ಅಂಗನವಾಡಿ ನೌಕರರ ಬೇಡಿಕೆಗಳ ಕುರಿತು
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಫೆಡರೇಷನ್ (CITU)
ಪ್ರಕಟಿಸಿರುವ ಈ ವಿವರವಾದ ಮನವಿಪತ್ರ ಓದಿ.
ಕನಿಷ್ಟ ವೇತನ ನೀಡದಿರುವುದನ್ನು ವಿರೋಧಿಸಿ
ಅಂಗನವಾಡಿ ನೌಕರರ ಅನಿರ್ದಿಷ್ಟ ಹೋರಾಟ
ಮಾನ್ಯರೇ
1975 ರಲ್ಲಿ ಮಹಿಳೆಯರ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಪ್ರಾರಂಭವಾದ ಯೋಜನೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ,
ಗರ್ಭಿಣಿ ಮತ್ತು ಬಾಣಂತಿಯರು ಸಾಂಪ್ರದಾಯಿಕ ಮನೋಭಾವದಿಂದ ವೈಜ್ಞಾನಿಕ ಚಿಕಿತ್ಸೆಗಳನ್ನು ದೂರ ಇಡುತ್ತಿದ್ದಾಗ ಅವರನ್ನು ಕಂದಾಚಾರದಿಂದ ಹೊರತಂದು ನಾಗರಿಕ ಸಮಾಜಕ್ಕೆ ಒಗ್ಗಿಕೊಳ್ಳುವಂತೆ ಮಾಡುವಲ್ಲಿ ಅಂಗನವಾಡಿ ನೌಕರರ ಸೇವೆ ಅಸಾಧಾರಣವಾದದ್ದು.
ಅಂಗನವಾಡಿ ಕಾರ್ಯ ಕರ್ತೆಯರು & ಸಹಾಯಕಿಯರು ನಿರ್ವಹಿಸುವ ಜವಾಬ್ದಾರಿಗಳು
• ಪ್ರಾರಂಭಿಕ ಶಿಶು ಆರೈಕೆ, ಶಿಕ್ಷಣ ಹಾಗೂ ಅಭಿವೃದ್ಧಿ(ಇಸಿಸಿಡಿ)
• ಆರೈಕೆ ಹಾಗೂ ಪೌಷ್ಠಿಕ ಬಗ್ಗೆ ಸಲಹೆ
• ಆರೋಗ್ಯ ಸೇವೆ
• ಸಮುದಾಯ ಒಟ್ಟುಗೂಡಿಸುವುದು, ಅರಿವು ಮತ್ತು ಮಾಹಿತಿ ಶಿಕ್ಷಣ ಸಂವಹನ
ಈ ಕೆಲಸಗಳೊಟ್ಟಿಗೆ ರಾಜ್ಯದಲ್ಲಿ 20 ಲಕ್ಷ ಮಹಿಳೆಯರನ್ನೊಳಗೊಂಡ 1.40 ಲಕ್ಷ ಸ್ತ್ರೀ ಶಕ್ತಿ ಗುಂಪುಗಳ ರಚನೆ ಮತ್ತು ಕಾರ್ಯಚರಣೆ ಹಾಗೂ 18,65,266 ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ಗಳನ್ನು ಕೊಡಲು ಫಲಾನುಭವಿಗಳನ್ನು ಗುರುತಿಸಿ ಬಾಂಡ್ ಕೊಡಿಸುವತನಕ ಎಲ್ಲಾ ಹಂತದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.
ಇದಲ್ಲದೆ ಚುನಾವಣೆಗಳಿಗೆ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ಕೆಲಸಗಳು ಓಟಿನ ಚೀಟಿ ಬರೆದು ಹಂಚುವುದು, ಬೂತ್ ಕೆಲಸಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರುವ ಹಲವು ತರಹದ ಗಣತಿಗಳು, ಆರೋಗ್ಯ ಇಲಾಖೆಯ ಕೆಲಸಗಳನ್ನು ಮಾಡಬೇಕೆಂದಿದೆ. ಅಧಿಕೃತವಾಗಿ ದಿನಕ್ಕೆ 6 1/2 ಗಂಟೆ ಕೆಲಸ ಮಾಡುವುದರ ಜತೆಗೆ, ಯಾವುದೇ ಸಮಯದಲ್ಲಿ ಫಲಾನುಭವಿಗಳ ಕೋರಿಕೆಯಂತೆ ಹಾಗೂ ಅಧಿಕಾರಿಗಳ ನಿರ್ದೇಶನದಂತೆ ಹೆಚ್ಚು ಸಮಯದ ಕೆಲಸವನ್ನು ದಿನನಿತ್ಯ ಮಾಡುತ್ತಿದ್ದಾರೆ.
ಉದಾಹರಣೆಗೆ ಭಾಗ್ಯಲಕ್ಷ್ಮೀ, ಸ್ತ್ರೀಶಕ್ತಿ ಕೆಲಸಗಳು ಸಂಜೆಯಲ್ಲಿಯೇ ನಡೆಯುವುದಿದೆ, ಹೀಗೆ ಅನಧಿಕೃತವಾಗಿಯೇ ಹೆಚ್ಚು ಕೆಲಸಗಳನ್ನು ನಿರ್ವಹಿಸಬೇಕಾಗಿದೆ.
ಅಂಗನವಾಡಿ ಕಾರ್ಯಕರ್ತೆಯರು ಪ್ರಭಾರಿಯಾಗಿ ಎರಡು ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುವ ಸಂದರ್ಭಗಳಲ್ಲಿ ಪ್ರತಿ ತಿಂಗಳಿಗೆ ಕೇವಲ ರೂ. 50/- ಮಾತ್ರ ಹೆಚ್ಚುವರಿ ಭತ್ಯೆ ನೀಡಲಾಗುತ್ತಿದೆ. ಮಿನಿ ಅಂಗನವಾಡಿಕೇಂದ್ರಗಳಲ್ಲಿ ಕಾರ್ಯಕರ್ತೆ ಹಾಗು ಸಹಾಯಕಿ ಈ ಎರಡು ಜವಾಬ್ದಾರಿಗಳನ್ನು ಒಬ್ಬರೆ ನಿರ್ವಹಿಸಿದರು ಕೂಡ ಕೇವಲ ರೂ. 3750/- ಭತ್ಯೆಮಾತ್ರ ಪಡೆಯುತ್ತಿದ್ದಾರೆ.
6 ವರ್ಷದೊಳಗಿನ ಮಕ್ಕಳಲ್ಲಿ 3 ರಿಂದ 6 ವರ್ಷದೊಳಗಿನ ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ದಿನಕ್ಕೆ ಕನಿಷ್ಠ 20 ರಿಂದ 40 ಮಕ್ಕಳು ಬರುತ್ತಾರೆ. ಇವರನ್ನು ಮನೆಯಿಂದ ಕರೆದು ಕೊಂಡು ಬರುವುದು ಹಾಗು ವಾಪಸ್ ಮನೆಗೆ ಬಿಡುವುದರ ಜತೆಗೆ ಶಾಲೆಯಲ್ಲಿ ಇರುವ ಸಂದರ್ಭದಲ್ಲಿ ಮಕ್ಕಳಿಗೆ ಬೇಕಾದ ಸರ್ವ ಅಗತ್ಯ ಪೋಷಣೆಗಳನ್ನು ಪೂರೈಸುವುದು, ದಿನಕ್ಕೆ 2 ಬಾರಿ ಪೂರಕ ಪೌಷ್ಠಿಕ ಆಹಾರ ನೀಡುವುದು ಮುಂತಾದ ಕೆಲಸಗಳನ್ನು ಈ ಕಾರ್ಯಕರ್ತೆಯರು ಹಾಗು ಸಹಾಯಕಿಯರು ಮಾಡುತ್ತಿದ್ದಾರೆ.
ಹೆಚ್ಚು ಕಡಿಮೆ ಬೇಬಿ ಕ್ರಷ್ ಮತ್ತು ಎಲ್.ಕೆ.ಜಿ.- ಯು.ಕೆ.ಜಿ ಟೀಚರ್ಗಳ ಕೆಲಸ ಹಾಗೂ ಗರ್ಭಿಣಿ ಬಾಣಂತಿಯರಿಗೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡುವ ಕೆಲಸಗಳನ್ನು ಅಂದರೆ 5 ಜನರು ಮಾಡಬೇಕಾದಂತಹ ಕೆಲಸಗಳನ್ನು ಇಬ್ಬರೇ ಮಾಡುತ್ತಾರೆ.
1948 ರ ಕನಿಷ್ಠ ವೇತನ ಕಾಯ್ದೆಯ ಪ್ರಕಾರ ಪ್ರತಿಯೊಬ್ಬ ಬೆವರು ಕಾರ್ಮಿಕರಿಗೂ ಬದುಕುಳಿಯುವ ಕನಿಷ್ಠ ವೇತನವನ್ನು ಬೆಲೆಯೇರಿಕೆಯ ಆಧಾರದಲ್ಲಿ ನಿಗಧಿ ಪಡಿಸಬೇಕೆಂದಿದೆ, 2012 ರಲ್ಲಿ 45 ನೇ ILC ( Indian labour conference) ಸ್ಕೀಂಗಳಲ್ಲಿ ಕೆಲಸ ಮಾಡುವವರನ್ನು ಕೆಲಸಗಾರರು ಎಂದೂ ಪರಿಗಣಿಸಿ ಕನಿಷ್ಠ ಕೂಲಿ ನಿಗದಿ ಮಾಡಬೇಕೆಂದೂ ಶಿಫಾರಸ್ಸು ಆಗಿದೆ.
