ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಳ್ಳು ಸುಳ್ಳೇ ಅನುವಾದಕರಿದ್ದಾರೆ ಎಚ್ಚರಿಕೆ!

ಅಜಯ ವರ್ಮ ಅಲ್ಲೂರಿ

ಬರವಣಿಗೆಯಲ್ಲಿ ತೊಡಗಿಕೊಂಡಿರುವ ಹೊಸ ತಲೆಮಾರಿನವರ ದೊಡ್ಡ ಸವಾಲೆಂದರೆ ಸುಳ್ಳು ಸಾಹಿತ್ಯದ ಪ್ರಚಾರ ಮಾಡುವ ಕೆಲವು ಕೀಚು ಪೀಚುಗಳನ್ನು ನೋಡುತ್ತಾ ಹೇಗೆ ಸುಮ್ಮನಿರುವುದು ಎನ್ನುವುದು.

ಶ್ರೇಷ್ಠ ಕಥೆಗಾರ ಚೆಖೊವ್, ಖ್ಯಾತ ಕಾದಂಬರಿಗಾರ್ತಿ ಟೋನಿ ಮಾರಿಸನ್ ಎಂದೂ ಬರಿಯದೇ ಇರುವ ಕವಿತೆಗಳನ್ನು ಕೆಲ ಮಹಾಶಯರು ಅನುವಾದಿಸುತ್ತಿದ್ದಾರೆ ಇಲ್ಲಿ.

ಅವರು ಕವಿತೆಯೇ ಬರೆದಿಲ್ಲವಲ್ಲ ಎಂದು ಬಹಿರಂಗವಾಗಿಯೇ ಕೇಳಿದರೆ, ‘ಬರೆದಿದ್ದಾರೆ ನೋಡ್ಕಳ್ಳಿ ‘ಎನ್ನೋದು, ಆಮೇಲೆ ‘ನಾಟಕದ ಸಂಭಾಷಣೆಯನ್ನೇ ಕವಿತೆಯಾಗಿಸಿದೀನಿ’ ಅನ್ನೋದು, ‘ಕಾದಂಬರಿಯ ಯಾವುದೋ ಸಣ್ಣ ಸನ್ನಿವೇಶವನ್ನು ಕವಿತೆಯಾಗಿಸಿದೀನಿ’ ಅನ್ನೋದು.

‘ಮೂಲ ಪಠ್ಯ ತೋರಿಸಿ’ ಅಂದ್ರೆ ಯಾವುದೋ ಅಸಂಬದ್ಧ ವಿರ್ಮಶಾ ಲೇಖನಗಳನ್ನೊ, ‘ಚೆರ್ರಿ ಆರ್ಚರ್ಡ್ ‘ಎಂಬ ಹೆಸರಲ್ಲಿ ಬೇರೆಯವರು ಬರೆದ ಪದ್ಯ ತೋರಿಸೋದು.

ಏನು ಇದೆಲ್ಲಾ? ಏಕೆ ಹೀಗೆ?

ಇರಲಿ ಚೆಖೊವ್ ನಾಟಕದಿಂದಲೇ ಯಾವುದೋ ಸಂಭಾಷಣೆಯನ್ನು ಕವಿತೆ ಮಾಡಿದ ಅಂದಿಟ್ಟುಕೊಳ್ಳೋಣ, ಆದರೆ ಈ ಅನುವಾದಿತ ಕವಿತೆಗೂ ಆ ನಾಟಕಕ್ಕೂ ಕೊಂಚವಾದರೂ ಸಂಬಂಧವಿದೆಯೇ ?

ನಾನು ಅನೇಕ ದಿನಗಳಿಂದ ನೋಡ್ತಾ ಇದ್ದೆ ನಿನ್ನೆ ತಡೆಯಲಾಗದೆ ಕೇಳಿದಾಗ ಅಲ್ಲಿ ಸುಳ್ಳುಗಳ, ವಿತಂಡವಾದದ ಜೋರು ಮಳೆ. ಕೊನೆಗೂ ತಪ್ಪು ಒಪ್ಪದ ತಪ್ಪಿತಸ್ಥರಿಗೆ ಏನು ಹೇಳುವುದು!!

