ವರದಿ: ದಟ್ಸ್ ಕನ್ನಡ
2010ರ ಆರನೇ ಅಕ್ಕ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕತೆಗಳ ಪರಿಶೀಲನೆ ಮತ್ತು ಮೌಲ್ಯಮಾಪನ ಇದೀಗ ಮುಕ್ತಾಯಗೊಂಡು ತೀರ್ಪುಗಾರರ ನಿರ್ಧಾರ ನಮ್ಮ ಕೈಸೇರಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಯುವ ಬರಹಗಾರರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಸಮ್ಮೇಳನದ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿರುವ ಸಂಕಲನದಲ್ಲಿ ಪ್ರಕಟಣೆಗೆ ಆಯ್ಕೆಯಾದ ಕತೆಗಳ ಪಟ್ಟಿಯನ್ನು ನಿಮ್ಮ ಮುಂದಿಡಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ.
ಸ್ಪರ್ಧೆಯನ್ನು ಕುರಿತು ಯುವಬರಹಗಾರಿಗೆ ನಾವಿತ್ತ ಕರೆಯನ್ನು ಮನ್ನಿಸಿ ಸುಮಾರು 150 ಮಂದಿ ತಮ್ಮ ಕತೆಗಳನ್ನು ಕಳಿಸಿಕೊಟ್ಟರು. ಅವುಗಳನ್ನೆಲ್ಲ ಎಚ್ಚರದಿಂದ ಓದಿ ಹಂತಹಂತವಾಗಿ ಅವುಗಳಲ್ಲಿ ಶ್ರೇಷ್ಠವೆನಿಸಿದ ಕತೆಗಳನ್ನು ಆಯ್ದು ಕಡೆಗೆ ಅವನ್ನು ನಮ್ಮ ಮಾನ್ಯ ತೀರ್ಪುಗಾರರ ಪರಿಶೀಲನೆಗೆ ಒಪ್ಪಿಸುವ ಕೆಲಸವನ್ನು ಅತ್ಯಂತ ಜಾಗರೂಕತೆಯಿಂದ ಮಾಡಿದ್ದೇವೆ ಎಂಬ ಭರವಸೆ ನಮಗಿದೆ. ತೀರ್ಪುಗಾರರು ಈ ಜವಾಬ್ದಾರಿಯನ್ನು ಗಹನವಾಗಿ ಪರಿಗಣಿಸಿ ತಮ್ಮ ತೀರ್ಪನ್ನು ನಮಗೆ ಕಳಿಸಿಕೊಟ್ಟಿದ್ದಾರೆ. ಅವರ ತೀರ್ಮಾನ ಯಾರಿಂದಲೂ ಯಾವ ರೀತಿಯಲ್ಲೂ ಬದಲಾವಣೆಗೊಳ್ಳದಂತೆ ಎಚ್ಚರಿಕೆ ವಹಿಸಿದ್ದೇವೆ. ಈ ತೀರ್ಪುಗಾರರ ಅಮೂಲ್ಯವಾದ ಸಹಕಾರಕ್ಕೆ ಅಕ್ಕ ಸಂಸ್ಥೆಯ ಪರವಾಗಿ ನಮ್ಮ ವಂದನೆಗಳನ್ನು ಸಲ್ಲಿಸುತ್ತೇವೆ.
ಈ ಹಿಂದೆಯೇ ತಿಳಿಸಿದಂತೆ ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಕತೆಗಳನ್ನು ಒಂದು ಚೊಕ್ಕವಾದ ಪುಸ್ತಕ ರೂಪದಲ್ಲಿ ಸಂಗ್ರಹಿಸಿ ಅದನ್ನು ಸಮ್ಮೇಳನಕ್ಕೆ ಬಂದ ಪ್ರತಿನಿಧಿಗಳಿಗೆ ಕೊಡುತ್ತಿದ್ದೇವೆ. ಒಟ್ಟು ಸುಮಾರು 2500 ಪ್ರತಿಗಳನ್ನು ಅಚ್ಚುಮಾಡಿಸಿದೆ. ನಾವು ಮೊದಲು ಸುಮಾರು ಹದಿನೈದು ಕತೆಗಳನ್ನು ಆಯ್ದುಕೊಳ್ಳುವುದೆಂದಿದ್ದೆವು, ಆದರೆ ಒಟ್ಟಿನಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕತೆಗಳು ಸ್ಪರ್ಧೆಗೆ ಬಂದದ್ದರಿಂದ ಇಪ್ಪತ್ತು ಕತೆಗಳನ್ನು ಆಯ್ದು ಈ ಸಂಗ್ರಹದಲ್ಲಿ ಸೇರಿಸಿದೆ. ಈ ಕತೆಗಳ ಪಟ್ಟಿಯನ್ನು ಈ ಲೇಖನದ ಕಡೆಯಲ್ಲಿ ಸೇರಿಸಿದೆ. ಸಂಗ್ರಹದಲ್ಲಿ ಸೇರಿಸಿರುವ ಕತೆಗಳ ಲೇಖಕರಿಗೆಲ್ಲ ಎರಡೆರಡು ಗೌರವಪ್ರತಿಗಳನ್ನು ಕೊಡಲಾಗುವುದು. ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂವರ ಹೆಸರು ಮತ್ತು ಅವರು ಕಳಿಸಿದ ಕತೆಗಳ ಶೀರ್ಷಿಕೆಗಳನ್ನು ಸಮ್ಮೇಳನದಲ್ಲಿ ಘೋಷಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಿದ 150 ಕತೆಗಳಲ್ಲಿ ಕೇವಲ 20 ಕತೆಗಳನ್ನು ಆಯುವುದು ಸುಲಭವಲ್ಲ. ನಮ್ಮ ಕಥಾಸಂಗ್ರಹದಲ್ಲಿ ಸೇರಿಸದೇ ಹೋದ ಕತೆಗಳಲ್ಲಿ ಒಳ್ಳೆಯವಿಲ್ಲ ಎಂದು ಯಾರೂ ಅಂದುಕೊಳ್ಳಬಾರದು. ಈ ಸ್ಪರ್ಧೆಯಲ್ಲಿ ನಮ್ಮ ಗೊತ್ತು ಮಿತಿಗಳಲ್ಲಿ ಅವು ಆಯ್ಕೆಯಾಗಲಿಲ್ಲ, ಅಷ್ಟೆ. ಆಯ್ಕೆಯಾಗದ ಲೇಖಕರು ಇದರಿಂದ ನಿರುತ್ಸಾಹಗೊಳ್ಳದೆ ತಮ್ಮ ಸಾಹಿತ್ಯಕೃಷಿಯನ್ನು ಸಂಪೂರ್ಣ ಆತ್ಮವಿಶ್ವಾಸದಿಂದ ಮುಂದುವರೆಸುವರೆಂದು ನಂಬಿದ್ದೇವೆ.
ಮತ್ತೊಮ್ಮೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕತೆಗಾರರಿಗೂ ಅಕ್ಕ ಸಂಸ್ಥೆಯ ಪರವಾಗಿ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ಅಲ್ಲದೆ ನಮ್ಮ ಕಥಾಸ್ಪರ್ಧೆಗೆ ಒಂದು ವಿಶಿಷ್ಟವಾದ ಮೌಲ್ಯವನ್ನು ತಂದುಕೊಟ್ಟ ಕನ್ನಡದ ಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ಮೆರೆಯುವ ಡಾ. ವೀಣಾ ಶಾಂತೇಶ್ವರ, ಅಬ್ದುಲ್ ರಶೀದ್ ಮತ್ತು ಎಸ್.ದಿವಾಕರ್ ಅವರಿಗೆ ಅಕ್ಕನ ಪರವಾಗಿ ಅನಂತ ವಂದನೆಗಳು. ನಮ್ಮ ಸಂಪಾದಕ ವರ್ಗದ ಡಾ. ಮೈ.ಶ್ರೀ.ನಟರಾಜ (ಪ್ರಧಾನ ಸಂಪಾದಕ) ಮತ್ತು ಶ್ರೀಮತಿಯರಾದ ನಳಿನಿ ಮೈಯ ಮತ್ತು ತ್ರಿವೇಣಿ ಶ್ರೀನಿವಾಸರಾವ್ ಅವರು ಈ ಕೆಲಸವನ್ನು ಅತ್ಯಂತ ಪ್ರೀತಿಯಿಂದ A labor of love ಎನ್ನುವಂತೆ ನಿರ್ವಹಿಸಿದ್ದಾರೆ. ಅವರಿಗೆ ಅಕ್ಕನ ಅನಂತ ಕೃತಜ್ಞತೆಗಳು.
ಸತ್ಯ ಪ್ರಸಾದ್ (ಸಾಹಿತ್ಯ ಮಂಡಲಿಯ ಅಧ್ಯಕ್ಷ)
ಎಚ್.ವೈ. ರಾಜಗೋಪಾಲ್ (ಉಪಾಧ್ಯಕ್ಷ ಮತ್ತು ಸಲಹೆಗಾರ)
ಅಕ್ಕ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾದ 20 ಕತೆಗಳ ಪಟ್ಟಿ
| ಸಂಖ್ಯೆ | ಆಯ್ಕೆಯಾದ ಕಥೆ | ಕಥೆಗಾರ |
| 1 | ಉರಿ ಬೆಂಕಿಯ ಒಂದು ಎಳೆ | ಕೆ.ಎಲ್. ಚಂದ್ರಶೇಖರ್ ಐಜೂರ್ |
| 2 | ಒಡೆದ ನೆಲ | ದಿವ್ಯಶ್ರೀ ಡೆಂಬಳ |
| 3 | ಕಲಾನ್ವೇಷಣೆ | ನೀಲಾಂಬಿಕಾ ಮೇಟಿ |
| 4 | ಕಾರಿರುಳೊಗಸದಿ ತಾರೆ ನೂರಿದ್ದೇನು | ಸುಶ್ರುತ ದೊಡ್ಡೇರಿ |
| 5 | ಗಾಂಧಿ ಹತ್ಯೆ | ಸುಘೋಷ್ ನಿಗಳೆ |
| 6 | ಚಂದ್ರಹಾಸನ ಆಹ್ವಾನ | ಅಂಕುರ್ ಬೆಟಗೇರಿ |
| 7 | ಜಗತ್ತೇ ನೀನು…. ನೀನೇ ಜಗತ್ತು | ಕಿರಣ ಗಣಾಚಾರಿ |
| 8 | ಡಾಂಬರು ದಂಧೆ | ಮಚ್ಚೇಂದ್ರ ಪಿ. ಅಣಕಲ್ |
| 9 | ತಿಂಗಳು | ಶ್ವೇತಾ. ಜಿ. ಎನ್. |
| 10 | ದೀಪ ತೋರಿದೆಡೆಗೆ | ನವೀನ್ ಭಟ್ ‘ಗಂಗೋತ್ರಿ’ |
| 11 | ದುರಂತ | ಪ್ರವೀಣ್ ಶಿವಶಂಕರ್ |
| 12 | ನಡೆದಷ್ಟೂ ದಾರಿ ದೂರ | ಸಿರಿ ಹುಲಿಕಲ್ |
| 13 | ನಿನ್ನ ಕೊಂದು ನಾನೇನು ಪಡೆಯಲಿ | ಪೂರ್ಣಿಮಾ ಭಟ್ ಸಣ್ಣಕೇರಿ |
| 14 | ನೇತ್ರಾವತಿಯ ಮಡಿಲಲ್ಲಿ | ಬಿ. ಭರತ್ ಭಂಡಾರಿ |
| 15 | ಪರಿತ್ಯಕ್ತ | ಮುರುಳಿ ಆಚಾರ್ಯ |
| 16 | ಪ್ರೀತಿ ಇಲ್ಲದ ಮೇಲೆ…? | ಅಶ್ವಿನಿ. ಜಿ. ದಕ್ಷಿಣಾಮೂರ್ತಿ |
| 17 | ಬಂಗಾರತ್ತೆ ಎಂಬ ಮಾತಿನ ಫ್ಯಾಕ್ಟರಿ ಮತ್ತು ಗುಲಾಬಿ ಹೂ | ಮಹಾಬಲ ಸೀತಾಳಬಾವಿ |
| 18 | ಮುಸುಕು | ತೇಜಸ್ವಿನಿ ಹೆಗಡೆ |
| 19 | ಶಲ್ಯ | ಡಾ. ಕಣಾದರಾಘವ.ಎನ್ |
| 20 | ಸಾವಿನ ಮನೆ | ವೈ. ಎಂ. ಶರಣ್ ಹಂಪಿ |






ವೆಬ್ ಪತ್ರಿಕೋದ್ಯಮದಲ್ಲಿ ಅವಧಿ ಉತ್ತಮವಾಗಿ ಬರುತ್ತಿದೆಯಾದರೂ, ಇದು ಬಿತ್ತರಿಸಬೆಕಾದ ಸಂಗತಿಗಳು ಇನ್ನಷ್ಟು ವ್ಯಾಪಕತೆ ಪಡೆದುಕೊಳ್ಳಬೇಕಾಗಿದೆ ಎಂಬುದು ನನ್ನ ಅನಿಸಿಕೆ. —ಎಂ.ಸೋಮೇಶ ಉಪ್ಪಾರ. ಮರಿಯಮ್ಮಹಳ್ಳಿ
ಅಕ್ಕ