವ ಕೇಳ..’ ಎಂಬ ಕೃತಿಯಾಗಿ ಹೊರಬಂದಿದೆ.
‘ದಶಕಗಳ ಕಾಲ ತಮ್ಮೊಳಗೆ ಲೈಂಗಿಕ ಆಕ್ರಮಣದ ನೋವುಗಳನ್ನು ಹೊತ್ತು ಸಾಗುತ್ತಿದ್ದವರು ಈಗ ಅದಕ್ಕೆ ಹೊಸ ರೀತಿಯಲ್ಲಿ ಪ್ರತಿಕ್ರಿಯಿಸಲು ಈ ಸಂಚಿಕೆ ಕಾರಣವಾಯಿತು ಅವರು ಯಾವಾಗ ‘ಇದು ನನ್ನೊಬ್ಬಳ ಕಥೆಯಲ್ಲ’ ಎಂದು ಗೊತ್ತಾಯಿತೋ ಈಗ ಪರಸ್ಪರ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ…’ ಎಂದು ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಹೇಳಿದ್ದಾರೆ. ಮುಂದೊಂದು ದಿನ ಇಂಥ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ ಎಂಬುದು ಅವರ ಆಶಯ. ಜಯಲಕ್ಷ್ಮಿ ಪಾಟೀಲ್ ಈ ಕೃತಿಯ ಸಂಪಾದಕಿ.
ಮೊದಲ ಭಾಗ ‘ಹೀಗಾಯ್ತು…’ದಲ್ಲಿ ಕೆಟ್ಟ ಅನುಭವಗಳ ಕಥನವಿದೆ. ಎರಡನೇ ಭಾಗ ‘ಬೇಡ…’ ಮೂರನೇ ಭಾಗ ‘ಬಿಕ್ಕು’, ಇದರಲ್ಲಿ ನೋವಿನ ಕತೆಗಳಿವೆ. ಕೊನೆಯ ಭಾಗ ‘ಬೆಳಕಿಗಾಗಿ…’ ಯಲ್ಲಿ ಕಾರಣ-ಪರಿಹಾರದ ಚಿಂತನೆಗಳಿವೆ.
ಕೃತಿ: ಹೇಳತೇವ ಕೇಳ, ಪ್ರಕಾರ : ಮಹಿಳಾ ಚಿಂತನ
ಏಕೆ ಓದಬೇಕು ?: ಹೆಣ್ಣಿನ ನೋವು ಅರಿಯಲು
ಪ್ರ : ಅಭಿನವ, ಬೆಂಗಳೂರು. ಪುಟಗಳು 152 ಬೆಲೆ ರೂ 100





ಹೆಣ್ಣು ಹೇಳ್ತೀವಿ ಕೇಳ ಎಂದು ಹೇಳ್ತಾ ಇದ್ದಾಳೆ. ಆದರೆ ಕೇಳುವವರು ಕೇಳಿಸದಂತೆ ಕಿವುಡುತನವನ್ನು ಆಹ್ವಾನಿಸಿಕೊಂಡುಬಿಟ್ಟಿದ್ದಾರೆ. ಕೇಳ್ತಾ? ಪೇಪರಿನಿಂದ ಹೊರ ಬಾರದ ಗಂಡ ‘ಕೇಳ್ತಾ ಇದ್ದೀನಿ. ಹೇಳು.’ ಎನ್ನುತ್ತಾನೆ. ನಿಜವಾಗಿ ಅವಳು ಹೇಳಿದ್ದನ್ನು ಅವನು ಕೇಳಿಸಿಕೊಳ್ಳುತ್ತಿಲ್ಲ. ಯಾಕೆಂದರೆ ಹೆಂಡತಿ ಇರುವುದೇ ಗಂಡ ಹೇಳಿದ್ದನ್ನು ಕೇಳಿ ಅವನ ಮಾತನ್ನು ಪಾಲಿಸುವುದಕ್ಕೆ. ಹೊರ್ತೂ ಅವಳ ಮಾತನ್ನು ಕೇಳಿಸಿಕೊಳ್ಳುವುದಕ್ಕಲ್ಲ. ಗಂಡು ಅಜ್ನಾಪಿಸುವುದಕ್ಕೆ. ಹೆಣ್ಣು ಅದನ್ನು ಪಾಲಿಸುವುದಕ್ಕೆ ಇರುವವಳು. ಹಾಗಾಗಿ ಅವಳ ಮಾತನ್ನು ಕೇಳಿಸಿಕೊಳ್ಳಬೇಕಿಲ್ಲ. ಹೊತ್ತು ಹೊತ್ತಿಗೆ ಅಡಿಗೆ ಮಾಡಿ ಹಾಕು. ರಾತ್ರಿ ನನಗೆ ಸುಖವನ್ನು ಕೊಡು. ನನಗೆ ಬೇಕೆಂದಾಗ ಕೊಡು. ಇಷ್ಟೇ ದಾಂಪತ್ಯ ಬದುಕಿನ ಸ್ವಾರಸ್ಯ. ಹಾಗಾಗಿ ಗಂಡ ಹೇಳ್ತಾನೆ ಇರ್ತಾನೆ. ಹೆಣ್ಣು ಕೇಳ್ತಾನೇ ಇರ್ತಾಳೆ. ಕೇಳದಿದ್ದರೆ ಅದು ಎಲ್ಲಿಯವರೆಗೆ ಹೋಗಿ ಮುಟ್ಟೀತು ಎಂದು ಅದರ ಅಂತಪಾರ ಹತ್ತುವಂತಿಲ್ಲ. ಇನ್ನಾದರೂ ಕೇಳ್ತೀರಾ? ಹೆಣ್ಣೇ! ಬೊಬ್ಬೆ ಹೊಡಿ. ಅವನ ಕಿವಿ ಹೊಟ್ಟಿ ಹೋಗಲಿ. ಉದಯಕುಮಾರ ಹಬ್ಬು, ಕಿನ್ನಿಗೋಳಿ