ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅನ್ನಭಾಗ್ಯ ಆಹಾರ ಭದ್ರತೆಯ ಒಂದು ಆಯಾಮ’ – ಜಿ ಎನ್ ನಾಗರಾಜ್

ನಿನ್ನೆ ’ಅವಧಿ’ಯಲ್ಲಿ ಎಂ ಎಸ್ ಶ್ರೀರಾಂ ಬರೆದ ’ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ’ ಲೇಖನಕ್ಕೆ ಜಿ ಎನ್ ನಾಗರಾಜ್ ಅವರ ಪ್ರತಿಕ್ರಿಯೆ ಇಲ್ಲಿದೆ.

ಈ ಬಗ್ಗೆ ನಿಮಗೂ ಏನಾದರೂ ಹೇಳುವುದಿದೆಯೆ? ದಯವಿಟ್ಟು ಬರೆಯಿರಿ.

ಜಿ ಎನ್ ನಾಗರಾಜ್

ಶ್ರೀರಾಮ್ ರವರು ಒಬ್ಬ ಸಾಹಿತಿ ಹಾಗೂ ಮ್ಯಾನೇಜ್ ಮೆಂಟ್ ವಿಜ್ಞಾನದ ಉನ್ನತ ಸಂಸ್ಥೆಯಲ್ಲಿ ಸಂಶೋಧನೆ ಮಾಡುವವರಾಗಿ ಅನ್ನಭಾಗ್ಯದ ಬಗ್ಗೆ ನಡೆದಿರುವ ಚರ್ಚೆಯ ಬಗ್ಗೆ ತಮ್ಮ ವಿಶ್ಲೇಷಣೆಯನ್ನು ಮುಂದಿಟ್ಟಿರುವುದು ಬಹಳ ಒಳ್ಳೆಯ ವಿಷಯ. ಅನ್ನಭಾಗ್ಯ ಎಂಬ ಕರ್ನಾಟಕದ ಯೋಜನೆಯ ಬಗ್ಗೆ ಇಂದು ಚರ್ಚೆಯಾಗುತ್ತಿದ್ದರೂ ಕೂಡ ಅದನ್ನು ಆಹಾರ ಭದ್ರತೆಯ ಒಂದು ಆಯಾಮವಾಗಿ ಮಾತ್ರ ನೋಡಬೇಕು .ಆಹಾರ ಭದ್ರತೆಯ ವಿಷಯ ದೇಶದಲ್ಲಿ ಹಿಂದಿನ ಐದು ವರ್ಷಗಳಲ್ಲಿ ಒಂದು ಪ್ರಧಾನ ಪ್ರಶ್ನೆಯಾಗಿ ಬಂದಿತ್ತೆನ್ನುವುದು ಮತ್ತು ಅದರ ಕಾರಣಗಳು ರಾಜ್ಯದಲ್ಲಿ ನಡೆದ ಚರ್ಚೆಯಲ್ಲಿ ಎಲ್ಲೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ಮುಖ್ಯ ಅಂಶಗಳನ್ನು ನೀಡ ಬಯಸುತ್ತೇನೆ .
* ಈ ಯೋಜನೆ ಎಂಬುದು ಭಾಗ್ಯವಲ್ಲ ಮತ್ತು ಭೈರಪ್ಪನಂತಹವರಾಗಲೀ ಆಳುವ ಪಕ್ಷವಾಗಲಿ ನೀಡುವ ಭಿಕ್ಷೆಯಲ್ಲ . ಆಹಾರದ ಮತ್ತು ಇತರ ವಸ್ತುಗಳ ಬೆಲೆ ಏರಿಕೆಗೆ ಕಾರಣವಾದ ಸರ್ಕಾರಗಳ ನೀತಿಗಳು ಮತ್ತು ಅದಕ್ಕೆ ತಕ್ಕಂತೆ ದುಡಿಯುವವರ ಕನಿಷ್ಟ ಕೂಲಿಯನ್ನು ಏರಿಸದಿರುವ ಸರ್ಕಾರಗಳ ವಂಚನೆಯನ್ನು ಸ್ವಲ್ಪ ಮಟ್ಟಿಗೆ ಮುಚ್ಚಿಕೊಳ್ಳುವ ಪ್ರಯತ್ನ ಅಷ್ಟೇ.
* ಇಂತಹದೊಂದು ಯೋಜನೆ ಜಾರಿಗೆ ದೊಡ್ಡ ಹಿನ್ನೆಲೆ ಇದೆ. ದೇಶದಲ್ಲಿ ಒಂದೆಡೆ ರೈತರ ಆತ್ಮಹತ್ಯೆ ಮತ್ತೋಂದೆಡೆ ಹಸಿವಿನ ಸಾವುಗಳು ದೇಶದ ಅಂತಃರಣವನ್ನು ಕಲಕಿತ್ತು ಅನೇಕ ವಸ್ತುಗಳ ಬೆಲೆ ಕಡಿಮೆಯಾಗಿದ್ದರೂ ಆಹಾರದ ವಸ್ತುಗಳ ಸೂಚ್ಯಾಂಕ ಎರಡಂಕಿ ದಾಟಿತ್ತು.
* ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೋರಾಟಗಳು , ಎರಡು ಬಾರಿ ಭಾರತ ಬಂದ್ ನಡೆದಿದ್ದುವು.
* ದೊಡ್ಡ ಪ್ರಮಾಣದಲ್ಲಿ ಜನರ ಅತೃಪ್ತಿ ಒಡೆದು ಕಾಣುತ್ತಿತ್ತು. ದೇಶದ ಹಲವು ಆರ್ಥಿಕ ತಜ್ಞರು ಕೂಡ ಒತ್ತಾಯ ಮಾಡಿದ್ದರು. ಅಮರ್ತ್ಯ ಸೇನ್ ರವರೂ ಅಧ್ಯಯನ ಮತ್ತು ವಿಶ್ವ ಮಾನವ ಅಭಿವೃದ್ಧಿ ವರದಿಗಳು ಇತ್ಯಾದಿ ಒತ್ತಾಯಗಳು ಇದಕ್ಕೆ ಸೇರಿದವು.ರಾಷ್ಟ್ರೀಯ ಪೋಷಣಾ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರ ಒಬ್ಬ ವ್ಯಕ್ತಿಗೆ ಅವನ/ಳ ಬದುಕು ಮತ್ತು ಕೆಲಸಕ್ಕೆ ಒಂದು ತಿಂಗಳಿಗೆ 7 ಕೆಜಿ ಅಕ್ಕಿ ಬೇಕೆಂದು ಐದು ಜನರ ಕುಟುಂಬಕ್ಕೆ 35 ಏಜಿ ಅಕ್ಕಿ ಬೇಕೆಂದು ಈ ಆಧಾರದ ಮೇಲೆ ದೇಶದ ಒತ್ತಾಯವಾಯಿತು.
* ಈ ಹಿನ್ನೆಲೆಯಲ್ಲಿ ಆಹಾರ ಭದ್ರತಾ ಕಾನೂನು -ಅದರಲ್ಲಿ ಹಲವು ಕೊರತೆಗಳಿದ್ದರೂ , ಆಹಾರ ತಜ್ಞರ ಶಿಫಾರಸನ್ನು ಪೂರ್ಣ ಒಪ್ಪದಿದ್ದರೂ – ಅಂಗೀಕಾರವಾಯಿತು.
* ರಾಜ್ಯದಲ್ಲಿ ಹೊಸದಾಗಿ ಅಧಿಾರಕ್ಕೆ ಬಂದ ಸರ್ಕಾರಕ್ಕೆ ಈ ಪರಿಸ್ಥಿತಿ ಮತ್ತು ಜನರ ಅತೃಪ್ತಿಗೆ ಉತ್ತರ ಕೊಡಬೇಕಾದ ಬಾಧ್ಯತೆಯಿತ್ತು. ಆದ್ದರಿಂದ ಈ ರೀತಿ ಅನ್ನಭಾಗ್ಯ ಬಂದಿತು.

