ರೇಣುಕಾ ಚಿತ್ರದುರ್ಗ
ಕೃಪಾಕರ ಸೇನಾನಿ ಇವರಿಬ್ಬರ ಬಗ್ಗೆ ಯಾರಿಗೆ ಗೊತ್ತಿಲ್ಲ!
ಇವರಿಬ್ಬರ ಕಾಡಿನ ದಿನಚರಿಗಳು, ಸಂಶೋಧನೆಗಳು ಎಲ್ಲರಿಗೂ ಗೊತ್ತು. ಕಾಡು ನಾಯಿಗಳನ್ನು ಹದಿನೈದು ವರ್ಷಗಳ ಕಾಲ ಹಿಂಬಾಲಿಸಿದ ಅನುಭವಗಳ ಜೊತೆ ಬೋನಸ್ ಎಂಬಂತೆ ಕಾಡಿನ ಇತರ ಅನಿರ್ವಚನೀಯ ಅನುಭವಗಳು ಅವರಿಗಾಗಿವೆ. ಅವನ್ನೆಲ್ಲ ಕಣ್ಣಿಗೆ ಕಟ್ಟುವಂತೆ ‘ಕೆನ್ನಾಯಿಯ ಜಾಡಿನಲ್ಲಿ’ ಈ ಪುಸ್ತಕದಲ್ಲಿ ಕಟ್ಟಿಕೊಡುತ್ತಾರೆ. ಅದರಲ್ಲಿ ಹನ್ನೊಂದನೇ ಅಧ್ಯಾಯ “ಹುಲಿಯ ಜಾಡಿನಲ್ಲಿ” ಓದುವಾಗ ನಾವೇ ಹುಲಿಯನ್ನು ಹಿಂಬಾಲಿಸ್ತ ಇದಿವೇನೋ ಎಂಬ ಅನುಭವ ನಮ್ಮ ಮನಸಿಗಾಗುತ್ತದೆ.
ಲೇಖಕರು ತಮ್ಮ ಕಾಡು ಪ್ರಾಣಿಗಳ ಅಧ್ಯಯನಕ್ಕಾಗಿ ಕಾಡಿನ ಅಂಚಿಗೆ ಜಾಗ ಕೊಂಡು ಮನೆ ಕಟ್ಟಿಕೊಂಡಿರುತ್ತಾರೆ. ಆದ್ದರಿಂದ ಅವರಿಗೆ ನಿತ್ಯ ಒಂದಿಲ್ಲೊಂದು ಕಾಡುಪ್ರಾಣಿಗಳ ಸುಳಿವು ಸಿಗುತ್ತಲೇ ಇರುತ್ತೆ. ಜಿಂಕೆ, ಕಾಡೆಮ್ಮೆ, ಆನೆ ಕಾಡುಹಂದಿಗಳಂತೂ ದಿನಾ ನೋಡಲಿಕ್ಕೆ ಲಭ್ಯ.
ಆದರೆ ಅಂದು ಲೇಖಕರ ಕಿವಿ ಮತ್ತು ಮನಸ್ಸಿಗೆ ತನ್ನ ಮನೆಯ ಬಳಿಯೇ ಹುಲಿಯ ಉಪಸ್ಥಿತಿಯ ಅನುಭವವಾದಾಗ. ಗುರುತುಗಳನ್ನು ಆಧರಿಸಿ ಹುಲಿಯ ಜಾಡು ಹಿಡಿದು ಹುಲಿಯನ್ನು ಹಿಂಬಾಲಿಸುತ್ತಾರೆ. ಕೇವಲ ಐದತ್ತು ನಿಮಿಷಗಳ ಅಂತರದಲ್ಲಿ ಹುಲಿಯನ್ನು ಹಿಂಬಾಲಿಸುವ ಅವರ ಅನುಭವಗಳು, ಹುಲಿ ಆಗ ತಾನೇ ಅಲ್ಲಿ ನಡೆದು ಹೋದದ್ದನ್ನು, ಹುಲ್ಲಿನ ಮೇಲೆ ಉರುಳಾಡಿದ್ದನ್ನು, ನೀರು ಕುಡಿದದ್ದನ್ನು, ನೀರಿನ ಗುಂಡಿಯಲ್ಲಿ ಹೊರಳಾಡಿದ್ದನ್ನು ಬರೀ ಗುರುತು ಮಾತ್ರದಿಂದ ಅವರು ಹೇಳುತ್ತಾ ಸಾಗಿದರೆ ನಾವು ಕೂಡ ಅದೇ ಕಾಡಿನ ಮೌನದಲ್ಲಿ ಸದ್ದಿಲ್ಲದೇ ಅವರ ಜೊತೆಯಾದ ಹಾಗೆ ಭಾಸವಾಗುತ್ತೆ.
ಆಂತಿಮವಾಗಿ ಅವರ ಮನೆಯನ್ನು ತನ್ನ ರಾಜ್ಯದ ಆಡಳಿತಕ್ಕೆ ಸೇರಿಸಿಕೊಂಡ ಆ ಹುಲಿಯ ದರುಶನ ಲೇಖಕರಿಗೆ ಆಗುತ್ತಾ?? ಅನ್ನೋದನ್ನು ತಿಳಿಯಲು ನೀವು ಈ ಪುಸ್ತಕವನ್ನು ಓದಲೇ ಬೇಕು. ಈ ಅಧ್ಯಾಯವೊಂದೇ ಅಲ್ಲ ಇದರಂತಹ ಇನ್ನೂ ಇಪ್ಪತ್ತು ಅಧ್ಯಾಯಗಳಿವೆ ಒಮ್ಮೆ ಪುಸ್ತಕ ಕೈಗೆತ್ತಿಕೊಂಡರೆ ಕೆಳಗಿಡಲು ಮನಸು ಬಾರದಂತಹ ಕಾಡಿನಲ್ಲಿ ನಾವೇ ಕಳೆದು ಹೋಗುವಂತಹ ಅನುಭವ ಬರಹಗಳು. ನೀವೂ ಓದಿ
ಇವರಿಬ್ಬರೂ ವೀರಪ್ಪನ್ನೊಂದಿಗೆ ಕಳೆದ ಹದಿನಾಲ್ಕು ದಿನಗಳ ಕಥನ ಬಹಳ ಹಿಂದೆ ಸುಧಾದಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು. ಕುತೂಹಲ ಹುಟ್ಟಿಸುವ ಬರವಣಿಗೆ ಅವರದು. ಈ ವಿಮರ್ಶೆ ಓದಿದ ಮೇಲೆ ಪುಸ್ತಕವನ್ನು ಓದಿ ನೋಡಬೇಕು ಎನಿಸಿದೆ.