ಡಾ ಎಸ್ ಬಿ ಜೋಗುರ
ಪುಸ್ತಕ ಪರಿಚಯ
ಬಾಳೆಗರ್ಭದಲಿ
[ಕವನ ಸಂಕಲನ]
ಲೇ-ಹೇಮಾ ಪಟ್ಟಣಶೆಟ್ಟಿ
ಅನನ್ಯ ಪ್ರಕಾಶನ ಧಾರವಾಡ
ಪುಟ-140 ಬೆಲೆ-800==ರೂ
ಬರವಣಿಗೆಯನ್ನು ಆತ್ಮಸಖಿಯನ್ನಾಗಿಸಿಕೊಂಡು ಸುಖಿಯಾಗಿರುವ ಗುಣವನ್ನು ಅಂತರ್ಗತಗೊಳಿಸಿಕೊಂಡ ಕವಯಿತ್ರಿ ಹೇಮಾ ಪಟ್ಟಣಶೆಟ್ಟಿ ಅಂತರಗಂಗೆಯ ಆಲಾಪದೊಂದಿಗೆ ತಲೆದೂಗುತ್ತಾ ಕವಿತೆಕಟ್ಟುವವರು. ಹಾಗಾದಾಗಲೇ ಸಹೃದಯಿ ಓದುಗನ ಭಾವದ ಕದ ತಟ್ಟುವ, ತೆರೆ0ುುವ ಸಾಧ್ಯತೆ ಹೆಚ್ಚು. ಹೇಮಾ ಅವರು ಈ ‘ಬಾಳೆಗರ್ಭದಲಿ’ ಎನ್ನುವ ಸಂಕಲನದಲ್ಲಿ ಜೀವನುತ್ಸಾಹ, ಬದುಕಿನ ಮರ್ಮ,ದಾರ್ಶನಿಕ ಒಳನೋಟ,ವ್ಯಷ್ಟಿ ಸಮಷ್ಟಿಯ ಸಾರ್ಥಕ್ಯ ಹೀಗೆ ಅಪಾರ ಗ್ರಹಿಕೆಯ ಗಹನವಾದ ಸಂಗತಿಗಳನ್ನು ಇಲ್ಲಿ0ು ಕವಿತೆಗಳಿಗೆ ಆಹಾರವಾಗಿಸಿರುವದು ಈ ಸಂಕಲನದ ಪುಷ್ಟತೆಗೆ ಕಾರಣವಾಗಿವೆ.ಇಲ್ಲಿ ಪ್ರೀತಿಯಿದೆ,ವಿರಹವಿದೆ,ಜೀವನದಿಯಿದೆ,ಸೆಲೆಯಿದೆ,ಬೆಳಕಿದೆ, ಬುಡದ ಕತ್ತಲಿದೆ, ಮೌನವಿದೆ. ಜಾತ್ರೆಯಿದೆ, ಬಟ್ಟೆಯಿದೆ, ಬೆಂಕಿಯಿದೆ, ಕನಸಿದೆ, ನಿಜದ ಲ0ುವಿದೆ ಒಟ್ಟಾರೆ ಇಲ್ಲಿ ಬದುಕಿನ ಎಲ್ಲ ಮಜಲುಗಳ ಮಜವಿದೆ. ಪ್ರಶಸ್ತಿಗಾಗಿಯೇ ಬರೆಯುವವರ ಭರಾಟೆಯ ನಡುವೆ ಈ ಕವಯತ್ರಿ ನಿಲ್ಲುವದಿಲ್ಲ. ಕಾರಣ ಅವರಲ್ಲಿರುವ ಕಾವ್ಯಕಟ್ಟುವ ಪ್ರಾಮಾಣಿಕ ಹಂಬಲ ಹಾಗೂ ತುಡಿತಗಳೇ ಅವರ ಕವಿತೆಗಳಿಗೆ ಒಂದು ಬಗೆ0ು ಮಾನ್ಯತೆಯನ್ನು ತಂದು ಕೊಟ್ಟಿವೆ. ಈ ಸಂಕಲನದ ಬಹುತೇಕ ಕವಿತೆಗಳು ಇಷ್ಟವಾಗುವವಾದರೂ ನನ್ನೆದೆಗೆ ತೀರಾ ಹತ್ತಿರವಾದ ಕೆಲವು ಕವಿತೆಗಳು ಇಲ್ಲಿವೆ.
