‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು.
ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ರಾಘವೇಂದ್ರ ಜೋಷಿ
ಮ್ಯಾಡಂ, ಇಲ್ಲಿ ನವೀನ್ ಅವರಿಗಾಗಲೀ ಅಥವಾ ನನಗಾಗಲೀ ಶ್ರೀಯುತ ದಿವಾಕರ್ ಅವರನ್ನು ಅವಮಾನ ಅಥವಾ ಅಗೌರವ ತೋರುವ ಪ್ರಸಂಗವೇ ಬರುವದಿಲ್ಲ. ನಾನು ಗಮನಿಸಿದಂತೆ, ನವೀನ್ ಮಧುಗಿರಿ ಅವರು ಸಾಹಿತ್ಯದ ಬಗ್ಗೆ ಅಪರಿಮಿತ ಪ್ರೀತಿಯುಳ್ಳ ಮನುಷ್ಯ. ಬಹುಶಃ ಅವರು ದಿವಾಕರ್ ಅವರ ದೊಡ್ಡ ಅಭಿಮಾನಿಯಾಗಿರಲಿಕ್ಕೂ ಸಾಕು. ಅದೇ ಕಾರಣಕ್ಕೆ ಅವರು ದಿವಾಕರರ ಈ ಸಾಲುಗಳನ್ನು ಹಿಡಿದುಕೊಂಡು ತಮ್ಮ ಲೇಖನವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.
ನಿಜ, ಹೆಮ್ಮಿಂಗ್ವೆ ಬರೆದ ಆ ಪುಟ್ಟಕತೆಯ ಸಾಲುಗಳನ್ನು ದಿವಾಕರರು ತರ್ಜುಮೆ ಮಾಡಿರಲಿಕ್ಕಿಲ್ಲ. ಮಾಡಿಲ್ಲವೆಂದು ನೀವೇ ನನ್ನ ಟೈಮ್ ಲೈನ್ ನಲ್ಲಿ ಹೇಳಿದ್ದೀರಿ. ನನಗೂ ಈ ವಿಷಯ ಗೊತ್ತಿರಲಿಲ್ಲ. ಇಷ್ಟಕ್ಕೂ ಸದರಿ ಸಾಲುಗಳು ನನ್ನ ಗಮನ ಸೆಳೆದಿದ್ದು, ದಿವಾಕರ್ ಅವರು ತರ್ಜುಮೆ ಮಾಡಿದ್ದಾರೆ ಅಂತನ್ನುವ ಕಾರಣಕ್ಕಾಗಿ ಅಲ್ಲ.
ಮೂಲಕತೆಯ ಸಾಲುಗಳಲ್ಲಿನ ಅದ್ಭುತ ಚಾತುರ್ಯಕ್ಕಾಗಿ. ಹೀಗಾಗಿ, ಈ ಸಾಲುಗಳನ್ನು ಕನ್ನಡದಲ್ಲಿ ಅನುವಾದ ಮಾಡುವದು ಎಷ್ಟು ಕಠಿಣವಾದ ಕೆಲಸ ಅಂತನ್ನುವದನ್ನು ಹೇಳುವದಕ್ಕಾಗಿ ನವೀನರ ಲೇಖನದ ಹಿನ್ನೆಲೆಯನ್ನೂ, ಅಲ್ಲಿ ಬಂದ ದಿವಾಕರ್ ಅವರ ಅನುವಾದದ ರೆಫರೆನ್ಸ್ ಅನ್ನೂ ನಾನು ಅಲ್ಲಿ ಹೇಳಬೇಕಾಯಿತು.
ಇದು ಸಂದರ್ಭದ ಉಲ್ಲೇಖವಷ್ಟೇ ಹೊರತು, ಶ್ರೀಯುತ ದಿವಾಕರರು ಇದನ್ನು ತರ್ಜುಮೆ ಮಾಡಿದ್ದಾರೋ ಇಲ್ಲವೋ, ಅದು ಸರಿಯೋ ತಪ್ಪೋ ಅಂತ ನಾನು ಯಾಕಾದರೂ ಹೇಳಲಿ? ಅದು ನನ್ನ ಕೆಲಸವೂ ಅಲ್ಲ. ನಾನು ಹೇಳಬಯಸಿದ್ದು, ನನ್ನ ಕಷ್ಟಗಳ ಬಗ್ಗೆ. ಈ ಕತೆಯಲ್ಲಿ ಇಂತಿಂಥ ಸವಾಲುಗಳಿವೆ ಮತ್ತು ಇವೆಲ್ಲ ಸವಾಲುಗಳನ್ನು ನಿವಾರಿಸುವದು ನನ್ನಿಂದ ಸಾಧ್ಯವಾಗಲಿಕ್ಕಿಲ್ಲ ಅಂತ ಹೇಳಬಯಸಿದ್ದು. ಇಷ್ಟಕ್ಕೂ ಮೀರಿ ನಾನು ಕನ್ನಡಕ್ಕೆ ಇದನ್ನು ತರಲೇಬೇಕು ಅಂತ ನಾನು ‘ಧೈರ್ಯ’ ಮಾಡಿದ್ದೇ ಆದರೆ ಅದು ನನ್ನ ತರ್ಜುಮೆಯಲ್ಲಿನ ಬಲವನ್ನು ಕುಂದಿಸಬಲ್ಲದು ಅಂತ ಹೇಳಬಯಸಿದ್ದು.
ಬಹುಶಃ ನನ್ನ ಈ ವಿವರಣೆ ನಿಮಗೆ ಒಪ್ಪಿತವಾಗಬಹುದಾದರೆ ನನಗೂ ಸಂತೋಷವಾದೀತು. ನನ್ನ ಬರೆಹದಿಂದ ನಿಮಗೆ ವೈಯಕ್ತಿಕವಾಗಿ ನೋವಾಗಿದ್ದಲ್ಲಿ, ದಯವಿಟ್ಟು ಕ್ಷಮೆ ಇರಲಿ.






0 Comments