‘ಅವಧಿ’ಯಲ್ಲಿ ‘ಏಲಾವನ’ ಅಂಕಣ ಬರೆದು ಸಾಕಷ್ಟು ಓದುಗರ ಮನಗೆದ್ದ ನಾಗಶ್ರೀ ಶ್ರೀರಕ್ಷಾ ಇನ್ನಿಲ್ಲ.
ಆಕೆಯ ಸಹಪಾಠಿ ಗೆಳತಿ ಡಿ ಎಸ್ ಶ್ರೀಕಲಾ ಗೆಳತಿಯನ್ನು ಕಂಬನಿದುಂಬಿ ಇಲ್ಲಿ ನೆನೆದಿದ್ದಾರೆ
ಶ್ರೀಕಲಾ ಡಿ ಎಸ್
“After a loooong time… But wrong time” ಹೀಗಂದಿದ್ದಳು ನಾಗಶ್ರೀ ಕಳೆದ ಭಾನುವಾರ. ಆಳ್ವಾಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಹೊರಬಂದವರು ನಂತರ ಸಿಕ್ಕಿದ್ದೇ ಇಲ್ಲ. ಇನ್ನು ಸಿಗುವುದೂ ಇಲ್ಲ ಎಂಬುದನ್ನು ಹೀಗೆ ಬರೆವಾಗ ಒಳೆಗೆಲ್ಲೋ ಚುಚ್ಚುತ್ತದೆ. ಅವಳ ದೇಹದ ನೋವು ಹೀಗಾದರೂ ಮುಗಿಯಿತಲ್ಲ ಎಂದುಕೊಳ್ಳುವಾಗ ಅವಳ ಕಣ್ಣಲ್ಲಿ ಕಂಡ ಅದಮ್ಯ ಬದುಕುವ ಆಸೆ ನೆನಪಾಗಿ ಹಿಂಸೆಯಾಗುತ್ತದೆ.
ಆಸ್ಪತ್ರೆಯ ಬೆಡ್ ಮೇಲೆ ಮನೋಬಲವನ್ನು ಗಟ್ಟಿ ಯಾಗಿಯೇ ಹಿಡಿದು ಮಲಗಿದ್ದ ಅವಳ ಕೈಯನ್ನು ತಟ್ಟಿ, “ಮತ್ತೆ ಸಿಗೋಣ. ಬೇಗ ಹುಶಾರಾಗು. You are strong” ಅಂದಿದ್ದೆ. ಆಗವಳು, ” ಸ್ವಿಟ್ಜರ್ಲ್ಯಾಂಡ್ ನಲ್ಲಾ?” ಎಂದು ಉಸಿರು ಹಿಡಿಹಿಡಿದು ಕೇಳಿದ್ದಳು. ನಾವು ಕಾಲೇಜಲ್ಲಿರುವಾಗ ‘bye’ ಎನ್ನುವಾಗೆಲ್ಲಾ “ಮತ್ತೆ ಸ್ವಿಟ್ಜರ್ಲ್ಯಾಂಡ್ ನಲ್ಲಿ ಸಿಗೋಣ” ಎಂದು ತಮಾಷೆ ಮಾಡಿಕೊಳ್ಳುತ್ತಿದ್ದೆವು.
“ಎಲ್ಲರೂ ಒಟ್ಟಾಗಿ ಒಂದ್ಸಾರಿ ಆ ಸ್ವಿಟ್ಜರ್ಲ್ಯಾಂಡ್ ಗೆ ಹೋಗೋಣ ಬಿಡು” ಅಂದೆ.
ನಾಗಶ್ರೀ… ಎಲ್ಲವನ್ನೂ ಮೀರಿದ ಜಗತ್ತಿಗೆ ಎಲ್ಲರಿಗಿಂತ ಮೊದಲೇ ಹೋಗಿಬಿಟ್ಯಲ್ಲಾ?
ಅವಳದ್ದೇ ಕವನದಲ್ಲಿ ನನ್ನ ಅತ್ಯಂತ ಮೆಚ್ಚಿನ ಸಾಲೊಂದು ಹೀಗಿದೆ-
“ಎಲೆಯ ಪರಿಮಳದಲ್ಲಿ ನಗುವ
ನೆಲದ ಬೇರಿನಂತೆ ಸುಮ್ಮನಿರಬೇಕು”
ನಾಗಶ್ರೀ ಇದ್ದದ್ದೂ ಹಾಗೇ… ನೆಲದ ಬೇರಿನಂತೆ…






“ಎಲೆಯ ಪರಿಮಳದಲ್ಲಿ ನಗುವ
ನೆಲದ ಬೇರಿನಂತೆ ಸುಮ್ಮನಿರಬೇಕು”…. ವ್ಹಾ… ಅದ್ಭುತ ಸಾಲುಗಳು .. Hats off ನಾಗಶ್ರೀ. . ನೂರ್ಕಾಲ ಇರಬೇಕಾಗಿತ್ತು…. ನೋವಾಗುತ್ತದೆ .