ಅವುಗಳ ಮುಂದೆ ಮಾತನಾಡುವುದು ವ್ಯರ್ಥ ಅನ್ನಿಸಿ ಹುಸಿ ಅನುವಾದಕನನ್ನು, ಸುಳ್ಳೆಂದು ಗೊತ್ತಿದ್ದೂ ಗೆಳೆತನಕ್ಕಾಗಿ ಸ್ವಯಂಘೋಷಿತ ಅನುವಾದಕನನ್ನೇ ಸಮರ್ಥನೆ ಮಾಡಿಕೊಳ್ಳುವ ಮತ್ತೊಬ್ಬನನ್ನು ಬ್ಲಾಕ್ ಮಾಡಿದೆ.

ಈ ಕೆಳಗಿನ ಸ್ಕ್ರೀನ್ ಶಾಟ್ ಗಳನ್ನು ಸೂಕ್ಮವಾಗಿ ಓದಿ. ಏಕೆಂದರೆ ಈ ಮಹಾಶಯ ಅದನ್ನು ಡಿಲೀಟ್ ಮಾಡಿದ್ದಾನೆ. ನೀವು ಈಗ ಹುಡುಕಿದರೂ ಸಿಗಲ್ಲ. ಚೆರ್ರಿ ಆರ್ಚರ್ಡ್ ಓದಿದವರು ಹೇಳಿ ಈ ಪದ್ಯಕ್ಕೂ ಆ ನಾಟಕ್ಕೂ ಏನು ಸಂಬಂಧ ? ಯಾರು ಲೂಸ್ಟರ್? ಇದು ಅನುವಾದವೇ? ಅಥವಾ ಚೆಖೊವ್ ಗೆ ಮಾಡಿದ ಅವಮಾನವೇ??

 

‍ಲೇಖಕರು Avadhi

11 July, 2018

4 Comments

  1. ಆರನಕಟ್ಟೆ ರಂಗನಾಥ

    ಅಜಯ್ ೯ನೇ ತಾರೀಖು ಈ ಬರಹವ ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಅನುವಾದದಲ್ಲಿ ತೊಡಗಿಸಿಕೊಂಡಿರುವ ಅಜಯ್ ರ ಪ್ರಶ್ನೆಗಳು ನೇರಾ ನೇರಾ ಹೊಸ ತಲೆಮಾರಿನೆಡೆಗೆ ಬೊಟ್ಟು ಮಾಡಿದೆ. ಅವರು ಕೈತೋರಿರುವ ತಲೆಮಾರಿನ ಅನುವಾದಕನೆಂಬ ಹಿನ್ನಲೆಯಲ್ಲಿ ಅಜಯ್ ರ ಮಾತಿಗೆ ಪ್ರತಿಕ್ರಿಯೆ ಕೊಡುತ್ತಿರುವೆ. ತನ್ನ ಗಮನಕ್ಕೆ ಬಂದ ಅನುವಾದ ಹಾಗು ಅನುವಾದಕರ ಬರಹಗಳನ್ನು ಅನುವಾದವೆ ಎಂದು ಪ್ರಶ್ನಿಸಿದ್ದಾರೆ.? ಮುಖ್ಯವಾಗಿ ಅನುವಾದಕರು ನಡೆದ ದಿಕ್ಕು ತಪ್ಪಿದ ಜಾಡನ್ನು ಗುರುತಿಸಿರುವ ಅಜಯ್ ಎತ್ತಿರುವ ಪ್ರಶ್ನೆ “ಎಂದೂ ಬರೆಯದ ಕವಿತೆಗಳ ಅನುವಾದ ಸಾಧ್ಯವೆ? ಎಂಬುದರ ಕಡೆಗಿದೆ.ಸಹಜವಾಗಿ ಅನುವಾದವು ಒಂದು ಮೂಲ ಪಠ್ಯವನ್ನು ಆಧರಿಸಿಯೆ ಇರುವುದು. ಮೂಲ ಪಠ್ಯದ ಸ್ವರೂಪ ಎಂತಹದ್ದು ಎಂಬುದನ್ನು ಕೂಡ ತನಗೆ ಒಗ್ಗಿಸಿಕೊಳ್ಳುವ ಅನುವಾದಕ ಉಲ್ಲೇಖಿಸುವುದೊಂದು ನೈತಿಕ ನಡೆಯಾಗಿರುತ್ತದೆ. ಕವಿತೆ ಕತೆಗಳಿಂದ ಪ್ರೇರಿತಗೊಂಡೊ, ಅದರ ಸಾಲುಗಳನ್ನು ಮಥಿಸಿಕೊಂಡು ಬಳಸುವ ಬರಹ ಬರಹಗಾರರನ್ನು ಕದೀಮನೆಂದೆ ಕರೆಯುವುದು ವಾಡಿಕೆ. (ಈ ನಿಟ್ಟಿನಲ್ಲಿ ಅನುವಾದಕ ಸ್ವಲ್ಪಮಟ್ಟಿಗೆ ಸ್ವತಂತ್ರ.ನಾನಿಲ್ಲಿ ಅನುವಾದದ ಪರಿಭಾಷೆಗಳ ತಾಂತ್ರಿಕ ಚರ್ಚೆಗೆ ಇಲ್ಲಿ ತೊಡಗುವುದು ಸೂಕ್ತವಲ್ಲ.) ಅಜಯ್ ರ ಪ್ರಶ್ನೆ ಅವರು ಪ್ರಶ್ನಿಸುತ್ತಿರುವ ಅನುವಾದಕರಲ್ಲಿ ಹಾಗು ಬೆಂಬಲಿಗರಲ್ಲಿ ಒಂದೇ ಆಗಿದೆ. ಅದು ಮೂಲವನ್ನು ಏಕೆ ಮರೆಮಾಚುವಿರಿ ಎಂಬುದು. ಅನುವಾದವು ಹೊಸತನವ ಮೈಗೂಡಿಸಿಕೊಳ್ಳುವ ಹೆಜ್ಜೆಗಳೆಂದೆ ಅರ್ಥೈಸಿಕೊಂಡಿರುವ ನನಗೆ ತಕರಾರುಗಳನ್ನು ವಿಸ್ತೃತ ಚರ್ಚೆಯ ಮೂಲಕ ತೆರೆದುಕೊಳ್ಳದ್ದರ ಕಾರಣಕ್ಕೆ ಪ್ರಶ್ನೆಗಳು ಉಳಿದಿವೆ. ಅಜಯ್ ರ ಕೇಳ್ವಿಗಳು ನನ್ನದೂ ಆಗಿವೆ. ಕತೆ, ಕವಿತೆ ಹೀಗೆ ನಾನಾ ಸಾಹಿತ್ಯದ ಓದಿಗೆ ಪ್ರಭಾವಿತರಾಗಿ ತಾವರಿತ ಭಾಷೆಯೊಳಗೆ ಕಟ್ಟಿಕೊಡುವ ಪ್ರಯತ್ನಗಳಲ್ಲಿರುವ ಪ್ರಾಮಾಣಿಕತೆಯನ್ನು ಅದರ ಮೂಲದ ಚರ್ಚಿಸುವ, ಉಲ್ಲೇಖಿಸುವ ನಿಟ್ಟಿನಲ್ಲಿ ಒಪ್ಪಿಕೊಳ್ಳುವಲ್ಲಿಯೂ ಉತ್ಸಾಹಿ ಅನುವಾದರು ಬದ್ಧರಾಗಬೇಕಿದೆ. ಇರದ ಅರಿವಿರದೆ ಮೆಚ್ಚಿಸುವ ಭರದಿಂದ ಅನುವಾದ ಹಾಗೂ ಅನುವಾದಕರ ಕಡೆಗೆ ಅಸೂಕ್ಷ್ಮರಾಗಿ ಬೆಂಬಲಿಸುವವರು ಕೂಡ ಆರೋಗ್ಯಪೂರ್ಣರಾಗುವುದು ಸದ್ಯದ ತುರ್ತು. ಅಜಯ್ ಎತ್ತಿರುವ ಪ್ರಶ್ನೆಗಳು ಆರೋಗ್ಯಪೂರ್ಣವಾದವು..

  2. Chaitra Gowda

    ಪ್ರೀತಿಯ ಅಜಯ್, ನೀವು ಕವಿತೆಯ ಬಗ್ಗೆ ತಾಳಿರುವ ಅಭಿಪ್ರಾಯದಂತೇ ಅನುವಾದಕರು ಅಮೂರ್ತವನ್ನು ಮೂರ್ತ ರೂಪಕ್ಕೆ ತಂದಿದ್ದಾರೆ. ಹಾಗಾಗಿ ಚೆಕಾವ್ ಗೆ ಇಲ್ಲಿ ಅವಮಾನ ಮಾಡಲಾಗಿದೆ ಎಂದರೆ ನಾನು ಒಪ್ಪಲಾರೆ. ಇದುವರೆಗೆ ಕನ್ನಡದಲ್ಲಿ ಆಗಿರುವ ಶೇಕ್ಸ್ ಪಿಯರ್ ನ ಯಾವುದೇ ನಾಟಕಗಳು ಅನುವಾದದ ದೃಷ್ಟಿ ಯಲ್ಲಿ ಪರಿಪೂರ್ಣ ಎನ್ನಿಸಿಲ್ಲ. ಯಾಕೆಂದರೆ ಒಂದಷ್ಟು ಕೊಡು-ಕೊಳ್ಳುವಿಕೆ ಅನುವಾದದಲ್ಲಿ ಇದ್ದೇ ಇರುತ್ತದೆ. ಇದು ಅನುವಾದಕ್ಕಿರುವ ಕೊರತೆಯೂ ಹೌದು. ತೇಜಸ್ವಿ ಹೇಳಿದಂತೆ, ಅರ್ಥವಿಲ್ಲದ ಹರಟೆಯಲ್ಲಿ ಕಾಲಹರಣ ಮಾಡಬೇಡಿ. ಇಂತಹ ಬರಹಗಳು ‘ಅವಧಿ’ಗೆ ಶೋಭೆ ಕೊಡುವುದಿಲ್ಲ‌

  3. ಅಜಯ್ ವರ್ಮಾ ಅಲ್ಲೂರಿ

    ಮೇಡಂ ನಮಸ್ತೆ,

    ೧.

    ಕಾವ್ಯವನ್ನು ಅಮೂರ್ತ ಭಾವಗಳ ಮೂರ್ತ ರೂಪ ಎಂದು ಅಂದುಕೊಂಡಿರುವುದು ಕೇವಲ ನನ್ನ ವಯಕ್ತಿಕ ವಿಚಾರ. ಕಾವ್ಯಾನುವಾದವು ಮೂಲ ಕಾವ್ಯದ ಪ್ರತಿಬಿಂಬ ಆಗಿರುತ್ತದೆ.ಬಿಡಿಸಿ ಹೇಳುವದಾದರೆ ಯಾವುದೇ ಅನುವಾದಕ್ಕೆ ಮೂಲ ಭಾಷಿಕ ಪಠ್ಯ(Text of the source language) ಇರುತ್ತದೆ.ಅನುವಾದವು ಆ ಮೂಲ ಪಠ್ಯದ ಆಧಾರದಲ್ಲಿಯೇ ಇರುಬೇಕಾಗುತ್ತದೆ.
    ಹೀಗಿರುವಾಗ ಅನುವಾದಕ್ಕೆ ನೀವು ಅದೇಗೆ ಅಮೂರ್ತೆಯ ಪದವನ್ನು ಅಂಟಿಸುವಿರಿ.

    ಮೇಲ್ಕಾಣಿಸಿದ, ಅನುವಾದ ಕವಿತೆ ಎಂದು ಹೇಳಿಕೊಂಡ ಆ ಬರಹದ ಮಟ್ಟವನ್ನು
    ನಾನು ಪ್ರಶ್ನೆಗೆಳೆಯುತ್ತಿಲ್ಲ.ಹಾಗೆ ನೋಡಿದರೆ ಸುತ್ತಲಿನ ಎಲ್ಲ ಬರಹಗಾರರ, ಅನುವಾದಕರ ಬರಹಗಳ ಅನುವಾದಗಳ ಮಟ್ಟವನ್ನು ಅಳೆದು ತೂಗಿ, ವಿಮರ್ಶೆಗೆ ಒಳಪಡಿಸುವ ಜರೂರಿ ನನಗಿಲ್ಲ. ನಾನು ಅದಕ್ಕೆ ಎಷ್ಟರ ಮಟ್ಟಿಗೆ ಅರ್ಹನೋ ನನಗೂ ತಿಳಿದಿಲ್ಲ.

    ೩.

    ನನ್ನ ಸದ್ಯದ ಪ್ರಶ್ನೆ ತುಂಬಾ ಸ್ಪಷ್ಟವಾಗಿದೆ:
    ಮೂಲದಲ್ಲಿ ಇಲ್ಲದೇಯಿರುವ ಈ ಸಂಪೂರ್ಣ ಕವಿತೆಯನ್ನು (ನಾಟಕೀಯ ಸಂಭಾಷಣೆಯ ಮಾದರಿಯಲ್ಲೂ ಸದ್ಯದ ಅನುವಾದನ್ನು ಸಮರ್ಥಿಸುವಂತೆ ಮೂಲದಲ್ಲಿಲ್ಲ) ಅದೇಗೆ ಅನುವಾದ ಎಂದು ಕರೆದಿರುವುದರ ಬಗ್ಗೆ. ಅನುವಾದ ಎಂದರೆ ಏನು ಅಂತ ‘ಈ ತಪ್ಪು ಮಾಡಿದವರಿಗೆ’ ಗೊತ್ತಿಲ್ಲದೆ ಹೀಗೆ ಮಾಡಿರಬಹುದು ಎಂದುಕೊಂಡು ಸುಮ್ಮನಿರಲೂ ಆಗುವುದಿಲ್ಲ.ಮೇಲಿನ ಸ್ಕ್ರೀನ್ ಶಾಟ್ ಗಳಲ್ಲಿಯ ಅವರ ವಿತಂಡವಾದವೇ ಇದಕ್ಕೆ ಸರಿಯಾದ ಸಾಕ್ಷಿ.

    ೪.

    ಈ ಮೇಲ್ಕಾಣಿಸದ ಕವಿತೆಯನ್ನು ಅನುವಾದವೆಂದು ನಾನು ಕರೆಯಲಾರೆ ಎನ್ನುವುದರ ಬಗ್ಗೆ ಒತ್ತಿ ಹೇಳಬೇಕಾಗಿಲ್ಲ.ಅದರ ಜೊತಗೆ ಇದು ಅನುಸೃಜನವೂ, ಭಾವಾನುವಾದವೂ ಸಹ ಅಲ್ಲ. ಶೀರ್ಷಿಕೆ ಓದಿದ ಮೇಲೆ ಚೆಖೊವ್ ನಾಟಕದ ರೂಪಾಂತರದಂತೆ ಮೇಲುನೋಟಕ್ಕೆ ಕಂಡರೂ ಇದು ರೂಪಾಂತರವಲ್ಲ.

    ೫.

    ಇಂತವರನ್ನು ಹೊರಗೆ ಎಳೆದು ನಾನು ಹೆಸರು ಗಳಿಸಿದ್ದೇನೆ, ಅವರನ್ನು ಅವಮಾಸಿದ್ದೇನೆ ಎಂದುಕೊಳ್ಳುವ ಸಣ್ಣತನವೂ ನನದಲ್ಲ. ”ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರೂ ನೋಡಲಾರರು ”ಎಂಬ ಇಂತಹ ಕೆಲವು ತಿಳಿವಳಿಕೆಗಳನ್ನು ತಪ್ಪು ಎಂದು ಅರ್ಥ ಮಾಡಿಸುವುದು ಮಾತ್ರ ನನ್ನ ಪ್ರಯತ್ನವಾಗಿತ್ತು.ಅಷ್ಟೇ.

    ೬.

    ಕ್ಷಮಿಸಿ ಇದಕ್ಕಿಂತೂ ಹೆಚ್ಚಿಗೆ ಏನೂ ಮಾತನಾಡಲಾರೆ. ” ಅರ್ಥವಿಲ್ಲದ ಹರಟೆಯಲ್ಲಿ ಕಾಲಹರಣ ಮಾಡಲಾರೆ”.

  4. Satyanarayana

    ಇದು ಪದಗಳ ಜಗಳವಲ್ಲ; ವ್ಯಕ್ತಿ ವ್ಯಕ್ತಿ ನಡುವಿನ ಅಹಂನ ಜಗಳ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading