ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಗಾಗಿ ಇಲ್ಲಿದೆ – ಆ ದೃಶ್ಯ ರೂಪಕ..

ಜಿ ಎನ್ ಮೋಹನ್ 

ಅವತ್ತು ತುಮಕೂರಿನ ಮರಳೂರಿನ ತೋಟದಲ್ಲಿ ಬೆಳದಿಂಗಳ ಅಡಿ ಹೆಜ್ಜೆ ಹಾಕುತ್ತಿದ್ದೆವು. ನಾನು ಮತ್ತು ಮಾದೇವ್ ಭರಣಿ ಇಬ್ಬರೂ ಹೆಜ್ಜೆ ಹಾಕುತ್ತಿದ್ದುದು ಎಸ್ ಗಂಗಾಧರಯ್ಯನವರ ಜೊತೆ. ಗಂಗಾಧರಯ್ಯನವರು ಸ್ವಾತಂತ್ರ್ಯ ಹೋರಾಟಗಾರರು. ಅದಕ್ಕಿಂತ ಹೆಚ್ಚಾಗಿ ಸಮ ಸಮಾಜಕ್ಕಾಗಿ ಕನಸಿದವರು. ಮಾನವೀಯತೆಯ ತುಡಿತ ಇದ್ದವರು. ದಾಖಲೆಗಾಗಿ ಹೇಳಬೇಕೆಂದರೆ ಅವರು ಈಗಿನ ಗೃಹ ಸಚಿವ ಜಿ ಪರಮೇಶ್ವರ್ ಅವರ ತಂದೆ.

ಅದು 1987. ಅವರ ಜೊತೆ ಹೀಗೆ ಮಾತನಾಡುತ್ತಾ, ಸಮಾಜದ ಅನೇಕ ಸಮಸ್ಯೆಗಳನ್ನು ಚರ್ಚಿಸುವುದು ನನಗೂ, ಮಾದೇವ್ ಭರಣಿಗೂ ಅಪರೂಪವಾದ ಸಂಗತಿಯಾಗಿರಲಿಲ್ಲ. ಹೀಗಿರುವಾಗ ಒಮ್ಮೆ ಮಾದೇವ್ ಭರಣಿಗೆ ಅಜ್ಜರ ೭೦ ನೇ ವರ್ಷಕ್ಕೆ ಒಂದು ಅಭಿನಂದನಾ ಗ್ರಂಥ ತರಬೇಕು ಎನ್ನುವ ಹುಕಿ ಬಂತು. ಬೆಳದಿಂಗಳ ಒಂದು ಸುತ್ತಾಟದಲ್ಲಿ ಇದನ್ನು ಗಂಗಾಧರಯ್ಯನವರ ಮುಂದೆ ಹರಡಿಯೂ ಬಿಟ್ಟ. ಗಂಗಾಧರಯ್ಯನವರು ಸಹಜವಾಗಿ ಒಲ್ಲೆ ಎಂದರು.

ಆ ನಂತರ ನಾನೇ ಭರಣಿಗೆ ‘ಅವರು ಒಲ್ಲೆ ಎನ್ನುತ್ತಿರುವುದು ಅಭಿನಂದನಾ ಗ್ರಂಥಕ್ಕೆ. ಅವರ ಬಗ್ಗೆ ಹೊಗಳಿಕೆ ಬೇಡ ಎಂದು ತಾನೇ. ಬದಲಿಗೆ ಅವರ ನೋಟಕ್ಕೆ ತಕ್ಕನಾದ, ಸಮಾಜಕ್ಕೆ ಉಪಯೋಗವಾಗುವ ಒಂದು ಗ್ರಂಥ ಮಾಡಬಾರದೇಕೆ’ ಎಂದೆ. ‘ವಿಷಯ?’ ಎಂದ. ನಾನು ‘ಅಂಬೇಡ್ಕರ್ ಅವರ ಬಗ್ಗೆಯೇ ಮಾಡೋಣ’ ಎಂದೆ. ಈಗಾಗಲೇ ಸಾಕಷ್ಟು ಕೃತಿಗಳು ಬಂದಿವೆ ಎಂದ. ಆಗ ನಾನು ‘ಈಗಿನ ತಲೆಮಾರು, ಹೊಸ ಕಣ್ಣುಗಳ ತಲೆಮಾರು ಹೇಗೆ ಅಂಬೇಡ್ಕರ್ ಅವರನ್ನು ನೋಡುತ್ತಿವೆ ಎನ್ನುವುದನ್ನು ಹಿಡಿದಿಡೋಣ’ ಎಂದೆ. ಸರಿ ಅಲ್ಲಿಂದ ಶುರುವಾಯಿತು ನಮ್ಮ ‘ಅಂಬೇಡ್ಕರ್ ಯಾನ..’

ಕೊನೆಗೆ ಸಿದ್ಧವಾಗಿ ಬಂದದ್ದು ಒಂದು ಸಂಗ್ರಹಯೋಗ್ಯ ಸಂಚಿಕೆ.

ಆ ಸಂಚಿಕೆಗೆ ಬರೆಯಲು ನಾನು ಆರಿಸಿಕೊಂಡದ್ದು ಅಂಬೇಡ್ಕರ್ ನಡೆಸಿದ ಪತ್ರಿಕೋದ್ಯಮವನ್ನು. ಗೂಗಲ್ ಇಲ್ಲದ ಕಾಲದಲ್ಲಿ ನಾನು ಅಂಬೇಡ್ಕರ್ ಹಾಗೂ ಪತ್ರಿಕೋದ್ಯಮವನ್ನು ಒಟ್ಟಿಗೆ ನೋಡುವ ಸಾಹಸಕ್ಕೆ ಇಳಿದಿದ್ದೆ. ಹಲವು ಪುಸ್ತಕಗಳ ಜೊತೆ ಈ ಕಾರಣಕ್ಕಾಗಿ ಒಡನಾಡಿದೆ. ನಾನು ಕಂಡ ಅಂಬೇಡ್ಕರ್ ಪತ್ರಿಕೋದ್ಯಮವನ್ನು ಹಿಡಿದಿಟ್ಟಿದ್ದೇನೆ

ನನಗೆ ಆ ಲೇಖನ ಬರೆದಾಗ ಎಷ್ಟು ಖುಷಿ ಆಯಿತೋ ಅಷ್ಟೇ ಖುಷಿ ಆದದ್ದು ‘ಕ್ರೇಜಿ ಫ್ರಾಗ್ ಮೀಡಿಯಾ’ ಸಂಸ್ಥೆ ಇದನ್ನು ನಾವು ಒಂದು ಪುಟ್ಟ ದೃಶ್ಯ ದಾಖಲೆಯಾಗಿಸುತ್ತೇವೆ ಎಂದು ಕೇಳಿದಾಗ. ಇಲ್ಲ ಅನ್ನಲಿ ಹೇಗೆ? ಹಾಗಾಗಿ ಇಲ್ಲಿದೆ – ಆ ದೃಶ್ಯ ರೂಪಕ.

‍ಲೇಖಕರು avadhi

14 April, 2017

1 Comment

  1. Girijashastry

    ಪತ್ರಿಕೋದ್ಯಮಕ್ಕೆ ಅಂಬೇಡ್ಕರ್ ಕೊಟ್ಟ guidelines ಎಂದಿಗಿಂತ ಇಂದಿಗೆ ಅನ್ವಯಿಸುತ್ತದೆ. ಅವರ ಹುಟ್ಟು ಹಬ್ಬವೆಂದು ಕಟ್ಟಡಗಳಿಗೆ ದೀಪಾಲಂಕ್ೃ ತಮಾಡಿ ಪಟಾಕಿ ಹೊಡೆದು ಸಿಹಿ ಹಂಚುವುದರಲ್ಲಿ ಮಾತ್ರ ನಮ್ಮ ಜನ ನಿರತರಾಗಿದ್ದಾರೆ. ಆದರೆ ಅವರ idealogyಗಳನ್ನು ಅರ್ಥಮಾಡಿಕೊಂಡು ಮುನ್ನಡೆಯುವವರು ಇಲ್ಲವೆನ್ನುವಷ್ಟು ಕಡಿಮೆ. ಮಹಾರಾಷ್ಟ್ರದಲ್ಲಂತೂ ಇಂದು ಮಹಾ ಬೌದ್ಧರು ಮತ್ತು ಉಳಿದ ಜಾತಿಗಳ ಸಂಘರ್ಷವೇ ಮೇಲುಗೈ ಪಡೆದಿದೆ.ಬುದ್ಧ ಕೂಡ ಇಲ್ಲಿ ಒಬ್ಬ ಮೆಹರ್ (ಅಸ್ಪೃಶ್ಯ ಜಾತಿ) ಆಗಿದ್ದಾನೆ. ಪತ್ರಿಕೆಗಳಲ್ಲಿ ಇಂತಹುದೇ ಸುದ್ದಿಗಳು.
    ಈ ಸಮಯದಲ್ಲಿ ಅಂಬೇಡ್ಕರ್ ಪತ್ರಿಕೋದ್ಯಮದ ಕುರಿತ ಮಾತುಗಳು ಬಹಳ ವಿಶೇಷ. ಅದು ವಿವರವಾಗಿ ಲೇಖನದ ರೂಪದಲ್ಲಿ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading