ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆತ ಕಿರುನಗೆ ನಕ್ಕ..ಮೌನಧ್ವನಿ ಧೈರ್ಯ ನೀಡಿತು..

 

ಅಕ್ಷತಾ ಕೆ

ದಣಪೆಯಾಚೆ…
ಅಂದು ಮಳೆ ಸುರಿಯುತ್ತಲೇ ಇತ್ತು. ಶಿವಮೊಗ್ಗದ ರಸ್ತೆಗಳೆಲ್ಲ ನೀರಿನಿಂದ ತುಂಬಿದ್ದವು. ನಗರದ ಮುಖ್ಯರಸ್ತೆಯೊಂದರಲ್ಲಿ ನಡೆಯುತ್ತಾ ಸಾಗಿದ್ದೆ. ಮಳೆಯಲ್ಲಿ ಎಷ್ಟು ಜೋರಾಗಿ ಹೆಜ್ಜೆ ಹಾಕಿದರೂ ಐದು ಹೆಜ್ಜೆ ಮುಂದುವರೆದ ಅನುಭವವಾದರೆ ಹತ್ತು ಹೆಜ್ಜೆ ಹಿಂದೆ ಇದ್ದಂತೆ ಭಾಸವಾಗುತ್ತದೆ. ನಮಗೆ ಅಂದರೆ ಹಳ್ಳಿಯಲ್ಲಿ ಬೆಳೆದವರಿಗೆ ಒಂದು ಹುಚ್ಚಿರುತ್ತದೆ.(ಅಥವಾ ಹಲವು ಹುಚ್ಚುಗಳಲ್ಲಿ ಇದೂ ಒಂದಿರಬಹುದು) ಏನೆಂದರೆ ಎಷ್ಟೆ ದೂರವಿರಲಿ ನಮ್ಮ ಪಯಣದ ಗುರಿ ಸಾಧ್ಯವಾದರೆ ಅಷ್ಟೂ ದೂರವನ್ನು ನಡೆದೆ ಕ್ರಮಿಸಿ ಬಿಡುತ್ತೇವೆ.  ಅದರಲ್ಲೂ ಸ್ವಲ್ಪ ಹತ್ತಿರದಲ್ಲೆ ಇದೆ ನಾವು ಮುಟ್ಟಬೇಕಾದ ತಾಣ ಎಂದರಂತೂ ಐದು ನಿಮಿಷಕ್ಕೊಂದು ಸಿಟಿ ಬಸ್ಸು, ಆಟೋ ಇರುವ ಈ ನಗರದಲ್ಲೂ ಬಸ್ಸನ್ನು ಕಾಯಿ, ಆಟೋದವನನ್ನು ಕರೀ ಅವನ ಜೊತೆ ಚೌಕಾಶಿ ಮಾಡು ಇವೆಲ್ಲಕ್ಕಿಂತ ನಡೆದು ಹೋಗುವುದೇ ಸುಖ ಅನ್ನಿಸುತ್ತದೆ. 
 
ಆದರೆ ನಡಿಗೆಯಲ್ಲಿಯು ಒಂದು ಕಷ್ಟವಿದೆ. ಹಳ್ಳಿಯಲ್ಲಿ ನಡೆಯುವಾಗ ಜೊತೆಗೆ ಪರಿಚಿತರು, ಸ್ನೇಹಿತರು ಇದ್ದರೆ ಚೆನ್ನ. ಹರಟೆ, ನಗೆ, ಮಾತಿನ ನಡುವೆ  ದಾರಿ ಸಾಗುವುದೇ ತಿಳಿಯುವುದಿಲ್ಲ. ಆದರೆ ವಾಹನಗಳ ದಟ್ಟಣೆಯ ಈ ನಗರದಲ್ಲಿ ಕೆಲವೊಂದು ಏರಿಯಾಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಆ ರೀತಿ ಸುಖದ ನಡಿಗೆ ಸಾಧ್ಯವಾಗುವುದಿಲ್ಲ. ಅತ್ತ ಇತ್ತ ನೋಡದೇ ಭರದಿಂದ ಹೆಜ್ಜೆ ಹಾಕುವುದೊಂದೆ ನೋಡಬೇಕು. ಅದು ನಮ್ಮಗಳ ಪ್ರಕಾರ ನಡಿಗೆಯೇ ಅಲ್ಲ ಅದೇನಿದ್ದರೂ ಓಡು ಮಗಳೇ ಓಡು. ಒಮ್ಮೆ ನಾನು ನನ್ನ ಗೆಳತಿ ಕೈ-ಕೈ ಹಿಡಿದು ಕೊಂಡು ಆರಾಮಾಗಿ ಮುಖ್ಯ ರಸ್ತೆಯ ಬದಿಯಲ್ಲಿ ನಡೆದು ಹೋಗುತಿದ್ದಾಗ ಟ್ರಾಫಿಕ್ ಪೊಲೀಸನೊಬ್ಬ ಕರೆದು ಟ್ರಾಫಿಕ್ ದಾಟುವಾಗಲಾದರೂ ಕೈ ಹಿಡಿದುಕೊಳ್ಳದೇ, ಹಿಂದೆ ಮುಂದೆ ನೋಡಿಕೊಂಡು ನಡೀರಿ ಇದು ಮುಖ್ಯರಸ್ತೆ ನೆನಪಿರಲಿ ಎಂದು ಎಚ್ಚರಿಕೆ ಕೊಟ್ಟು ಕಳಿಸಿದ್ದು ನೆನಪಿದೆ.  

ಆವತ್ತೂ ಅಂಥ ಮಳೆಯಲ್ಲೂ ಎಂದಿನಂತೆ ನಡೆದುಕೊಂಡೆ ಹೊರಟವಳು ನಾನು ಆದರೆ ತಲುಪಬೇಕಾದ ಜಾಗ ಇನ್ನೂ ದೂರವಿತ್ತು. ಜೊತೆಗೆ ಮಳೆನೀರು ನನ್ನ ಪುಟ್ಟ ಛತ್ರಿಯೊಳಗಿನ  ಮೈಯನ್ನು ಸೋಕಿ ಮೈಮೇಲಿನ ಬಟ್ಟೆ, ಕೈಯಲ್ಲಿದ್ದ ಪುಸ್ತಕಗಳನ್ನೆಲ್ಲ ಒದ್ದೆ ಮುದ್ದೆಯಾಗಿಸತೊಡಗಿತ್ತು. ಈ ಸ್ಥಿತಿಯಲ್ಲಿ ನಡೆಯುವುದು ಸಾಧ್ಯವೇ ಇಲ್ಲ ಎಂದುಕೊಂಡು ಎದುರಿಗೆ ನೋಡಿದರೆ ಸಿಟಿಬಸ್ಸೊಂದು ಟ್ರಾಫಿಕ್ ಸಿಗ್ನಲ್ ಎದುರಿಗೆ ನಿಂತ ವಾಹನಗಳ ಸಾಲಿನಲ್ಲಿ ಕಾಣಿಸಿತು.
 
 ಭರಭರನೇ ಅತ್ತ ಹೆಜ್ಜೆ ಹಾಕಿ ವಾಹನಗಳ ನಡುವೆ ದಾರಿ ಮಾಡಿಕೊಳ್ಳುತ್ತಾ ಅಂತೂ ಬಸ್ಸೊಳಗೆ ತೂರಿ ಡ್ರೈವರ್ ಸೀಟಿನ ಪಕ್ಕದ ಕಂಬಿಗೆ ನೇತುಬಿದ್ದು ನಿಟ್ಟುಸಿರು ಬಿಡುತ್ತಾ ಎದುರು ನೋಡಿದರೆ ಎಲ್ಲ ವಾಹನಗಳು ಹಸಿರುದೀಪ ಕಂಡಿದ್ದೆ ಒಮ್ಮೆಗೆ ಚಲಿಸಿದರೂ ನಮ್ಮ ಬಸ್ಸು ಮಾತ್ರ ನಿಂತೆ ಇದೆ. ಇಬ್ಬರು ಪೊಲೀಸರು ಬಸ್ಸಿಗೆ ಅಡ್ಡಲಾಗಿ ನಿಂತು ಡ್ರೈವರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಏನಯ್ಯಾ ಟ್ರಾಫಿಕ್ನಲ್ಲಿ  ಜನ ಹತ್ತಿಸ್ಕಳತಿಯಲ್ಲ ಗೊತ್ತಾಗದಿಲ್ವಾ. ಆಟೋ ಡ್ರೈವರ್ಗಳು ಕಂಪ್ಲೆಂಟ್ ಮಾಡ್ತಾರೆ. ಈಗಾಗ್ಲೆ ಈ ಬಗ್ಗೆ ವಾನರ್ಿಂಗ್ ಕೊಟ್ಟಿದೀವಿ.ಆದರೂ ನಿನ್ನ ಛಾಳಿ ಮುಂದುವೆರಸಿದ್ದೀಯಾ ಬಿಡಾದಿಲ್ಲ ನಿನ್ನ, ಇಳ್ಸು ಪ್ಯಾಸೆಂಜರ್ಸ್ನ, ನಡಿ ಪೊಲೀಸ್ ಸ್ಟೇಷನ್ಗೆ. `ಸರ್ ಏನೋ ತಪ್ಪಾಯ್ತು. ಮಳೆ ಬೇರೆ ಬರ್ತಾ ಇದೆ. ಪ್ಯಾಸೆಂಜರ್ಸ್ಗೆ ತೊಂದರೆ ಆಗ್ತದೆ. ಇದೊಂದು ಸರ್ತಿ ಬಿಟ್ಬಿಡಿ… ಡ್ರೈವರ್ ಅಂಗಲಾಚುತಿದ್ದ. ಅದೆಲ್ಲ ಆಗಾದಿಲ್ಲ ಜನರನ್ನ ಇಳಿಸಿ ನಿಮ್ಮದೇ ರೂಟಿನ ಅಂಜಲಿ ಬಸ್ಸು ಈಗ ಬರತ್ತಲ್ಲ ಅದಕ್ಕೆ ಹತ್ತಿಸಿ ಕಳಿಸು ಪೊಲೀಸ್ ಬಳಿ ಉತ್ತರ ಸಿದ್ದವಿತ್ತು. ಮತ್ತೆ ಒಂದಿಷ್ಟು ವಾಹನಗಳು ಟ್ರಾಫಿಕ್ನ ಕೆಂಪು ದೀಪವನ್ನೆದುರಿಸಿ ಮುಂದುವರೆದವು. ಬೇರೆ ವಾಹನಗಳಿಗೆ ತೊಂದರೆಯಾಗದಂತೆ ಪೊಲೀಸ್ ಬಸ್ಸನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸುವುದಕ್ಕೆ ಆದೇಶಿಸಿದ. ಮಳೆ ಕಡಿಮೆಯಾಗಿದ್ದರೂ ಬರುತ್ತಲೇ ಇತ್ತು.
 
ಅಯ್ಯೋ ಇದೇನಾಗ್ಬಿಡ್ತು. ನಗರಕ್ಕೆ ಬಂದು ಆರು ವರ್ಷವಾಯ್ತು. ಇನ್ನೂ ಇಲ್ಲಿನ ಯಾವ ನಿಯಮಗಳು ನನ್ನೊಳಗೆ ಇಳಿದು ಬರ್ಲಿಲ್ಲ. ಟ್ರಾಫಿಕ್ಕು ಸಿಗ್ನಲ್ಲು ಏನೂ ತಿಳಿಯಲೊಲ್ಲದು. ಕೈ ಅಡ್ಡ ಹಾಕಿ ಬಸ್ಸು ನಿಲ್ಲಿಸಿ ಹತ್ತುವ ಬುದ್ದಿ ತೊಲಗಿ ಹೋಗಲಿಲ್ಲ. ಇಂದು ಡ್ರೈವರ್ ಕಾದಿರಲಿಲ್ಲ. ಕಂಡಕ್ಟರ್ ಕರೆದಿರಲಿಲ್ಲ. ಸಿಗ್ನಲ್ ನಲ್ಲಿ ನಿಂತ ಬಸ್ಸು ಹತ್ತಿದೆ. ಇದರಲ್ಲಿ ಕಂಡಕ್ಟರ್ ಡ್ರೈವರ್ ಯಾರ ತಪ್ಪು ಇರಲಿಲ್ಲ. ಅವರು ನನ್ನನೇನು ಮಾಡಬಹುದಿತ್ತು. ಎಳೆದು ಹೊರಹಾಕಬಹುದಿತ್ತು. ಹಾಗವರು ಮಾಡಿರಲಿಲ್ಲ. ಅದಕ್ಕಾಗಿ ಈಗ ಪೊಲೀಸರಿಂದ ಬೈಗುಳ ಬೆದರಿಕೆ. ಡ್ರೈವರ್ ಸಮಜಾಯಿಷಿ ಕೊಡಲು ಬಾಯ್ತೆರೆದ ಕೂಡಲೇ ಪೊಲೀಸ್ ಮೊದಲು ಸ್ಟೇಷನ್ಗೆ ನಡಿ ಅಲ್ಲಿ ಮಾತಾಡು ಅಂತಿದ್ದ. ಬಸ್ಸಿನೊಳಗಿನ ಜನರ ಗಮನಕ್ಕೆ ಈ ಘಟನಾವಳಿಗಳು ಬರುತಿದ್ದಂತೆ ಅಲ್ಲಲ್ಲಿ ಗಿಜಿಗಿಜಿ ಗದ್ದಲ  ಶುರುವಾಯ್ತು. ನನ್ನ ಪಕ್ಕ ಕಂಬಿಗೆ ನೇತು ಬಿದ್ದವರು ಕಣ್ಣು ಕೆಕ್ಕರಿಸಿಕೊಂಡು ನನ್ನನ್ನೆ ನೋಡಿದಂತೆ ಭಾಸವಾಯ್ತು. ಡ್ರೈವರಂತೂ ಎಲ್ಲ ನಿನ್ನಿಂದಲೇ ನಡಿತಿರೋದು ಅನ್ನುವಂತೆ ನನ್ನೆಡೆಗೆ ಕಣ್ಣು ಕೆಕ್ಕರಿಸಿಯೇ ಬಿಟ್ಟ. ಅಷ್ಟಕ್ಕೆ ನನ್ನ ಕಣ್ಣಲ್ಲಿ ಸಣ್ಣಗೆ ಗಂಗಾ ಯಮುನಾ, ಬಸ್ಸಿನಲ್ಲಿದ್ದ ಕೆಲವರು ಇದಾಗದಿಲ್ಲ ಹೋಗದಿಲ್ಲ ಇಳ್ಕಂತೀವಿ ಅಂತ ಹೊರಟರು. ಆದರೆ ಇಳಿಯಲೊಲ್ಲರು. ಹೊರಗೆ ಸಣ್ಣಗೆ ಜಿನುಗುತ್ತಿರುವ ಮಳೆ. ಡ್ರೈವರ್ ಕಂಡಕ್ಟರ್ ಬೇಡುವಷ್ಟೆಲ್ಲ ಬೇಡಿ ಏನೂ ಉಪಯೋಗವಾದೆ ಅಸಹಾಯಕರಾಗಿ ಕುಳಿತಿದ್ದರು.
 
ಅಷ್ಟರಲ್ಲಿ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ವೃದ್ದರೊಬ್ಬರು ಒಂಚೂರು ದಾರಿಬಿಡಿ ದಾರಿಬಿಡಿ ಎನ್ನುತ್ತಾ ದಾರಿ ಮಾಡಿಕೊಳ್ಳುತ್ತಾ ಡ್ರೈವರ್ ಪಕ್ಕದಲ್ಲಿ ಬಂದು ಹೊರಗೆ ನಿಂತಿದ್ದ ಪೊಲೀಸರಿಗೆ ನೋಡಪ್ಪಾ ಬಾಣಂತಿ ಮಗಳು ಮೊಮ್ಮಗುವನ್ನ ಡಾಕ್ಟ್ರ ಹತ್ತಿರ ಕರೆದು ಕೊಂಡು ಹೋಗ್ತಾ ಇದ್ದೀನಿ, ಈಗಾಗಲೇ ತಡವಾಗಿದೆ. ಇನ್ನೂ ತಡವಾದರೆ ಡಾಕ್ಟ್ರು ಹೊರಟೋಗ್ತಾರೆ. ತಾಯಿಗೆ, ಮಗುವಿಗೆ ಇಬ್ಬರಿಗೂ ಹುಷಾರಿಲ್ಲ. ತೋರಿಸ್ಕೊಂಡು ಹೋಗಕ್ಕಾಗೆ ಹಳ್ಳಿಯಿಂದ ಬಂದಿದ್ದೀವಿ ಬಿಡಪ್ಪಾ ಬಸ್ನಾ… ಕೆಳಗೆ ನಿಂತ ಪೊಲೀಸರಿಗೆ ಕೇಳಿಸುವುದಿಲ್ಲ ಎಂದು ವೃದ್ಧರು ಕೂಗುವ ಸ್ವರದಲ್ಲಿ ಅಲವತ್ತುಕೊಳ್ಳುತಿದ್ದರು. ನನ್ನಲ್ಲಿ ಅಪರಾಧಿ ಭಾವ ತಾರಕಕ್ಕೇರಿ ದಿಕ್ಕೆ ತೋಚದಂತಾಗಿತ್ತು. ಆದರೆ ಈ ನಡುವೆ ಪೊಲೀಸು ಹತಾಶನಾದಂತಿತ್ತು. ಅವನಲ್ಲೂ ಏನೋ ಅಪರಾಧಿ ಭಾವ… ಹೂಂ ಸರಿ ಹೊರಡು. ಪ್ಯಾಸೆಂಜರ್ಸ್ಗೆ ತೊಂದರೆ ಆಗ್ತಾ ಇದೆ ಅಂತ ಬಿಡ್ತಾ ಇದೀನಿ. ಈ ದರಿದ್ರ ಮಳೆ ಎಂದು ಗೊಣಗಿಕೊಳ್ಳುತ್ತಾ  ದಾರಿ ಮಾಡಿಕೊಟ್ಟ. ಬಸ್ಸು ಹೊರಟಿತು. ಎಲ್ಲರು ನಿಟ್ಟುಸಿರ ನಗೆ ಚಿಮ್ಮಿಸಿದರು. `ಮಳೆಗಾಲ ಆಟೋದವರಿಗೆ ಕಲೆಕ್ಷನ್ ಕಡಿಮೆ ಈ ಪೊಲೀಸರನ್ನ ನಮ್ಮ ವಿರುದ್ದ ಎತ್ತಿ ಕಟ್ತಾರೆ ಬಡ್ಡಿ ಮಕ್ಕಳು’ ಕಂಡಕ್ಟರ್ ಗೊಣಗುತಿದ್ದ. ನನ್ನ ಕಣ್ಣಲ್ಲಿನ್ನೂ ಗಂಗೆ ಯಮುನೆಯರ ಪ್ರವಾಹ ನಿಂತಿರಲಿಲ್ಲ. ಡ್ರೈವರ್ ತಡವಾಗಿದ್ದರಿಂದ ಬಸ್ಸನ್ನು ಹಿಂದಿಗಿಂತ ವೇಗವಾಗಿ ಓಡಿಸುತಿದ್ದವನು ಮಧ್ಯೆಯೇ  ನನ್ನೆಡೆಗೆ  ತಿರುಗಿ ಏನು ಆಗಿಲ್ಲ ಸುಮ್ಮನಿರು ಎಂಬಂತೆ ಕತ್ತು ಅಲ್ಲಾಡಿಸಿ ಕಿರುನಗೆ ನಕ್ಕ. ಮೌನಧ್ವನಿ ದೈರ್ಯ ನೀಡಿತು.

‍ಲೇಖಕರು avadhi

13 October, 2008

1 Comment

  1. ಸಂದೀಪ್ ಕಾಮತ್

    ಎಂಥ ಮಾರಾಯ್ರೆ ಒಳ್ಳೆಯತನಕ್ಕೆ ಇದು ಕಾಲವೇ ಅಲ್ಲ:(

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading