ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊತ್ತಲ್ಲದ ಹೊತ್ತಲ್ಲಿ ಹೋಗಿ ಬಿಟ್ರಾ ಮೇಸ್ಟ್ರೆ…

ರವಿಕುಮಾರ್ ಟೆಲೆಕ್ಸ್

2016 ಬಿ.ಎಸ್ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ. 73 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಿವಮೊಗ್ಗ ಅದ್ಧೂರಿಯಾಗಿ ಸಜ್ಜುಗೊಂಡಿತ್ತು. ಸಮ್ಮೇಳನದ ಗೋಷ್ಟಿಗಳಲ್ಲಿ ಮಲೆನಾಡಿನ ಸಮಸ್ಯೆಗಳು ಮತ್ತು ನಾಡಿನ ಸೌಹಾರ್ದತೆ ವಿಷಯಗಳೂ ಇದ್ದು ಪ್ರಗತಿಪರ ಹೋರಾಟಗಾರ ಕಲ್ಕುಳಿ ವಿಠಲಹೆಗಡೆ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ಆಡಳಿತರೂಢ ಬಿಜೆಪಿ ಸೇರಿದಂತೆ ಸಂಘಪರಿವಾರದ ಕಾಲಾಳು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.

ಸಮ್ಮೇಳನದ ಸಂಭ್ರಮದಲ್ಲಿ ಹೆಗಲಿಗೊಂದು ಕನ್ನಡ ಶಲ್ಯ ಸುತ್ತಿಕೊಂಡು, ಬಗಲಿಗೆ ಪರ್ಸೊಂದನ್ನು ಸಿಕ್ಕಿಸಿಕೊಂಡು ಕನ್ನಡದ ನಿಜ ಪರಿಚಾರಕನಂತೆ ಸಿದ್ದತೆಯಲ್ಲಿ ತೊಡಗಿದ್ದ ಪ್ರೋ ಚಂದ್ರಶೇಖರ ಪಾಟೀಲ (ಚಂಪಾ) ಮೇಸ್ಟ್ರು ಯಾವ ವಿರೋಧಗಳಿಗೂ ಸೊಪ್ಪು ಹಾಕಲಿಲ್ಲ.

ಈ ಗೋಷ್ಟಿಗಳ ವೇದಿಕೆಗೆ ಎಬಿವಿಪಿ, ವಿಹೆಚ್ ಪಿ ಗಳು ನುಗ್ಗಿ ದಾಂಧಲೆ ನಡೆಸಿದವು. ಎಲ್ಲವನ್ನೂ ಮೇಸ್ಟ್ರು ದಿಟ್ಟವಾಗಿ ಎದುರಿಸಿದರು. ಅವರಿಗೆಲ್ಲಾ ತಮ್ಮದೇ ಧಾಟಿಯಲ್ಲಿ ಚಾಟಿ ಬೀಸಿದರು. ಸರ್ಕಾರದ ಪಾಲುದಾರ ಪಕ್ಷವಾಗಿದ್ದ ಬಿಜೆಪಿಯ ಆಟ ಚಂಪಾ ಮೇಸ್ಟ್ರು ಮುಂದೆ ಕೊನೆಗೂ ನಡೆಯಲಿಲ್ಲ.

ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ‌ ಕುಮಾರಸ್ವಾಮಿ ಅವರು ಸಮ್ಮೇಳನದಲ್ಲಿ ತಮಗೆ ಪ್ರಾಮುಖ್ಯತೆ ಕೊಡುತ್ತಿಲ್ಲ ಎಂದು ಸಮ್ಮೇಳನಕ್ಕೆ ಬರದಿರಲು ನಿರ್ಧರಿಸಿದರು. ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಕೇಳಿದ ಪ್ರಶ್ನೆ ಮೇಸ್ಟ್ರು ಕೊಟ್ಟ ಉತ್ತರ ಹೀಗಿತ್ತು.

‘ಅವ್ರು ( ಕುಮಾರಸ್ವಾಮಿ) ಗರಂ ಆಗಿದ್ದು ಖರೆ, ಆದರೆ ನಾನು ಅವ್ರನ್ನ ‘ನರಂ’ ಮಾಡಿನಿ. ಕಸಾಪ ಸರ್ಕಾರದ ಹಂಗ್ನಾಗ ಇಲ್ರಿ, ಇದು ಕನ್ನಡದ ಕೆಲಸ ಬರೋದು ಬಿಡೋದು ಅವ್ರಿಗಾ ಬಿಟ್ಟಿನಿ’.

ಕುಮಾರಸ್ವಾಮಿ ಸಮ್ಮೇಳನಕ್ಕೆ ಬರದೆ ಬೇರೆ ದಾರಿಯೇ ಇರಲಿಲ್ಲ.

ಕನ್ನಡ ನಾಡು ನುಡಿಯ ನೇರ ನಿಷ್ಠುರ ದಿಟ್ಟ ದನಿಯೊಂದು ಅಸ್ತಂಗತವಾಯಿತು.

ಮೇಸ್ಟ್ರೇ, ನೀವು ಈ ಹೊತ್ತಿನಲ್ಲಿ ಇರಬೇಕಿತ್ತು. ಹೊತ್ತಲ್ಲದ ಹೊತ್ತಲ್ಲಿ ಹೋಗಿ ಬಿಟ್ಟಿರಿ.

ನಿಮ್ಮ ಆತ್ಮಕ್ಕೆ ಪ್ರಕೃತಿ ಚಿರಶಾಂತಿ ನೀಡಲಿ ಎಂದೇಳುವುದಷ್ಟೆ ನಮಗೀಗ ಅನಿವಾರ್ಯವಾಗಿದೆ.

‍ಲೇಖಕರು Admin

10 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading