ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಸರಿನ ಹಿಂದೆ ಮುಂದೆ!!!

ಕೆರೆಮನೆ ಶಿವಾನಂದ ಹೆಗಡೆ

ಇಂದಿನ ವೇಗದ ಯುಗದ ಆಳಾಗಿರುವ ನಾವು ಪೂರ್ವಸೂರಿಗಳನ್ನ ಮರೆತುಬಿಡುವುದು ಆಶ್ಚರ್ಯವೇನೂ ಅಲ್ಲ.! ಶಾಲಾ ಕಾಲೇಜಿನ ಪುಸ್ತಕದಲ್ಲಿ ನಮ್ಮ ಮಕ್ಕಳಿಗೆ ನಮ್ಮ ಪರಂಪರೆ,ಸಾಧಕರ ಸಾಧನೆ ನೆನೆಯುವ ಅವಕಾಶವೂ ಇಲ್ಲ. ಇಂಥಹ ಸನ್ನಿವೇಶದಲ್ಲಿ ಸ್ವಯಂ ಆಗಿ ಹಿರಿಯರನ್ನ ಮರೆಯದೆ ಅವರ ಹೆಸರನ್ನ ಸಾಧ್ಯ ಇರುವಷ್ಟು ಅಮರಗೊಳಿಸಲು ಪ್ರಯತ್ನಿಸಿದ ಗೆರುಸೋಪ್ಪಾದ KPC ಯ ಶ್ಲಾಘನೀಯ ಪ್ರಯತ್ನ ಹಲವರಿಗೆ ಪ್ರೇರಣಾದಾಯಿ ಎನ್ನುವುದರಲ್ಲಿ ಅನುಮಾನ ಇಲ್ಲ.

ಇಂತಹ ಉತ್ತಮ ಯೋಚನೆ ಮಾಡಿ ಅದನ್ನ ಜಾರಿಗೆ ತಂದಿದ್ದು ಗೆರಸೋಪ್ಪಾದ KPCಯಲ್ಲಿ ೨೦೦೧ ರ ಸುಮಾರಿಗೆ PRO ಆಗಿದ್ದ ಶ್ರೀ ನಾಗೇಶ ಕಾಮತ ಎನ್ನುವವರು (ಸದ್ಯ ನಿವ್ರತ್ತಿಯಾಗಿ ಬೆಂಗಳೂರಲ್ಲಿ ನೆಲೆಸಿದ್ದಾರೆ) ಹೊಸದಾಗಿ ನಿರ್ಮಾಣ ಗೊಂಡ ಕಾಲನಿಯಾ ರಸ್ತೆಗಳಿಗೆ ಉತ್ತರಕನ್ನಡದ ಶ್ರೇಷ್ಠ ಸಾಧಕರ ಹೆಸರನ್ನ ವಿವಿಧ ರಸ್ತೆಗಳಿಗೆ ನಾಮಕರಣ ಮಾಡಿಸಿದ್ದರು. ಅದು ಇತ್ತೀಚಿಗೆ ಕ್ರಮೇಣ ಕಾಲನ ಹೊಡೆತಕ್ಕೆ ಸಿಕ್ಕು ಹೆಸರು ಅಳಿಸಿಹೋಗುತ್ತ ಬಂದ ಸಂದರ್ಭದಲ್ಲಿ ಅದನ್ನ ಮರು ಸ್ಥಾಪನೆ ಆಗದೇ ಹೋಗಬಹುದಾದ ಸಂದರ್ಭ ನಿರ್ಮಾಣವಾಯಿತು. ಈ ಎಲ್ಲಾ ಹೆಸರು ಶಾಶ್ವತ ಮರೆಯಾಗುವ ಹಂತಕ್ಕೆ ಬಂತು. ಅದರ ಸೂಕ್ತ ದಾಖಲಾತಿ ಎಲ್ಲೋ ಸೇರಿದ್ದರಿಂದ ಆ ಹೆಸರುಗಳು ಮತ್ತೆ ಮೊದಲಿನಂತೆ ಕಾಣಿಸುವುದು ಸಾಧ್ಯ ಇರಲಿಲ್ಲ.

