ಪರಮೇಶ್ವರ್ ಗುರುಸ್ವಾಮಿ
ಸಿರ್ಸಿ ಸರಣಿ
ಇತ್ತೀಚಿನ ನನ್ನ ಹಕ್ಕಿ ಛಾಯಾಗ್ರಹಣ ಆಸಕ್ತಿಯನ್ನು ಮೆಚ್ಚಿಕೊಂಡಿರುವ ಲೋಕೇಶ್ ಎಂ., ತಾವು ಡಿಸೆಂಬರ್ ವರೆಗೆ ಸಿರ್ಸಿಯಲ್ಲಿ ಇರವುದಾಗಿ, ಅಲ್ಲಿಗೆ ಬನ್ನಿ, ಇನ್ನಷ್ಟು ಗೆಳೆಯರು(ಪಕ್ಷಿಗಳು) ಸಿಗುತ್ತಾರೆ ಎಂದು ಕರೆದಿದ್ದರು. ಇವರು ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಡೆಸುವ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿ. ಇನ್ನು ಸಂಧ್ಯಾ ರಾಣಿಯವರು ಕಾಂಕ್ರೀಟ್ ಗಿಂತ ಹಸಿರೇ ಇಷ್ಟ ಎಂದಿದ್ದರು. ಸಿರ್ಸಿಗೆ ಹೊರಡುವುದನ್ನು ಒಂದೆರಡು ಸಲ ಮುಂದಕ್ಕೆ ಹಾಕಿದವನು ಕೊನೆಗೆ ಇದ್ದ ಅಷ್ಟೇನು ಮುಖ್ಯವಲ್ಲದ ಒಂದೆರಡು ಕೆಲಸಗಳನ್ನೇ ಮುಂದಕ್ಕೆ ಹಾಕಿ ಹೊರಟುಬಿಟ್ಟೆ. ಈ ಸಿರ್ಸಿ ಸರಣಿ, ಲೋಕೇಶ್ ಮತ್ತು ಸಂಧ್ಯಾ ಅವರಿಗೆ.
ಸಿರ್ಸಿಗೆ ಪ್ರವೇಶಿಸುವ ಮೊದಲು ಚಿಪ್ಗಿ ಕ್ರಾಸ್ ನಲ್ಲಿ ಇಳಿಯಿರಿ. ತರಬೇತಿ ನಡೆಯುತ್ತಿರುವ ಸ್ಥಳಕ್ಕೆ ಹತ್ತಿರ ಎಂದಿದ್ದರು ಲೋಕೇಶ್. ಬೆಳಿಗ್ಗೆ 6.30ಕ್ಕೆ ಅಲ್ಲಿಗೆ ತಲುಪ ಬೇಕಿದ್ದ ಬಸ್ಸು 7.30ಕ್ಕೆ ತಲುಪಿತು. ಅಲ್ಲಿಯವರೆಗೂ ಅವರು ಅಲ್ಲಿಯೇ ಕಾಯುತ್ತಿದ್ದರು. ಅಲ್ಲೇ ಒಂದು ರೌಂಡ್ ಟೀ ಕುಡಿದು ಜಿಲ್ಲಾ ತರಬೇತಿ ಕೇಂದ್ರದೆಡೆ ಹೆಜ್ಜೆ ಹಾಕಿದೆವು. ದಾರಿಯಲ್ಲಿ ಒಂದೆರಡು ಪಕ್ಷಿಗಳು ಸಿಕ್ಕವು. ನಾನು ಕ್ಯಾಮೆರಾ ಹೊರತೆಗೆಯಲಿಲ್ಲ. ನನ್ನಿಂದ ನಿಧಾನವಾಗಿ ಅವರಿಗೆ ತೊಂದರೆಯಾಗದಿರಲಿ ಅಂತ ನಾನು. ಅವರು, “ಸಿಕ್ಕಿದ ತಕ್ಷಣ ಫೋಟೋ ತೆಗೆದು ಬಿಡಬೇಕಂತೆ. ಆಮೇಲೆ ಸಿಗಬಹುದು ಸಿಗದಿರಲೂ ಬಹುದು” ಎಂದರು.
