ಸಿ. ಎನ್.ರಾಮಚಂದ್ರನ್
ಹೇ ನಿತಂಬಿನಿ
ಕಲ್ಲಾಗಿಯೇ ಇರು ನೀ ಹೇ ನಿತಂಬಿನಿ,
ಜೀವ ತಳೆದರೆ ನೀ ನಡೆದಾಡುವುದಾದರೂ ಹೇಗೆ?
ಕುಂಭಸ್ತನಿಯಾಗಿ, ನಿತಂಬಿನಿಯಾಗಿ,
ಬಡ ಒಡಲಿನ, ಪುಸಿ ನಡುವಿನ,
ಓ ಸಾಲಂಕೃತ ಕಾಳಾಹಿವೇಣಿ,
ಜೀವ ತಳೆದರೆ ನೀ ಬಸಿರುಬೇನೆಯನು ತಾಳುವುದಾದರೂ ಹೇಗೆ?
ಬಿಸಿಲು ಮಳೆ ಗಾಳಿಯಲಿ, ಹಗಲು ರಾತ್ರಿಯಲಿ
ನಿನ್ನ ರೂಪಿಸಿದ ಶಿಲ್ಪಿ ಕೆತ್ತಿದನೆ ತನ್ನಿಚ್ಛೆಯಂತೆ?
ಉಸಿರಾಡುವ ನಡೆದಾಡುವ ಸತಿಯಿದ್ದರೂ ಬಳಿ
ಅವನ ಕಣ್ಮನಗಳು ನಿನ್ನ ಕೊರೆದುದಾದರೂ ಹೇಗೆ?
ಹುಟ್ಟುವಾಗಲೆ ‘ಚಾಪವರ್ಮೋತ್ತರ ಸಹಿತ’ ಧೃಷ್ಟದ್ಯುಮ್ನ,
ಹುಟ್ಟುವಾಗಲೇ ‘ಕಾಮನ ಕೈದು’ ಈ ಕೃಷ್ಣೆ.
ಈ ಪ್ರತಿಮೆಗಳ ಪರಿವೇಶದಲಿ ನೀ
ಬದುಕುವುದು ಹೇಗೆ? ಬಾಯ್ಬಿಡುವುದಾದರೂ ಹೇಗೆ?
ಕುಣಿಯಬೇಕಿಲ್ಲ ನೀ ಕೈಸನ್ನೆಯನ್ನನುಸರಿಸಿ;
ನಟಿಸಬೇಕಿಲ್ಲ ನೀ ಸಮರಾತ್ರಿಯಲಿ ಸಮಭೋಗವನು;
ಉರಿಯಬೇಕಿಲ್ಲ ನೀ ಕೊಳೆತ ದೇಹವನು ಅಪ್ಪಿ,
ಕಲ್ಲಾಗಿಯೇ ನೀ ಇರುವ ತನಕ, ಮುಖಮುಚ್ಚಿ.
ಬೆದರಬೇಕಿಲ್ಲ, ಬೆವರಿದರೂ ಬೆವರದಂತಿರಲು,
ನಡುಗಬೇಕಿಲ್ಲ ನೀ ನಡುಮುರಿದರೂ ನಗಲು ನೇರ.
ಮತ್ಸ್ಯಗಂಧಿ ನೀ ಆಗಬೇಕಿಲ್ಲ ಯೋಜನಗಂದಿ,
ಅಳಬೇಕಿಲ್ಲ ಅಳಿಸುವುದಿಲ್ಲ ನೋವಿಲ್ಲ ಸಾವಿಲ್ಲ ನಿನಗೆ.
ಕಾಮದಗ್ಧ ಭಂಗಿಯಲಿ, ಅಂಗಾಂಗ ಸಮೃದ್ಧಿಯಲಿ,
ಕಲ್ಲಾಗಿಯೇ ಇರು ನೀ ಕಲಭಮದಯಾನೆ,
ಪ್ರಾಚೀನ ಸಂಸ್ಕೃತಿಯ ಹೆಣ ಭಾರ ಹೊತ್ತು.
ಹೆಣ್ಣಿನ ಬಗ್ಗೆ ಇರುವ ಕಳಕಳಿ ಶಿಲೆಯ ಬೆಡಗಿಯಲ್ಲಿ ಸೂಪರ್
ಮನಸ್ಸು ಕಲಕುವ ಕವನ. ಕವಿತೆಯ ವ್ಯಂಗ್ಯದ ಹಿಂದೆ ಹೆಪ್ಪುಗಟ್ಟಿದ ನೋವಿದೆ.
ನಿನ್ನ ರೂಪಿಸಿದ ಶಿಲ್ಪಿ ರೂಪಿಸಿದನೆ ತನ್ನಿಚ್ಛೆಯಂತೆ…ನಿಜ ..ಹೆಣ್ಣಿನ ಸೌಂದರ್ಯದ ಮಾದರಿಯಾದ ಶಿಲಾಬಾಲಿಕೆಯರಿಗೂ ಮತ್ತು ನಮ್ಮ ದೇಹಕ್ಕೂ ಎನೇನೂ ಸಂಬಂಧವಿಲ್ಲ.
Wit, irony, wordplay, exploration of the often intriguing relationship between art and reality – the poem belongs to the rank of fine Kannada poetry. Compliments to CNR.
ಪ್ರಿಯ ಡಾ. ನಾರಾಯಣ ಹೆಗ್ಡೆ, ಡಾ. ಎಚ್. ಎಸ್. ವಿ., ಡಾ. ಸಂಗೀತಾ ಕಲ್ಮನೆ, ಮತ್ತು ಅಜ್ಞಾತ ವ್ಯಕ್ತಿ, ಇವರುಗಳಿಗೆ:
ನಿಮ್ಮ ಸ್ನೇಹಪೂರಿತ ಸಹೃದಯ ಪ್ರತಿಕ್ರಿಯೆಗೆ ಕೃತಜ್ಞನಾಗಿದ್ದೇನೆ. ವಂದನೆಗಳು. ಸಿ. ಎನ್. ರಾಮಚಂದ್ರನ್
pracheena samskrutiya henabhaara, nija sir
kavithe chennaagide sir