ವಿಜಯಭಾಸ್ಕರ್
ಅದು ರಾತ್ರಿ 9:30 ಆಗಿರಬಹುದು.ಡಾ.ಎಂ ಎಂ ಕಲಬುರ್ಗಿ ನನ್ನತ್ತ ಧಾವಿಸಿ ಬರುತ್ತಾ ʼಬಿಡು ಮರಿ ಬಿಡು. ನನ್ನ ಬ್ಯಾಗ್ ನಾನೇ ಹಿಡಿದುಕೊಳ್ಳುವೆʼ ಎಂದು ನಾಜೂಕಾಗಿ ನನ್ನ ಕೈಯಲ್ಲಿದ್ದ ಅವರ ಕೈ ಚೀಲವನ್ನು ತೆಗೆದುಗೊಂಡ್ರು. ಸೇಡಂನ ವಚನ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸೇಡಂ ತಾಲೂಕಿಗೆ ಎಂ ಎಂ ಕಲಬುರ್ಗಿ ಬಂದಿದ್ದರು.
ನಾನಾಗ ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ. ಕಲಬುರ್ಗಿ ಎಂದರೆ ಯಾರು?. ಅವರ ಹಿರಿಮೆ ಏನು? ಅಂಥ ಯಾವುದೂ ಗೊತ್ತಿರಲಿಲ್ಲ. ಆ ದಿವಸ ಅವರ ಮಾತು ಕೇಳಿ ಪ್ರಭಾವಿತನಾದೆ. ಹರಿತ ಮಾತಿನ ಕಲಬುರ್ಗಿ ಅವರು ನನಗೆ ಆ ದಿನ ʼಬಿಗ್ ಬಿʼಯಾಗಿದ್ದರು.
ವಚನ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾರ್ಯಕ್ರಮ ಮುಗಿಯಿತು. ಆವತ್ತು ರಾತ್ರಿ 9 ಕ್ಕೆ ಬೀದರ್-ಯಶವಂತಪುರ ರೈಲಿಗೆ ಕಲಬುರ್ಗಿ ಮತ್ತು ಅವರ ಪತ್ನಿಯನ್ನು ಬಿಡಬೇಕಿತ್ತು. ಅಪ್ಪ ನನ್ನನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋದರು.
ಎಂ ಎಂ ಕಲಬುರ್ಗಿ ಅವರು ಎಸಿ ರೂಂ ನಲ್ಲಿ , ಗೆಸ್ಟ್ ರೂಂ ನಲ್ಲಿ ಕುಳಿತುಕೊಳ್ಳುತ್ತಾರೆ ಎಂದು ತಿಳಿದಿದ್ದ ನಾನು ಅವರ ಸರಳತೆ ನೋಡಿ ಬೆರಗಾದೆ. ಸಾಮಾನ್ಯ ಜನರಂತೆ ಅವರು ಬೆಂಚ್ ಪಕ್ಕದಲ್ಲಿ ಬ್ಯಾಗ್ ಇಟ್ಟು ನಿಂತಿದ್ದರು. ಅವರ ಪತ್ನಿ ಕೂರಲು ಸ್ಥಳವಿಲ್ಲದೆ. ಕಂಬದ ಕಟ್ಟೆಗೆ ಒರಗಿ ಕುಳಿತಿದ್ದರು. ಇವರದು ಅದೆಂಥಾ ಸರಳ ಜೀವನಪ್ಪ ಎಂದು ಆಶ್ಚರ್ಯವಾದೆ.
ನಿನ್ನೆ ಅಣ್ಣನನ್ನು ರೈಲ್ವೆ ನಿಲ್ದಾಣಕ್ಕೆ ಅದೇ ಬೀದರ್ – ಯಶವಂತಪುರ ರೈಲಿಗೆ ಬಿಡುವುದಕ್ಕೆ ಹೋದಾಗ ಇದೆಲ್ಲಾ ನೆನಪಾಯಿತು…
0 ಪ್ರತಿಕ್ರಿಯೆಗಳು