ಬಸ್ ಇಳಿದ ತಾವಿನಲ್ಲಿ ಟೀ ಕುಡಿಯುವಾಗಲೇ ಲೋಕೇಶ್ ಮತ್ತು ಟೀ ಅಂಗಡಿಯವನು ಅಲ್ಲಿದ್ದ ಇನ್ನೊಬ್ಬರು ಸೇರಿ ನನಗೆ ಪಕ್ಷಿತಜ್ಞನ ಪಟ್ಟ ಕಟ್ಟಿ ನಾನು ಅತ್ತಿವೇರಿ ಪಕ್ಷಿಧಾಮಕ್ಕೆ ಹೊಗುವುದೇ ಸರಿ ಎಂದು ತೀರ್ಮಾನವಾಗಿತ್ತು. ನಾನು ಹಕ್ಕಿಗಳ ಫೋಟೋ ತೆಗೆಯಲಾರಂಭಿಸಿದ್ದೇ ಅಬ್ಬಬ್ಬ ಎಂದರೆ ನಾಲ್ಕು ತಿಂಗಳಿಂದೀಚೆಗೆ. ನನಗೆ ಸಿಕ್ಕ ಪಕ್ಷಿಯ ಹೆಸರು ಮತ್ತಿತರ ವಿಷಯಗಳನ್ನು ನಾನು ತಿಳಿದುಕೊಳ್ಳವುದು ನಂತರವೇ. ಅದಕ್ಕೆ ಮೊದಲು ನನಗೆ ಆ ಹಕ್ಕಿಯ ಬಗ್ಗೆ ಏನೆಂದರೆ ಏನೂ ಗೊತ್ತಿರುವುದಿಲ್ಲ. ತಮ್ಮ ನಿತ್ಯ ಜಂಜಡಗಳೇ ಸಾಕಷ್ಟಿರುವ ಜನರಿಗೆ ಈ ಜಂಜಡಗಳಾಚೆಗೆ ಆಸಕ್ತಿ ಬೆಳೆಸಿಕೊಂಡವರ ಬಗ್ಗೆ ಆಸಕ್ತಿ ಮತ್ತು ಗೌರವ ( ಎದುರಿನಲ್ಲಿ. ಹಿಂದೆ ಆಡಿಕೊಳ್ಳಲೂ ಬಹುದು.).
ಶಿಬಿರದಲ್ಲಿದ್ದವರಲ್ಲಿ ಕೆಲವರ ಪ್ರೀತಿ ಆದರಕ್ಕೆ, ನಾನೇ ಒಂದು ಪಕ್ಷಿ ಅವರ ಬಳಿಗೇ ಬಂದಿದ್ದೀನೋ ಎಂಬಂಥ ಕುತೂಹಲಕ್ಕೆ ಒಡ್ಡಿಕೊಳ್ಳಬೇಕಾಯಿತು. ನಾ ಅಲ್ಲಿಗೆ ಹೋಗುವುದರ ಬಗ್ಗೆ ಅವರಿಗೆ curtain raiser ಆಗಿತ್ತು!
ಶಿಬಿರಾರ್ಥಿಗಳಲ್ಲಿ ಒಬ್ಬರಾದ ರಾಘವೇಂದ್ರ ಪೂಜಾರಿಯವರು ನನಗೆ ಅವರ ಬೈಕ್ ಕೊಡುವುದೂ ನಾ ಹೋಗುವ ಮೊದಲೇ ನಿರ್ಧಾರವಾಗಿತ್ತು.
(ಇನ್ನೂ ಇದೆ…)
0 ಪ್ರತಿಕ್ರಿಯೆಗಳು