
ಜಿ ಎನ್ ನಾಗರಾಜ್
ವಿಧಾನ ಸಭೆಯಲ್ಲಿ ಚರ್ಚೆ, ಮುಖ್ಯಮಂತ್ರಿಗಳ ಉತ್ತರದ ನಂತರ ಬಹಳ ಚರ್ಚೆ ನಡೆಯುತ್ತಿದೆ. ವೇತನ ಚರ್ಚೆಯ ಬಗ್ಗೆ ಕೆಲ ಅಂಶಗಳು.
* ಈ ಯೋಜನೆಯನ್ನು ಪೂರ್ವ ಪ್ರಾಥಮಿಕ ಶಿಕ್ಷಣದ ಒಂದು ಸಾಧನವಾಗಿ, ಅದರ ಜೊತೆಗೆ ಶಿಶು ಅಭಿವೃದ್ಧಿಯನ್ನು ಮೇಳವಿಸಿ ಒಂದು ಪೂರ್ಣ ಪ್ರಮಾಣದ ಯೋಜನೆಯಾಗಿ ಮಾಡದೆ ಕೇವಲ ಅಲ್ಪ ಸಮಯದ ಗೌರವಧನದ ಕೆಲಸವಾಗಿ ಪರಿಗಣಿಸಿದ್ದು ಅಂದಿನ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೂಲ ಅಪರಾಧ.
* ಮುಂದೆ ಕೆಜಿ- ಕಿಂಡರ್ ಗಾರ್ಟನ್ ಶಿಕ್ಷಣ ಪ್ರಾಮುಖ್ಯತೆ ಪಡೆದುಕೊಂಡ ಮೇಲೂ ಮುಂದಿನ ಯಾವ ಕೇಂದ್ರ ಸರ್ಕಾರವೂ ಇದನ್ನು ಮಾರ್ಪಡಿಸದಿದ್ದದ್ದು ಬಡ ಮಕ್ಕಳ ಶಿಕ್ಷಣದ ಮೇಲಿನ ಅಲಕ್ಷ್ಯ ಮತ್ತು ಧಾಳಿ.
* ೧೯೫೭ ರ ಪ್ರಥಮ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕಮ್ಯೂನಿಸ್ಟ್ ಪಕ್ಷ, ನಂತರ ೧೯೬೭ ರಲ್ಲಿ ತಮಿಳುನಾಡಿನ ಡಿಎಂಕೆ, ೧೯೮೩ ರ ನಂತರ ಕರ್ನಾಟಕದ ಜನತಾ ಪಕ್ಷ, ಆಂಧ್ರದ ತೆಲುಗುದೇಶಂ ಮೊದಲಾದ ಎಂಟು ರಾಜ್ಯ ಸರ್ಕಾರಗಳು , ಕಾಂಗ್ರೆಸ್, ಬಿಜೆಪಿ ಹೊರತಾಗಿ ಇತರೆಲ್ಕ ರಾಜಕೀಯ ಪಕ್ಷಗಳು ಜ್ಯೋತಿ ಬಸುರವರ ನೇತೃತ್ವದಲ್ಲಿ ಮಾಡಿದ ಒಕ್ಕೊರಲ ಒತ್ತಾಯ – ರಾಜ್ಯಗಳಿಗೆ ದೇಶದ ತೆರಿಗೆ ಸಂಪನ್ಮೂಲದಲ್ಲಿ ಶೇಕಡಾ ೭೫ ಭಾಗ ರಾಜ್ಯಗಳಿಗೆ ನೀಡಬೇಕು. ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಸಂಪನ್ಮೂಲಗಳ ಜೊತೆಗೆ ರಾಜ್ಯಗಳಿಗೆ ವರ್ಗಾಯಿಸಬೇಕು ಎಂದು . ಅದನ್ನುಕಾಂಗ್ರೆಸ್ ಕೇಂದ್ರ ಸರ್ಕಾರ ತಿರಸ್ಕರಿಸಿತು.
* ಇತ್ತೀಚೆಗೆ ಜಾಗತೀಕರಣ ತಂದ ಕಾಂಗ್ರೆಸ್ ಹಾಗೂ ನಂತರದ ಬಿಜೆಪಿ ಸರ್ಕಾರಗಳು ರಾಜ್ಯ ಸರ್ಕಾರಗಳ ಅಧಿಕಾರ, ಸಂಪನ್ಮೂಲಗಳ ಮೇಲೆ ನಿತ್ಯ ಧಾಳಿ ನಡೆಸುತ್ತಾ ಬಂದಿವೆ. ೧೯೯೬ ರ ಸಂಯುಕ್ತ ರಂಗ ಸರ್ಕಾರ ಬಹಳ ಸ್ವಲ್ಪ ಮಾತ್ರ ಉತ್ತಮ ಪಡಿಸಲು ಪ್ರಯತ್ನಿಸಿತು.
* ಈಗಿನ ಮೋದಿ ಬಿಜೆಪಿ ಸರ್ಕಾರ ರಭಸದಿಂದ ರಾಜ್ಯಗಳ ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತಿದೆ. ಅದರ ಫಲವೇ ೯೦: ೧೦ ಪ್ರಮಾಣವನ್ನು ೬೦:೪೦ ಭಾಗವನ್ನಾಗಿ ಪರಿವರ್ತಿಸಿದ್ದು. ನೀತಿ ಆಯೋಗ ರದ್ದು , ಸರ್ವ ಶಿಕ್ಷಣ ಅಭಿಯಾನ ಮೊದಲಾದ ಅನೇಕ ಯೋಜನೆಗಳಲ್ಲಿ ಕಡಿತ ಮಾಡಿದೆ.
* ಇಂದು ದೊಡ್ಡ ಗದ್ದಲ ಮಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರು, ಸಂಸದರು ಒಮ್ಮೆಯೂ ಈ ಯಾವ ಬಗ್ಗೆಯೂ ದನಿಯೆತ್ತಲಿಲ್ಲ.
* ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ದೃಢವಾಗಿ, ಬಲವಾಗಿ ವಿರೋಧಿಸಲಿಲ್ಲ. ಜನರಿಗೆ ಈ ಬಗ್ಗೆ ಸಾರಿ ಹೇಳಲಿಲ್ಲ . ಕೇಂದ್ರ ಸರ್ಕಾರಕ್ಕೆ ನಿಯೋಗಗಳನ್ನು ಕೊಂಡೊಯ್ದು ಪ್ರತಿಭಟಿಸಲಿಲ್ಲ . ರಾಷ್ಟ್ರೀಯ ಅಭಿವೃದ್ಧಿ ಪರಿಷತ್ತಿನ ಸಭೆಗಳಲ್ಲಿ ಪ್ರಬಲ ದನಿಯೆತ್ತಲಿಲ್ಲ. ರಾಜ್ಯದ ಜನತೆಯನ್ನು ಕೂಡ ಈ ಬಗ್ಗೆ ಹೋರಾಟಕ್ಕೆ ಇಳಿಸಬಹುದಾಗಿತ್ತು . ಇಳಿಸಲಿಲ್ಲ.
* ಇದರ ಅರ್ಥ ರಾಜ್ಯ ಸರ್ಕಾರ ಕೇಂದ್ರದ ಈ ಹೇರಿಕೆಯನ್ನು ಒಪ್ಪಿಕೊಂಡಿದೆ ಎಂದೇ ಅರ್ಥ. ಈ ಮೌನ ಒಪ್ಪಿಗೆ ನೀಡಿದ ಮೇಲೆ ಅದರಂತೆ ರಾಜ್ಯ ಸರ್ಕಾರವೇ ಹೊಣೆಯನ್ನು ಹೊರಬೇಕು.
* ಕಮ್ಯೂನಿಸ್ಟ್ ನೇತೃತ್ವದ ಎಡರಂಗ ಸರ್ಕಾರಗಳು ನಿರಂತರವಾಗಿ ಈ ಬಗ್ಗೆ ಪ್ರಬಲ ದನಿಯೆತ್ತಿವೆ. ಅಖಿಲ ಭಾರತ ಕಾರ್ಮಿಕ ಮುಷ್ಕರಗಳ ಒಂದು ಮುಖ್ಯ ಒತ್ತಾಯಗಳಲ್ಲಿ ಅಂಗನವಾಡಿಗಳಿಗೆ ಹಣ ಕಡಿತವೂ ಸೇರಿದೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿಯೂ ಒಮ್ಮೆಯೂ ಈ ಪ್ರಯತ್ನಗಳನ್ನು ಬೆಂಬಲಿಸಲಿಲ್ಲ .
* ಆದರೂ ಕೇರಳ ಎಡರಂಗ ಸರ್ಕಾರ ಅಂಗನವಾಡಿ ನೌಕರರ ವೇತನ ೧೦,೦೦೦ ನೀಡುವುದರಲ್ಲಿ ವ ಪಡಿತರದಲ್ಲಿ ಅಕ್ಕಿ ಜೊತೆಗೆ ಬೇಳೆ, ಬೇಳೆಕಾಳುಗಳು, ಎಣ್ಣೆ, ಮೆಣಸಿನಕಾಯಿ ಮೊದಲಾದ ಅನೇಕ ಅಗತ್ಯ ವಸ್ತುಗಳನ್ನು ನೀಡುವುದರಲ್ಲಿ, ಮಾಸಿಕ ವೇತನಗಳನ್ನು ೧೦೦೦ ರೂಗಿಂತ ಹೆಚ್ಚಿಸುವುದರಲ್ಲಿ ( ರಾಜ್ಯದಲ್ಲಿ ಕೇವಲ ೫೦೦ ) ಕೇಂದ್ರದ ಮೇಲೆ ಹೊಣೆ ಹಾಕುತ್ತಾ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ.
* ಕರ್ನಾಟಕಕ್ಕಿಂತ ಬಹಳ ಕಡಿಮೆ ಬಜೆಟ್ ಇರುವ ಕೇರಳದಲ್ಲಿ ಅಂಗನವಾಡಿಯವರಿಗೆ , ಇತರೆಲ್ಲಾ ದುಡಿವ ಜನರಿಗೆ , ಬಡ ಜನರಿಗೆ ಇರುವ ಪಾಲು ಕರ್ನಾಟಕ ಬಜೆಟ್ ನಲ್ಲಿ ಏಕಿಲ್ಲ ?
ಕರ್ನಾಟಕದಲ್ಲಿ ಇರುವ ಹೆಚ್ಚಿನ ಸಂಪನ್ಮೂಲವನ್ನು ಬಳಸಿ ಹೆಚ್ಚು ಆದಾಯ ಏಕೆ ಪಡೆದುಕೊಳ್ಳುತ್ತಿಲ್ಲ.?
ಈ ಪ್ರಶ್ನೆಗಳನ್ನು ಎತ್ರಬೇಕಾಗಿದೆ. ಅಂಗನವಾಡಿಯ ತಾಯಂದಿರಿಗೆ ನ್ಯಾಯ ಸಲ್ಲಿಸಿ. ಕನಿಷ್ಠ ೧೦,೦೦೦ ರೂ ನೀಡಬೇಕು .
ಕರ್ನಾಟಕ ರಾಜ್ಯ ಸರ್ಕಾರ , ಮೋದಿ ಸರ್ಕಾರ ರಾಜ್ಯ ಸರ್ಕಾರಗಳ ಅಧಿಕಾರ ಕಸಿದುಕೊಳ್ಳುವ ಪ್ರಯತ್ನಗಳ ವಿರುದ್ಧ ಪ್ರಬಲ ದನಿಯೆತ್ತಲಿ. ಹೋರಾಟ ಮಾಡಲಿ. ನಾವೆಲ್ಲ ಬೆಂಬಲಿಸೋಣ.






0 Comments