-ಎನ್ ಎಸ್ ಶಂಕರ್
ನಾನು ನಾನಾ ಕಾರಣಗಳಿಗಾಗಿ ಸಿನಿಮಾಗಳ ಬಗ್ಗೆ ಕಾಮೆಂಟ್ ಹಾಕುವುದನ್ನು ನಿಲ್ಲಿಸಿ ಸಾಕಷ್ಟು ಕಾಲವಾಯಿತು. ಆದರೂ ಇದೀಗ ಹೆಬ್ಬುಲಿ ಕಟ್ ಸಿನಿಮಾ ನೋಡಿದ ಮೇಲೆ, ಅದರ ನಿರ್ದೇಶಕರಿಗೆ ಅಭಿನಂದನೆ ಹೇಳಲೇಬೇಕು ಅನಿಸಿತು. ಅವರಿಗೆ ಕಳಿಸಿದ ವಾಟ್ಸಪ್ ಸಂದೇಶವನ್ನು ಇಲ್ಲೂ ಹಂಚಿಕೊಳ್ಳಬೇಕು ಅನಿಸಿತು.
ಪ್ರೀತಿಯ ಭೀಮರಾವ್,
ಇದೀಗ ತಾನೇ ನಿಮ್ಮ ‘ಹೆಬ್ಬುಲಿ ಕಟ್’ ನೋಡಿದೆ. ಮನಸ್ಸು ತುಂಬಿ ಬಂತು. ಕೇವಲ ಒಂದು ಚೌರದ ಹಿನ್ನೆಲೆಯಲ್ಲಿ ನಮ್ಮ ಸಮಾಜದ ಅಂತರಂಗವನ್ನು, ಯಾವ ಘೋಷಣೆಗಳಿಲ್ಲದೆ, ಅನಗತ್ಯ ಭಾವಾವೇಶವಿಲ್ಲದೆ ಬಗೆದು ಇಟ್ಟಿದ್ದೀರಿ. ಕಡೆಯ ದೃಶ್ಯವಂತೂ ಕಣ್ಣಲ್ಲಿ ನೀರು ಜಿನುಗುವಷ್ಟು ಸಶಕ್ತವಾಗಿದೆ. ‘ಹಿಂದೂ ನಾವೆಲ್ಲ ಒಂದು’!!!
ಉದ್ದಕ್ಕೂ, ಒಂದು ಹಳ್ಳಿಯ ಬದುಕು, ಅಲ್ಲಿನ ಜನ- ಎಷ್ಟು ಜೀವಂತವಾಗಿ ಉಸಿರಾಡುತ್ತಾರೆ! ಅದನ್ನು ಎಷ್ಟು ಅನಾಯಾಸವಾಗಿ ಸಾಧಿಸಿದ್ದೀರಿ. ನನಗೆ ನಿಮ್ಮ ಸಾಮಾಜಿಕ ಹಿನ್ನೆಲೆ ಗೊತ್ತಿಲ್ಲ. ವೃತ್ತಿಯಲ್ಲೂ ನಿಮ್ಮ ಈವರೆಗಿನ ಹೆಜ್ಜೆಗಳೇನೋ ಅದೂ ಗೊತ್ತಿಲ್ಲ. ಆದರೆ ನಿಮ್ಮ ಧೈರ್ಯಕ್ಕೆ, ಕಾಳಜಿಗೆ ನಿಮಗೊಂದು ಸಲ್ಯೂಟ್. ‘ಹೆಬ್ಬುಲಿ ಕಟ್’ ಕನ್ನಡದಲ್ಲಿ ಒಂದು ಮುಖ್ಯ ಚಿತ್ರ. ಹಲವಾರು ಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯ ಈ ಚಿತ್ರಕ್ಕಿದೆ. ನೀವು ಅದು ಯಾವ ರೀತಿ ಮಾರ್ಕೆಟಿಂಗ್ ಮಾಡಿಕೊಂಡಿರೋ ಗೊತ್ತಿಲ್ಲ. ಅಂತೂ ಈ ಚಿತ್ರಕ್ಕೆ ಸಿಕ್ಕಬೇಕಾದ ಪ್ರಚಾರ, ಪ್ರಾಮುಖ್ಯ ಸಿಗಲಿಲ್ಲವೆಂದೇ ನನ್ನ ಭಾವನೆ. ಮತ್ತೊಮ್ಮೆ ಅಭಿನಂದನೆ. ನಿಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ನಾನಂತೂ ಕುತೂಹಲಿ. ನಿಮಗೆ ಶುಭವಾಗಲಿ.
ಒಂದೆರಡು ಹಾಡುಗಳ ಬಗ್ಗೆ ನನಗೆ ಸಮಾಧಾನವಿಲ್ಲ. ಅದರಲ್ಲೂ ಮಹಾದೇವ ಹಡಪದ್ ತಮಟೆ ಬಾರಿಸಿಕೊಂಡು ಹಾಡುವುದು, ಮೂವರೂ ಬೆಂಕಿ ಸುತ್ತ ಕುಣಿಯುವುದು- ಅದೇಕೋ ಆ ಸಂದರ್ಭಕ್ಕೆ ಒಗ್ಗಲಿಲ್ಲ ಅನಿಸಿತು!






0 Comments