* ಈಗಲು ಕೂಡ ಇತ್ತೀಚೆಗೆ ವಿಶ್ವ ಸಂಸ್ಥೆಯ ಒಂದು ವರದಿಯಂತೆ ಇಂದು ವಿಶ್ವದಲ್ಲಿಯೇ ಭಾರತ ಅತ್ಯಂತ ಹೆಚ್ಚು ಹಸಿವಿನಿಂದ ಬಳಲುತ್ತಿರುವ ದೇಶ.ಮತ್ತು ಅತ್ಯಂತ ಹೆಚ್ಚು ಬಡಕಲು ದೇಹದ ಮಕ್ಕಳು ಇರುವ ದೇಶ. ಶೇ, 48 ರಷ್ಟು .ನಮ್ಮ ರಾಜ್ಯದಲ್ಲಿಯೇ ಶಿಶುಗಳು, ಮಕ್ಕಳು ರಾಯಚೂರು ಇತ್ಯಾದಿ ಜಿಲ್ಲೆಗಳಲ್ಲಿ ಎಂತಹ ಬಡಕಲು ಬೆಳವಣಿಗೆ ಎಂಬುದನ್ನೂ ನೋಡಿದ್ದೇವೆ. ಈ ಅಮಾನವೀಯ ಪರಿಸ್ಥಿತಿ ಆಹಾರ ಭದ್ರತೆ ನೀಡುವ ಅನಿವಾರ್ಯತೆಯನ್ನು ಒತ್ತಿ ಹೇಳುವುದಿಲ್ಲವೇ? ಈ ಬಗ್ಗೆ ಕೀಳು ಟೀಕೆಗಳನ್ನು ಮಾಡಿದ ನಮ್ಮ ಸಾಹಿತಿಗಳು ಈ ಸಂಗತಿಗಳಿಗೆ ಕಣ್ಣು ಮುಚ್ಚಿಕೊಂಡಿದ್ದಾರೆಯೇ ?
* ಮತ್ತೊಂದು ಸಂಗತಿ ಕೇರಳ ಇಡೀ ದೇಶದಲ್ಲಿಯೆ ಅತ್ಯುತ್ತಮ ಮಾನವ ಅಭಿವೃದ್ಧಿಯ ಸೂಚ್ಯಾಂಕವನ್ನು ಹೊಂದಿರುವ ಕೇರಳದಲ್ಲಿ ಅದರ ಮೂಲಾಧಾರವೇ 50 ವರ್ಷದ ಹಿಂದೆ ದೇಶದಲ್ಲಿಯೆ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದ ಸಮಗ್ರ ಆಹಾರ ಭದ್ರತೆಯನ್ನು ಖಾತರಿಗೊಳಿಸಿದ ಪಡಿತರ ವ್ಯವಸ್ಥೆ. ಅಕ್ಕಿ ಮಾತ್ರವೆ ಅಲ್ಲದೆ ಬೇಳೆಗಳು,ಕಾಳುಗಳು, ಅಡಿಗೆ ಎಣ್ಣೆ , ಮೆಣಸಿನಕಾಯಿ ಮೊದಲ್ಗೊಂಡು ಆಹಾರ ತಯಾರಿಕೆ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಡಲಾಯಿತು.
ಉದ್ಯೋಗ ಖಾತರಿ ಯೋಜನೆಯ ವಿಷಯ
* ಈ ಮೇಲನ ವಿವರಣೆ ಆಹಾರ ಭದ್ರತೆಗೂ ಉದ್ಯೋಗ ಖಾತರಿಗೂ ನೇರ ಸಂಬಂಧವಿಲ್ಲ ಅದೇನಿದ್ದರೂ ಮನುಷ್ಯ ಜೀವನದ ಎಲ್ಲವು ಒಂದಕ್ಕೊಂದು ಸಂಬಂಧವಿದೆಯೆನ್ನುವಂತಹ ಸಂಬಂಧವಷ್ಟೇ.
*ಅದೇ ಸಮಯದಲ್ಲಿ ಶ್ರೀರಾಮ್ ರವರು ಇದು ಕೇಂದ್ರ ಯೋಜನೆ . ಇದನ್ನು ಮೋದಿ ಸರ್ಕಾರ ಈಗಾಗಲೇ ದೇಶದ ಕೆವಲ ಮೂರನೆ ಒಂದು ಭಾಗಕ್ಕೆ ಸೀಮಿತಗೊಳಿಸಿದೆ ಬಜೆಟ್ ಕಡಿತ ಮಾಡಿದೆ ಮತ್ತು ಇದು ಕೇವಲ ಶೌಚಾಲಯ ನಿರ್ಮಾಣ ಯೋಜನೆ ಎಂದಷ್ಟೇ ಪರಿಗಣಿಸಲಾರಂಭಿಸಿದೆ.
* ಮುಂದೆ ಅದನ್ನು ಪೂರ್ಣವಾಗಿ ಕಿತ್ತು ಹಾಕುವ ಪ್ರಯತ್ನದಲ್ಲಿ ತೊಡಗಿದೆ.
* ಇದರಲ್ಲಿ ರಾಜ್ಯ ಸರ್ಕಾರ ಏನು ಮಾಡುವ ಸ್ಥಿತಿಯಲ್ಲಿಲ್ಲ. ಕೇಂದ್ರ ಹೇಳಿದ್ದನ್ನು ಜಾರಿ ಮಾಡುವುದಷ್ಟೇ ಅವರ ಕೆಲಸ.
* ಇದನ್ನು ಆಹಾರ ಭದ್ರತೆಗೆ ಪರ್ಯಾಯ ಅಥವಾ ಪ್ರತಿಯಾಗಿ ಇದನ್ನು ಪೋಸ್ ಮಾಡಬಾರದು.
* ಉದ್ಯೋಗದ ಹಕ್ಕು ಮೂಲಭೂತ ಹಕ್ಕು ಎಂದು ಸಂವಿಧಾನ ತಿದ್ದುಪಡಿಯಾಗಿದ್ದರೂ ನಿರುದ್ಯೋಗವೇ ಜನರ ಹಕ್ಕು ಎಂಬಂತಾಗಿದೆ.
* ಆದರೆ ಒಂದು ನಾಗರಿಕ ದೇಶ ಜನರಿಗೆ ಕನಿಷ್ಟ ಬದುಕನ್ನು ಖಾತರಗೊಳಿಸಬೇಕಾದರೆ ಗ್ರಾಮೀಣಕ್ಕೆ ಮತ್ತು ನೂರು ದಿನಗಳಿಗೆ ಸೀಮಿತಗೊಳಿಸದೆ ದೇಶದ ಎಲ್ಲಾ ಕಡೆ , ವರ್ಷದೆಲ್ಲಾ ಅವಧಿಗೆ ವಿಸ್ತರಿಸಬೇಕು.
* ಅದಕ್ಕೆ ಜೀವನ ನಡೆಸಲು ಬೇಕಾದ ವೇತನ ಸಿಗುವಂತೆ ಕನಿಷ್ಠ  ವೇತನ ನಿಗದಿಗೊಳಿಸಬೇಕು. ಬೆಲೆ ಏರಿಕೆಯಾದಂತೆಲ್ಲಾ ಇದನ್ನು ಏರಿಸಬೇಕು.
* ಆಗ ಅನ್ನ ಭಾಗ್ಯವಾಗದೆ ಜನರ ಜೀವನದ ಸಹಜ ಅಂಗವಾಗುತ್ತದೆ.
 

‍ಲೇಖಕರು G

19 June, 2015

4 Comments

  1. ಕಿರಣ್

    ಎಲ್ಲಾ ಸರಿ; ಆದರೆ ಎಲ್ಲದರಲ್ಲೂ ನಿಮ್ಮ ವೈಯುಕ್ತಿಕ ಅಜೆಂಡಾ ಅನ್ನು ತರುವುದು ಏಕೆ?
    ಮೋದಿ, ಭೈರಪ್ಪ ಪ್ರಸ್ತಾಪವಿಲ್ಲದಿದ್ದರೆ ಲೇಖನ ಅಸಂಪೂರ್ಣ ಎಂಬ ಭಾವನೆ ಏಕೆ?
    ಒಂದು ಸಮಸ್ಯೆಯ ಮೂಲಭೂತ ಅಧ್ಯಯನದ ಮಧ್ಯೆ ತಮ್ಮ ಅಜೆಂಡಾಗಳನ್ನು ತರುವ ಚಾಳಿ ನಿಲ್ಲಬೇಕಲ್ಲವೇ? ಇಲ್ಲವಾದಲ್ಲಿ ಸಮಗ್ರ ವಿಶ್ಲೇಷನೆಯೇ ಹಳ್ಳ ಹಿಡಿಯುವುದಿಲ್ಲವೇ?
    ಯಾವುದೇ ಸಮಸ್ಯೆಯನ್ನು ಒಂದು ಸಮಸ್ಯೆಯಾಗಿಯೇ ಉಳಿಸಿಕೊಂಡು ಹೊಟ್ಟೆ ಹೊರೆಯುವ ರಾಜಕಾರಣ ನಮ್ಮದು; ಅದಕ್ಕೆ ಪರ-ವಿರೋಧ ಸಂಘಗಳು ಬೇರೆ!
    ಬಹುಜನ ಹಿತಾಯ – ಬಹುಜನ ಸುಖಾಯ ಎನ್ನುವುದು ದೇಶದ ಸಮಗ್ರ ಬೆಳವಣಿಗೆಗೆ, ಸ್ವಾತಂತ್ರ್ಯಕ್ಕೆ, ಸುರಕ್ಷತೆಗೆ ಅಡ್ಡಿಬಾರದಿದ್ದರೆ ಮಾತ್ರ ಅರ್ಥಪೂರ್ಣ.
    ಚರ್ಚೆಗಳು ವೈಯುಕ್ತಿಕ ಭಾವನೆಗಳನ್ನು ಹಿಂದಿಕ್ಕಿದರೆ ಉತ್ತಮ.

    • Gn Nagaraj

      ತಮಾಶೆಯಾಗಿದೆ ನಿಮ್ಮ ಪ್ರತಿಕ್ರಿಯೆ. ನೀನು ನನಗೆ ಹೊಡೆಯಬಹುದು, ಆದರೆ ನಾನು ನೀವೇ ಹೊಡೆದದ್ದು ಎಂದು ಹೇಳಬಾರದು ಭೈರಪ್ಪನವರು ತಮಗೆ ಹೆಚ್ಚೇನು ಗೊತ್ತಿಲ್ಲದ ವಿಷಯದ ಬಗ್ಗೆ ಬಾಯಿ ಮಾಡುತ್ತಾ ಆರೆಸ್ಸೆಸ್ ಅಜೆಂಡಾ ಮೆರೆಸಬಹುದು, ಮೋದಿಯವರು ಕೋಟ್ಯಾಂತರ ಜನರ ಹೊಟ್ಟಿಯ ಮೇಲೆ ಹೊಡೆಯುವಂತೆ ಶ್ರೀರಾಮ್ ರವರು ಯಾವ ಉದ್ಯೋಗ ಖಾತರಿ ಯೋಜನೆಯನ್ನು ಅನ್ನಭಾಗ್ಯಕ್ಕಿಂತ ಉತ್ತಮ ಪರ್ಯಾಯ ಎನ್ನುತ್ತಾರೋ ಅದನ್ನು ನಾಶ ಮಾಡುವ ಕೆಲಸ ಮಾಡಬಹುದು ನಾವು ಅದೇ ವಿಷಯದ ಬಗ್ಗೆ ಚರ್ಚೆ ಮಾಡುವಾಗಲೂ ಅವರ ಹೆಸರು ಹೇಳಬಾರದು . ಇವರ ಮೋದಿ, ಭೈರಪ್ಪ ಪ್ರೀತಿ ಈ ಮಟ್ಟದ ಅವಿಮರ್ಶಾತ್ಮಕ ಹಂತ್ಕೆ ಹೋಗಬಾರದು.

      • ಕಿರಣ್

        ನಿಮ್ಮ ಉತ್ತರ ಸಮಂಜಸ ಅಲ್ಲ.
        ಇಲ್ಲಿ ಯಾರ ಬಗ್ಗೆಯೂ ಪ್ರೀತಿ ಇಲ್ಲ; ಯಾವ ಬಗೆಗಿನ ಪ್ರೀತಿಯೂ ಇಲ್ಲ.
        ವಿಮರ್ಶೆಗೆ ಯಾರೂ ಹೊರತಲ್ಲ;
        ಆದರೆ ವಿಮರ್ಶೆ ವ್ಯಕ್ತಿ ಆಡಿದ ಮಾತಿಗೆ ಇರಬೇಕೇ ಹೊರತು, ವ್ಯಕ್ತಿಗಲ್ಲ.
        ಅಜೆಂಡಾ ಮೆರೆಸುವುದು, ವೈಯುಕ್ತಿಕ ಧಾಳಿ ಮಾಡುವುದು ಇಂಥವೆಲ್ಲಾ ಒಂದು ಗಹನ ವಿಚಾರದ ಚರ್ಚೆಯನ್ನು ಮಂಕಾಗಿಸುತ್ತವೆ.
        ಇದು ದೊಡ್ಡ ವಿಚಾರ! ಪರ-ವಿರೋಧ ಚರ್ಚೆಗಳು ಅದೇ ಮಟ್ಟದಲ್ಲಿ ಇರಬೇಕು. ಯಾವುದೇ ವ್ಯಕ್ತಿಯ ಹೆಸರಿಗಿಂತ ನಮ್ಮ ವಿಚಾರದ ಸ್ಪಷ್ಟತೆ ಹೆಚ್ಚಿರಬೇಕು.
        ಶ್ರಮಜೀವಿಗೆ ಹೇಗೆ “ಭಾಗ್ಯ” ಎಂಬ ಅಭಿದಾನ ಬೇಡವೋ, ಹಾಗೇ “ಅನ್ನದಾತ” ಎಂಬ ಅಭಿದಾನವೂ ಬೇಡ. ಬೇಕಾಗಿರುವುದು ತನ್ನ ಶ್ರಮಕ್ಕೆ ನ್ಯಾಯವಾದ ಪ್ರತಿಫಲ ಮತ್ತು ಅದನ್ನು ದಕ್ಕಿಸಬಲ್ಲ ಬಲಿಷ್ಠ, ಶೋಷಣೆರಹಿತ, ಭ್ರಷ್ಟಾಚಾರ-ಮುಕ್ತ ವ್ಯವಸ್ಥೆ.
        ನಮ್ಮೆಲ್ಲರ ಹೋರಾಟದ ಅಂತಿಮ ಗುರಿ ಅದೇ; ಈ ಹೆಸರಿನ ಮಟ್ಟದ ಭಾಗ್ಯಗಳು ಆ ಗುರಿ ತಲುಪುವ ಸಾಂದರ್ಭಿಕ ಸೇತುವೆಗಳು ಆಗಬೇಕೇ ಹೊರತು, ಶಾಶ್ವತ ವ್ಯವಸ್ಥೆ ಅಲ್ಲ.
        ನಮ್ಮನ್ನು ಕಾಡುತ್ತಿರುವ ಇನ್ನೊಂದು ದೊಡ್ಡ ಪ್ರಶ್ನೆಗೂ ಇದೇ ಉತ್ತರ.
        ಈ ದಾರಿಯಲ್ಲಿ ವೈಯುಕ್ತಿಕ ಹಗ್ಗ-ಜಗ್ಗಾಟ ಬೇಡ ಎಂದನೇ ಹೊರತು, ಯಾರ ಮೇಲಿನ ಕುರುಡು ಪ್ರೀತಿಯಿಂದಲ್ಲ.
        ಅದರ ಮೇಲೆ ನಿಮ್ಮಿಷ್ಟ!

  2. madakari talwar

    vayaktika azenda annuvudakkinta,e ternada abiprayagalu baralu maanya sahiti mahodayaru karana kiran avare. avru summaniddiddare nagaraj sir avar hesaru tagollo prashne bartirlilla. astakku modhi avaru namma deshada pradhani. avrannu teekisuvudu, hogaluvadu, hogali attakkerisuvdu yallavu samanya alvra?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading