
ಹಸನ್ ನಯೀಂ ಸುರಕೋಡ
೧೯೮೪ರ ಒಂದು ದಿನ ಕೋಟಿಗಾನಹಳ್ಳಿ ರಾಮಯ್ಯ ಜೊತೆ ಸಾರಾ ಅಬೂಬಕ್ಕರ್ ಮನೆಗೆ ಹೋಗಿದ್ದೆ. ಮುಂಗಾರು ಪತ್ರಿಕೆಗೆ ಅವರ ಸಂದರ್ಶನ ಆರಂಭಿಸುವುದಕ್ಕೆ ಮುನ್ನ ಲೋಕಾಭಿರಾಮವಾಗಿ ಮಾತನಾಡುತ್ತ ರಾಮಯ್ಯ ಒಂದು ಗುಟ್ಟನ್ನು ಬಿಚ್ಚಿಟ್ಟ.
“ನಿಮ್ಮನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ್ದು ಲಂಕೇಶ್ ಪತ್ರಿಕೆ. ಅದು ಹೇಗೆ ಎನ್ನುವುದು ನಿಮಗೆ ಗೊತ್ತಿಲ್ಲ.” ಎಂದು ಮಾತು ಮುಂದುವರಿಸಿದ. ಸುಂದರ ಕನ್ನಡ ಅಕ್ಷರಗಳಿಂದ ಆಕರ್ಷಿತನಾದ ಅವನು ಆ ಹಸ್ತಪ್ರತಿಯನ್ನು ಕೈಗೆತ್ತಿಕೊಂಡ. ಎರಡು ಸಲ ಓದಿದ. ಓದು ಮುಗಿಸಿದ ಮೇಲೆ ಮನೆಗೆ ತೆರಳುವ ಮುನ್ನ ಅದನ್ನು ಮೇಸ್ಟ್ರ ಟೇಬಲ್ ಮೇಲಿರಿಸಿ ಹೊರಟನಂತೆ.

ಮಾರನೇ ದಿನ ಅವನು ಕಾರ್ಯಾಲಯಕ್ಕೆ ಬಂದವನೇ ಹಸ್ತಪ್ರತಿ ನೋಡಿದರೆ ಅದು ಮೇಸ್ಟ್ರ ಟೇಬಲ್ ಮೇಲಿರಲಿಲ್ಲ. ಸುಮಾರು ಒಂದು ಗಂಟೆ ನಂತರ ಮೇಸ್ಟ್ರು ಬಂದರು. ಅವರು ಆ ಬಗ್ಗೆ ಏನೂ ಮಾತಾಡದೆ ಅವನೊಂದಿಗೆ ಹರಟತೊಡಗಿದರು. ಅವನು ತನ್ನ ಜಾಗಕ್ಕೆ ಹೋಗಿ ತನ್ನ ಕೆಲಸದಲ್ಲಿ ತೊಡಗಿದ. ಹಸ್ತಪ್ರತಿ ಕಸದ ಬುಟ್ಟಿಯಲ್ಲಿ ಕಂಡಿದ್ದ. ಅವನಿಗೆ ಬಹಳ ಬೇಜಾರೆನಿಸಿತ್ತು. ಅದನ್ನು ಎತ್ತಿಕೊಂಡು ಬರಹವನ್ನು ಮತ್ತೊಮ್ಮೆ ಓದಿದ. ಹಸ್ತಪ್ರತಿಯೊಂದಿಗರ ಮೇಸ್ಟ್ರ ಬಳಿ ಹೋಗಿ ಅದನ್ನು ಮತ್ತೊಮ್ಮೆ ಓದಿರೆಂದು ಅವರಿಗೆ ಹೇಳಿ ಅಲ್ಲಿಂದ ಹೊರಬಂದನಂತೆ.
ಸಾಯಂಕಾಲದಷ್ಟೊತ್ತಿಗೆ ಮೇಸ್ಟ್ರು , “ರಾಮಯ್ಯ ಆಯಮ್ಮನಿಗೆ ಕರೆ ಮಾಡಪ್ಪ.” ಎಂದರಂತೆ.
ಕರೆಗೆ ಉತ್ತರಿಸತೊಡಗಿದ ಸಾರಾ ಅಬೂಬಕ್ಕರ್ ಅವರಿಗೆ “ಕಾದಂಬರಿ ತುಂಬ ಹಿಡಿಸಿತು. ಅದನ್ನು ಪ್ರೆಸ್ಗೆ ಈಗಲೇ ಕಳಿಸುವೆ. ಇನ್ನು ನೀವು ಪತ್ರಿಕೆಗೆ ನಿಯಮಿತವಾಗಿ ಬರೆಯುವಿರಾ?” ಎಂದು ಕೇಳಿದರಂತೆ.
“ಹೌದಾ? ನೀವು ಅಲ್ಲಿರದಿದ್ದರೆ ನಾನು ನಾನಿರುವೆಡೆ ಅನಾಮಧೇಯಳಾಗಿ ಇದ್ದುಬಿಡುತ್ತಿದ್ದೆ.” ಎಂದು ಸಾರಾ ಹೇಳಿದರು.
ಈಗ ಅವರು ಇನ್ನು ನಮ್ಮ ಮಧ್ಯೆ ಇಲ್ಲವಾಗುತ್ತಾರೆಯೆನ್ನಲಾಗದು. ಅವರು ಕನ್ನಡ ಸಾರಸ್ವತಲೋಕದಲ್ಲಿ ಅಮರರಾಗಿರುತ್ತಾರೆ ಎಂದು ಹಿಂಜರಿಕೆಯಿಲ್ಲದೆ ಹೇಳಬೇಕಾಗಿದೆ.
ಉರ್ದುವಿನ ಮಂಟೊ ತುಂಬ ನಿರ್ಭೀತ ಲೇಖಕ. ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಲೇಖಕಿ ಇಸ್ಮತ್ ಚುಗ್ತಾಯಿ. ಹಾಗೆಯೆ ಕನ್ನಡದಲ್ಲಿ ಬೊಳುವಾರು ಮಹಮ್ಮದ್ ಕುಂಜ್ಞಿ ಹಾಗೂ ಅವರಷ್ಟೇ ಧರ್ಯಶಾಲಿ ಲೇಖಕಿ ಸಾರಾ ಅವರು.
ಸಾರಾ ಅವರನ್ನು ಮತ್ತೆ ಭೇಟಿಯಾಗುವುದು ನನಗೆ ಸಾಧ್ಯವಾಗಲಿಲ್ಲ. ಅವರಿಗೆ ಕೊನೆಯದಾಗಿ ನಮಸ್ಕಾರ ಹೇಳುವೆ.






0 Comments