ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಲ್ ಟೈಮ್ ಫೇವರೇಟ್ ಲೇಖಕ ವಸುಧೇಂದ್ರ

-ಸಂದೀಪ್ ಕಾಮತ್
ಕಡಲತೀರ

ನನ್ನ ಆಲ್ ಟೈಮ್ ಫೇವರೇಟ್ ಲೇಖಕ ವಸುಧೇಂದ್ರ ರ ಹೊಸ ಪುಸ್ತಕವನ್ನಷ್ಟೇ ಕೊಳ್ಳಬೇಕು ಅಂತ ಅಂದುಕೊಂಡ ನಾನು ಜಯಂತ್ ಕಾಯ್ಕಿಣಿ ಪುಟ್ಟ ಹುಡುಗ ಪೂರ್ಣನ ಬಗ್ಗೆ ಹೇಳುತ್ತಾ ಅವನ ಕೆಲವು ಕವಿತೆಗಳನ್ನು ಓದಿದಾಗ ಅದನ್ನು ಕೊಳ್ಳದೆ ಇರಲಾಗಲಿಲ್ಲ.ಪುಟ್ಟ ಪೂರ್ಣನ ಮುಗ್ಧ ಕವಿತೆಗಳು ಓದಿ ಯಾಕೋ ಖುಷಿ ದುಖಃ ಎರಡೂ ಆಯ್ತು.
ಮಕ್ಕಳ ಪದ್ಯಗಳ ಸಾಲಿಗೆ ಮತ್ತೊಂದು ಪುಸ್ತಕ ’ಹಲೋ ಹಲೋ ಚಂದಮಾಮ’ ಸೇರ್ಪಡೆ ಯಾಯ್ತು.ಅದನ್ನು ಎಷ್ಟು ಮಕ್ಕಳು ಓದ್ತಾರೆ ಅನ್ನೋದು ಗೊತ್ತಿಲ್ಲ.ಮಕ್ಕಳನ್ನು ಮಕ್ಕಳಾಗಿರಲು ನಾವೂ ಬಿಟ್ಟಿಲ್ಲ .ಅವರಾದರೂ ಪಾಪ ಏನು ಮಾಡಿಯಾರು?
’ಅಜ್ಜನ ಕೋಲಿದು ನನ್ನಯ ಕುದುರೆ’ ಕಾಲ ಹೋಯ್ತು,ಈಗ ಹತ್ತು ರೂಪಾಯಿ ಕೊಟ್ರೆ ಮಕ್ಕಳನ್ನು ನಿಜವಾದ ಕುದುರೆ ಮೇಲೆಯೇ ಕೂರಿಸಬಹುದು.ನಾವು ಬಾಯಲ್ಲೇ ಡುರ್ ಡುರ್ ಅಂತ ಕಾರ್ ಓಡಿಸುತ್ತಾ ಖುಷಿ ಪಡ್ತಿದ್ದ ಕಾಲವೂ ಈಗಿಲ್ಲ.ಮಕ್ಕಳು ಹುಟ್ಟುವಾಗಲೇ ನಿಜವಾದ ಕಾರಲ್ಲೆ ಸುತ್ತಾಡಿ ಬೆಳೆಯುತ್ತಿದ್ದಾರೆ.
ಇಂಥದ್ದರಲ್ಲಿ ನಮ್ಮ ಬಾಲ್ಯದಲ್ಲಿ ನಮಗಿದ್ದದ್ದು ಮುಗ್ಧತೆಯಾ ,ಅಥವ ಅವಕಾಶದ ಕೊರತೆಯಾ ? ಒಂದೂ ತಿಳಿಯುತ್ತಿಲ್ಲ.
ನಾವು ಶಾಲೆಯಲ್ಲಿದ್ದಾಗ ಮಕ್ಕಳ ಡ್ಯಾನ್ಸ್ ಅಂದರೆ ಹತ್ತು ಮಕ್ಕಳಿದ್ದಲ್ಲಿ ಒಬ್ಬೊಬ್ಬರದ್ದೂ ಒಂದೊಂದು ದಿಕ್ಕಿನಲ್ಲಿ ಕೈ,ಕಾಲು.ಹಾಡಿಗೂ ನೃತ್ಯಕ್ಕೂ ಸಂಬಂಧವೇ ಇಲ್ಲ.ಈಗ ಅಷ್ಟೇ ಚಿಕ್ಕ ಮಕ್ಕಳು ಮೈಕಲ್ ಜಾಕ್ಸನ್ ನ ಸ್ಟೆಪ್ಸ್ ಹಾಕ್ತಾರೆ.ನಮ್ಮ ಹಾಡು ಅಂದರೆ ತಾಳ,ರಾಗ ಯಾವುದೂ ಇಲ್ಲದ ಗದ್ಯ ವಾಚನವಾಗಿತ್ತು.ಈಗ ಪುಟ್ಟ ಮಕ್ಕಳು ಸ್ಟಾರ್ ಸಿಂಗರ್ ಗಳಾಗಿದ್ದಾರೆ.’ಶ್ರೀ ಮಂಜುನಾಥ’ ದ ಕಠಿಣವಾದ ಹಾಡನ್ನು ಹಾಡಿ ಎಸ್.ಪಿ.ಬಿ ಯವರಿಗೇ ನಡುಕ ಹುಟ್ಟಿಸ್ತಾರೆ.
ಅಪ್ಪ ಅಮ್ಮಂದಿರಿಗೆ ಮೊಬೈಲ್ ಬಳಸಲು ಹೇಳಿ ಕೊಡೋದೇ ಮಕ್ಕಳು.ಇಂಟರ್ನೆಟ್ ನಲ್ಲಿ ಆರ್ಕುಟ್ ಬಳಸೋದು ಹೇಳಿ ಕೊಡೋದೂ ಮಕ್ಕಳೇ.ಟಿ.ವಿ ಯಲ್ಲಿ ಪ್ರಸಾರವಾಗ್ತಿರೊ ಸಿನೆಮಾದ ಹೀರೋ ಯಾರು ಅಂತ ಹೇಳೋದೂ ಅದೇ ಪುಟ್ಟ ಮಗು.ಆ ಸಿನೆಮಾದ ಹಾಡನ್ನೂ ಗುಣುಗುಣಿಸೋದು ಅದೇ ಪುಟ್ಟ ಮಗು.
ಪರಿಸ್ಥಿತಿ ಹೀಗಿದ್ದಾಗ ಮಕ್ಕಳಲ್ಲಿ ಮುಗ್ಧತೆಯನ್ನು ಎಲ್ಲಿ ಹುಡುಕೋದು?
ಛಂದ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದ ಮುದ್ದು ತೀರ್ಥಹಳಿ ಅನ್ನೋ ಏಳನೇ ಕ್ಲಾಸಿನ ಹುಡುಗಿ ಹೇಗೆ ಮಕ್ಕಳು ಹಳೆಯ ಮಕ್ಕಳ ಪದ್ಯಗಳನ್ನು ಕೇಳಿ ಕೇಳಿ ಬೋರ್ ಆಗಿದ್ದಾರೆ ಅನ್ನೊ ಬಗ್ಗೆ ಮಾತಾಡಿದ್ಲು.ಆದರೆ ಅವಳು ಕೆಂಡಸಂಪಿಗೆಯಲ್ಲಿ ಬರೆದ ಕವಿತೆಗಳನ್ನು ನೋಡಿದ್ರೆ ಅವಳು ಪುಟ್ಟ ಹುಡುಗಿ ಅಲ್ಲ ಅನ್ನೋದು ಗೊತ್ತಾಗಿ ಬಿಡುತ್ತೆ.
ಅದೇ ಸಮಾರಂಭದ ಮತ್ತೊಬ್ಬ ಮುಖ್ಯ ಅತಿಥಿ ಹತ್ತನೆ ಕ್ಲಾಸ್ ಹುಡುಗ ಕೀರ್ತಿರಾಜ ಬರೆದಿರೋದು ಬೇಟೆಯ ಬಗೆಗಿನ ಪುಸ್ತಕ!
ಯಾವುದೇ ಪುಟ್ಟ ಮಗುವನ್ನು ಕರೆದು ಒಂದು ಹಾಡು ಹೇಳಪ್ಪ ಅಂದ್ರೆ ಅವನು ’ಧೂಮ್ ಮಚಾಲೇ ’ ಅಥವಾ ’ಝರಾ ಝರಾ ಟಚ್ ಮಿ ಕಿಸ್ ಮಿ ’ ಹಾಡನ್ನು ತಪ್ಪಿಲ್ಲದೆ ಹಾಡ್ತಾನೆ.ಕನ್ನಡ ಹಾಡು ಅಂದ್ರೆ ’ಹೊಡಿ ಮಗ ಹೊಡಿ ಮಗ’ ಹಾಡ್ತಾನೆ .ಇಂಥ ಸನ್ನಿವೇಶದಲ್ಲಿ ಮಕ್ಕಳ ಪದ್ಯ ಯಾರು ಓದ್ತಾರೆ?
ಕೆಲವೊಮ್ಮೆ ಮಕ್ಕಳು ಈ ಪರಿ ಬುದ್ಧಿವಂತರಾಗಿರೋದಕ್ಕೆ ಖುಷಿ ಅನ್ಸುತ್ತೆ.ಆದರೆ ಅದೇ ಸಮಯಕ್ಕೆ ’ಮಗುವಿನಷ್ಟು ಮುಗ್ಧ’ ಅನ್ನೋ ಶಬ್ದದ ಅರ್ಥವೆ ಕಳೆದು ಹೋಗುತ್ತಿದೆಯಲ್ಲ ಅನ್ನೋ ಆತಂಕವೂ ಆಗುತ್ತೆ!
ಇದು ಆತಂಕವೋ ಅಥವ ಮಕ್ಕಳು ಇನ್ನು ಮೇಲೆ ನಮ್ಮ ಬಳಿ ಏನೂ ಕೇಳಲ್ಲ(ನಾವೇ ಅವರ ಹತ್ತಿರ ಕಲೀಬೇಕು!) ಅನ್ನೋ ಭಯವೋ ಗೊತ್ತಿಲ್ಲ

‍ಲೇಖಕರು avadhi

12 May, 2010

3 Comments

  1. Laxminarayana Bhat P

    ನಿಮ್ಮ ಆತಂಕ ಸಹಜ ಮತ್ತು ವಾಸ್ತವ! ಆದರೆ, ಕಾಲಚಕ್ರದ ಗತಿಗೆ ರಿವರ್ಸ್ ಗೇರ್ ಇಲ್ಲ!!!

  2. sahana

    ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಬೋಳುವಾರರಂತೂ ತುಂಬಾ ಚೆನ್ನಾಗಿ ಮಾತಾಡಿದರು. ಆದರೆ ಮುದ್ದು ತೀರ್ಥಹಳ್ಳಿ ಎಂಬ ಏಳನೇ ಕ್ಲಾಸಿನ ಹುಡುಗಿ ನವೋದಯ ಸಾಹಿತ್ಯ, ನವ್ಯೋತ್ತರ ಸಾಹಿತ್ಯ, ಆಧುನಿಕ ಸಾಹಿತ್ಯ ಅಂತೆಲ್ಲ ಮಾತಾಡಿದ್ದು ಯಾಕೋ ಇರಿಟೇಟ್ ಆಯಿತು….

  3. ಓಂಶಿವಪ್ರಕಾಶ್

    ಮುದ್ದುತೀರ್ಥಳ್ಳಿ ಮಾತುಗಳನ್ನು ನನ್ನ ಬ್ಲಾಗ್ನಲ್ಲಿ ಕೇಳಬಹುದು..http://bit.ly/9y11Yr ಬಳುವಾರರ ಮಾತುಗಳಲ್ಲಿ ಕೆಲವನ್ನು ಮಾತ್ರ ಸೆರೆ ಹಿಡಿಡಿಲಿಕ್ಕಾಯ್ತು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading