-ಜಿ ಎನ್ ಮೋಹನ್
ಮತ್ತೊಂದು ಮಕ್ಕಳ ದಿನಾಚರಣೆ ಬಂದಿದೆ. ರಿಯಾಲಿಟಿ ಶೋಗಳ, ಎದೆ ತುಂಬಿ ಹಾಡುವ ಈ ದಿನಗಳ ಕಾಲದಲ್ಲಿ ಮಕ್ಕಳ ರಂಗಭೂಮಿ ಮರತೇ ಹೋಯಿತೇ ಎನ್ನುವ ಆತಂಕ ನಿಧಾನವಾಗಿ ಹೊಸ್ತಿಲು ದಾಟಿ ಒಳಗೆ ಬರುತ್ತಿದೆ. ವರ್ಷಕ್ಕೆ ಒಂದಾದರೂ ಮಕ್ಕಳ ನಾಟಕವನ್ನು ರಂಗಕ್ಕೇರಿಸಿಯೇ ತೀರುತ್ತಿದ್ದ ಪ್ರೇಮಾ ಕಾರಂತ್ ಇಲ್ಲ. ಇವರಿಗೆ ಸಾಥಿಯಾಗಿದ್ದ ಬಿ ವಿ ಕಾರಂತರೂ ಇಲ್ಲ. ಈ ಇಲ್ಲ, ಇಲ್ಲಗಳ ಮಧ್ಯೆಯೇ ಕಾರಂತ, ಪ್ರೇಮಾ ಕಾರಂತರ ಹೃದಯಕ್ಕೆ ಹತ್ತಿರವಾದ ನಿರ್ದೇಶಕಿ ಎನ್ ಮಂಗಳಾ ಹೊಸ ನಾಟಕವನ್ನು ಕೈಗೆತ್ತಿಕೊಂಡಿದ್ದಾರೆ.
ಕುವೆಂಪು ಅವರ ‘ನರಿಗಳಿಗೇಕೆ ಕೋಡಿಲ್ಲ’ ಕಥೆಯನ್ನು ರಂಗಕ್ಕೇರಿಸಲು ಸಜ್ಜಾಗಿರುವ ಮಂಗಳಾಗೆ ಇದು ತನಗೆ ರಂಗ ಪ್ರೀತಿಯ ಪರಿಚಯ ಮಾಡಿಕೊಟ್ಟವರಿಗೆ ಸಲ್ಲಿಸುತ್ತಿರುವ ಗೌರವವೂ ಹೌದು. ಬಿ ವಿ ಕಾರಂತರಿಗೆ ಮಂಗಳಾ ಅಭಿನಯದ ಬಗ್ಗೆ ಇನ್ನಿಲ್ಲದ ವಿಶ್ವಾಸವಿತ್ತು. ತಮ್ಮ ಆತ್ಮ ಚರಿತ್ರೆಯಲ್ಲಿ ಈ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ರಂಗಾಯಣದ ಗರಡಿಯಲ್ಲಿ ಪಳಗಿದ ಮಂಗಳಾ ಈಗ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿಯೂ ಗೆದ್ದು ನಿಂತಿದ್ದಾರೆ. ಕಾಮಿಡಿ, ಟ್ರ್ಯಾಜಿಡಿ, ಗಂಭೀರ, ಮಕ್ಕಳ ನಾಟಕ ಹೀಗೆ ಪ್ರತಿಯೊಂದನ್ನೂ ವಿಶ್ವಾಸದಿಂದ ರಂಗಕ್ಕೆ ತಂದು ಯಶಸ್ವಿಯಾಗಿದ್ದಾರೆ. ಧರೆಯೊಳಗಿನ ರಾಜಕಾರಣ, ಕಮಲಮಣಿ ಕಾಮಿಡಿ ಕಲ್ಯಾಣ, ಅರಹಂತ, ಈಗ ನರಿಗಳಿಗೇಕೆ ಕೋಡಿಲ್ಲ.
ಮಂಗಳಾಗೆ ಮಕ್ಕಳ ಜೊತೆ ಹೆಜ್ಜೆ ಹಾಕುವುದು ಎಂದರೆ ಇನ್ನಿಲ್ಲದ ಉತ್ಸಾಹ. ಆದರೆ ಈ ಬಾರಿ ಕೊಂಚ ಭಿನ್ನ. ಮಕ್ಕಳಿಗಾಗಿ ದೊಡ್ಡವರ ಜೊತೆ ಹೆಜ್ಜೆ ಹಾಕಿದ್ದಾರೆ. ತಮ್ಮ ‘ಸಂಚಾರಿ ಥಿಯೇಟ್ರು’ ವಿನಿಂದ ಅಭಿನಯಿಸುತ್ತಿರುವ ನಾಟಕಕ್ಕೆ ರಂಗ ರೂಪ ನೀಡುವಲ್ಲಿ ಶಾಂತಾ ನಾಗರಾಜ್ ಸಹಾ ಸಾಥ್ ನೀಡಿದ್ದಾರೆ. ಶಶಿದರ ಅಡಪ ರಂಗ ಸಜ್ಜಿಕೆ ಮಾಡುತ್ತಿದ್ದು, ಅರವಿಂದ ಕುಪ್ಲೀಕರ್ ಬೆಳಕು ನಿರ್ವಹಿಸುತ್ತಿದ್ದಾರೆ. ಎಂದಿನಂತೆ ಸಂಚಾರಿಯ ಸಂಗೀತದ ಐಕಾನ್ ಗಜಾನನ ಟಿ ನಾಯಕ್ ಈ ಬಾರಿಯೂ ದನಿ ನೀಡಿ, ಹಾರ್ಮೋನಿಯಂ ಹಿಡಿದಿದ್ದಾರೆ.
ನರಿಗಳಿಗೇಕೆ ಕೋಡಿಲ್ಲ ಅನ್ನೋ ಪ್ರಶ್ನೆ ನಮ್ಮನ್ನಂತೂ ಕಾಡುತ್ತಿದೆ. ನಿಮ್ಮನ್ನೂ ಈ ಪ್ರಶ್ನೆ ಕಾಡುತ್ತಿದ್ದರೆ ಈ ತಿಂಗಳ ೨೦ ಹಾಗೂ ೨೭ ರಂದು ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ. ಮಕ್ಕಳೊಂದಿಗೆ






0 Comments