ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ big media ಅಂದರೆ..

‘ದಕ್ಷಿಣಾಯಣ ಕರ್ನಾಟಕ’ ಕಟ್ಟುವ ಬಗ್ಗೆ ಸಂಚಾಲಕರಾದ ರಾಜೇಂದ್ರ ಚೆನ್ನಿ  ಅವರು ಕಳಿಸಿದ ಟಿಪ್ಪಣಿ ಇಲ್ಲಿದೆ.

ಈಗ ದಕ್ಷಿಣಾಯಣ ಮಾಧ್ಯಮವನ್ನು ವಿಶ್ಲೇಷಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ..

ಫೆಬ್ರವರಿಯಲ್ಲಿ ಜರುಗಲಿರುವ ಸಮಾವೇಶಕ್ಕೆ ಪೂರಕ ಮಾತು ಇಲ್ಲಿದೆ-

 

ಪರ್ಯಾಯ ಮಾಧ್ಯಮಗಳು

ದಕ್ಷಿಣಾಯಣದ ಕೆಲವರು ಹೀಗೇ ಮಾತನಾಡುತ್ತಾ ಪರ್ಯಾಯ ಮಾಧ್ಯಮಗಳ ಬಗ್ಗೆ ಮುಖ್ಯವಾಗಿ ಅನ್ನಿಸಿದ್ದು ಹೀಗೆ:

೧.
ಇಂದು ಮಾಧ್ಯಮಗಳು ನಮ್ಮ ಆಲೋಚನೆ, ಬದುಕು, ರಾಜಕೀಯ ಇವುಗಳನ್ನು ರೂಪಿಸುತ್ತಿವೆಯೆನ್ನುವುದು ವಾಸ್ತವ ಸಂಗತಿ. ಹೀಗೆ ಹೇಳುವಾಗ ಅದೊಂದು ವಸ್ತುನಿಷ್ಠ ಹೇಳಿಕೆಯೆ ಹೊರತು, ಅದು ಮಾಧ್ಯಮಗಳ ಉಗ್ರ ಅವಹೇಳನವೂ ಅಲ್ಲ; ಅವುಗಳಿಂದ ಪ್ರಭಾವಿತರಾಗುವ ಜನರ ಬಗ್ಗೆ ತಿರಸ್ಕಾರದ ಭಾವನೆಯಾಗಲಿಲ್ಲ. ಮಾಧ್ಯಮಗಳೊಂದಿಗೆ ಬದುಕುವುದು ಹಾಗೂ ನಿರ್ವಹಿಸುವುದು ಅನಿವಾರ್ಯ. ಈ ಸ್ಥಿತಿಗೆ ಪರ್ಯಾಯವಿಲ್ಲ. ಮಾಧ್ಯಮ ತಂತ್ರಜ್ಞಾನಗಳ್ನು ಬಳಸುವುದು ಅವಶ್ಯಕ ಹಾಗೂ ಸೃಜನಶೀಲವೂ ಹೌದು.

೨. ನಮ್ಮ ಸದ್ಯದ ಸಮಸ್ಯೆಯೆಂದರೆ

ಅ) ಪ್ರಭಾವಿಯಾದ ಟಿ.ವಿ. ವಾಹಿನಿಗಳು/ ಸಂಸ್ಥೆಗಳು ಕಾರ್ಪೊರೇಟ್ ಬಂಡವಾಳಶಾಹಿಗಳ ಒಡೆತನದಲ್ಲಿವೆ. ಅಲ್ಲದೆ ಅವು ರಾಜಕೀಯ ಪಕ್ಷಗಳ ಜೊತೆಗೆ ಅನೇಕ ಸ್ತರಗಳಲ್ಲಿ ಸಹಭಾಗಿಗಳಾಗಿವೆ. ಹೀಗಾಗಿ ಅವುಗಳು ವೈರುಧ್ಯಗಳಿಂದ ಕೂಡಿವೆ. ತಮ್ಮ ವಸ್ತುನಿಷ್ಠತೆ, ಪಾರದರ್ಶಕತೆ, ಪ್ರಜಾಪ್ರಭುತ್ವವಾದಿ ಧೋರಣೆ ಹಾಗೂ ಶೈಲಿಗಳ ಬಗ್ಗೆ ತಮ್ಮನ್ನು ಸಮರ್ಥಿಸಿಕೊಳ್ಳಲೇಬೇಕಾದ ಸ್ಥಿತಿಯಲ್ಲಿವೆ. ಅದೇ ಹೊತ್ತಿಗೆ ಸೂಕ್ಷ್ಮವಾಗಿ ಮತ್ತು ಒರಟಾಗಿ ಕೂಡ ಅವು ಕೆಲವು ರಾಜಕೀಯ ಸಿದ್ಧಾಂತಗಳಿಗೆ ಅನುಕೂಲವಾಗುವ ಸಾಂಸ್ಕೃತಿಕ ರಾಜಕಾರಣವನ್ನು ಮಾಡುತ್ತಲಿವೆ. ಇದನ್ನು ಮುದ್ರಿತ ಪತ್ರಿಕೋದ್ಯಮದ ಬಗ್ಗೆಯೂ ಹೇಳಬಹುದು. ಇತ್ತೀಚೆಗೆ ಗೋವಾದಲ್ಲಿ ನಡೆದ ಚರ್ಚೆಯಲ್ಲಿ ಸಾಗರಿಕಾ ಘೋಶ್ ಅವರು ನಿಖಿಲ್ ವಾಗಳೆಯವರೊಂದಿಗೆ ದನಿಗೂಡಿಸಿ “Don’t trust the Big media” ಎನ್ನುವುದನ್ನು ಈ ಕಾರಣಗಳಿಗಾಗಿಯೇ ಹೇಳಿದರು. ಈ big media ಜೊತೆಗೆ ಅದು ಅನುಸರಿಸುವ ಬಂಡವಾಳಶಾಹಿ ಮಾರ್ಗದಲ್ಲಿ ಅದರೊಂದಿಗೆ ಸ್ಪರ್ಧೆ ಮಾಡುವುದು ಅಸಾಧ್ಯ.

೩.
Big media , ಅಲ್ಲಲ್ಲಿ ಪ್ರಜಾಪ್ರಭುತ್ವವಾದಿ space ಗಳನ್ನು ಇಟ್ಟುಕೊಂಡಿಲ್ಲವೆಂದಲ್ಲ, ಆದರೆ ಅವುಗಳ ಸಮಗ್ರ ರಚನೆ ಹಾಗೂ ಸ್ವರೂಪಗಳು ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆ.

೪.
ಇಂದಿನ ರಾಜಕೀಯದ ಆಕ್ರಾಮಕ ಸ್ವರೂಪವು ನಮ್ಮ ಮಾಧ್ಯಮಗಳಿಗೆ ಮಾದರಿಯಾಗಿ, ಅವುಗಳನ್ನು ಅನೇಕ ಅಂಶಗಳಲ್ಲಿ (ಉದಾಹರಣೆಗೆ Anchor politics ನಲ್ಲಿ) ಪುನರುಚ್ಚಾರವಾಗುತ್ತಿದೆ.

೫.
ಸಾಮಾಜಿಕ ತಾಣಗಳು, ಮಾಧ್ಯಮಗಳು ಸೈದ್ಧಾಂತಿಕವಾಗಿ ನೋಡಿದರೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ಅಭಿವ್ಯಕ್ತಿಯಲ್ಲಿ ಬೆಂಬಲಿಸಬೇಕು. ಆದರೆ ವಸ್ತುಸ್ಥಿತಿಯೆಂದರೆ social media ನಲ್ಲಿ ಕೂಡ ಸಾಂಸ್ಕೃತಿಕ ಉಗ್ರರ ಹಾವಳಿಯಿಂದಾಗಿ ಈ ಯಾವ ಲಕ್ಷಣಗಳೂ ಉಳಿಯುವುದು ಕಷ್ಟವಾಗುತ್ತಿದೆ. ಮುಜುಗರ, ಅವಮಾನ, trolling ಇವುಗಳಿಂದ ಅವು ಅಧೋಗತಿಗೆ ಹೋಗುತ್ತಿದೆ.

೬. ಆದರೆ ನಮ್ಮ ಮಾಧ್ಯಮ ಪರಿಣಿತ ಯುವಜನಾಂಗವೊಂದು ಅಭಿಪ್ರಾಯ ರೂಪಿಸುವಲ್ಲಿ, ಪ್ರತಿಭಟನೆ ಕಟ್ಟುವುದರಲ್ಲಿ ಮಾಧ್ಯಮಗಳನ್ನು ಬಳಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟಿದೆ. ಈಗ ಪ್ರಶ್ನೆ ಇರುವುದೆಂದರೆ ಪರ್ಯಾಯ ಮಾಧ್ಯಮ ಸಾಧ್ಯತೆಗಳಿಗೆ ಒಂದು ಖಚಿತವಾದ ರೂಪಕೊಟ್ಟು ಅದಕ್ಕೆ ಒಂದು ಸಾಂಘಿಕ ಸ್ವರೂಪವನ್ನು ಕೊಡುವುದು ಹೇಗೆ ಎನ್ನುವುದು. ದಕ್ಷಿಣಾಯಣದ ನಮ್ಮ ರಾಜಕೀಯ ನಿಲುವು ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವದ ಪರವಾಗಿ ಹಾಗೂ ಫ್ಯಾಸಿಸಂ ವಿರುದ್ಧವಾಗಿ ಈ ಪರ್ಯಾಯ ಮಾಧ್ಯಮಗಳು ನಮಗೆ ಬೇಕಿವೆ.

೭. ಆದರೆ ಇದು ಸಿದ್ಧಾಂತಿಗಳು, ಕೇವಲ activist ಗಳು ಮಾಡುವ ಕೆಲಸ ಅಲ್ಲವೇ ಅಲ್ಲ. ಇದು ನಮ್ಮ ಪ್ರತಿಭಾವಂತ ಯುವ ಬರಹಗಾರರು, ಕವಿಗಳು, ವ್ಯಂಗ್ಯಚಿತ್ರಕಾರರು, visual culture ನ ಸೃಜನಶೀಲರು, ಸಾಕ್ಷಚಿತ್ರ, ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ಪತ್ರಕರ್ತರು ಮಾಡಬೇಕಿದೆ. ಇದು ಸೃಜನಶೀಲ ಮನಸ್ಸುಗಳ ಕ್ಷೇತ್ರ ಬೆಂಬಲಕ್ಕಾಗಿ ಪರಿಣಿತರು, ವಿದ್ವಾಂಸರು ಇದ್ದೇ ಇರುತ್ತಾರೆ.

೮. ಅದಕ್ಕಾಗಿ ಫೆಬ್ರುವರಿ ೧೮, ೧೯ ರಂದು ಧಾರವಾಡದಲ್ಲಿ ಎರಡು ದಿನದ ಸಹಚರ್ಚೆಯನ್ನು ಏರ್ಪಡಿಸುತ್ತಿದ್ದೇವೆ. ದಿನೇಶ್ ಅಮೀನ್ ಮಟ್ಟು ಇದಕ್ಕೆ ಚಾಲನೆ ಕೊಡುತ್ತಾರೆ. ಗಣೇಶ್ ದೇವಿ, ದೇವನೂರು ಮಹಾದೇವ ಜೊತೆಗಿರುತ್ತಾರೆ. ಅಂದ ಹಾಗೆ ಚಟುವಟಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಇರುವುದಿಲ್ಲ. ಭಾಷಣಗಳೂ ಇರುವುದಿಲ್ಲ. ಇದು ಶುರುವಾಗುವುದು brain storming ಗೋಷ್ಠಿಯಿಂದ. ಅದರಲ್ಲಿಯೇ ಎರಡು ದಿನಗಳಲ್ಲಿ ಮಾಡಬಹುದಾದ ಚರ್ಚೆಯ ಕಾರ್ಯಸೂಚಿ ಸಿದ್ಧಮಾಡುವುದು, ಚರ್ಚೆಯ ಸ್ವರೂಪವನ್ನೂ ನಿರ್ಧರಿಸುವುದು.

೯. ನಮ್ಮ ಉದ್ದೇಶ ಗಂಭೀರವಾಗಿಯೇ ಇದೆ. ಇಂದು ಜನಸಮುದಾಯಗಳು ಬದುಕುಳಿಯಬೇಕಾದರೆ ಒಳ್ಳೆಯ cultural politics ನಿಂದ ಒಳ್ಳೆಯ ರಾಜಕೀಯ ಕ್ರಿಯೆಗಳು ರೂಪುಗೊಳ್ಳಲೇಬೇಕು. ಇದನ್ನು ಸೃಜನಶೀಲ ಮನಸ್ಸುಗಳು ಮಾಡಲೇಬೇಕು. ಇದು ಸಾಂಘಿಕವಾಗಿ, ಸಂಘಟನಾತ್ಮಕವಾಗಿ ಆದರೆ ನೇತಾರರು ಇಲ್ಲದೇ ಚಳುವಳಿಯಾಗಿ ನಡೆಯಬೇಕು. (ಈ ಬೇಕು ಎನ್ನುವ ನಿರ್ದೇಶಕ ವಾಕ್ಯಗಳನ್ನು ತಾವು ಬದಲಾಯಿಸಿಕೊಳ್ಳಿ).

ಹೀಗಾಗಿ ನೀವು ಬನ್ನಿ. ನಿಮ್ಮ ಒಪ್ಪಿಗೆ ಅಭಿಪ್ರಾಯ ಇವುಗಳನ್ನು ತಿಳಿಸಿ- e mail, facebook, ಪತ್ರ ಇವುಗಳ ಮೂಲಕ ನೀವು ಬರೆದದ್ದು, ಈ ಮೇಲಿನ ಟಿಪ್ಪಣಿಗೆ ಸೇರುತ್ತಾ ೧೮, ೧೯ ರ ಚರ್ಚೆಗಳಿಗೆ ವಿಷಯವಾಗುತ್ತದೆ. ನಿಮ್ಮ ಪ್ರತಿಕ್ರಿಯೆ ಬಂದ ಕೂಡಲೇ ಧಾರವಾಡದಲ್ಲಿ ಕಾರ್ಯಕ್ರಮದ ಸ್ಥಳ ಇತ್ಯಾದಿ ತಿಳಿಸುತ್ತೇವೆ.

ರಾಜೇಂದ್ರ ಚೆನ್ನಿ

‍ಲೇಖಕರು admin

24 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading