ಹಾಡು ಹಾದಿ ಹೆಜ್ಜೆ ಗುರುತು
ಮೂರ್ತಿ ದೇರಾಜೆ

” ಆಡೋಣ ಬಾ ಬಾ ಗೋಪಾಲ.. ಓಡೋಡಿ ಬಾ ಬಾ ಭೂಪಾಲಾ..”
ಇದು, ’ಮಲ್ಲಿ ಮದುವೆ’ ಸಿನಿಮಾದ ಹಾಡು.
ಈ ಹಾಡು ” ಬಾ ಕೃಷ್ಣ ಒಮ್ಮೆ ಕೊಳಲನೂದು” ಎನ್ನುವ ನಮ್ಮ ಮಕ್ಕಳ ನಾಟಕವೊಂದರಲ್ಲಿ ನುಸುಳಿಕೊಂಡಿತ್ತು.
ಮಕ್ಕಳು ಅದನ್ನು ಹಾಡುತ್ತಾ ಸಂಭ್ರಮದಿಂದ ಕುಣಿಯುತ್ತಿದ್ದರು.
ನಂದಗೋಕುಲದ ಪ್ರೀತಿ,ಸ್ನೇಹ ರಂಗು ಎಲ್ಲವು ಅಲ್ಲಿ ಮರುಸೃಷ್ಟಿಯಾಗಿತ್ತು.
ಅದು ನನ್ನಲ್ಲಿ ಅದೇನೋ ಗೊತ್ತಿಲ್ಲದ ಪುಳಕವನ್ನೂ, ಆನಂದವನ್ನೂ ಉಂಟು ಮಾಡಿತ್ತು.
ಮತ್ತೆ ಮತ್ತೆ ಆ ಹಾಡನ್ನು ಮಕ್ಕಳ ಮೂಲಕ ದೃಶ್ಯವಾಗಿಸಬೇಕು,
ಅದು ನಿರಂತರವಾಗಿರಬೇಕು ಎನ್ನುವ ಆಸೆ. ಯಾಕೆ ಹೀಗೆ!
ಆ ಹಾಡಿನ ಹಾದಿ ಹಿಡಿದರೆ
ನಲುವತ್ತು ವರ್ಷಗಳ ಹಿಂದೆ, ಮೂಡಿಗೆರೆಯ ಸೈಂಟ್ ಮಾರ್ಥಾಸ್ ಶಾಲೆಯಲ್ಲಿ-
ನಾನು, ರಿಚ್ಚಿ, ಉದಯ, ವಿನ್ಸಿ, ಕುಮಾರ, ಸತ್ಯ, ಸಿರಿಲ್, ಹಸನಬ್ಬ- ಮುಂತಾದ ಗೆಳೆಯರ ಗುಂಪು,
ಸಣ ಪುಟ್ಟ ಕಾರಣಗಳಿಗಾಗಿ, ಒಬ್ಬರಿಗೊಬ್ಬರು ಮಾತು ಬಿಡುವುದು –
ಮರುದಿನವೋ, ವಾರದ ನಂತರವೋ ರಾಜಿಯಾಗುವುದು – ಸಹಜವಾಗಿದ್ದ ಪ್ರಾಯ.
ಪ್ರತಿಯೊಬ್ಬರಿಗೂ ಒಬ್ಬ ” ಎನ್ವಿ ” !! ಇರಲೇ ಬೇಕು.(ಪ್ರಾಯಷಃ ಅದು “ಎನಿಮಿ ” ಆಗಿರಬೇಕು)
ಯಾರೊಂದಿಗೂ ಜಗಳ ಮಾಡಲು ಮನಸ್ಸಿಲ್ಲದ ನನಗೆ ಈ “ಎನ್ವಿ” ಅರ್ಥವೇ ಆಗುತ್ತಿರಲಿಲ್ಲ.
ಆದರೂ, ಒಮ್ಮೆ ಸುಮ್ಮನೆ “ಬರೀ ತಮಾಷೆ” ಗೆಂದು ಸತ್ಯನಲ್ಲಿ ಮಾತು ಬಿಟ್ಟದ್ದು
ಮಾತು ಬಿಟ್ಟ ಕಾರಣವನ್ನು ಕೇಳುತ್ತಾ, ಸತ್ಯ ನನ್ನ ಹಿಂದೆ ಹಿಂದೆ ಸುತ್ತುತ್ತಿದ್ದುದು
ಅವನ ದೈನ್ಯದ ಭಾವ, ಮಾತಾಡಬೇಕೆನ್ನುವ ಆಸೆ, ಅಳುಮುಖ
ಮಾತಾಡಲೇಬೇಕೆಂಬ ಆಸೆ ನನಗಿದ್ದರೂ, ಏನೋ ಬಿಗುಮಾನ !
ಹೀಗೆ ಕೆಲವಾರು ದಿನಗಳ ನಂತರ,
ವಾರ್ಷಿಕ ಹಬ್ಬವೊಂದರ ಸಂದರ್ಭ, ಮುಸ್ಸಂಜೆ. ಇನ್ನೇನು ಕಾರ್ಯಕ್ರಮ ಸುರುವಾಗುವ ಹೊತ್ತು
ಸತ್ಯ ನನ್ನ ಪಕ್ಕದಲ್ಲೇ ನಿಂತದ್ದು ಉಳಿದವರಿಗೆ ಗೊತ್ತಾಗದೇ ಇದ್ದರೂ, ನನ್ನ ಅರಿವಿಗೆ ಬಂದಿತ್ತು.
ಅರಿವಾಗದವನಂತೆ ನಟಿಸಿ ಸತ್ಯನ ಹೆಗಲ ಮೇಲೆ ಕೈ ಇಟ್ಟಿದ್ದೆ.
ಆಗ ದ್ವನಿವರ್ಧಕದಲ್ಲಿ “ಆಡೋಣ ಬಾ ಬಾ” ಹಾಡು ಕೇಳಿ ಬರುತ್ತಾ ಇತ್ತು
ನಾನು ಅದೇನೋ ಒಂದು ರೀತಿಯ ಆನಂದದಲ್ಲಿ ತೇಲುತ್ತಿದ್ದೆ.
ಹಾಡು ಮುಗಿಯುವ ಹೊತ್ತಿಗೆ… ಗೆಳೆಯರ ಗುಂಪು ಇದನ್ನು ಕಂಡು,
’ಹೋ! ರಾಜಿಯಾಯ್ತೂ~~~ ’ ಎಂದುಕಿರುಚಿತ್ತು.
ಆದರೆ, ನನ್ನ ಅಹಂಕಾರಕ್ಕೆ ಪೆಟ್ಟಾಗಿ, “ಇದು ನನ್ನ ಸೋಲು ” ಎಂದು ಭಾವಿಸಿ, ದೂರ ಓಡಿದ್ದೆ.
ಆ ನಂತರದ ದಿನಗಳಲ್ಲಿ, “ಯಾರಾದರೂ ರಾಜಿ ಮಾಡಿಸಲಿ” ಎಂದು ನನ್ನ ಮನಸ್ಸು ಬಯಸುತ್ತಿದ್ದರೂ
ಯಾಕೋ ! ಯಾರೂ ಅದಕ್ಕೆ ಮುಂದಾಗಿರಲಿಲ್ಲ.
ಶಾಲಾ ದಿನಗಳು ಕಳೆದು, ಮತ್ತೆ ಸತ್ಯನನ್ನು ನಾನೆಂದೂ ನೋಡಲಿಲ್ಲ.
ಹಾಗಾದರೆ
ಆ ಅದೇ ಹಾಡು-ದೃಶ್ಯ ನಿರಂತರವಾಗಿರಬೇಕೆಂದು ನನ್ನ ಮನಸ್ಸು ಬಯಸುತ್ತಿದ್ದ ಕಾರಣ
ವಿನಾಕಾರಣ ಮಾತು ಬಿಟ್ಟು, ಕೆಟ್ಟ ಬಿಗುಮಾನದಿಂದ, ಸತ್ಯನಲ್ಲಿ ಮತ್ತೆಂದೂ ಮಾತಾಡದೇ,
ಕಳೆದುಕೊಂಡ ಗೆಳೆತನವೇ ?
ಆ ಗೆಳೆಯ ಈಗೆಲ್ಲಿದ್ದಾನೋ???






ಏಏ ಹೀಗೆಲ್ಲಾ ಭಾವನಾತ್ಮಕವಾಗಿ ಬರೆದರೆ ನಾವು ಹುಡುಕೋದಾದರೂ ಹೇಗೆ 🙁
ಏನ್ ಮಾಡೋದ್ ….ಮಾರಾಯ್ರೆ…!!! ಬರ್ದು ಹೋಯ್ತು….ಚಿಕ್ಕಂದಿನಲ್ಲಿ ತುಂಬಾ ಕಾಗದದ ದೋಣಿ ಮಾಡಿದ್ದೆ …. ತೇಲಿಯೂ ಬಿಟ್ಟಿದ್ದೆ….!!ಆಗ ಗೊತ್ತಿರ್ಲಿಲ್ಲ…. ಈಗ ಗೊತ್ತಿದೆ…. ಬೇಗ ಮುಳುಗುತ್ತೆ ಅಂತ …. ಆದ್ರೂ ಇರಲಿ ….
deraje,namaskara…..mallikarjuna kalamarahalli(bellare)
namaskaara… Kalamaralliyavare….Elliddeeri… hEgiddeeri….
ಈ ಗೋಪಾಲನನ್ನುಹುಡುಕಲು ರಾಧೆಯೇ ಸರಿ 🙂