‘ಧೃತಿ’ ಎನ್ನುವ ಕವಿತೆಯ ಕೆಳಗಿನ ಕೆಲ ಸಾಲುಗಳು ನಿರ್ಲಿಪ್ತರಿಗೂ ತಪ್ತ ಭಾವವನ್ನು ಕೊಡುವ ಅಗಮ್ಯ ಗುಣವನ್ನು ಹೊಂದಿದೆ. ‘ಈ ಮನ:ಸ್ಥಿತಿಯಲ್ಲಿ ಲಂಕೆಯನ್ನೂ ಹಾರಬಲ್ಲೆ ಜಿಂಕೆಯನ್ನೂ ಮೀರಬಲ್ಲೆ ಸಪ್ತ ಸಾಗರಗಳನ್ನೂ ಅಂಕೆಯಲಿಟ್ಟು ಆಳಬಲ್ಲೆ..’ ಎನ್ನುವ ಕವಿತೆಯ ಒಡಲಲ್ಲಿರುವ ಉತ್ಕಟ ಆತ್ಮವಿಶ್ವಾಸದ ಪ್ರತಿಮೆ ಈ ಕವಿತೆಯ ಸತ್ವ ಮತ್ತು ಶಕ್ತಿ ಎರಡೂ ಆಗಿದೆ. ಹಾಗೆಯೇ ಅವರ ‘ಅಪವಾದ’ ಎನ್ನುವ ಕವಿತೆ ಬಾಳುವ ಮನೆಗೆ ಬೊಗಳುವ ನಾಯಿಗಳ ಜರೂರತ್ತನ್ನು ಬಿಂಬಿಸುತ್ತದೆ. ಸಂತೆಯಲ್ಲೊಂದು ಮನೆಯಮಾಡಿ ಎನ್ನುವ ಹಾಗೆ ಕವಯಿತ್ರಿ ತಮ್ಮ ‘ಅಪವಾದ’ ಕವಿತೆಯಲ್ಲಿ ‘ಇವರ ಮಾತಿಗೂ ಉಂಟು ಅರ್ಥ ಬೆಳೆಯಲಿ ನಾನು ಕಿತ್ತೆಸೆದ ಅಪವಾದಗಳು ತಿಪ್ಪೆಯಲಿ ತಮ್ಮ ಹುಟ್ಟಿನಲಿ ತಾವೇ ಹುಗಿದು ಧೂಳಿಯಾಗಲಿ ನನ್ನ ಬೇಲಿಯಾಚೆ..!’ ಎನ್ನುವ ಮೂಲಕ ಅಪವಾದಗಳಿಗೆ ಕಿವುಡಾಗುವ ಬಗೆಯನ್ನು ತಾತ್ವಿಕವಾಗಿ ಅವರು ನಿರೂಪಿಸಿದ್ದಾರೆ.ಈ ಕವಯಿತ್ರಿಯು ಬಹುತೇಕ ಕವಿತೆಗಳಲ್ಲಿಯ ವಸ್ತು ಮನುಷ್ಯನ ತಾರ್ಕಿಕತೆಯನ್ನು ಮೀರಿದ ದಾರ್ಶನಿಕತೆಯನ್ನು ಕುರಿತಾದುದು.ಅದಕ್ಕೆ ಸಾಕ್ಷಿಯಾಗಿ ಅವರ ಇನ್ನೊಂದು ಕವಿತೆ ‘ನಿರ್ವಯಲು’ ನೋಡಬಹುದು. ‘ಬಯಲಿನಲಿ ಬತ್ತಲೆಯು ಬಯಲಾಗಿ ಸಿಕ್ಕಿದೆ ನಿರ್ವಯಲ ಕತ್ತಲು ಬತ್ತಲಾಗಿದ್ದಕ್ಕೆ ಅಲ್ಲಿ ಈಗೆನಗೆ ದಕ್ಕಿದೆ ಬತ್ತಲಾಗದ ಬತ್ತಲಾರದ ನಿ:ಶೂನ್ಯ ಸುತ್ತಲು’ ಬದುಕು ಬಯಲಾಗುವ ಬಗೆ ಗ್ರಹಿಕೆಗೆ ಸಿಗುವದಿಲ್ಲ. ಅದೇನಿದ್ದರೂ ಅನುಭವದ ಪಕ್ವವಾದ ಮೂಸೆಯಲ್ಲಿ ಸಾಧ್ಯವಾಗುವಂಥದು. ಇಲ್ಲಿಯ ಅನೇಕ ಕವಿತೆಗಳು ಜೀವನದ ಒಳದೋಟಿಯನ್ನು ಸ್ಪರ್ಷಿಸಿ ಬರೆದಂತಿವೆ. ಕವಯಿತ್ರಿಯ ಸೂಕ್ಷ್ಮ ಗ್ರಹಿಕೆಗಳು ಈ ಬಗೆಯ ಕವಿತೆಗಳಾಗಿ ಒಡಮೂಡಿರುವ ಬಗೆ ಅನೂಹ್ಯವಾದುದು. ‘ಕನಸು ಸಾಯುದಿಲ್ಲ’, ‘ದೀಪದ ಕತ್ತಲೆ’, ‘ಅರಗಿನರಮನೆ’, ‘ಸಂಕಲ್ಪ’, ‘ಜೀವನದಿ’ ಹೀಗೆ ಇಂಥಾ ಹಲವಾರು ಉತ್ತಮ ಕವಿತೆಗಳನ್ನು ಮೇಳೈಸಿಕೊಂಡು ಮೈದಳೆದ ‘ಬಾಳೆಗರ್ಭದಲಿ’ ಒಂದು ವಜನ್ ಇರುವ ಸಂಕಲನವಾಗಿದೆ.ಓದಿ ಅನುಭವಿಸುವ, ಗ್ರಹಿಸುವ ಉದಾತ್ತವಾದ ಭಾವಾತ್ಮಕ ಮತ್ತು ದಾರ್ಶನಿಕ ಸಂಗತಿಗಳ ಸಮಾಗಮ ಇಲ್ಲಿದೆ. ]]>





0 Comments