ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್, ಕ್ರೈಸ್ಟ್ ಕಾಲೇಜ್, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜುಗಳು ಮನುಸ್ಮೃತಿಯನ್ನು ತಿರುವುತ್ತಾ ಕ್ಯಾಂಪಸ್ ನಲ್ಲಿ ಹುಡುಗ ಹುಡುಗಿ ಮಾತನಾಡಲೂಬಾರದು ಎಂದು ಹಠ ಹಿಡಿದು ಕೂತಿವೆ
ಈ ಸಂದರ್ಭದಲ್ಲಿ ಯುವಜನ ಚಳವಳಿಯ ಮುಖಂಡರಲ್ಲೊಬ್ಬರಾದ ಬಿ ರಾಜಶೇಖರ ಮೂರ್ತಿ ದೆಹಲಿಯ ಜೆ ಎನ್ ಯು ಒಳಗೆ ಅಡ್ಡಾಡಿ ತಂದ ನೋಟ ಇಲ್ಲಿದೆ

ಬಿ ರಾಜಶೇಖರ ಮೂರ್ತಿ
ಇಡೀ ದೇಶಕ್ಕೆ ಮಾದರಿ ವಿಶ್ವ ವಿದ್ಯಾಲಯವೇ ನಮ್ಮ’ಜವಹರಲಾಲ್ ನೆಹರು ವಿಶ್ವ ವಿದ್ಯಾಲಯ’.
ಕೇರಳ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಕೆಲ ವಿ.ವಿ.ಗಳು ಬಿಟ್ಟರೆ ನಮ್ಮ ದೇಶದ ಬಹುತೇಕ ವಿ.ವಿ.ಗಳಲ್ಲಿ ವಿದ್ಯಾರ್ಥಿಗಳ, ಪೋಷಕರ, ಬೋಧಕ ಮತ್ತು ಬೋಧಕೇತರರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ.
ಅಷ್ಟೇ ಯಾಕೆ ಎಲ್ಲಾ ಸರ್ಕಾರಿ- ಖಾಸಗಿ ವಿ.ವಿ.ಗಳಲ್ಲಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಲಾಗುತ್ತದೆ. ಆದರೆ ಇಂತಹ ಅಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿರುವ ವಿ.ವಿ.ಯೇ ‘ಜವಹರಲಾಲ್ ನೆಹರು ವಿಶ್ವ ವಿದ್ಯಾಲಯ’.
ಈ ವಿ.ವಿ.ಯಲ್ಲಿ ಹುಲುಸಾಗಿ ಬೆಳೆದು ನಿಂತಿರುವ ನಾನಾ ತೆರನಾದ ಸಸ್ಯಕಾಶಿಯಂತೆ, ದೇಶ-ವಿದೇಶಗಳ ಮೂಲೆ ಮೂಲೆಗಳಿಂದ ಬಂದಿರುವ ನಾನಾ ತೆರನಾದ ಧರ್ಮ, ಜಾತಿ, ಭಾಷೆಗಳ ವಿದ್ಯಾರ್ಥಿಗಳು ಮೊದಲು ಇಲ್ಲಿ ತಿಳಿಯುವುದು ಮಾನವ ಕುಲದ ಪ್ರಜಾಸತ್ತಾತ್ಮಕ ಹಕ್ಕುಗಳ ಮಹತ್ವದ ಬಗ್ಗೆ.
ವಿಶ್ವದಲ್ಲಿನ ಆಗು-ಹೋಗುಗಳ ಬಗ್ಗೆಯೂ ಇಲ್ಲಿ ಚರ್ಚೆ- ವಾಗ್ವಾದಗಳು ನಡೆಯುತ್ತವೆ. ಇಲ್ಲಿ ಎಲ್ಲಾ ತೆರನಾದ ಸೈದ್ಧಾಂತಿಕ ಗುಂಪುಗಳಿವೆ.
ಹಗಲು ಪಠ್ಯಕ್ರಮಗಳ ಬಗ್ಗೆ ಗಮನ ಕೊಟ್ಟರೆ, ದೇಶ-ವಿದೇಶಗಳಲ್ಲಿನ ಸಮಕಾಲೀನ ವಿದ್ಯಮಾನಗಳ ಬಗ್ಗೆ ಚರ್ಚಾ ಚಟುವಟಿಕೆಗಳು ರಾತ್ರಿ 8-9 ಗಂಟೆಯ ನಂತರ ಆರಂಭಗೊಂಡು ಮಧ್ಯರಾತ್ರಿಯವರೆಗೆ ನಡೆಯುತ್ತವೆ.
ಅದರಲ್ಲೂ ‘ಕ್ಯಾಂಪಸ್ ಡೆಮಾಕ್ರಸಿ’ ಯ ಬಗ್ಗೆಯಂತೂ ಇಡೀ ದೇಶದ ವಿ.ವಿ.ಗಳು ಇಲ್ಲಿ ನೋಡಿಯೇ ಕಲಿಯಬೇಕು.
ಎಂದಿನಂತೆ ಈ ವರುಷದ JNUSU ಚುನಾವಣೆ ಇದೇ ಸೆಪ್ಟೆಂಬರ್ 9 ರಂದು ನಡೆಯಲಿದೆ.
ಇದಕ್ಕಾಗಿ ಆಯಾ ಆಯಾ ಶ್ಯೆಕ್ಷಣಿಕ ವಿಭಾಗಗಳ (Departments) ಮುಂದೆ sfi, aisf. nsui, aisa, abvp , aidso… ಹೀಗೆ ವಿವಿಧ ಧೋರಣೆಗಳ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಚುನಾವಣೆಗೆ ನಿಂತು ಪ್ರಚಾರ ಆರಂಭಿಸಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ಈ ಕೆಲ ಪೋಟೊಗಳನ್ನು ಹಾಕಿದ್ದೇನೆ.
ಹೀಗೆ ವಿವಿಧ ವಿಭಾಗಗಳ ಹೆಬ್ಬಾಗಿಲುಗಳ ಗೋಡೆಗಳ ಮೇಲಿನ ಇರುವ ಚಿತ್ತಾರಗಳು, ವ್ಯಕ್ತಿಗಳು ಮತ್ತು ಘೋಷಣೆಗಳೇ ಇಂದಿನ ದೇಶದ ಯುವಜನರ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತಿವೆ.
ಆದರೆ ನಮ್ಮ ಬೆಂಗಳೂರಿನ ಮತ್ತು ರಾಜ್ಯದೆಲ್ಲೆಡೆ ಇರುವ ವಿ.ವಿ. ಗಳು ಮತ್ತು ಕಾಲೇಜುಗಳ ಕಟ್ಟಡಗಳ ಗೋಡೆಗಳು ನೊಡಲು ಮಾತ್ರ ಸುಂದರವಾಗಿ ಕಾಣುತ್ತವೆಯೇ ಹೊರತು, ಮಾನವ ವಿಕಾಸಕ್ಕೆ ಪೂರಕ ಗೋಡೆ ಬರಹಗಳಿಗೆ, ಪೋಸ್ಟರ್ಸ್ ಅಂಟಿಸಲು ಅವಕಾಶ ಮಾಡಿ ಕೊಡದೆ ವಿದ್ಯಾರ್ಥಿ ಸಮುದಾಯದ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿದೆ.
ಹೀಗೆ ಆರಂಭದಿಂದಲ್ಲೂ ತನ್ನ ವಿಶೇಷ ಛಾಪನ್ನು ಮೂಡಿಸುವ JNU ಎಂಬ ಜ್ಞಾನ ಗಂಗೋತ್ರಿ ದರ್ಶನವನ್ನು ಪಡೆಯಲು ನಾನು ಮತ್ತು ನಮ್ಮ dyfi ನ ಅಖಿಲ ಭಾರತ ಮುಖಂಡರಾದ ಪ್ರೀತಿ ಶೇಖರ್ ಭೇಟಿ ನೀಡಿದ್ದೆವು.
ಅಲ್ಲಿನ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ನೊಡಿ ‘ನಮಗೆ ಇಂತಹ ವಿ.ವಿ.ಯಲ್ಲಿ ಓದುವ ಅವಕಾಶ ತಪ್ಪಿಹೋಯಿತಲ್ಲಾ’ ಎಂದುಕೊಳ್ಳುತ್ತಾ ಅಲ್ಲೇ ಢಾಬಾದಲ್ಲಿ ಟೀ ಸವಿದು, ವಿ.ವಿ. ಯಿಂದ ಹೊರಬರಲು ಬಾರದ ಮನಸ್ಸಿನ ಕಾಲ್ಕಿತ್ತು ಹೊರಬಂದೆವು.









ಹೌದು, ಎಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಇರುತ್ತದೆಯೋ ಅಲ್ಲಿ ವಿಕಾಸವನ್ನು ಕಾಣಬಹುದು