ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹಕ್ಕಿ ಮೈಯ ಬದುಕು' – ಎಸ್ ದಿವಾಕರ್ ಬರೀತಾರೆ

ಎಸ್  ದಿವಾಕರ್


ಕಬ್ಬಿಣದ ಪಂಜರಗಳಲ್ಲಿ ಐದಾರನ್ನು ತುಂಬಬೇಕಾದ ಕಡೆ ಇಪ್ಪತ್ತೈದು ಮೂವತ್ತು ಕೋಳಿಗಳನ್ನು ತುಂಬಿಕೊಂಡು ತೆರೆದ ಟೆಂಪೋಗಳಲ್ಲಿ ಸಾಗಿಸುತ್ತಿರುವಾಗ ಅಥವಾ ಎಂಟು ಹತ್ತು ಕೋಳಿಗಳನ್ನು ಒಂದುಗೂಡಿಸಿ, ಒಂದೇ ಹಗ್ಗದಿಂದ ಅವೆಲ್ಲವುಗಳ ಕಾಲು ಕಟ್ಟಿ, ಸೈಕಲಿನ ಕ್ಯಾರಿಯರುಗಳ ಮೇಲೆ ತಲೆಕೆಳಗಾಗಿ ತೂಗಾಡಿಸಿಕೊಂಡು ಹೋಗುತ್ತಿರುವಾಗ ಅವುಗಳ ಬಿಳಿಯ ಗರಿಗಳು ನಿಡುಸುಯ್ಯುವ ಹಾಗೆ ಗಾಳಿಯಲ್ಲಿ ತೇಲುತ್ತಾ ನಿಧಾನವಾಗಿ ನೆಲ ಕಾಣುವುದನ್ನು ನೀವು ನೋಡಿರಲಿಕ್ಕೆ ಸಾಕು. ನಗರವಾಸಿಗಳು ಕಾಣಬಯಸದಿದ್ದರೂ ಪ್ರತಿ ದಿನ ಅವರ ಕಣ್ಣುಕುಕ್ಕುವ ದೃಶ್ಯವದು.
ರಷ್ಯನ್ ಲೇಖಕ ಮಿಖಾಯ್ಲ್ ಶೊಲೋಖೊವ್ ಬರೆದ ‘ಹುಲ್ಲುಗಾವಲು’ ಎಂಬ ಕತೆಯ ಈ ಸಾಲುಗಳನ್ನು ನೋಡಿ: “ಹೊಂಡದಾಚೆಗೆ ರೆಕ್ಕೆಗಳನ್ನು ಓರೆಮಾಡಿಕೊಂಡು ದಿಢೀರನೆ ಹುಲ್ಲಿನತ್ತ ತಿರುಗಿ ಎರಗಿ ಬಂದ ಗರುಡ ತನ್ನ ಪಂಜಗಳಲ್ಲಿ ಕಾಡುಕೋಳಿಯೊಂದನ್ನು ಎತ್ತಿಕೊಂಡು ಮೇಲಕ್ಕೇರಿತು. ಆ ಕಾಡುಕೋಳಿಯ ಎದೆಯ ಭಾಗ ಬೆಳ್ಳಗಿತ್ತು. ಅದರ ಗರಿಗಳು ಹಿಮದ ಹಳಕುಗಳ ಹಾಗೆ ಕೆಳಗೆ ಬಿದ್ದವು. ಹಸಿರು ಹುಲ್ಲಿನ ಮೇಲೆ ಬಿದ್ದ ಆ ಗರಿಗಳ ಹೊಳಪು ಕಣ್ಣು ಚುಚ್ಚುವಂತಿತ್ತು.”
ಒಂದು ಹಕ್ಕಿ ಅಷ್ಟು ಹೊಳಪಾದ, ಅಷ್ಟು ನಯವಾದ ತನ್ನ ಗರಿಗಳನ್ನು ತಾನೇ ಉದುರಿಸೀತೆ? ಗಾಳಿಯ ಸೆಳವಿಗೋ ಹೊಡೆತಕ್ಕೋ ಸಿಕ್ಕಿ ತನ್ನ ಗರಿಗಳನ್ನು ಕೆಳಕ್ಕೆ ಬೀಳಿಸುತ್ತಿರುವ ಒಂದು ಹಕ್ಕಿಯನ್ನಾದರೂ ನೀವು ನೋಡಿದ್ದುಂಟೆ? ನಾನು ನೋಡಿರುವುದೆಲ್ಲ ಗಾಳಿಯ ಮಜರ್ಿಗೆ ತಕ್ಕಂತೆ ಕುಣಿಯುತ್ತ, ಬಿಸಿಲು ಮೈದಡವಿದಂತೆ ಮಿರುಗುತ್ತ ನಿಧಾನವಾಗಿ ಕೆಳಗಿಳಿಯುವ ಗರಿಗಳನ್ನಷ್ಟೆ. ಕಣ್ಣಿಗೆ ಕಾಣಿಸದ ಗಾಳಿಯ ಸೆಳವುಗಳಲ್ಲಿ ಒಂದು ಗರಿ ಕೆಳಕ್ಕೆ ಬೀಳಲು ಎಷ್ಟು ಹೊತ್ತು ಬೇಕು? ನಾನೊಮ್ಮೆ ಗಿಡುಗವೊಂದರ ಗರಿ ಕೆಳಗೆ ಬೀಳಬಹುದೆಂದು ಕಾದಿದ್ದುಂಟು; ಅದಕ್ಕಾಗಿ ಮೇಲೆ ನೋಡುತ್ತಾ, ಅದನ್ನೇ ಅನುಸರಿಸುತ್ತಾ ಸಾಕಷ್ಟು ದೂರ ಓಡಿದ್ದುಂಟು. ಆದರೆ ಅದು ಕೆಳಕ್ಕೆ ಬೀಳದೆ ಎತ್ತರದಲ್ಲೇ ತೇಲುತ್ತ ತೇಲುತ್ತ ಕಡೆಗೆ ಕಣ್ಮರೆಯಾಯಿತಷ್ಟೆ….
ಅಮೆರಿಕದ ಚಿಕಾಸಾ ಮೂಲನಿವಾಸಿಗಳಿಗೆ ಹದ್ದು ಒಂದು ಪವಿತ್ರ ಹಕ್ಕಿ. ಆ ಪಂಗಡಕ್ಕೆ ಸೇರಿದ ಲೇಖಕಿ ಲಿಂಡಾ ಹೋಗನ್ ‘ಡ್ವೆಲಿಂಗ್ಸ್’ ಎಂಬ ತನ್ನ ಪುಸ್ತಕದಲ್ಲಿ “ನಾನು ಅನೇಕ ವರ್ಷ ಹದ್ದಿನ ಒಂದು ಗರಿಗಾಗಿ ಹಂಬಲಿಸಿದೆ. ನನಗೆ ಬೇಕಿದ್ದದ್ದು ಜೀವಂತವಾದೊಂದು ಹದ್ದಿನ ಗರಿ. ಯಾಕೆಂದರೆ ನಾನಾಗಲೀ ಬೇರೆ ಯಾರೇ ಆಗಲೀ ಸಾಯಿಸಿದ ಹದ್ದು ನನ್ನ ನಿರೀಕ್ಷೆಯನ್ನೇನೂ ಸಫಲಗೊಳಿಸುವಂತಿರಲಿಲ್ಲ. ಮನುಷ್ಯ ಶಕ್ತಿಯ ಹೆಸರಿನಲ್ಲಿ ಒಂದು ಹಕ್ಕಿಯನ್ನು ಕೊಲ್ಲುವುದೆಂದರೆ ನಿಜಕ್ಕೂ ಜಗತ್ತಿನೊಂದು ಮಾಂತ್ರಿಕ ಶಕ್ತಿಯನ್ನು ಕೊಂದುಹಾಕಿದಂತೆ” ಎಂದು ಬರೆದಿದ್ದಾಳೆ. ಕಡೆಗೆ ಇಲಾಜು ಮಾಡುವ ಮೂಲನಿವಾಸಿಯೊಬ್ಬ ಅವಳಿಗೊಂದು ಹದ್ದಿನ ಗರಿ ಕೊಟ್ಟ. ಅದು ತೀರ ಹಗುರವಾಗಿದ್ದ, ಮುಗ್ಧತೆಯ ಸಾಕಾರವಾಗಿದ್ದ, ಇನ್ನೇನು ಹಾರಿಹೋಗಲಿದೆ ಎನ್ನಿಸುವಂತಿದ್ದ ಗರಿ. ಬೆಂಕಿಬಿದ್ದರೂ ಸುಟ್ಟುಹೋಗದ ಗರಿ. ಇಲಾಜು ಮಾಡುವವನು ಹುಡುಗನಾಗಿದ್ದಾಗ ಅವನ ಮನೆಗೆ ಬೆಂಕಿ ಬಿದ್ದಿತ್ತಂತೆ. ಎಲ್ಲವನ್ನೂ ದಹಿಸಿದ ಆ ಬೆಂಕಿ ಹದ್ದಿನ ಗರಿಗಳನ್ನು ಮಾತ್ರ ಮುಟ್ಟಲಿಲ್ಲವಂತೆ. ಆ ಗರಿಗಳು ಇನ್ನೂ ಹೊಗೆಯಾಡುತ್ತಿದ್ದ ಬೂದಿಯ ಮೇಲೆ ಏನನ್ನೋ ಕಳೆದುಕೊಂಡಂತೆ ತೇಲುತ್ತಿದ್ದವಂತೆ.

ನಾನು ಹೈಸ್ಕೂಲಿನಲ್ಲಿ ಓದುತ್ತಿರುವಾಗ ‘ಚಂದಮಾಮ’ ಪತ್ರಿಕೆಯ ಹಿಂಬದಿಯಲ್ಲಿ ಕಲಾವಿದ ಎಂ.ಟಿ.ವಿ. ಆಚಾರ್ಯರು ರಚಿಸಿದ ‘ಜಟಾಯು’ವಿನ ಚಿತ್ರವಿತ್ತು. ರಾಮಾಯಣದಲ್ಲಿ ರಾವಣ ಸೀತೆಯನ್ನು ಕದ್ದೊಯ್ಯುತ್ತಿರುವಾಗ ಜಟಾಯು ಆಕಾಶ ಮಧ್ಯದಲ್ಲಿಯೇ ಅವನ ಜೊತೆ ಯುದ್ಧಕ್ಕಿಳಿದನಷ್ಟೆ. ಆ ಸಂದರ್ಭದ ಬಣ್ಣನೆಯಾಗಿದ್ದ ಚಿತ್ರದಲ್ಲಿ ರಾವಣನ ಖಡ್ಗಕ್ಕೆ ಸಿಕ್ಕಿದ ಜಟಾಯುವಿನ ಗರಿಗಳು ತಮ್ಮ ರಕ್ತಸಿಕ್ತ ಸ್ಥಿತಿಯನ್ನು ಮಿಂಚಿಸುತ್ತ ಕೆಳಗೆ ಬೀಳುತ್ತಿರುವ ದೃಶ್ಯ ಎದೆ ನಡುಗಿಸುವಂತಿತ್ತು.
ನಮ್ಮ ಪುರಾಣಗಳ ಪ್ರಕಾರ ವಿನತೆಗೆ ಇಬ್ಬರು ಮಕ್ಕಳು – ಗರುಡ ಮತ್ತು ಅರುಣ. ಗರುಡ ‘ಗಾಳಿ ಕಡೆಯಲು ಸೆಟೆದ ಬೆಳ್ಳಿಮಂತು’; ಕುವೆಂಪು ಬರೆದಿರುವಂತೆ, “ನೀಡದೊಳ್ ಬಳೆದು, ಕಾಡಿನಲಿ ಹಾರಾಡಿದಾ ಗರುಡಶಿಶು, ಗರಿ ಬಲಿತಮೇಲಲ್ಪದೇಶಂಗಳಂ ಚರಿಸಿ ತಣಿವುದೆ? ವಿಯದ್ವಿಸ್ತೀರ್ಣಮಂ ಬಯಸಿ ಕೈಕೊಳ್ವುದಾಕಾಶ ಪರ್ಯಟನಮಂ”. ಅರುಣನಾದರೋ ಕಾಲಕ್ಕೆ ಮುಂಚೆ ಹುಟ್ಟಿ ಹೆಳವನಾದವನು. ಅವನಿಗೆ ಸಂಪಾತಿ ಮತ್ತು ಜಟಾಯು ಎಂಬ ಇಬ್ಬರು ಮಕ್ಕಳು. ಒಮ್ಮೆ ಇಬ್ಬರೂ ತಮ್ಮ ತಮ್ಮ ವೇಗವನ್ನು ಪರೀಕ್ಷಿಸಿ ತಿಳಿಯುವುದಕ್ಕಾಗಿ ಆಕಾಶದಲ್ಲಿ ತುಂಬ ಮೇಲೆ ಹೋದರು. ಜಟಾಯುವಿಗೆ ಸೂರ್ಯನ ತಾಪ ತಟ್ಟದಿರಲೆಂದು ಸಂಪಾತಿ ಅವನ ಮೇಲೆ ತನ್ನ ರೆಕ್ಕೆಗಳನ್ನು ಹರಡಿಕೊಂಡು ಹಾರುತ್ತಿದ್ದ. ಕಡೆಗೆ ಅವನ ರೆಕ್ಕೆಗಳೆಲ್ಲವೂ ಸುಟ್ಟುಹೋದವು. ಹಾಗೆ ಸುಟ್ಟುಹೋಗುತ್ತಿರುವಾಗ ಅದೆಷ್ಟು ಗರಿಗಳು ಕೆಳಗೆ ಬಿದ್ದವೋ.
ನಮ್ಮಲ್ಲಿ ಹಕ್ಕಿಪಿಕ್ಕಿಯವರು, ಏಷ್ಯಾದ ಕೆಲವು ಬುಡಕಟ್ಟು ಜನಾಂಗಗಳವರು ತಮ್ಮ ತಲೆಗೆ ಬಣ್ಣಬಣ್ಣದ ಹಕ್ಕಿಗರಿಗಳನ್ನು ಸಿಕ್ಕಿಸಿಕೊಳ್ಳುವುದುಂಟಷ್ಟೆ. ಲ್ಯಾಟಿನ್ ಅಮೆರಿಕದ ಇಂಡಿಯನರಲ್ಲಿ ಶತ್ರುಗಳನ್ನು ಕೊಲ್ಲಬಲ್ಲ ಪರಾಕ್ರಮಿಗಳಷ್ಟೇ ಅಂಥ ಭಾಗ್ಯವಂತೆ. ಅದೇ ರೀತಿ ಹಿಂದೊಂದು ಕಾಲದಲ್ಲಿ ಹಂಗೆರಿಯಲ್ಲಿ ತುಕರ್ೀಯರನ್ನು ಕೊಂದವರು ಮಾತ್ರ ತಲೆಗೆ ಹಕ್ಕಿಗರಿಗಳನ್ನು ಸಿಕ್ಕಿಸಿಕೊಂಡು ಶೋಭಿಸುತ್ತಿದ್ದರಂತೆ. ಹೀಗೆ ಶೋಭಿಸಬೇಕಾದರೆ ಹಕ್ಕಿಗರಿಗಳೇನು ಎಲ್ಲೆಂದರಲ್ಲಿ ಬಿದ್ದಿರುತ್ತವೆಯೆ? ಗರಿಗಳ ಆಸೆಗಾಗಿ ಹಕ್ಕಿಗಳನ್ನು ಕೊಲ್ಲಬೇಕಷ್ಟೆ.
ಹಕ್ಕಿಗರಿಯೇ ಬರೆಯುವ ಸಾಧನವಾಗಿದ್ದ ಕಾಲವೊಂದಿತ್ತು. ಅದು ಲೋಹದ ನಿಬ್ಬುಗಳಿನ್ನೂ ಬಳಕೆಗೆ ಬಂದಿರದ ಕಾಲ. ಆಗ ಬರೆಯುವ ಟೇಬಲಿನ ಮೇಲೆ ಒಂದು ಬದಿಯಲ್ಲಿ ಮಸಿ ತುಂಬಿದ ದೌತಿಯೂ ಹಕ್ಕಿಗರಿಯೂ ಸಿದ್ಧವಾಗಿರುತ್ತಿದ್ದವು. ಆದರೆ ಹೊರಗೆಲ್ಲೋ ಅಡ್ಡಾಡುತ್ತಿರುವಾಗ ಬರೆಯಬೇಕೆಂಬ ಹುಕ್ಕಿ ಬಂದರೆ ಬರೆಯುವುದಾದರೂ ಹೇಗೆ? ಇಂಗ್ಲಿಷ್ ಕಾದಂಬರಿಕಾರ ಸರ್ ವಾಲ್ಟರ್ ಸ್ಕಾಟ್ ಒಂದು ದಿನ ಬೇಟೆಯಾಡುತ್ತಿದ್ದಾಗ ಅವೊತ್ತು ಬೆಳಗ್ಗಿನಿಂದಲೂ ಅವನು ಯಾವ ವಾಕ್ಯಕ್ಕಾಗಿ ಒದ್ದಾಡುತ್ತಿದ್ದನೋ ಆ ವಾಕ್ಯ ಇದ್ದಕ್ಕಿದ್ದಂತೆ ಅವನ ತಲೆಯೊಳಗೆ ಮಿಂಚಿತು. ತಡಮಾಡಿದರೆ ಆ ವಾಕ್ಯವೇ ಮರೆತುಹೋಗಬಿಡಬಹುದೆಂದುಕೊಂಡ ಅವನು ತಕ್ಷಣ ಕಾಗೆಯೊಂದಕ್ಕೆ ಗುಂಡಿಕ್ಕಿ ಅದರದೊಂದು ಗರಿಯನ್ನು ಮುರಿದುಕೊಂಡ. ಆಮೇಲೆ ಆ ಗರಿಯ ಕಾಂಡದ ಮೊನೆಯನ್ನು ಕಾಗೆಯ ರಕ್ತದಲ್ಲದ್ದಿ ಆ ವಾಕ್ಯವನ್ನು ಕಾಗದದ ಮೇಲೆ ಬರೆದಿಟ್ಟುಕೊಂಡನಂತೆ.
ಯಿದ್ದಿಷ್ ಭಾಷೆಯ ಲೇಖಕ ಐಸಾಕ್ ಬಾಷೆವಿಸ್ ಸಿಂಗರ್ ಬರೆದ ಒಂದು ಪ್ರಸಿದ್ಧ ಕತೆ ‘ಎ ಕ್ರೌನ್ ಆಫ್ ಫೆದರ್ಸ್’ (ಗರಿಗಳ ಕಿರೀಟ). ಅದರಲ್ಲಿ ಆಖ್ಸಾ ಎಂಬ ತಬ್ಬಲಿ ಹುಡುಗಿಯ ಅಜ್ಜ ಅವಳಿಗೊಬ್ಬ ಗಂಡು ಹುಡುಕುತ್ತಾನೆ. ಆದರೆ ಮೊದಲೇ ಅಸುನೀಗಿರುವ ಅವಳ ಅಜ್ಜಿಯ ಅಶರೀರವಾಣಿಯ ಪ್ರಕಾರ ಯೇಸುಕ್ರಿಸ್ತ ದೇವರ ಮಗನೆಂದು ಸೂಚಿಸುವ ವಸ್ತುವೊಂದು ಅವಳ ತಲೆದಿಂಬಿನೊಳಗಿದೆ! ಏನದು? ಶಿಲುಬೆಯ ಚಿತ್ರವುಳ್ಳ ಒಂದು ಗರಿಗಳ ಕಿರೀಟ! ಅದರಿಂದ ಪ್ರಭಾವಿತಳಾಗುವ ಆಖ್ಸಾ ಕ್ಯಾಥೊಲಿಕ್ ಧರ್ಮಕ್ಕೆ ಮತಾಂತರಗೊಂಡು ಪೋಲಿಷ್ ಲಂಪಟನೊಬ್ಬನನ್ನು ಮದುವೆಯಾಗಿ ಅನೇಕ ಸಂಕಷ್ಟಗಳಿಗೆ ಗುರಿಯಾಗುತ್ತಾಳೆ. ಕಡೆಗೆ ಅವಳಿಗೆ ಗೊತ್ತಾಗುತ್ತದೆ – ಆ ಅಶರೀರವಾಣಿ ತನ್ನ ಅಜ್ಜಿಯದಲ್ಲ, ಅವಳನ್ನು ಹಿಡಿದುಕೊಂಡಿದ್ದ ದೆವ್ವದ್ದು ಎಂದು. ಮುಂದೆ ಅವಳು ತನ್ನ ಯಹೂದ್ಯ ಸಮುದಾಯಕ್ಕೇ ಹಿಂತಿರುಗಿ ಹಿಂದೊಮ್ಮೆ ತನ್ನ ಅಜ್ಜ ಸೂಚಿಸಿದ್ದ ಹುಡುಗನನ್ನೇ ಮದುವೆಯಾದರೂ ಅವಳ ಬದುಕು ಸುಖ ಕಾಣುವುದಿಲ್ಲ. ಸಾಯುವ ಮುನ್ನ ಅವಳು ತನ್ನ ತಲೆದಿಂಬಿನೊಳಗೆ ದೇವರ ಹೆಸರನ್ನು ಪ್ರತಿನಿಧಿಸುವಂಥ ಹೀಬ್ರೂ ಭಾಷೆಯ ನಾಲ್ಕು ಅಕ್ಷರಗಳಿರಬೇಕೆಂದು ಊಹಿಸುತ್ತಾಳೆ. ಸತ್ತ ಮೇಲೆ ಅವಳ ಬೆರಳುಗಳಲ್ಲಿ ಹಕ್ಕಿಗರಿಗಳಿರುತ್ತವೆ.

ಹೀಗೆ ಸಂತೋಷದ, ಉಲ್ಲಾಸದ ಸಂಕೇತವಾಗಿರುವ ಹಕ್ಕಿಗರಿಯೊಳಗೆ ಜೀವಂತವಾದದ್ದೇನೋ ಉಂಟು. ಗಾಳಿಯ ಆವರಣದಲ್ಲಿ ಮೇಲಕ್ಕೂ ಕೆಳಕ್ಕೂ ತೇಲಾಡುವುದರಲ್ಲೇ ಅದರ ಆಕಾಶದ ಕನಸಿರಲಿಕ್ಕೆ ಸಾಕು. ಅದಕ್ಕೆ ಮೋಡಗಳ ಒಳಹೊರಗು ಚೆನ್ನಾಗಿ ಗೊತ್ತು.
ನಮ್ಮ ಬೇಂದ್ರೆಯವರ ಕವಿ ಹೃದಯ ‘ಬಿದ್ದ ಪುಚ್ಚಗಳಲ್ಲಿ ಹುಡುಕುವೆ ಹಾರಿ ಹೋಗುವ ಹಕ್ಕಿಯಾ’ ಎಂದಿರುವುದುಂಟು. ಅವರ ‘ಗರಿ’ ಎಂಬ ಕವಿತೆಯ ಬಗ್ಗೆ ಶಂಕರ ಮೊಕಾಶಿ ಪುಣೇಕರರ ವಿಶ್ಲೇಷಣೆಯನ್ನು ನೋಡಿ: “ಭಾವಸಾಮ್ರಾಜ್ಯವು ‘ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆ’ಯಂತೆ ವಿಸ್ತಾರವಾದದ್ದು. ಅದು ಜಗತ್ತಿನ ಎಲ್ಲ ಹಕ್ಕಿಗಳು ವಿರಳವಾಗಿ, ತಾಕಲಾಟವಿಲ್ಲದೆ ವಿಹರಿಸಲು ಸಾಕಾಗುವಷ್ಟು ವಿಸ್ತಾರವಾಗಿದೆ. ಈ ಭಾವಸಾಮ್ರಾಜ್ಯದಲ್ಲಿ ಒಂದು ‘ಹಕ್ಕಿಗಾಳಿ’ ಪ್ರವಹಿಸುತ್ತದೆ…. ಈ ‘ಹಕ್ಕಿಗಾಳಿ’ಯಲ್ಲಿ ಹಕ್ಕಿಯೊಡನೆ ಒಂದಾದ ಕವಿಯು ತೇಲುತ್ತಿದ್ದಾನೆ. ಅವನ ಒಟ್ಟಂದದ ಭಾವಜೀವನವೇ ಅವನ ಒಟ್ಟಂದದ ಕಾವ್ಯ. ಆದರೆ ಅದರಲ್ಲಿ ಹಲವಾರು ಗರಿಗಳು ಮಾತ್ರ ಉದುರುತ್ತ ಉದುರುತ್ತ ಪಕ್ಷಿಯ ಉಡ್ಡಾಣದ ನಕ್ಷೆಯನ್ನು ಮಾತ್ರ ಆಗಸದಲ್ಲಿ ಬರೆದಿವೆ. ಈ ಗರಿಗಳೇ ಕವನಗಳು….” (‘ಬೇಂದ್ರೆ ಕಾವ್ಯಮೀಮಾಂಸೆ’ ನೋಡಿ).
ಬೇಂದ್ರೆಯವರ ಕವಿದೃಷ್ಟಿಯಲ್ಲಿ ರಸಿಕನಾದವನು ಗರಿಯನ್ನು ನೋಡಿಯೇ ಹಕ್ಕಿಯ ಬದುಕಿನ ಸಮಗ್ರ ಚಿತ್ರವನ್ನು ಕಲ್ಪಿಸಿಕೊಳ್ಳಬಲ್ಲ. ಇಷ್ಟಕ್ಕೂ ಗರಿ ಎಂದರೇನು? ‘ಹಾರಲೆಂದು ಹುಟ್ಟಿದಾ ಹಕ್ಕಿ ಮೈಯ ಬದುಕದು’. ಆದ್ದರಿಂದ ನೆಲಕ್ಕೆ ಬಿದ್ದವೆಂದು ಕಡೆಗಣಿಸದೆ
ಗರಿಗಳನ್ನು ಅಂಗೈಯಲ್ಲಿಟ್ಟುಕೊಂಡು ಉಫ್ ಎಂದು
ಊದಿ ತೂರಿ ಹಾರಿಸು
ಹಾರಿದಷ್ಟು ಹಾರಲಿ
ಹಾರಲೆಂದು ಹುಟ್ಟಿದಾ
ಹಕ್ಕಿ ಮೈಯ ಗರಿಗಳು.
 

‍ಲೇಖಕರು G

12 June, 2015

6 Comments

  1. Soory Hardalli

    Good article. Thank you Mr. Divakar.

    • Anonymous

      Thank you all.
      Diwakar

  2. Hanumanth Ananth Patil

    ಎಸ್ ದಿವಾಕರರವರಿಗೆ ವಂದನೆಗಳು
    ’ಹಕ್ಕಿಯ ಮೈಯ ಬದುಕು’ ಒಂದು ಸಶಕ್ತ ಬರವಣಿಗೆಯ ಮತ್ತು ಓದುಗನನ್ನು ಆಹ್ಲಾದಗೊಳಿಸುವ ಚಿಂತನೆಗೆ ಹಚ್ಚುವ ಲೇಖನ ಹಕ್ಕಿಯ ಗರಿ ಕುರಿತ ಜಗತ್ತಿನ ಲೇಖಕರ ಭಾವಾಭಿವ್ಯಕ್ತಿಯನ್ನು ನಮಗೆ ನೀಡಿದ್ದೀರಿ, ಶಂಕರ ಮೊಕಾಸಿ ಪುಣೇಕರರು ಬೇಂದ್ರೆಯವರ ಗರಿ ಕವನ ಕುರಿತು ಬರೆದ ವಿಮರ್ಶಾ ಲೇಖನದ ಸಾಲುಗಳನ್ನು ನೀವು ಉಲ್ಲೇಖಿಸಿರುವುದು
    ಬರಹದ ಗಹನತೆಯನ್ನು ಹೆಚ್ಚಿಸಿವೆ.

  3. Shrinivas. Huddar

    ‘ಹಕ್ಕಿಯ ಮೈಯ ಬದುಕು’ ದಿವಾಕರ ಅವರ ಒಂದು ಲೇಖನ ಓದಿದರೆ ಜಗತ್ತಿನ ಅನೇಕ ಭಾಷೆಗಳ ಅನೇಕ ಲೇಖನಗಳನ್ನು ಓದಿದ ಅನುಭವ ನಮಗಾಗುತ್ತದೆ.ಈ ಲೇಖನದ ಕೊನೆಗಂತೂ ನಮ್ಮ ನೆಲದ ಕವಿಯ ವಿಚಾರ ತಿಳಿಸಿದ್ದಾರೆ. ವಂದನೆಗಳು ಅವಧಿ.

  4. S Diwakar

    Thank you all.

  5. Usha Phatak

    ನವಿಲು ಗರಿಯ ಬಣ್ಣ ಬಣ್ಣದ ನವಿರನ್ನು ಅನುಭವಿಸಿ ಪುಸ್ತಕದ ಮಧ್ಯೆ ಜೋಪಾನವಾಗಿರಿಸಿಕೊಳ್ಳುತ್ತಿದ್ದ
    ಹಿತ, ರವಿವರ್ಮನ ಜಟಾಯುವಧೆಯ ಚಿತ್ರ ಕಂಡು ಕಳೆದುಹೋದದ್ದು ಸತ್ಯ!
    ಲೇಖನ ಓದುತ್ತಿದ್ದಂತೆ ಗರಿಗರಿಯಾದ ನಿರ್ಜೀವ ಗರಿಯೂ, ಮೇಲಕ್ಕೂ ಕೆಳಕ್ಕೂ ಹಗುರಾಗಿ ಹಾರಾಡುತ್ತ
    ಉಸಿರಾಡುತ್ತಿರುವಂತೆ ಕಂಡಿತು.. ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading