ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ನಟ ‘ಮೂರು ಮಂದಿ’ ಎಂದು ಉತ್ತರಿಸಿದರು

‘ನಾಯಕ ಭ್ರಮೆ’ಯ ನಟರು ಮತ್ತು ಪಾ
-ಅಕಾಲ

ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಸಿನಿಮಾ ಕುಸಿಯುತ್ತಿದ್ದರೆ ನಟರು ನಿರ್ದೇಶಕರತ್ತ ನಿರ್ದೇಶಕರು ನಿರ್ಮಾಪಕರತ್ತ, ನಿರ್ಮಾಪಕರು ಪ್ರೇಕ್ಷಕರತ್ತ ಬೊಟ್ಟು ಮಾಡಿ ಕೈ ತೊಳೆದುಕೊಳ್ಳುತ್ತ್ತಾರೆ. ಸಿನಿಮಾ ಎಂಬುದು ಒಂದು ತಪಸ್ಸಿನಂತಾಗದೆ ಕೈಗಾರಿಕೆಯಂತೆ ಯಾಂತ್ರಿಕವಾಗಿರುವುದು ಅದರ ಪ್ರಮುಖ ವೈಫಲ್ಯತೆ. ಈ ಕೈಗಾರಿಕೆಯ ಉತ್ಪನ್ನವೇ ಆಗಿರುವ ಬಹುತೇಕ ಹಿರಿಕಿರಿಯ ನಟರು ಕೂಡ ಯಾಂತ್ರಿಕವಾಗಿಯೇ ಯೋಚಿಸುತ್ತಾರೆ ಅನ್ನಿಸುತ್ತದೆ.
ಒಬ್ಬ ನಟ ನಾಯಕನ ಪಟ್ಟಕ್ಕೇರಿದ ಕೂಡಲೇ ಆತನೊಳಗೆ ಭ್ರಮೆಯೊಂದು ಬೇರೂರುತ್ತದೆ. ತಾನೊಬ್ಬ ನಾಯಕ ನಟ ಆ ಪಟ್ಟ ಎಂದೆಂದಿಗೂ ತ್ಯಜಿಸಬಾರದು ಎಂದು. ಹೀರೋ ಎಂಬ ಪದವನ್ನು ಚಿತ್ರರಂಗ ಅದು ಹೇಗೆ ಅರ್ಥ ಮಾಡಿಕೊಂಡಿದೆಯೋ ಗೊತ್ತಿಲ್ಲ. ಒಬ್ಬ ನಟ ಹೀರೋ ಆಗಿಬಿಟ್ಟನೆಂದರೆ ಆತ ಹಣ್ಣು ಹಣ್ಣು ಮುದುಕನಾದರೂ ಫೈಟ್ ಮಾಡುತ್ತಾ, ನಾಯಕಿಯರೊಂದಿಗೆ ಮರ ಸುತ್ತುತ್ತಲೇ ಇರಬೇಕೆಂಬ ರೂಢಿ ಚಿತ್ರೋದ್ಯಮದಕ್ಕೆ ಮೊದಲಿನಿಂದಲೂ ಅಂಟಿಕೊಂಡು ಬಂದಿರುವ ಶಾಪ. ನಾಯಕನಟರಿಗೂ ಅಷ್ಟೆ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ ಬಿಡುವ ಚಪಲ. ವಯಸ್ಸಾದ ಕಾರಣಕ್ಕೆ ಹಿರಿಯರೂ ಆಗಿ ಹೋಗಿರುವ ನಟರನ್ನು ಎದುರುಹಾಕಿಕೊಳ್ಳುವ ಗೋಜಿಗೂ ಹೊಸ ಪೀಳಿಗೆ ಹೋಗುವುದಿಲ್ಲ. ಚಿತ್ರರಂಗ ಏನಾದರೂ ಯಶಸ್ಸಿನ ಹಾದಿಯಲ್ಲಿ ತಪ್ಪು ಹೆಜ್ಜೆಗಳನ್ನಿಡುತ್ತಿದ್ದರೆ ಅದಕ್ಕೆ ಬಹು ಮುಖ್ಯ ಕಾರಣ ಈ ನಾಯಕ ಭ್ರಮೆಯ ನಟರು.
ಇಷ್ಟೆಲ್ಲ ಹೇಳಲು ಪ್ರೇರೇಪಿಸುವಂತೆ ಮಾಡಿರುವುದು ಬಿಡುಗಡೆಗೆ ಸಜ್ಜಾಗಿರುವ ಬಾಲಿವುಡ್ ಚಿತ್ರ ’ಪಾ’. ಚಿತ್ರದಲ್ಲಿ ಅಮಿತಾಭ್ ರೋಗಗ್ರಸ್ತ ಮಗುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೊಬ್ಬ ಭ್ರಮೆಗಳನ್ನು ಮರೆತಾಗ ಮಾತ್ರ ಇಂಥ ಮಹಾನ್ ಸಾಧನೆ ಸಾಧ್ಯ. ಅದನ್ನು ಮರೆತಿದ್ದಕ್ಕೇ ಚಾರ್ಲಿ ಚಾಪ್ಲಿನ್ ಜನರ ಮನಸ್ಸಿನಲ್ಲಿ ಅಚ್ಚ ಹಸುರಾಗಿ ಉಳಿದಿದ್ದು. ಒಂದು ಘಟ್ಟದವರೆಗೆ ಇಮೇಜ್ ಅನ್ನುವುದು ಮುಖ್ಯ. ಆಮೇಲೇನಿದ್ದರೂ ಇಮೇಜ್‌ಗಳನ್ನು ರೂಪಿಸಬೇಕು ಎಂಬುದು ನಾಯಕ ನಟರಿಗೆ ಅದೇಕೆ ಅರ್ಥವಾಗುವುದಿಲ್ಲ?
ಪ್ರಕಾಶ್ ರೈರಂಥ ಮಹಾನಟ ಇಮೇಜ್‌ಗೆ ಅಂಟಿ ಕುಳಿತಿದ್ದರೆ ಕಾಂಚಿವರಂನಂಥ ಶ್ರೇಷ್ಟ ಕಲಾಕೃತಿಯೊಂದು ಮೂಡಿ ಬರಲು ಸಾಧ್ಯವಿತ್ತೇ? ಹಾಗೆ ನೋಡಿದರೆ ಪ್ರಕಾಶ್ ರೈ ತಮ್ಮ ಪಾತ್ರಗಳ ಮೂಲಕ ಚಿತ್ರರಂಗದ ಗ್ರಾಮರ್‌ಗೆ ಪ್ರಶ್ನೆಗಳನ್ನು ಎಸೆಯುತ್ತಾರೆ. ಈ ಮೂಲಕ ಜನಮನದಲ್ಲಿ ಹಸಿರಾಗಿ ಉಳಿಯುತ್ತಾರೆ. ತೆಲುಗಿನಲ್ಲಿ ‘ಕೊತ್ತ ಬಂಗಾರು ಲೋಕಂ’ ಎಂಬ ಚಿತ್ರ ಬಿಡುಗಡೆಯಾಯಿತು. ನವಿರಾದ ಪ್ರೇಮದ ಸುತ್ತ ಚಿತ್ರ ಹೆಣೆದಿದ್ದರೂ ಥಿಯೇಟರ್‌ನಿಂದ ಹೊರಬಂದಾಗ ಮನಸ್ಸಿನಲ್ಲಿ ಅಚ್ಚೊತ್ತುವುದು ಪೋಷಕ ನಟನಾಗಿದ್ದ ಪ್ರಕಾಶ್ ರೈ ಪಾತ್ರ. ಅದು ನಟನೊಬ್ಬನ ನಿಜವಾದ ಯಶಸ್ಸು.
ಒಂದು ಹಂತಕ್ಕೆ ಬಂದಾಗ ನಾಯಕ ನಟರು ಕಲಿಕೆಯನ್ನು ಮರೆತು ಬಿಡುತ್ತಾರೆ ಅನ್ನಿಸುತ್ತದೆ. ಇಂದಿನ ಪ್ರೇಕ್ಷಕರು ಏನನ್ನು ಬಯಸುತ್ತಾರೆ ಎಂಬುದು ಅವರಿಗೆ ಅರ್ಥವೇ ಆಗುವುದಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ  ತನ್ನ ಸ್ವಕ್ಷೇತ್ರದಲ್ಲಿ ಠೇವಣಿ ಕಳೆದುಕೊಳ್ಳುತ್ತಾನಲ್ಲಾ ಅಂಥ ಸ್ಥಿತಿ ಈ ವರ್ಗದ ನಟರದ್ದು.
ಉದಯೋನ್ಮುಖ ಪೋಷಕ ನಟರೊಬ್ಬರು ಚಿತ್ರವೊಂದರಲ್ಲಿ ನಟಿಸಿದ್ದರು. ಅವರನ್ನು ಭೇಟಿಯಾದ ಕಾಲೇಜು ಹುಡುಗನೊಬ್ಬ ನೀವು ನಟಿಸುತ್ತಿರುವ ಚಿತ್ರದಲ್ಲಿ ಹೀರೋ ಯಾರು ಎಂದು ಕೇಳಿದ.
ಆ ನಟ ‘ಮೂರು ಮಂದಿ’ ಎಂದು ಉತ್ತರಿಸಿದರು. ಹುಡುಗ ತಕ್ಷಣ ತನ್ನ ಮನಸ್ಸನಲ್ಲಿ ಮಾಹಾನುಭಾವ ನಟರನ್ನೆಲ್ಲ ಕಲ್ಪಿಸಿಕೊಂಡು ‘ಯಾರು ಯಾರು ಅವರು?’ ಎಂದ.
ಆ ಕಥೆಯಲ್ಲಿದ್ದ ಅಜ್ಜಿ ಮತ್ತು ಮುದುಕಿ ಹಾಗೂ ಅವರ ಮನೆಯ ಕೆಲಸಗಾರನ ಚಿತ್ರಣವನ್ನು ಕಣ್ಣ ಮುಂದೆ ತಂದರು. ಹೀರೋಯಿಸಂ ಬಗ್ಗೆ ಹುಡುಗನಲ್ಲಿದ್ದ ಕಲ್ಪನೆಗಳು ಬದಲಾದವು.
ಎಷ್ಟು ದಿನ ಒಬ್ಬನೇ ನಟನನ್ನು ನಾಯಕನನ್ನಾಗಿ ತೋರಿಸಲು ಸಾಧ್ಯ? ಆ ನಾಯಕ ನಟ ಎಷ್ಟು ದಿನ ತಾನೇ ಯುವಕನಾಗಿ ಉಳಿಯಲು ಸಾಧ್ಯ? ಇದರಿಂದ ಹಿರಿಯ ನಟರೆನಸಿಕೊಂಡವರು ಹೊಸಬರಿಗೆ ಬೋಧಿಸುವುದಾದರೂ ಏನನ್ನು?
ಭ್ರಮೆಗಳಲ್ಲಿ ಬದುಕುತ್ತಿರುವ ನಾಯಕ ನಟರೇ ಮೊದಲು ‘ಪಾ’ ಚಿತ್ರ ನೋಡಿ.

‍ಲೇಖಕರು avadhi

25 November, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading