ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಮ್ಮ ಮನೆಯಂಗಳದಿ 'ಗುಲಾಬಿ'

 

ಗಿರೀಶ್ ಕಾಸರವಳ್ಳಿ ಅವರ ಬಹು ನಿರೀಕ್ಷಿತ ‘ಗುಲಾಬಿ ಟಾಕೀಸ್’ ಈಗ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ವೈದೇಹಿ ಅವರ ಕಥೆಯನ್ನು ಆಧರಿಸಿದ ಈ ಚಿತ್ರವನ್ನು PVR ಸಿನೆಮಾದಲ್ಲಿ ಸಂಜೆ 7-15 ಕ್ಕೆ ನೋಡಬಹುದು.

+++

ಸಂಡೇ ಇಂಡಿಯನ್ ಚಿತ್ರ ಬಿಡುಗಡೆಗೆ ಮುನ್ನ ನಡೆಸಿದ ಸಂದರ್ಶನದ ಆಯ್ದ ಬಾಗ ಇಲ್ಲಿದೆ- 

‘ಗುಲಾಬಿ ಟಾಕೀಸ್’ ಚಿತ್ರದ ಕುರಿತು… 

ಇದು ವೈದೇಹಿ ಅವರ ಸಣ್ಣಕಥೆ ಆಧರಿಸಿದ ಚಿತ್ರ. ವೈದೇಹಿ ಅವರೇ ಹೇಳುವಂತೆ ಇದೊಂದು ಕವಲು ಕಥೆ. ಇಲ್ಲಿ ಮರುಸೃಷ್ಟಿಯ ಕೆಲಸವಾಗುತ್ತದೆ. ಅಂದರೆ ಒಂದು ಕಥೆಯಿಂದ ಇನ್ನೊಂದು ಕಥೆ ಹುಟ್ಟಿಕೊಳ್ಳುತ್ತದೆ. ‘ಗುಲಾಬಿ ಟಾಕೀಸ್’ನ ಪ್ರಧಾನ ಭೂಮಿಕೆಯಲ್ಲಿರುವ ಪಾತ್ರದ ಹೆಸರೇ ಗುಲಾಬಿ. ಆಕೆ ಸೂಲಗಿತ್ತಿ. ಆಕೆಯ ಸ್ನೇಹಿತೆ ನೇತ್ರು. ‘ಗುಲಾಬಿ ಟಾಕೀಸ್’ ಎಂಬ ಚಿತ್ರಮಂದಿರದಲ್ಲಿ ಇವರೆಲ್ಲಾ ಸಿನಿಮಾ ನೋಡುತ್ತಾ ತಮ್ಮ ಖುಷಿ ಹಂಚಿಕೊಳ್ಳುತ್ತಾರೆ. ಸಿನಿಮಾ ಇಲ್ಲಿ ಅವರಿಗೆ ಕನಸುಗಾರಿಕೆಯ ಕೇಂದ್ರ ಬಿಂದುವಾಗುತ್ತದೆ. ಕನಸಿನ ಒಳಗಿನ ಬೇರೆ ಬೇರೆ ಸಾಧ್ಯತೆಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಇದೇ ಸಂದರ್ಭದಲ್ಲಿ ನೇತ್ರು ಊರುಬಿಟ್ಟು ಓಡಿಹೋಗುತ್ತಾಳೆ. ಗುಲಾಬಿ ಗಂಡ ಮೀನುಗಾರಿಕೆಯಲ್ಲಾದ ಸಮಸ್ಯೆಯಿಂದ ಓಡಿಹೋಗುತ್ತಾನೆ. ಇಲ್ಲಿ ನೇತ್ರುವೇ ಗುಲಾಬಿಯ ಇನ್ನೊಂದು ಮುಖವಾಗುತ್ತಾಳೆ. ವಸ್ತುಸ್ಥಿತಿ ಏನಿದೆ ಎಂದು ನೋಡದೆ ಗುಲಾಬಿಯನ್ನು ಊರು ಬಿಟ್ಟು ಓಡಿಸಲಾಗುತ್ತದೆ. ಗುಲಾಬಿ ಪಾತ್ರವನ್ನು ಉಮಾಶ್ರೀ ಮತ್ತು ನೇತ್ರು ಪಾತ್ರವನ್ನು ಎಂ.ಡಿ. ಪಲ್ಲವಿ ನಿರ್ವಹಿಸಿದ್ದಾರೆ. ‘ದ್ವೀಪ’ಕ್ಕೆ ಸಂಗೀತ ನೀಡಿದ್ದ ಐಸಾಕ್ ಥಾಮಸ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

 

‘ಗುಲಾಬಿ ಟಾಕೀಸ್’ ಜೀವನ ಸಂದಿಗ್ಧತೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ?

ಈ ಚಿತ್ರದಲ್ಲಿ ಮಾಧ್ಯಮಗಳ ಪರಿಣಾಮ ಒಂದು ಸಮಾಜದ ಮೇಲೆ ಯಾವ ರೀತಿ ಆಗುತ್ತಿದೆ ಎಂಬುದನ್ನು ಹೇಳುವ ಯತ್ನ ಮಾಡಿದ್ದೇನೆ. ಕಥೆಯಲ್ಲಿ ಎಂದಿನಂತೆ ದೊಡ್ಡ ತೆರೆಗೆ ಹೊಂದಿಕೆಯಾಗಬಲ್ಲ ಬದಲಾವಣೆ ಮಾಡಿಕೊಂಡಿದ್ದೇನೆ. ಮಾಧ್ಯಮಗಳು ಸಿದ್ಧ ಅಭಿಪ್ರಾಯಗಳನ್ನು ನಮ್ಮ ಮೇಲೆ ಹೇರುತ್ತವೆ. ಅವುಗಳ ನಿಲುವನ್ನು ನಾವು ಪ್ರಶ್ನಿಸುವುದೇ ಇಲ್ಲ. ಅವುಗಳನ್ನು ಹಾಗೇ ಸ್ವೀಕರಿಸುತ್ತಾ ನಮ್ಮೊಳಗೆ ನಮ್ಮದೇ ಆದಹೊಸ ಸ್ಕ್ರಿಪ್ಟ್ ತಯಾರಾಗುತ್ತದೆ. ಇಲ್ಲಿ ಎಲ್ಲಾ ಮಾಹಿತಿಯೂ ಲಭ್ಯ. ಆದರೆ ಇವು ಎಷ್ಟು ಸತ್ಯ ಎಂಬುದು ಯಾರಿಗೂ ಗೊತ್ತಿಲ್ಲ. ಈ ಚಿತ್ರವೂ ಒಂದು ಹುಡುಕಾಟವೇ.

 

ಸ್ತ್ರೀ ಸಂವೇದನೆಗಳಿರುವ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸಿದ್ದೀರಿ. ‘ಗುಲಾಬಿ ಟಾಕೀಸ್’ ಅಂತಹ ಇನ್ನೊಂದು ಚಿತ್ರವೇ?

 
ಸ್ವತಃ ಮಹಿಳೆಯೇ ಈಗ ಎಲ್ಲೆಡೆ ಕೇಂದ್ರಬಿಂದುವಾಗುತ್ತಿದ್ದಾಳೆ. ಹಾಗೆಂದು ನಾನು ಉದ್ದೇಶಪೂರ್ವಕವಾಗಿ ಇಂತಹ ವಸ್ತುಗಳನ್ನೇ ಆಯ್ದುಕೊಳ್ಳುತ್ತೇನೆ ಎಂದಲ್ಲ. ಕಥೆ ಇಷ್ಟವಾಗಿ ಅದನ್ನು ತೆರೆಯ ಮೇಲೆ ತರುವ ಸಾಧ್ಯತೆಗಳಿದ್ದಾಗ ಚಿತ್ರಕಥೆಯ ಕೆಲಸ ಶುರುಮಾಡುತ್ತೇನಷ್ಟೆ. ಆದರೂ ಪ್ರತಿ ಬಾರಿ ಹೀಗೇಕಾಗುತ್ತದೆ ಎಂಬುದು ಗೊತ್ತಿಲ್ಲ. ಸ್ತ್ರೀ ಸಂವೇದನೆಯೆಡೆಗೆ ಒಲವಿದೆ ಎಂದು ಹೇಳಲಾರೆ. ಏಕೆಂದರೆ ನಾನು ಅದರ ಹೊರತಾಗಿಯೂ ಚಿತ್ರಗಳನ್ನು ನಿರ್ದೇಶಿಸಿದ್ದೇನೆ.
 

ಪ್ರಶಸ್ತಿ ನಂತರದ ವಿವರ ಸಂದರ್ಶನಕ್ಕೆ ‘ಮ್ಯಾಜಿಕ್ ಕಾರ್ಪೆಟ್’ಗೆ ಭೇಟಿ ಕೊಡಿ- 

‍ಲೇಖಕರು avadhi

9 September, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading