ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸ್ವ್ಯಾನ್’ ಕೃಷ್ಣಮೂರ್ತಿಗೆ ಪ್ರಶಸ್ತಿ

ಕನ್ನಡ ಹೋರಾಟಗಾರ ನಾ. ಶ್ರೀಧರ ಅವರಿಗೆ ‘ಕನ್ನಡ ಚಿರಂಜೀವಿ’ ಪ್ರಶಸ್ತಿ..

ಅಪರೂಪದ ಕನ್ನಡ ಪರಿಚಾರಕ ಆಳ್ಲ ಚಿರಂಜೀವಿ ೧೯೯೮ರಲ್ಲಿ ಕಣ್ಮರೆಯಾದರು. ಕೇಂದ್ರ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು ಅವಿವಾಹಿತರಾಗಿಯೇ ಉಳಿದು ತಮ್ಮ ಬಹುಪಾಲು ಸಂಪಾದನೆಯನ್ನು ಕನ್ನಡ ಕೆಲಸಗಳಿಗೆ ವಿನಿಯೋಗಿಸಿದರು. ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಚಿರಂಜೀವಿ ಬದುಕಿನುದ್ದಕ್ಕೂ ಕನ್ನಡಸೇವೆ ಮಾಡಿದರು. ಈ ಅನನ್ಯ ಕನ್ನಡ ಪರಿಚಾರಕನ ನೆನಪಿನಲ್ಲಿ ಕನ್ನಡ ಕಾರ್ಯಕರ್ತರಿಗೇ ಮಿಸಲಾದ ‘ಕನ್ನಡ ಚಿರಂಜೀವಿ’ ಪ್ರಶಸ್ತಿಯನ್ನು ಕನ್ನಡ ಗೆಳೆಯರ ಬಳಗವು ನೀಡುತ್ತಾ ಬಂದಿದೆ.

೨೦೨೧ರ ‘ಕನ್ನಡ ಚಿರಂಜೀವಿ’ ಪ್ರಶಸ್ತಿಯನ್ನು ಕನ್ನಡ ಹೋರಾಟಗಾರ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾ. ಶ್ರೀಧರ ಅವರಿಗೆ ನೀಡಲಾಗುತ್ತಿದೆ. ವಿದ್ಯಾರ್ಥಿ ದೆಸೆಯಿಂದ ಕನ್ನಡಪರ ಹೋರಾಟದಲ್ಲಿ ತೊಡಗಿಕೊಂಡು ಗೋಕಾಕ್ ಚಳವಳಿಯ ನಂತರ ಎಲ್ಲ ಹೋರಾಟಗಳ ಮುಂಚೂಣಿಯಲ್ಲಿರುವ ಶ್ರೀಧರ ಬಿ.ಇ.ಎಲ್. ಕರ್ನಾಟಕ ಹಿತ ರಕ್ಷಕ ಸಮಿತಿ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು, ಮಾಗಡಿ ರಸ್ತೆ ಜಾಗೃತ ನಾಗರೀಕ ವೇದಿಕೆ ಮುಂತಾದ ಸಂಘಟನೆಗಳ ಮೂಲಕ ಮಾಡಿರುವ ಹೋರಾಟ, ಸೇವೆಗಳನ್ನು ಪಟ್ಟಿ ಮಾಡಿದರೆ ನಾಲ್ಕಾರು ಪುಟಗಳಾಗುತ್ತವೆ.

ಕನ್ನಡ ಪರಿಚಾರಕ ಸ್ವ್ಯಾನ್ ಕೃಷ್ಣಮೂರ್ತಿ ಅವರಿಗೆ ‘ಕನ್ನಡ ಅರವಿಂದ’ ಪ್ರಶಸ್ತಿ..

ಬೆಳಗಾವಿ ಕನ್ನಡಪರ ಹೋರಾಟಕ್ಕೆ ಗಟ್ಟಿಯ ನೆಲೆ ಒದಗಿಸಿದ ಅರವಿಂದರಾಯ ಜೋಶಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಚಟುವಟಿಕೆಗೆ ವಿಸ್ತಾರವಾದ ವೇದಿಕೆಯನ್ನು ನಿರ್ಮಿಸಿದವರು. ಅಪ್ಪಟ ದೇಶಾಭಿಮಾನಿ, ಸ್ವಾತಂತ್ರ್ಯ ಸೇನಾನಿ, ಬೆಳಗಾವಿಯಲ್ಲಿ ಪ್ರಥಮ ಕನ್ನಡ ಶಾಲೆ ಆರಂಭಿಸಿದವರು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರು, ಕೇಂದ್ರ ಗೃಹ ಸಚಿವರಿಗೆ ಕಾರ್ಯದರ್ಶಿಯಾಗಿದ್ದಾಗಲೂ ಕರ್ನಾಟಕವನ್ನು ಮರೆಯಲಿಲ್ಲ. ಜೋಶಿ ಅವರ ನೆನಪಿನಲ್ಲಿ ಕನ್ನಡ ಪರಿಚಾರಕರಿಗೆ ‘ಕನ್ನಡ ಅರವಿಂದ’ ಪ್ರಶಸ್ತಿಯನ್ನು ಬಳಗವು ನೀಡುತ್ತದೆ.

೨೦೨೧ರ ‘ಕನ್ನಡ ಅರವಿಂದ’ ಪ್ರಶಸ್ತಿಯನ್ನು ಕನ್ನಡ ಪರಿಚಾರಕ, ಸ್ವ್ಯಾನ್ ಪ್ರಿಂಟರ್ಸ್ ಮಾಲೀಕ, ಬರಹಗಾರ ಕೃಷ್ಣಮೂರ್ತಿ ಅವರಿಗೆ ನೀಡಲಾಗುತ್ತಿದೆ. ರಾಜ್ಯದ ಪ್ರತಿಷ್ಠಿತ ಮುದ್ರಣಾಲಯಗಳಲ್ಲೊಂದಾದ ಸ್ವ್ಯಾನ್ ಪ್ರಿಂಟರ್ಸ್ ನಲ್ಲಿ ಕನ್ನಡದ ಪ್ರತಿಷ್ಠಿತ ಸಾಹಿತಿಗಳ ಪುಸ್ತಕಗಳನ್ನು ಮುದ್ರಿಸಿರುವ ಕೃಷ್ಣಮೂರ್ತಿಯವರು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಇಪ್ಪತ್ತು ಸಾವಿರ ಕನ್ನಡ ಪುಸ್ತಕಗಳಿರುವ ಗ್ರಂಥಾಲಯ ತೆರದು ಗಡಿಯಲ್ಲಿ ಕನ್ನಡ ಕಂಪು ಹರಡುತ್ತಿದ್ದಾರೆ. ಕನ್ನಡಪರ ಕೆಲಸಗಳಿಗೆ ಮುದ್ರಣ ನೆರವು ಕೊಡುತ್ತಾರೆ. ಕನ್ನಡ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಕರ್ನಾಟಕದ ಮುದ್ರಣಾಲಯಗಳ ಸಮಗ್ರ ಇತಿಹಾಸದ ಬರವಣಿಗೆಯಲ್ಲಿ ತೊಡಿಗಿದ್ದಾರೆ.

ಉತ್ತಮ ಕನ್ನಡ ಶಾಲೆಗೆ ಗೌರವ

ಉತ್ತಮ ಖಾಸಗಿ ಕನ್ನಡ ಶಾಲೆ ಎಂಬ ಹಿರಿಮೆಯಿರುವ ಹಾವೇರಿ ಜಿಲ್ಲೆಯ ಕುಣಿಮೆಳ್ಳಿಹಳ್ಳಿ ಧರ್ಮಾವರ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಕನ್ನಡ ಶಾಲೆಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿದೇವಿ ಪಿ ಪಾಟೀಲ್ ಅವರಿಗೆ ವಿಶೇಷ ಗೌರವ ಅರ್ಪಿಸಲಾಗುತ್ತದೆ.

ಈ ಪ್ರಶಸ್ತಿಗಳನ್ನು ನವೆಂಬರ್ ೩೦ ರಂದು ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಅವರು ಪ್ರದಾನ ಮಾಡುವರು. ಡಾ. ಗೊ.ರು. ಚನ್ನಬಸಪ್ಪ ಅವರು ಅಧ್ಯಕ್ಷತೆಯಲ್ಲಿ ಕನ್ನಡ ಚಿಂತನೆ, ಕನ್ನಡ ಮಾಧ್ಯಮದಲ್ಲಿ ಓದಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಬಹುಮಾನ-ಸನ್ಮಾನ ಮಾಡಲಾಗುವುದು.

‍ಲೇಖಕರು Admin

11 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading