
‘ಮೀಡಿಯಾ ಮಿರ್ಚಿ’ಯ ಬುಕ್ ಟಾಕ್ ನಲ್ಲಿ ಬರೆದ ಬರಹ
ಪತ್ರಿಕಾ ರಂಗದ ಬಗೆಗಿನ ಹತ್ತು ಹಲವು ಪುಸ್ತಕಗಳ ಪೈಕಿ ನಾನು ಮತ್ತೆ ಮತ್ತೆ ಹೊರಳುವುದು ಟಿ ಎಸ್ ಸತ್ಯನ್ ಅವರ ‘ಕಾಲಕ್ಕೆ ಕನ್ನಡಿ’ಯ ಕಡೆಗೆ. ದೆಹಲಿಯಲ್ಲಿಯೇ 30 ವರ್ಷಕ್ಕೂ ಹೆಚ್ಚು ಕಾಲ ಛಾಯಾಗ್ರಾಹಕರಾಗಿದ್ದ ಸತ್ಯನ್ ಅನುಭವದ ದೊಡ್ಡ ಕಣಜ .86 ವಯಸ್ಸಿನ ಸತ್ಯನ್ ಅವರ ಲೋಕದಲ್ಲಿ ಪತ್ರಿಕೋದ್ಯಮದ ಅಪರೂಪದ ನೆನಪುಗಳಿವೆ. ‘ಸತ್ಯನ್ ಅವರ ಕಣ್ಣು ಕ್ಯಾಮೆರಾ ಕಣ್ಣು ಕಾಣುವುದಕ್ಕಿಂತ ಹೆಚ್ಚಿನದನ್ನು ಗಮನಿಸುತ್ತದೆ’ ಎಂದು ಎಚ್ ವೈ ಶಾರದಾ ಪ್ರಸಾದರಿಂದ ಪ್ರಶಂಸೆಗೆ ಒಳಗಾದ ಸತ್ಯನ್ ಈ ಪುಸ್ತಕದಲ್ಲಿ ತಾವು ತೆಗೆದ ಅಪರೂಪದ ಛಾಯಾಚಿತ್ರಗಳ ನೆನಪುಗಳನ್ನೂ ಬಿಚ್ಚಿಟ್ಟಿದ್ದಾರೆ.
ಮೈಸೂರಿನಿಂದ ಆರಂಭವಾದ ಸತ್ಯನ್ ಯಾತ್ರೆ ಇಡೀ ದೇಶ ಸುತ್ತುತ್ತಾ ಕೊನೆಗೆ ನ್ಯೂಯಾರ್ಕ್ ನಲ್ಲಿ ಚಿತ್ರ ಪ್ರದರ್ಶನ ನಡೆಸಿ ಮತ್ತೆ ಮೈಸೂರಿಗೆ ಬಂದು ನೆಲೆ ನಿಲ್ಲುವವರೆಗೂ ಹರಡಿದೆ. ತಾವು ತೆಗೆದ ಅಪರೂಪದ ಛಾಯಾಚಿತ್ರಗಳ ಬಗೆಗಿನ ನೆನಪುಗಳ ಜೊತೆಗೆ ಅಂದಿನ ಪತ್ರಿಕೋದ್ಯಮದ ಅಪರೂಪದ ಚಿತ್ರಣವೂ ಇದೆ.
ಎಲ್ಲರೂ ಓದಲೇಬೇಕಾದ, ಸಂಗ್ರಹದಲ್ಲಿ ಇಟ್ಟುಕೊಳ್ಳಲೇಬೇಕಾದ ಪುಸ್ತಕ ಇದು. ಪ್ರಿಸಂ ಬುಕ್ಸ್ ಈ ಪುಸ್ತಕ ಪ್ರಕಟಿಸಿದೆ. ಇದು ಕನ್ನಡ, ಇಂಗ್ಲಿಶ್ ಎರಡೂ ಭಾಷೆಯಲ್ಲಿ ಲಭ್ಯ
ಅವರು ಸತ್ಯನ್..
ನಿಮಗೆ ಇವೂ ಇಷ್ಟವಾಗಬಹುದು…





ಕೆಲವು ದಿನಗಳ ಹಿಂದೆ ಟಿ.ಎಸ್. ಸತ್ಯನ್ರವರನ್ನು ನಮ್ಮ ರಾಷ್ಟ್ರಮಟ್ಟದ ಛಾಯಾಗ್ರಾಹಣ ಸ್ಪರ್ಧೆಯ ಪ್ರದರ್ಶನದಲ್ಲಿ ನೋಡಿದಾಗ ಅವರಿಗೆ ೮೬ ವರ್ಷವಾಗಿದೆ ಅಂತ ಅನ್ನಿಸಿರಲಿಲ್ಲ. ಅವರ ಕ್ಲಿಕ್ಕಿಸಿದ ಫೋಟೊಗಳು ಈಗಿನ ಹೊಸ ಛಾಯಾಗ್ರಾಹಕರಿಗೆ ಸ್ಫೂರ್ತಿ. ಅವರ ಪುಸ್ತಕ ಕಾಲಕ್ಕೆ ಕನ್ನಡಿ ನನ್ನ ಛಾಯಾಗ್ರಾಹಣ ಕೃಷಿಗೆ ಒಂದು ರೀತಿಯ ಕೈಪಿಡಿ. ಅವರ ಬಾಲ್ಯ, ಬದುಕು, ಫೋಟೊಗ್ರಫಿ, ತಮಗೆ ಬೇಕಾದ ಫೋಟೊ ಕ್ಲಿಕ್ಕಿಸಲು ಮಾಡುತ್ತಿದ್ದ ತಪ್ಪಸ್ಸು ಇತ್ಯಾದಿಗಳೆಲ್ಲಾ ನಮ್ಮಂಥ ಯುವ ಛಾಯಾಗ್ರಾಹಕರ ಸೋಮಾರಿತನ ಹೋಗಲಾಡಿಸಲು ಪ್ರೇರಣೆ. ನನಗೆ ಬೇಸರವಾದಾಗಲೆಲ್ಲಾ ಕಾಲಕ್ಕೆ ಕನ್ನಡಿ ಓದುತ್ತೇನೆ. ಪ್ರತಿಯೊಬ್ಬ ಛಾಯಾಗ್ರಾಹಕನ ಬಳಿಯೂ ಇರಬೇಕಾದ ಪುಸ್ತಕ.
ಅವರು ಇನ್ನಿಲ್ಲ. ವಿಚಾರ ತಿಳಿದು ಮನಸ್ಸಿಗೆ ಬೇಸರ. ಬೆರಗನ್ನು ಕ್ಲಿಕ್ಕಿಸುತ್ತಿದ್ದ ಒಂದು ಚಿನ್ನದಂತ ಬೆರಳು ಮುಂದೆ ಇರುವುದಿಲ್ಲವಲ್ಲವೆನ್ನುವುದೇ ನನ್ನ ಕೊರಗು.
ಅವರ ಆತ್ಮಕ್ಕೆ ಶಾಂತಿ ಸಿಗಲಿ.