ನಮ್ಮ ದೇಶದ ಸಂವಿಧಾನವೂ ಪ್ರತಿಯೊಬ್ಬ ವ್ಯಕ್ತಿಯ ಘನತೆಯ ಬದುಕನ್ನು ಖಾತ್ರಿ ಪಡಿಸಬೇಕೆಂದೂ ಪ್ರಭುತ್ವಗಳಿಗೆ ನಿರ್ದೇಶನ ನೀಡಿದೆ, 7 ನೇ ವೇತನ ಆಯೋಗ 18 ಸಾವಿರ ಕನಿಷ್ಠ ವೇತನ ನೀಡಬೇಕೆಂದೂ ನಿರ್ಧೇಶಿಸಿದೆ. 2016 ಅಕ್ಟೋಬರ್ 21 ರಂದು ಮಾನ್ಯ ಸುಪ್ರೀಂ ಕೋರ್ಟ್ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡಬೇಕೆಂದೂ ನಿರ್ದೇಶಿಸಿದೆ.
ಇವೆಲ್ಲಾ ಶಿಫಾರಸ್ಸುಗಳಿದ್ದರೂ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಇವರ ಕನಿಷ್ಠ ವೇತನವನ್ನು ನಿರಾಕರಿಸುತ್ತಾ ಬಂದಿದೆ.
ತಮಿಳು ನಾಡು, ಕೇರಳ, ಗೋವಾ, ಪಾಂಡಿಚೇರಿಗಳಲ್ಲಿ 10 ಸಾವಿರ ದಿಂದ 14 ಸಾವಿರ ಕನಿಷ್ಠ ವೇತನವಿದೆ.
ರಾಜ್ಯದಲ್ಲಿ 2016-17 ರ ಬಜೆಟ್ ಒಂದು ಲಕ್ಷ ಎಂಭತ್ತು ಸಾವಿರಕೋಟಿ ರೂ ಗಳಷ್ಟು ಬಜೆಟ್ ನ್ನು ಮಂಡಿಸಲಾಗಿದೆ. 2017-18 ರಲ್ಲಿ ಬಹುಶಃ 2 ಲಕ್ಷ ಕೋಟಿ ಬಜೆಟ್ನ್ನು ಮಂಡಿಸಬಹುದೆಂಬ ಅಂದಾಜಿದೆ.
ಈ ಬಜೆಟ್ ನಲ್ಲಿ 7 ನೇ ವೇತನ ಆಯೋಗದ ಶಿಫಾರಸ್ಸು ಜಾರಿಯಾಗುವ ತನಕ ಕೆಳಕಂಡ ಕನಿಷ್ಠ ವೇತನವನ್ನು ಕೊಡಬೇಕೆಂದು ವಿನಂತಿಸುತ್ತೇವೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹೆಚ್ಚಾಳ ಮಾಡಬೇಕಾದದ್ದು ತಿಂಗಳಿಗೆ ಬೇಕಾಗಿರುವ ಅನುದಾನ
ಕಾರ್ಯಕರ್ತೆಗೆ
3000 3000 4000 25 ಕೋಟಿ
ಸಹಾಯಕಿ
1500 1500 4500 27 ಕೋಟಿ
ಒಂದು ವರ್ಷಕ್ಕೆ 612 ಕೋಟಿಯ ಅಗತ್ಯವಿದೆ. ಈ ಹಣವನ್ನು ಬಜೆಟ್ನಲ್ಲಿ ತೆಗೆದಿರಿಸಬೇಕು ಹಾಗೂ ಸೇವಾ ಜೇಷ್ಠತೆ ಆಧಾರದಲ್ಲಿ ಭತ್ಯೆ ನೀಡುವುದು ಈ ಬಾರಿ ಬಜೆಟ್ನಲ್ಲಿ ಕೇವಲ 1000 ಮತ್ತು 500 ರೂ.ಮಾತ್ರ ಹೆಚ್ಚಿಸಲಾಗಿದೆ. ಹಲವು ವರ್ಷಗಳಿಂದ ಎಷ್ಟೇ ಚಳುವಳಿಗಳನ್ನು ನಡೆಸಿದರೂ ಸರ್ಕಾರ ಪರಿಗಣನೆ ಮಾಡದಿರುವುದನ್ನು ವಿರೋಧಿಸಿ ಈ ಅನಿರ್ದಿಷ್ಟ ಹೋರಾಟ ಅನಿವಾರ್ಯವಾಗಿ ನಡೆಸಲಾಗುತ್ತಿದೆ.
ವಂದನೆಗಳೊಂದಿಗೆ
ಎಸ್.ವರಲಕ್ಷ್ಮಿ
ಅಧ್ಯಕ್ಷರು
ಹೆಚ್.ಎಸ್.ಸುನಂದ
ಪ್ರಧಾನ ಕಾರ್ಯದರ್ಶಿ






0 Comments