ಸುಲಭವಾಗಿ ತೋರುವ ಈ ವಿಷಯ ಆಳದಲ್ಲಿ ಅನೇಕ ಕ್ಲಿಷ್ಟತೆ ,ಸಂಕೀರ್ಣತೆ ಹೊಂದಿದೆ. ಆಭಾಗದಲ್ಲಿ ಇರುವ ಯಾರಾದರು ಹೆಸರು ಅಳಿಸಿಹೊದದ್ದು ತಿಳಿದು ಎಚ್ಚರಿಸಿ ಆ ಬಗ್ಗೆ ಕ್ರಮ ಕೈಗೊಳ್ಳಬೇಕು.ಅದರಲ್ಲೂ ಈ ಹೆಸರನ್ನ ಇಟ್ಟು ಬಹುಕಾಲವಾದ್ದರಿಂದ ಹೊಸದಾಗಿ ಬಂದ ಅಧಿಕಾರಿಗಳಿಗೆ ಈ ಕುರಿತ ಮಹಿತಿ ಸಿಗದಿದ್ದಲ್ಲಿ ಪುನಃ ಆ ಹೆಸರು ಬರೆಸುವುದು ಕೂಡಾ ಕಷ್ಟವಾಗಬಹುದು.

ನನ್ನ ಅಜ್ಜನ ಹೆಸರನ್ನ ನಾನು ಸರಿಪಡಿಸಲು ಪ್ರಯತ್ನಿಸಬಹುದು.ಆದರೆ ಹಸಲರ ದೇವಿ, ಹರ್ಡೇಕರ ಮಂಜಪ್ಪ ಇತ್ಯಾದಿ ಉಳಿದ ಹೆಸರು ಮರುಸ್ಥಾಪನೆಗೆ ಸಾಧ್ಯವಾಗದೆ ಹೋಗಬಹುದು.ಆದರೂ ನಮ್ಮ ಸಮಾಜದ ವಿಶೇಷತೆ ಮತ್ತು ಹೆಮ್ಮೆ ಎಂದರೆ ಅಂಥಹ ಕಾಲ ಬಂತು ಎಂದಾಗ ಯಾರಾದರೂ ಎಚ್ಚರಗೊಳ್ಳುತ್ತಾರೆ..ಇಲ್ಲೂ ಹಾಗೆಯೇ ಆಯ್ತು!!

ಮಾವಿನ ಗುಂಡಿಯಲ್ಲಿ ನೆಲೆಸಿರುವ ಆತ್ಮಿಯ ಮಿತ್ರರಾದ ಶ್ರೀ ಅಶೋಕ ಹೆಗಡೆ, ಶ್ರೀ ಜಯಪ್ರಕಾಶ ಹೆಗಡೆ,ಸಿದ್ದಾಪುರದ ಗೋಪಾಲ ಶ್ಯಾನಭಾಗ ಇವರ ಗಮನಕ್ಕೆ ಇದೆಲ್ಲ ಬಂದಿದ್ದೇ ತಡ ಅವರು ತಕ್ಷಣ ಕಾರ್ಯೋನ್ಮುಖರಾದರು. ಹಾಗೆ ಈ ವಿಷಯ ನನ್ನೊಂದಿಗೆ ಹಂಚಿಕೊಂಡಾಗ ನನಗೆ ಬಹಳ ಸಂತಸವಾಯ್ತಲ್ಲದೇ ನಾನೂ ಇವರೊಟ್ಟಿಗೆ ಸೇರಿಕೊಂಡೆ. ಎಲ್ಲ ಜತೆಯಾಗಿ ಪುನಹ ಆ ಹೆಸರುಗಳು ಸ್ತಾಪನೆಯಾಗಬೇಕೆಂದು ಸಂಬಂದಿಸಿದ ಅಧಿಕಾರಿಗಳಿಗೆ ಮನವರಿಕೆ ಮಾಡಲು ಪ್ರಯತ್ನ ಶುರುವಾಯಿತು.

ಈಗ ನಾವೆಲ್ಲ ಸೇರಿ ಈ ಕುರಿತು KPC ಗೆ ಮನವಿಮಾಡಿ ಅದರ ಬೆನ್ನು ಹತ್ತಿದೆವು. ಎಚ್ಚತ್ತ ಅಧಿಕಾರಿಗಳು ಹಿಂದಿನ ದಾಖಲೆ ಪರಿಶೀಲಿಸಿ ಆ ಎಲ್ಲಾ ಹೆಸರನ್ನ ಪುನಃ ಬರೆಸಿದ್ದಾರಲ್ಲದೇ ಮುಂದೆ ಇದನ್ನ ತಮ್ಮ ಶಾಶ್ವತ ದಾಖಲೆಗೆ ಸೇರಿಸುವ ಭರವಸೆ ನೀಡಿದರು. ಈ ಕಾರಣ ಮೊನ್ನೆ ಜುಲೈ ೫ ರಂದು ನಾವೆಲ್ಲಾ ಸೇರಿ KPC ಯ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಮತಿ ಶ್ರೀಲಕ್ಷ್ಮಿ ಯವರನ್ನ ಭೇಟಿಯಾಗಿ ಹೆಸರುಗಳು ಮರುಸ್ಥಾಪನೆಯಾದ ಬಗ್ಗೆ ಕೃತಜ್ಞತಾ ಪತ್ರ ನೀಡಿದೇವು.

ಎಲ್ಲರೂ ಗೆರಸೋಪ್ಪಾದ KPC ಕಾಲನಿಯಲ್ಲಿ ತಿರುಗಾಡಿ ಈ ಹೆಸರನ್ನ ನೋಡಿ ಸಂಬ್ರಮಪಟ್ಟೆವು. ಅಧಿಕಾರಿಗಳಲ್ಲಿ ನಮ್ಮ ಕಲೆ,ಸಾಹಿತ್ಯ,ಸಾಮಾಜಿಕ ಮನಸ್ಸು ಜಾಗ್ರತವಾದದ್ದರ ಕುರುಹು ಇದು. ಇದರ ಶ್ರೇಯಸ್ಸು ಯಾರ ಒತ್ತಾಯವೂ ಇಲ್ಲದೇ ಸ್ವಯಂ ಪ್ರೇರಣೆಯಿಂದ ಇಂಥ ಸಾಧಕರ ಹೆಸರನ್ನು ರಸ್ತೆಗೆ ಇಡುವುದು ನಮ್ಮ ಸಾಮಾಜಿಕ ಎಚ್ಚರದ, ಸಂವೇದನೆಯ ಪ್ರತೀಕ.

ನನ್ನ ಅಜ್ಜ ಕೆರೆಮನೆ ಶಿವರಾಮ ಹೆಗಡೆಯವರ ಹೆಸರು ಇಲ್ಲಿನ ಒಂದು ಶಾಲಾ ರಸ್ತೆಗೆ ಇಟ್ಟಿರುವುದು ನನಗೆ, ನಮ್ಮ ಮೇಳಕ್ಕೆ ಮತ್ತೆ ಯಕ್ಷಗಾನದ ಅಭಿಮಾನಿಗಳಿಗೆ ಸಂತಸ ಮತ್ತು ಹೆಮ್ಮೆಯ ವಿಷಯ. ಬಹುಶ ಯಕ್ಷಗಾನ ಕಲಾವಿದನ ಹೆಸರನ್ನ ಹೊತ್ತ ಮೊತ್ತ ಮೊದಲ ರಸ್ತೆ ಇದಾಗಿರಬಹುದು.!!

ಈ ಹೆಸರುಗಳನ್ನ ನಾಮಕರಣಮಾಡುವ ಕಾಯಕ ಕೈಗೆತ್ತಿಕೊಂಡ ಅಂದಿನ PRO ಶ್ರೀ ನಾಗೇಶ ಕಾಮತ ಇವರಿಗೆ ನಮ್ಮೆಲ್ಲರ ಕೃತಜ್ಞತೆ ಸಲ್ಲುತ್ತದೆ. ಹಾಗೆಯೇ ಈ ಕುರಿತು ಕಾಳಜಿತೋರಿದ ಇಂದಿನ KPC ಯ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಮತಿ ಶ್ರೀಲಕ್ಷ್ಮಿ ಮತ್ತು ಅವರಿಗೆ ಸಹಕರಿಸಿದ ಎಲ್ಲರಿಗೂ ಅಭಾರಿಗಳು.

ಈ ಹೆಸರುಗಳ ಮತ್ತು ಅದರ ಹಿಂದಿರುವ ಉದ್ದೇಶ ಮಾಸದಂತೆ ಬಿಡದೆ ಪ್ರಯತ್ನಿಸಿದ ಶ್ರೀ ಅಶೋಕ ಹೆಗಡೆ,ಶ್ರೀ ಜಯಪ್ರಕಾಶ ಹೆಗಡೆ ಇವರ ಶ್ರಮ ಅತ್ಯಂತ ಶ್ಲಾಘನೀಯ. ದಿನಕರ ದೇಸಾಯಿ ರಸ್ತೆ ಹೆಸರು ಮಾಸಿರುವುದರಿಂದ ಅದನ್ನ ಹೊಸದಾಗಿ ಪುನಹ ಬರೆಸುತ್ತೇವೆ ಎಂದಿದ್ದಾರೆ. ಇಂದು ನಮ್ಮೊಟ್ಟಿಗೆ ಕಿಲಾರ ಅಶೋಕ ಹೆಗಡೆ, ಕೌಶಿಕ್ ಹೆಗಡೆ ಕೂಡಾ ಬಂದು ಸಂಭ್ರಮಿಸಿದರು. ಇಂತಹ ಮಿತ್ರರು ಸಿಗುವುದು ಭಾಗ್ಯ.

‍ಲೇಖಕರು Admin

8 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading