ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಬೆಳೆದು ಒಂದು ದಂಧೆಯೇ ಆದಂತಿದೆ..

ರಾಜಾರಾಂ  ತಲ್ಲೂರು

ಇದು ಐದನೇ ಎಸ್ಟೇಟ್ ಸ್ಥಾಪನೆಯ ಹುನ್ನಾರದ ಭಾಗ ಕರಾವಳಿಯಲ್ಲಿ ಬದುಕನ್ನ ಅಸಹನೀಯಗೊಳಿಸುತ್ತಿರುವ ಈ ಎಲ್ಲ ಕೃತ್ಯಗಳ ಹಿಂದೆ ಒಂದು ಪ್ಯಾಟರ್ನ್ ಇದೆ. ಸಾರ್ವಜನಿಕವಾಗಿ ಅಸಹನೆಯನ್ನು, ಹಿಂಸೆಯನ್ನು ಮತ್ತು ಕಾನೂನು ಕೈಗೆತ್ತಿಕೊಳ್ಳುವುದನ್ನು ಪ್ರಚೋದಿಸುವ ಎಲ್ಲ ಕೃತ್ಯಗಳೂ ಇಲ್ಲಿ ತಮ್ಮ ತೀವ್ರತೆ ಹಾಗೂ ಅಗಾಧತೆಗಳನ್ನು ಸತತವಾಗಿ ಹೆಚ್ಚಿಸಿಕೊಳ್ಳುತ್ತಲೇ ಸಾಗಿವೆ. ಸಾಮಾಜಿಕ ನಾಯಕತ್ವ ನೀಡುವುದಕ್ಕೆ ಪೂರ್ವಾರ್ಹತೆ ಪಡೆಯುವ ಹಾದಿ ಈಗೀಗ ನಮ್ಮ ಕರಾವಳಿಯ ಯುವಕರಿಗೆ ಸ್ಪಷ್ಟವಾಗತೊಡಗಿದೆ. ಪರದೆಯ ಮುಂದೆ ಅವರು ತಾಳಕ್ಕೆ ತಕ್ಕಂತೆ “ಝಣ ಝಣಕ” ಕುಣಿಯುತ್ತಿದ್ದರೆ, ಎಂದೂ ಹೊರಬಾರದೆ, ಯಾವುದೇ ಕಾನೂನಿನ ಚೌಕಟ್ಟಿಗೆ ಒಳಪಡದೆ, ಕೋಣೆಗಳೊಳಗೇ ಕುಳಿತು ದೇಶ ನಡೆಸಬಯಸುವ ಮೆದುಳುಗಳು ದೀರ್ಘಕಾಲಿಕ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ತಮ್ಮ ಕಾಲಿಗೆ ಬೀಳದವರನ್ನು ಹೊರಹಾಕುವ ತಾಕತ್ತೂ, ಕೌಶಲವೂ ಈ ಮೆದುಳುಗಳಿಗೆ ಚೆನ್ನಾಗಿದೆ. ಪ್ರಜಾಪ್ರಭುತ್ವದ ಉಳಿದೆರಡು ಎಸ್ಟೇಟ್ ಗಳೂ ಕೂಡ ತಮ್ಮ ವರ್ಗಾವಣೆ, ಆಯಕಟ್ಟಿನ ಜಾಗಗಳಲ್ಲಿ ತಳವೂರುವಿಕೆಗಳಿಗೆ, ಕಾರ್ಯಕ್ರಮ ಅನುಷ್ಠಾನಗಳಿಗೆ ಈ ಹಿನ್ನೆಲೆಯ ಸೂತ್ರಧಾರರನ್ನೇ ಅವಲಂಭಿಸಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇದು ಬೆಳೆದು ಒಂದು ದಂಧೆಯೇ ಆದಂತಿದೆ. ಕರಾವಳಿಯ ಮಾಧ್ಯಮಗಳಲ್ಲಿ ಕಳೆದ 15 ವರ್ಷಗಳಲ್ಲಿ ಯಾವ ವಿಧದ ಪತ್ರಕರ್ತರು ಆಯಕಟ್ಟಿನ ಜಾಗಗಳಲ್ಲಿ ತುಂಬಿಕೊಳ್ಳುತ್ತಿದ್ದಾರೆ, ಇಲ್ಲಿನ ಅಸಹನೆ ಮತ್ತು ಹಿಂಸ್ರ ನಡವಳಿಕೆಗಳ ಹಿಂದೆ ಅವರ ಪಾತ್ರವೇನು ಎಂಬುದು ಇದನ್ನೆಲ್ಲ ಗಮನಿಸುತ್ತಾ ಬಂದಿರುವವರಿಗೆ ಚೆನ್ನಾಗಿ ತಿಳಿದಿದೆ. ಈ ಬೆಳವಣಿಗೆ ಆಕಸ್ಮಿಕವೂ ಅಲ್ಲ; ತಂತಾನೆ ಸಂಭವಿಸಿದ್ದೂ ಅಲ್ಲ. ಹೀಗೆ ತನ್ನ ಹಿಡಿತದಲ್ಲಿರುವ ನಾಲ್ಕೂ ಸಾಂವಿಧಾನಿಕ ಎಸ್ಟೇಟ್ ಗಳ ಬಲ-ದೌರ್ಬಲ್ಯಗಳನ್ನು ಚೆನ್ನಾಗಿ ಬಳಸಿಕೊಂಡು ಸಂವಿಧಾನಾತೀತವಾದ ಐದನೇ ಎಸ್ಟೇಟ್ ಒಂದು ತನ್ನನ್ನು ಅಧಿಕೃತಗೊಳಿಸಿಕೊಳ್ಳುವ ಕಾರ್ಯಾಚರಣೆ ಆರಂಭಿಸಿದೆ. “ಪೊಲೀಸರು ಕಾರ್ಯಾಚರಿಸದಿದ್ದರೆ ನಾವು ಕಾರ್ಯಾಚರಿಸುತ್ತೇವೆ”, “ರಾಜಕಾರಣಿಗಳು ಮಾಡದಿದ್ದರೆ ನಾವು ಮಾಡಬೇಕಾಗುತ್ತದೆ”, “ಕಾನೂನು ಧರ್ಮ, ನಂಬಿಕೆಗಳಿಗಿಂತ ದೊಡ್ಡದಲ್ಲ”, “ನಾವು ಮಾಡಿದ್ದನ್ನು ಅವರೂ ಈ ಹಿಂದೆ ಮಾಡಿದ್ದಾರಲ್ಲ?” “ ನಮಗೆ ಹೇಳಲು ನೀವೇನೂ ಸಾಚಾ ಅಲ್ಲ” … ಇವೆಲ್ಲ ಈ ಐದನೇ ಎಸ್ಟೇಟಿನ ವಾದಸರಣಿಗಳು. ಇದು ಹೀಗೇ ಮುಂದುವರಿದರೆ, ಈ ಜಿಲ್ಲೆಯಲ್ಲಿ ನಾಗರಿಕ ಬದುಕು ಇನ್ನಷ್ಟು ಅಸಹನೀಯ ಆಗಲಿದೆ.

ಚಿತ್ರ ಕೃಪೆ: ಕೆಂಪು ಚುಕ್ಕಿ

ಎಚ್. ಸುಂದರ ರಾವ್

’’But the media did not care to inform the polic” – ಮಾಧ್ಯಮ ಮಿತ್ರರು ಪೋಲೀಸರಿಗೆ ಮೊದಲೇ ತಿಳಿಸಿದ್ದರೆ ಈ ಘಟನೆಯನ್ನು ತಡೆಯುವುದು ಸಾಧ್ಯವಿತ್ತು. ತಿಳಿಸಲಿಲ್ಲ ಎಂದರೆ ಹೀಗೆಲ್ಲ ನಡೆಯುವುದು ಅವರಿಗೆ ಬೇಕಾಗಿದೆ ಎಂದೇ ಆಗುತ್ತದೆ. ಇನ್ನು ಕೆಲವು ದಿನ ನಮ್ಮ ಟಿವಿಗಳು ಕಾರ್ಯಕ್ರಮಗಳಿಗಾಗಿ ತಡಕಾಡುವುದು ಉಳಿಯಿತು, ಯಾರ ಮರ್ಯಾದೆ ಹರಾಜಾದರೇನು, ಯಾರು ಪೆಟ್ಟು ತಿಂದರೇನು? ಮೊದಲೇ ವಿಷಯ ಗೊತ್ತಿದ್ದರೂ ತಿಳಿಸದೆ ತಮ್ಮ ಸಾಮಾಜಿಕ, ಮಾನವೀಯ ಜವಾಬ್ದಾರಿಯನ್ನು ನಿರ್ವಹಿಸದೆ ಇದ್ದುದಕ್ಕಾಗಿ ಈ ಘಟನೆಯ ವೀಡಿಯೋ ತೆಗೆದ ಮಾಧ್ಯಮದವರನ್ನೇ ಕಾನೂನು ಕ್ರಮಕ್ಕೆ ಒಳಪಡಿಸಬೇಕು.  ]]>

‍ಲೇಖಕರು G

30 July, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading