ಪಂಡಿತ್ ವೆಂಕಟೇಶ್ ಕುಮಾರ್ ಇದ್ದಾರೆ ಎಂದರೆ ಅಲ್ಲಿ ನಿಜಕ್ಕೂ ನಡೆಯುವುದು ನಾದ ಲೀಲೆಯೇ.. ಇದು ಮತ್ತೆ ನಿಜವಾದದ್ದು ದೆಹಲಿಯಲ್ಲಿ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮುಂದಾಳತ್ವದಲ್ಲಿ.
ವೆಂಕಟೇಶ ಕುಮಾರ್ ಅವರಿಗೆ ಪದ್ಮ ಗೌರವ ಸಂದ ಸಂದರ್ಭದಲ್ಲಿ ಎನ್ ಆರ್ ವಿಶುಕುಮಾರ್ ದೆಹಲಿ ಕೇಳುಗರಿಗೆ ನೀಡಿದ ರಸದೌತಣ ಇದು. ಕೊಪರ್ನಿಕಸ್ ಮಾರ್ಗದ ಲಿಟಲ್ ಥಿಯೇಟರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಗಂಟೆ ಅಕ್ಷರಷಃ ನಾದದ ನದಿಯೊಂದು ಹರಿಯಿತು.
‘ದಿ ವೀಕ್’ ನಿಯತಕಾಲಿಕದ ಸ್ಥಾನಿಕ ಸಂಪಾದಕ ಕೆ ಎಸ್ ಸಚ್ಚಿದಾನಂದ ಮೂರ್ತಿ, ಪುರುಷೋತ್ತಮ ಬಿಳಿಮಲೆ, ಎಚ್ ಎಸ್ ಶಿವಪ್ರಕಾಶ್, ದೆಹಲಿಯ ಪತ್ರಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.














ಅಲ್ಲಿ ನಡೆದದ್ದು ನಿಜಕ್ಕೂ 'ನಾದ ಲೀಲೆ'
ನಿಮಗೆ ಇವೂ ಇಷ್ಟವಾಗಬಹುದು…




ದೆಹಲಿ ಲಿಟಲ್ ಥಿಯೇಟರ್ ಸಭಾಂಗಣದ ವೆಂಕಟೇಶ ಕುಮಾರ ನಾದಲೀಲೆಯ ಅವಧಿ ಸಚಿತ್ರ-ವರದಿ ಓದುತ್ತಿದ್ದಂತೆ 1986ರಲ್ಲಿ ಬಳ್ಳಾರಿ ರಾಘವ ಕಲಾ ಮಂದಿರದಲ್ಲಿ ಜರುಗಿದ ಅಖಿಲ ಕರ್ನಾಟಕ ಸಂಗೀತ ಸಮ್ಮೇಳನ ನೆನಪಾಯ್ತು. ಪಂ.ಎಂ.ವೆಂಕಟೇಶ ಕುಮಾರ ನಾನೀಗ ಪ್ರಸ್ತುತ ಪಡಿಸುವ ರಾಗ “ಭೀಮ್ ಪಲಾಸ್” ಎಂದಾಗ ಸಭಿಕರ ಮೊದಲ ಸಾಲಲ್ಲಿ ಕುಳಿತ ವಕೀಲ ವಟ್ಟಂ ಭೀಮಪ್ಪ ಶೆಟ್ಟಿ “ಓ! ಭೀಮಪ್ಪ ಲಾಸ್”ಎಂದ ವ್ಯಂಗ್ಯೋಕ್ತಿ ಯನ್ನು ಸವಾಲೆಂಬಂತೆ ಸ್ವೀಕರಿಸಿದ ವೆಂಕಟೇಶಕುಮಾರ ಆ ರಾಗದ ದೇವತೆಯೇ ಆವಾಹನೆಯಾದಂತೆ “ತನು ತುಂಬಿ-ಮನ ತುಂಬಿ-ಚಿತ್ತ ಚೇತನ ತುಂಬಿ”-ತಮ್ಮನ್ನೇ ತಾವು ಮರೆತು ಅತ್ಯದ್ಭುತವಾಗಿ ಹಾಡಿದರು. ಆ ರಾಗದ ಅಷ್ಟು ಅದ್ಭುತ ಪ್ರಸ್ತುತಿ ಯಾವ ಕಲಾವಿದರಿಂದಲೂ ನಾನಿದುವರೆಗೆ ಕೇಳಿಲ್ಲ. ಅದೇ ಗುಂಗಿನಲ್ಲಿ ನಿದ್ದೆ ಬಾರದೇ ಮಲಗಿದಲ್ಲಿಯೇ ಮೊಬೈಲ್ ಕೀಪ್ಯಾಡ್ ಕ್ಲಿಕ್ ಲೀಲೆಯಲ್ಲಿ ಈ ಕವಿತೆ ಆವಿರ್ಭವಿಸಿತು.
ವೇದಿಕೆಗೆ ಬರೆ ನಕ್ಕೆ ಕೇಳುತ್ತ ಕೇಳುತ್ತ
ನಾದ ಮಾಧುರ್ಯದಲಿ ಮೈಮನವ ಮರೆತೆ
“ವೆಂಕಟೇಶಕುಮಾರ” ಜಿಹ್ವೆಯಲಿ ತಾ ನೆಲೆಸಿ
ಗೀರ್ವಾಣಿ ಹರಿಸಿಹಳು ಸಂಗೀತ ಸರಿತೆ-1(ಸ)
ಅರಳೆಯನು ಹಿಂಜುವೊಲು ಸ್ವರ ಸ್ವರದ ವಿಸ್ತಾರ
ಭೂ-ವ್ಯೋಮ ವ್ಯಾಪಿಸುವ ಆಲಾಪ-ಭವ್ಯ
“ವಾಕ್ಕು”-“ವಾಕ್ಕು”ವ ನುಡಿವ ಬರಿ ಜಾಣ್ಮೆಯಲ್ಲವಿದು
“ವಾಗರ್ಥ”-“ಪ್ರತಿಪತ್ತಿ” ಹೊಮ್ಮಿಸುವ-ದಿವ್ಯ-2(ರಿ)
ಕರ್ಣದ್ವಾರವ ದಾಟಿ ನರನಾಡಿಗಳ ಮೀಟಿ
ಎದೆ ತುಡಿವ ಮನ ಮಿಡಿವ ಗಾರುಡಿಯ ಗಾಡಿ
“ಮಂದ್ರ”ದಲಿ ಮೀಯುತ್ತ “ಮಧ್ಯಮ”ದಿ ನಲಿಯುತ್ತ
“ತಾರಕ”ಕೆ ಏರಿ ವಿಜೃಂಭಿಸುವ ಮೋಡಿ-3(ಗ)
ಲಯ-ತಾನ-ಸ್ವರ ವೃಷ್ಟಿ ಯಕ್ಷ ಲೋಕದ ಸೃಷ್ಟಿ
ಕೋಗಿಲೆಯ ನಾಚಿಸುವ ಪಂಚಮದ ಬೆಡಗು
ಜಡಕೆ ಚೇತನವೀವ ಕೊರಡನೂ ಕೊನರಿಸುವ
ಸತ್ಯ-ಶಿವ-ಸುಂದರದ ಸಾಕಾರ ಬೆರಗು-4(ಮ)
ರಸ ಪ್ರವಾಹದಿ ಜೀವ ತನ್ಮಯದಿ ತೇಲಿಸುವ
ರಾಗ ಮಥನದಿ ಉದಿಪ ನವನೀತ ಅಮೃತ
ಭಜನ ಪ್ರಾರ್ಥನ ಸ್ತವನ ವಚನ ಕೀರ್ತನ ಕವನ
ಗಾಯನೋಪಾಸನದಿ ಜೀವನವು ಸುಕೃತ-5(ಪ)
ಸುಷ್ಪಷ್ಟ ಸಾಹಿತ್ಯ ಮೃದು ಮಧುರ ಲಾಲಿತ್ಯ
ಸುಶ್ರಾವ್ಯ ಕಂಠದೊಳು ತುಂಬುವುದು ಕೆಚ್ಚು
ಲಘು-ಸುಗಮ-ಶಾಸ್ತ್ರೀಯ ಸರ್ವ ವಿಧ ಸಂಗೀತ
ಅಭಿವ್ಯಕ್ತಿ ಹಿಡಿಸುವುದು ರಸಿಕರಿಗೆ ಹುಚ್ಚು-6(ಧ)
ಬರಿ ಕಲಿಕೆಯಲ್ಲವಿದು ಹುಟ್ಟು ಪ್ರತಿಭೆಯೆ ದಿಟವು
“ಪುಟ್ಟರಾಜ್ ಗುರು ಹರಕೆ” ಕಠಿಣ ತಪ ಸಿದ್ಧಿ
ವಿಶ್ವ ಮಾನವ ಮಾನ್ಯ ಕನ್ನಡತಿ ಸುತ ಧನ್ಯ
ಭಾರತಿಯು ಕರುಣಿಸಲಿ ಬಾಳಿನಲಿ ವೃದ್ಧಿ-7(ನಿ)
ಸಂಗೀತದ ಸಪ್ತ ಸ್ವರಗಳೇ
ಕಾವ್ಯ ಪಂಕ್ತಿಗಳಾಗಿ
ಒಂದು ಉತ್ತಮ ಕವನ ಹೊಮ್ಮಿಸಿದ
ಟಿಕೆಜಿ ಪತ್ತಾರರಿಗೆ ಅಭಿನಂದನೆಗಳು
ವೆಂಕಟೇಶ ಕುಮಾರರ ಗಾಯನವೆ ಹಾಗೆ
ಎಲ್ಲರನು ತಮ್ಮ ಗಾನ ಗಂಗೆಯಲಿ ಮುಳುಗಿಸುವ ಹಾಗೆ
ಸುಮಧುರ ಗಂಭೀರ ಸುವಿಸ್ತಾರ ರಾಗ ಝೇಂಕಾರ
ಎಂ.ವೆಂಕಟೇಶಕುಮಾರ ಕುರಿತ ನನ್ನ ಅವಧಿ ಕಾಮೆಂಟ್ ಬರಹದಲ್ಲಿ ವಕೀಲ “ವಟ್ಟಂ ಭೀಮಪ್ಪಶೆಟ್ಟಿ” ಎಂಬ ಉಲ್ಲೇಖದಲ್ಲಿ ತಪ್ಪು ಇದೆ. “ವಟ್ಟಂ ಭೀಮಪ್ಪಶೆಟ್ಟಿ” ಅಲ್ಲ. ಅದು “ಚೆಲ್ಲೂರು ಭೀಮಪ್ಪಶೆಟ್ಟಿ” ಎಂದಾಗಬೇಕು. (ಕರ್ನಾಟಕ ಉಚ್ಚ ನ್ಯಾಯಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀಮತಿ ಚೆಲ್ಲೂರು ಮಂಜುಳಾರವರ ತಂದೆ.) 30ವರ್ಷದ ಹಿಂದಿನದು, ಹೀಗಾಗಿ ನನ್ನ ಮರೆವಿಗೆ ವಿಷಾದಿಸುತ್ತೇನೆ.