ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡದಲ್ಲಿ ಶಂಕರ್ ಅವರ ಮೊಟ್ಟಮೊದಲ ಪತ್ರಿಕಾ ಸಂದರ್ಶನವನ್ನು ಮಾಡಿದವ ನಾನು…

ನಿನ್ನೆ ಆನಂದ ತೀರ್ಥ ಪ್ಯಾಟಿ ಶಂಕರ್ ನಾಗ್ ಇದ್ದ ಒಂದು ಫೋಟೋ ಕಳುಹಿಸಿ, ಜೊತೆಯಲ್ಲಿದ್ದವರನ್ನು ಗುರುತಿಸಿ ಎಂದು ಪ್ರಶ್ನಿಸಿದ್ದರು

ಹೌದು, ಶಂಕರ್ ನಾಗ್ ಜೊತೆಗಿರುವವರು ಗೋಪಾಲ ವಾಜಪೇಯಿ. ಈ ಚಿತ್ರದ ಬಗ್ಗೆ, ತಮ್ಮ ಶಂಕರ್ ಒಡನಾಟದ ಬಗ್ಗೆ ಗೋಪಾಲ್ ವಾಜಪೇಯಿ ಬರೆದಿರೋದು ಹೀಗೆ :
೧೯೭೭-೭೮ರಲ್ಲಿ ನಾನು ‘ಕರ್ಮವೀರ’ ಸಾಪ್ತಾಹಿಕದಲ್ಲಿ ಉಪಸಂಪಾದಕ. ರಂಗಭೂಮಿಯ ಬಗ್ಗೆ ಅಪಾರ ಒಲವಿದ್ದವ. ಹೀಗಾಗಿ, ‘ಸಿನೆಮಾ-ರಂಗಭೂಮಿ’ ಪುಟಗಳ ಜವಾಬ್ದಾರಿ ನನ್ನದೇ ಆಗಿತ್ತು. ಅಂತಾರಾಷ್ಟ್ರೀಯ ಖ್ಯಾತಿಯ ನಾಟಕಕಾರ ಗಿರೀಶ್ ಕಾರ್ನಾಡ ನಿರ್ದೇಶನದ, ಜಡಭರತರಂಥ ಹಿರಿಯ ನಾಟಕಕಾರರು ಸಂಭಾಷಣೆ ಬರೆದ, ಮತ್ತೊಬ್ಬ ಸುಪ್ರಸಿದ್ಧ ನಾಟಕಕಾರ-ಕವಿ ಚಂದ್ರಶೇಖರ ಕಂಬಾರ ಅವರ ಗೀತೆಗಳಿದ್ದ ವಿಭಿನ್ನ ಚಿತ್ರ ‘ಒಂದಾನೊಂದು ಕಾಲದಲ್ಲಿ…’ ನಾಗಾಭರಣ-ಸುಂದರರಾಜ್ ಅವರಂಥ ತರುಣರು ಸಹಾಯಕ ನಿರ್ದೇಶಕರಾಗಿದ್ದ, ವಿಖ್ಯಾತ ಬೆಳಕು ವಿನ್ಯಾಸ ತಜ್ಞ ವಿ. ರಾಮಮೂರ್ತಿ, ಕಂಚಿನ ಕಂಠದ ಸುಂದರಕೃಷ್ಣ ಅರಸು, ವಸಂತರಾವ್ ನಾಕೋಡರಂಥವರು ನಟಿಸಿದ್ದ ಆ ಚಿತ್ರದ ಬಗ್ಗೆ ಸಹಜವಾಗಿಯೇ ಜನರಲ್ಲಿ ಕುತೂಹಲವಿತ್ತು.
ಹುಬ್ಬಳ್ಳಿಯಿಂದ ಬೆಳಗಾವಿಗೆ ಹೋಗುವ ರಸ್ತೆಯಲ್ಲಿ, ಕಿತ್ತೂರಿನಿಂದ ಸ್ವಲ್ಪ ಮುಂದೆ ಬಲಕ್ಕೆ ಇರುವ ಎಂಬಲ್ಲಿ ಅದರ ಚಿತ್ರೀಕರಣ ನಡೆದಿತ್ತು. ಆ ಬಗ್ಗೆ ವರದಿ ಮಾಡಲು, ಆ ಪ್ರತಿಭಾವಂತರ ಸಂದರ್ಶನ ಪಡೆಯಲು ಒಂದೆರಡು ಬಾರಿ ಹೋಗಿದ್ದೆ.
ನಾನೂ ರಂಗಭೂಮಿಯವನೆ ಆದ್ದರಿಂದ, ಚಿತ್ರದ ಸಹನಿರ್ದೇಶಕರಾಗಿದ್ದ ಗೆಳೆಯ ಕಾನಕಾನಹಳ್ಳಿ ಗೋಪಿಯವರು ಶಂಕರ್ ನಾಗ್ ಜೊತೆಗಿನ ಒಂದು ಸಣ್ಣ ಸನ್ನಿವೇಶದಲ್ಲಿ ಕ್ಯಾಮರಾ ಎದುರಿಸಲು ನನಗೂ ಒಂದು ಅವಕಾಶವಿತ್ತರು. ಅದು ಮುಗಿದ ಮೇಲಿನ ಸ್ಟಿಲ್ ಇದು.
ಕನ್ನಡದಲ್ಲಿ ಶಂಕರ್ ಅವರ ಮೊಟ್ಟಮೊದಲ ಪತ್ರಿಕಾ ಸಂದರ್ಶನವನ್ನು ಮಾಡಿದವ ನಾನು. ಅಂದಿನಿಂದ ಶಂಕರ್ ನನಗೆ ಆತ್ಮೀಯರಾದರು.
 

‍ಲೇಖಕರು G

4 September, 2014

3 Comments

  1. Gopaal Wajapeyi

    ಕ್ಷಮಿಸಿ. ”ಹುಬ್ಬಳ್ಳಿಯಿಂದ ಬೆಳಗಾವಿಗೆ ಹೋಗುವ ರಸ್ತೆಯಲ್ಲಿ, ಕಿತ್ತೂರಿನಿಂದ ಸ್ವಲ್ಪ ಮುಂದೆ ಬಲಕ್ಕೆ ಇರುವ ಎಂಬಲ್ಲಿ ಅದರ ಚಿತ್ರೀಕರಣ ನಡೆದಿತ್ತು…” ಎಂಬ ಸಾಲಿನಲ್ಲಿ ಊರಿನ ಹೆಸರೇ ಹಾರಿಹೋಗಿದೆ.
    ಆ ಊರಿನ ಹೆಸರು ತೂರಮರಿ. ಕನ್ನಡ ಸಾಹಿತ್ಯದಲ್ಲಿ ಅಜರಾಮರವಾದ ಗಂಗಾಧರ ಮಡಿವಾಳೇಶ್ವರ ತೂರಮರಿ ಇದೇ ಊರವರು. ಅಂದ ಹಾಗೆ, ಇಲ್ಲಿಯ ವಾಡೆಯಲ್ಲಿ ‘ಒಂದಾನೊಂದು ಕಾಲದಲ್ಲಿ…’ಯ ಬಹುತೇಕ ಚಿತ್ರೀಕರಣ ನಡೆದಿತ್ತಷ್ಟೇ. ಈ ವಾಡೆಯ ಭವ್ಯತೆ ನಮ್ಮ ಸುಂದರಕೃಷ್ಣ ಅರಸು ಅವರನ್ನು ಮೋಡಿಗೊಳಪಡಿಸಿತ್ತು. ಮುಂದೆ, 1991ರಲ್ಲಿ ತಾವು ನಿರ್ದೇಶಿಸಿದ ‘ಸಂಗ್ಯಾ ಬಾಳ್ಯಾ’ ಚಿತ್ರಕ್ಕಾಗಿ ಅರಸು ಆಯ್ಕೆ ಮಾಡಿಕೊಂಡದ್ದು ಇದೆ ವಾಡೆಯನ್ನು. ನಾನು ಆ ಚಿತ್ರಕ್ಕೆ ಸಂಭಾಷಣೆ ಮತ್ತು ಮೂರು ಹಾಡುಗಳನ್ನು ಬರೆದಿದ್ದೆ.

    • Ganadhalu Srikanta

      ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಈ ಚಿತ್ರವನ್ನು ಚಿಕ್ಕನಾಯ್ಕನಹಳ್ಳಿ ತಾಲ್ಲೂಕು ಹುಳಿಯಾರಿನ ಬಾಲಾಜಿ ಚಿತ್ರಮಂದಿರದಲ್ಲಿ ಒಂದಾನೊಂದು ಕಾಲದಲ್ಲಿ ಸಿನಿಮಾವನ್ನು ‘ಬೆನಿಫಿಟ್ ಷೋ ’ನೋಡಿದ್ದೆ. ಶಾಲಾ ಮಕ್ಕಳಿಗೆ ಆ ಚಿತ್ರವನ್ನು ಏತಕ್ಕಾಗಿ ತೋರಿಸಿದ್ದೇವೆಂದು ಮೇಷ್ಟ್ರಗಳು ಹೇಳಿಲ್ಲ. ಹುಡುಗರಾದ ನಾವು ಕೇಳಲಿಲ್ಲ. ಆದರೆ ಆ ಸಿನಿಮಾದಲ್ಲಿ ಕತ್ತಿ ಯುದ್ಧ, ಚಾಪೆಯಾಗಿರುವ ತಗಡುಗಳನ್ನು ಝಳಪಿಸಿಕೊಂಡು ಹೊಡೆದಾಡುವ ದೃಶ್ಯ ನಮಗೆಲ್ಲ ಬಹಳ ಇಷ್ಟವಾಗಿತ್ತು. ಒಮ್ಮೆ ನಿಮ್ಮೊಟ್ಟಿಗೆ ಈ ವಿಷಯ ಹೇಳಿದ್ದೆ ಎನ್ನಿಸುತ್ತಿದೆ. ಮತ್ತೊಮ್ಮೆ ಅದೇ ವಿಚಾರ ಈ ಚಿತ್ರ ನೋಡಿದಾಗ ನೆನಪಾಯಿತು.

  2. Anonymous

    gopalji, if possible recal that interview points n present it.
    mahesh devashetty.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading