ಶಿವರಾಂ ಪೈಲೂರು
ಒಂದು ಸಂತಸದ ಸಂಗತಿ. ‘ಪಿಪ್ಲಾಂತ್ರಿ’ ಪುಸ್ತಕದ ಎಲ್ಲ ಪ್ರತಿಗಳು ಕೇವಲ 20 ದಿನಗಳಲ್ಲಿ ಖಾಲಿಯಾಗಿವೆ! ‘ಕೃಷಿ ಮಾಧ್ಯಮ ಕೇಂದ್ರ’ದ ಈವರೆಗಿನ ಪ್ರಕಟಣೆಗಳಿಗೆ ಹೋಲಿಸಿದರೆ ಇದೊಂದು ದಾಖಲೆಯೆ.
ಈ ಬಾರಿ ಆರಂಭದಲ್ಲಿ ಸ್ನೇಹಿತರೊಬ್ಬರು 100 ಪುಸ್ತಕ ಉಡುಗೊರೆಗಳನ್ನು ಪ್ರಾಯೋಜಿಸಿದ್ದು ಒಂದು ರೀತಿಯಲ್ಲಿ ಪುಟ್ಟ ಹಣತೆ ಹಚ್ಚಿ ಎಣ್ಣೆ ಎರೆದಂತೆ. ಉದ್ದಕ್ಕೂ ಈ ಹಣತೆ ಬೆಳಗುತ್ತಲೇ ಇತ್ತು. ಆ ಬೆಳಕಿನಲ್ಲಿ ಇನ್ನಷ್ಟು ಹಣತೆಗಳು ಬೆಳಗಿದವು.
ಈ ಪುಸ್ತಕ ಕೆಲವಾರು ಹೊಸ ಸ್ನೇಹಿತರನ್ನು ದೊರಕಿಸಿಕೊಟ್ಟದ್ದು ವೈಯಕ್ತಿಕವಾಗಿ ದೊಡ್ಡ ಗಳಿಕೆ. ದೂರದ ಅಸ್ಸಾಂನಲ್ಲಿ ಸೇವೆಸಲ್ಲಿಸುತ್ತಿರುವ ಕನ್ನಡಿಗರೊಬ್ಬರು ಸಾವಯವ ಕೃಷಿಯ ತುಡಿತವಿರುವವರು. ‘ಎಂದಾದರೂ ಒಂದು ದಿನ ಕೃಷಿಗಿಳಿಯುತ್ತೇನೆ. ಕಾಮ್ ನ ಎಲ್ಲ ಪುಸ್ತಕಗಳನ್ನು ಕಳುಹಿಸಿಕೊಡಿ’ ಎಂಬ ವಿನಂತಿ ಅವರದು.
ಪಿಪ್ಲಾಂತ್ರಿ ಪುಸ್ತಕ ಅಭಿಯಾನದಲ್ಲಿ ಪಾಲ್ಗೊಂಡ, ಹಲವು ರೀತಿಯಲ್ಲಿ ಬೆಂಬಲ ನೀಡಿ ಪ್ರೋತ್ಸಾಹಿಸಿದ ಎಲ್ಲರಿಗೂ ಆಭಾರಿ. ಹೆಣ್ಣುಮಕ್ಕಳ ಹಿತರಕ್ಷಣೆ ಮತ್ತು ಹಸಿರೀಕರಣದ ಜತೆಗೆ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಾಧಿಸಿದ ಪಿಪ್ಲಾಂತ್ರಿಯ ಯಶೋಗಾಥೆ ಒಂದಲ್ಲ ಒಂದು ರೀತಿಯಲ್ಲಿ ಪ್ರೇರಣೆ ನೀಡುತ್ತದೆ ಎಂದು ಹಲವಾರು ಓದುಗರು ತಮ್ಮ ಅನಿಸಿಕೆಯಲ್ಲಿ ತಿಳಿಸಿದ್ದಾರೆ.
ಸದ್ಯದಲ್ಲೆ ನಡೆಯಲಿರುವ ಪರಿಸರ ಸಂಬಂಧಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳುವವರಿಗೆ ಪಿಪ್ಲಾಂತ್ರಿ ಪುಸ್ತಕ ನೀಡಲು ಸಂಘಟಕರು ಮುಂದಾಗಿದ್ದು 100 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡನೇ ಮುದ್ರಣಕ್ಕೆ ಅಣಿಯಾಗುವಷ್ಟರಲ್ಲಿ ಇನ್ನಿಬ್ಬರು ಗೆಳೆಯರು 150 ಪುಸ್ತಕಗಳನ್ನು ಒದಗಿಸುವಂತೆ ತಿಳಿಸಿದರು.

ಪುಸ್ತಕದ 500 ಪ್ರತಿಗಳು ಈ ವಾರಾಂತ್ಯ ಕೈಸೇರಲಿವೆ. ನೀವು ನಿಮ್ಮ ಆಪ್ತ ಗೆಳೆಯರು, ಬಂಧುಬಳಗದವರ ವಿಳಾಸ ತಿಳಿಸಿದರೆ ನಿಮ್ಮ ಹೆಸರಿನಲ್ಲಿ ಅವರಿಗೆಲ್ಲ ಪುಸ್ತಕ ತಲುಪಿಸುವ ವ್ಯವಸ್ಥೆ ಕೂಡ ಇದೆ. ಆಸಕ್ತರು ಸಂಪರ್ಕಿಸುವಂತೆ ವಿನಂತಿ.
ಶಿವರಾಂ ಪೈಲೂರು -9483757707





ಅಭಿನಂದನೆಗಳು
ಪುಸ್ತಕ ತುಂಬಾ ಹಿಡಿಸಿತು.ಭ್ರೂಣದಲ್ಲೇ ಹೆಣ್ಣು ಮಕ್ಕಳನ್ನು ಕೊಲ್ಲುವ ಹಾಗೂ ಮರ್ಯಾದಾ ಹತ್ಯಗಳು ಮಾಮೂಲಿಯಾಗುತ್ತಿರುವ ಈ ದಿನಗಳಲ್ಲಿ ಹೆಣ್ಣು ಮಗು ಹುಟ್ದದರೆ ಸಂಭ್ರಮಿಸುವ ಆ ನೆಪದಲ್ಲಿ ಗಿಡಗಳನ್ನು ನೆಡುವ ಸಂಪ್ರದಾಯ ಎಂಥಾ ಜೀವಪರ ಆಚರಣೆ ಅನಿಸುತ್ತಿದೆ. ಇಂಥವರ ಸಂತತಿ ಹೆಚ್ಚಬೇಕು.
ಇದನ್ನುಪರಿಚಯಿಸಿದ ಪೈಲೂರ್ ಅಭಿನಂದನಾರ್ಹ.
– ಎಸ್.ಗಂಗಾಧರಯ್ಯ