ಜ್ಯೋತಿ ಅನಂತಸುಬ್ಬರಾವ್
ನಿನ್ನೆ ನಾನು ಧೂಳು ಹಿಡಿದ ಕುರ್ಚಿಯನ್ನು ವರೆಸಿ ಕುಳಿತುಕೊಂಡು ಸಾಕ್ಷಿಯಾದ ಕನ್ನಡ ಸಾಹಿತ್ಯ ಸಮ್ಮೇಳನದ ಒಂದು ಅತ್ಯಂತ ಪ್ರಮುಖ ಗೋಷ್ಠಿಯಲ್ಲಿ ಒಬ್ಬ ಭಾಷಣಕಾರರ ಮಾತುಗಳನ್ನು ಹೊರತುಪಡಿಸಿ ಇನ್ನೆಲ್ಲವೂ ಬರೀ ಜೊಳ್ಳೇ.
ವಿಚಾರ ಮಂಡಿಸಿದರೆಂದು ಅಪ್ಪಿತಪ್ಪಿ ನಂಬಿದ ನಮ್ಮಂತಹವರಿಗೆ ಅದು ಭ್ರಮೆ ಮಾತ್ರ.
ಬಹುತೇಕ ಅವರಿಗೆ ವಿಷಯವೂ ತಿಳಿಯದೊ, ಅಥವಾ ತಿಳಿದಿದ್ದರೆ ಅದನ್ನು ಜನರ ಮುಂದಿಡಲು ಗೊತ್ತಿಲ್ಲವೋ ಜನರನ್ನಂತೂ ನಿದ್ರೆಗೆ ತಳ್ಳಿದ್ದರು!
ಒಬ್ಬ ಪುಣ್ಯಾತ್ಮನಂತೂ ಅಕಾರಕ್ಕೂ ಹಕಾರಕ್ಕೂ ವ್ಯತ್ಯಾಸವಿಲ್ಲದೆ ಕನ್ನಡದ ಕೊಲೆ ಮಾಡಿಬಿಟ್ಟ. ನಾವಾದರೂ ಕನ್ನಡ ಸಾಹಿತ್ಯ ಸಮ್ಮೇಳನದ ಮೋಹಕ್ಕಾಗಿ ಹೋದವರು ವಿಧಿಯಿಲ್ಲದೆ ಕುಳಿತಿರಬೇಕಾಯಿತು! ಇನ್ನೊಬ್ಬ ಧೀಮಂತ ತನಗೂ ತನಗೆ ಕೊಟ್ಟ ವಿಷಯಕ್ಕೂ ಸಂಬಂಧವೇ ಇಲ್ಲದಿದ್ದರೂ ಮಾತನಾಡಲು ಪ್ರಯತ್ನಿಸುವುದಾಗಿ ಹೇಳಿದಾಗ ನನಗೆ ನಮ್ಮ ನಾಡಿನಲ್ಲಿ ವಿಷಯತಜ್ಞರ ಬರ ಬಂದುಬಿಟ್ಟಿದೆಯೇನೋ ಎಂಬ ಗಾಬರಿ ಹುಟ್ಟಿತು.
ಒಟ್ಟಿನಲ್ಲಿ ತಮಗೆ ವೇದಿಕೆ ಕೊಟ್ಟಿದ್ದಕ್ಕೆ ಕೆಲವರನ್ನು ಅಭಿನಂದಿಸಿ ತಮ್ಮ ಋಣಪ್ರಜ್ಞೆಯನ್ನು ಮೆರೆದಿದ್ದೇ ಗೋಷ್ಠಿಯ ಮುಖ್ಯಾಂಶ, ಮುಖ್ಯ ಅಂಗ ಎನಿಸುವಂತಿತ್ತು! ಎಷ್ಟೇ ಆದರೂ ಹಳೆಯ ಮೈಸೂರು ರಾಜಾಡಳಿತದ ಕೇಂದ್ರವಲ್ಲವೇ.. ಆಸ್ಥಾನ ವಿದೂಷಕರಿದ್ದ ಜಾಗವಲ್ಲವೇ.. ಅದನ್ನು ಈ ಪುಣ್ಯಾತ್ಮರು(?) ನೆನೆಪಿಸಿದರು, ತಮ್ಮ “ಹೊಗಳುಭಟ್ಟಂಗಿತನ” ದಿಂದ… ಇವುಗಳ ನಡುವೆಯೂ ಒಬ್ಬರ ವಿಚಾರ ಮಂಡನೆ ಮಾತ್ರ ನಿಜಕ್ಕೂ ಅದ್ಭುತವಾಗಿತ್ತು.
ಅಲ್ಲಿ ಭೇಟಿಯಾದ ಗೆಳೆಯ Prashanth Hulkodu ಒಂದು ಚಟಾಕಿ ಹಾರಿಸಿಯೇಬಿಟ್ಟರು… “ನೀವು ಈ ಗೋಷ್ಠಿಗಳನ್ನು ಇಷ್ಟು ಗಂಭೀರವಾಗಿ ಕೇಳುತ್ತಿದ್ದೀರೆಂದರೆ, ನೀವು ನಿಜವಾದ ಕಮ್ಯುನಿಸ್ಟರೇ ಹೌದು!” ಎಂದು…
ಸಮ್ಮೇಳನದ ಸಂಘಟಕರು ವಿಷಯದಲ್ಲಿ ಪರಿಣತರು ಯಾರಿದ್ದಾರೆಂದು ತಿಳಿಯಲು ಲಾಬಿಗಳ ಮೊರೆ ಹೋಗಿದ್ದಾರೆಂದು ನನಗೆ ಅನಿಸಿತು.





ಮೈಸೂರಿನಲ್ಲಷ್ಟೇ ಅಲ್ಲ, ಎಲ್ಲಾ ಕಡೆ ಈ ಹೊಗಳಿ ವೇದಿಕೆಯನ್ನಲಂಕರಿಸುವ ಕೆಟ್ಟಸಂಪ್ರದಾಯ ಹುಟ್ಟಿ ಬೆಳೆದುಬಂದುಬಿಟ್ಟಿದೆ. ಎಷ್ಟೆಲ್ಲಾ ಮಂಗಳಾರತಿ ಮಾಡಿಸಿಕೊಂಡರೂ ಆಯ್ಕೆಸಮಿತಿ ಎಂಬುದು ಇರುತ್ತದೆಯೆ? ಇದ್ದರೂ ಅವರಿಗೆ ವಿವೇಚನೆ ಎಂಬುದು ಇರುತ್ತದೆಯೇ ಎಂಬುದೇ ಗುಮಾನಿ. ನಿಜವಾದ ಬರಹಗಾರರು ಸಾಹಿತ್ಯಪರಿಷತ್ತಿನಿಂದ ಮತ್ತು ಸಮ್ಮೇಳನದಿಂದ ದೂರ ಉಳಿದುಬಿಡುವುದಕ್ಕೆ ಇದೂ ಒಂದು ಕಾರಣ. ಸೂಜಿಗಲ್ಲಿನಂತೆ ಸೆಳೆಯುವುದು ಪುಸ್ತಕಮಳಿಗೆಗಳು ಮಾತ್ರ.