ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಏಕೆ?’, ಜುಗಾರಿ ಕ್ರಾಸ್ ನಲ್ಲಿ

ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಏಕೆ?            

– ಶ್ರೀಧರ ಪಿಸ್ಸೆ

ಸುಳಿವ ಜಾಡು ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿರುವ ಸುದ್ದಿ ಕಳೆದ 2011ರ ಜುಲೈ ತಿಂಗಳಿನಲ್ಲಿ ಪ್ರಕಟವಾದ ನಂತರ ಈ ಕುರಿತು ಸಾಕಷ್ಟು ವ್ಯಾಪಕವಾಗಿ ಚರ್ಚೆ ನಡೆದಿದೆ. ಅವಸಾನದ ಹಾದಿ ಹಿಡಿದಿರುವ ವಿಶ್ವದ ಹಲವು ಭಾಷೆಗಳಲ್ಲಿ ಕನ್ನಡವೂ ಒಂದೆಂಬ ವಿಶ್ವಸಂಸ್ಥೆಯ ವರದಿ ಪ್ರಕಟವಾದ ನಂತರದಲ್ಲಿ ಇದು ಕನ್ನಡಿಗರನ್ನು ಆತಂಕಕ್ಕೆ ದೂಡಿತು. ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಸುಧಾರಿಸುವ ಬಗ್ಗೆ, ಈ ದಿಕ್ಕಿನಲ್ಲಿ ಸರಕಾರ ವಹಿಸಬೇಕಾದ ಪಾತ್ರದ ಬಗ್ಗೆ ಪುಂಖಾನುಪುಂಖವಾಗಿ ಪುಕ್ಕಟೆ ಸಲಹೆ ಸೂಚನೆಗಳು ವ್ಯಕ್ತವಾಗಿವೆ. ಇವನ್ನು ಮೂರು ವಿಧವಾಗಿ ಗುರುತಿಸಬಹುದು. 1. ಕನ್ನಡ ಪರ ಸಂಘ ಸಂಸ್ಥೆಗಳು ಮತ್ತು ಕನ್ನಡ ಪರ ಚಿಂತಕರ ವೇದಿಕೆಗಳು ಕನ್ನಡದ ಆತಂಕವನ್ನು ತಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿ ಕೈಗೆತ್ತಿಕೊಂಡಿದ್ದು, ಮತ್ತು ಕನ್ನಡ ಜಾಗೃತಿ ಮೂಡಿಸುವ ಕೆಲಸದಲ್ಲಿ ತಮ್ಮನ್ನೇ ಬಿಂಬಿಸಿಕೊಂಡು ಸ್ವಾಭಿಮಾನದ ಹೆಸರಿನಲ್ಲಿ ವಿವೇಚನಾರಹಿತ ದುರಭಿಮಾನ ವ್ಯಕ್ತಪಡಿಸಿದ್ದು. 2. ದೇಶಭಾಷೆ (ಕನ್ನಡ)ಅಭಿವೃದ್ಧಿ ಪರ ಚಿಂತನೆ ಕುರಿತು; ಉದಾಹರಣೆಗೆ-ಕನ್ನಡಿಗರಿಗೆ ಅಪ್ಪಟ ಕನ್ನಡ ಕಲಿಸುವ ಅಗತ್ಯ, ಗುಣಮಟ್ಟದ ಶಿಕ್ಷಣ, ಕನ್ನಡ ಮಾಧ್ಯಮದಲ್ಲೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ಆದ್ಯತೆ ಮೊದಲಾಗಿ ಮೇಲುಮಟ್ಟದ ತಾತ್ವಿಕ ಚರ್ಚೆ ಪ್ರಸಕ್ತ ಸಮಸ್ಯೆಯ ವಾಸ್ತವ ಸ್ಥಿತಿಗಳನ್ನು ಆಧರಿಸದೆ ಹೋದದ್ದು. 3. ಕನ್ನಡ ಅಭಿವೃದ್ಧಿಯ ಭಾಗವಾಗಿಯೆ ಇಂಗ್ಲಿಶ್ ಕಲಿಕೆಯ ಅಗತ್ಯತೆ ಪ್ರತಿಪಾದಿಸುವ ಅಭಿಪ್ರಾಯಗಳು ಇತ್ತೀಚೆಗೆ ಒಡಮೂಡತೊಡಗಿದ್ದು. ಈ ನಡುವೆ ಸರಕಾರಿ ಪ್ರಾಥಮಿಕ ಶಾಲೆಯ ಮಟ್ಟದಲ್ಲಿಯೆ ಇಂಗ್ಲಿಶ್ ಕಲಿಸುವ ಉತ್ಸಾಹ ಪ್ರಕಟಿಸಿದ್ದ ಸರಕಾರ, ಮುಚ್ಚುತ್ತಿರುವ ಶಾಲೆಗಳ ಕುರಿತ ಚರ್ಚೆ ತಾರಕಕ್ಕೇರಿದಂತೆ ವಿಲೀನಗೊಳಿಸುವ ಕಾರ್ಯಕ್ರಮ ಮುಂದಿಟ್ಟು ಗೊಂದಲಕ್ಕೆ ಒಳಗಾಯಿತು. ಆಗ ಈ ಯಾವ ಕ್ರಮಗಳನ್ನು ತೆಗೆದುಕೊಳ್ಳದೆ ಸರಕಾರ ಶಾಲೆಗಳ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ನ್ಯಾಯಾಲಯ ಸೂಚಿಸಿತು. ಇದರಿಂದ ಸರಕಾರ ತನ್ನ ಮತ್ತು ಕನ್ನಡ ಪರ ಇಮೇಜನ್ನು ಉಳಿಸಿಕೊಳ್ಳುವ ಅವಸರದಲ್ಲಿ ತೆಗೆದುಕೊಳ್ಳುವ ಅಪಾಯಕಾರಿ ನಿಲುವನ್ನು ತಡೆಗಟ್ಟಿದಂತಾಗಿದೆ. ಆದರೂ ಇವೆಲ್ಲವೂ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿದ ಮೂಲ ಸಮಸ್ಯೆಯನ್ನು ಕಂಡುಕೊಂಡು ನಡೆಸಿದ ಕಾರ್ಯವಿಧಾನ ಎನ್ನುವಂತಿಲ್ಲ. ಸಾಂಸ್ಕೃತಿಕ ರಾಜಕಾರಣ ಸಮಾಜದ ಬಡ ಮತ್ತು ಕೆಳ ಸಮುದಾಯಗಳಿಗೆ ಬಹುಪಾಲು ಸೀಮೀತವಾಗಿರುವ ಈಗಿನ ಸರಕಾರಿ ಶಾಲೆಗಳು ಸಮಾನ ಅವಕಾಶ ಕಲ್ಪಿಸುವ ಇಂದಿನ ಅಗತ್ಯ ಬೇಡಿಕೆಯನ್ನು ಪೂರೈಸುವ ಮಟ್ಟದಲ್ಲಿಲ್ಲ ಎಂಬ ಆರೋಪ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿಯೆ ಸರಕಾರ ಇಂಗ್ಲಿಶ್ ಕಲಿಸುವ ನಿರ್ಧಾರ ಪ್ರಕಟಿಸಿದ್ದು ಕೂಡ. ಸಮಾಜದ ಬಡ ಮತ್ತು ಕೆಳ ಸಮುದಾಯಗಳಿಗೆ ಇಂಗ್ಲಿಶ್ ಕಲಿಯುವ ಅವಕಾಶವನ್ನು ಸಕಲ ಸೌಲಭ್ಯ ಹೊಂದಿರುವ ಮೇಲು ವರ್ಗಗಳು ವಿರೋಧಿಸುವ ಮೂಲಕ ಕನ್ನಡ ಅವನತಿಯ ಬಗ್ಗೆ ಗುಲ್ಲೆಬ್ಬಿಸುತ್ತಿವೆ ಎಂದು ಹೇಳಲಾಗಿದೆ. ಇದು ಕನ್ನಡ ಹೆಸರಿನಲ್ಲಿ ಸಮಾಜದ ಬಹು ಸಮುದಾಯಗಳ ನಡುವೆ ನಡೆಯುತ್ತಿರುವ ಸ್ವ ಕೇಂದ್ರಿತ ರಾಜಕಾರಣವಷ್ಟೆ. ಈ ಮನಸ್ಥಿತಿ ವಾಸ್ತವ ಸಾಂಸ್ಕೃತಿಕ ರಾಜಕಾರಣಕ್ಕೆ ದೂರವೆಂದು ಹೇಳಲು ಆಗದಿದ್ದರೂ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪಲು ಕಾರಣವೆಂದು ಗುರುತಿಸಲಾಗದು. ಈಗಿನ ಶಿಕ್ಷಣ ಪರಿಸ್ಥಿತಿ ಶೈಕ್ಷಣಿಕ ಸಂಸ್ಥೆಯೊಂದರ ಉತ್ತಮ ಫಲಿತಾಂಶ ಆ ಸಂಸ್ಥೆಯಲ್ಲಿರುವ ಉತ್ತಮ ಶೈಕ್ಷಣಿಕ ಗುಣಮಟ್ಟದ ಸಂಕೇತವೆಂದು ನಂಬಿಸಲಾಗಿದೆ. ಹಾಗೆಯೇ ಉತ್ತಮ ಫಲಿತಾಂಶ ಪಡೆಯುವ ಸಲುವಾಗಿ ಪರೀಕ್ಷೆಗಳಲ್ಲಿ ನಕಲು ಮಾಡಲು ನೇರವಾಗಿ ಉತ್ತೇಜಿಸಲಾಗುತ್ತಿದೆ. ಇದು ಸರಕಾರಿ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳೆಲ್ಲವಕ್ಕೂ ಅನ್ವಯವಾಗುವ ಅಂಶ. ಇದಕ್ಕೆ ಶಿಕ್ಷಣದ ಮುಖ್ಯ ಗುರಿ ಪರೀಕ್ಷೆ ಮತ್ತು ಫಲಿತಾಂಶ ಕೇಂದ್ರಿತವಾಗಿರುವುದೂ ಕಾರಣವಾಗಿದೆ. ಉದ್ಯೋಗ ನಿಮಿತ್ತ ಅಧ್ಯಾಪಕರಾದವರು ತಮ್ಮ ಜವಾಬ್ದಾರಿ ಮರೆತು ಸೋಮಾರಿಗಳಾಗಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ನಕಲು ಮಾಡಿಸಿ ಫಲಿತಾಂಶ ಪಡೆಯುವ ಮಾರ್ಗ ಅನುಸರಿಸಿದ್ದಾರೆ. ಹಾಗಾಗಿ ನಕಲು ಅಕ್ಷರ ಕಲಿಸದ ಅಧ್ಯಾಪಕರ ಮತ್ತು ಕಲಿಯದ ಮಕ್ಕಳಿಗೆ ಅತ್ಯುತ್ತಮವಾಗಿ ಸಹಾಯಕ್ಕೆ ಬಂದಿದೆ. ಕಲಿಯುವ ಕಲಿಸುವ ಆಸಕ್ತಿಯನ್ನು ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಂಡಿರದ ಈ ಶಿಕ್ಷಕ ವರ್ಗ ತಮ್ಮ ಹುಟ್ಟೂರಿಗೆ ವರ್ಗಾವಣೆ ಮಾಡಿಸಿಕೊಂಡು ಕೃಷಿ ಚಟುಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ಇಲ್ಲ ಚೀಟಿ ವ್ಯವಹಾರ, ಅಂಗಡಿ ವ್ಯವಹಾರಗಳಲ್ಲಿ ನಿರತರಾಗುವುದು ಮುಂತಾದ ಗಳಿಕೆಯ ಇತರ ಕಾರ್ಯಗಳಲ್ಲಿ ಕಳೆದುಹೋಗಿದ್ದಾರೆ. ಕಾಲೇಜು ಮತ್ತು ಉನ್ನತ ಶಿಕ್ಷಣದಲ್ಲೂ ನಿರಾಸಕ್ತ ಅಧ್ಯಾಪಕ ವರ್ಗ ಮನೆಪಾಠ, ಚೀಟಿ ಮತ್ತಿತರ ವ್ಯವಹಾರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಇಲ್ಲವೆ ಶಿಕ್ಷಣೇತರ ಹುದ್ದೆಗಳಿಗೆ ತಮ್ಮನ್ನು ನಿಯುಕ್ತಿ ಮಾಡಿಸಿಕೊಳ್ಳುವುದು ನಡೆಯುತ್ತಿದೆ. ಅಂದರೆ ಉಪಭೋಗ ಜೀವನ ನಡೆಸಲು ಅಗತ್ಯವಾದ ಸಂಪತ್ತಿನ ಶೇಖರಣೆಯಲ್ಲಿ ಶಿಕ್ಷಕ ವರ್ಗ ಮೈಮರೆತಿದೆ. ಇದು ಸ.ರಘುನಾಥರಂಥ ಅತ್ಯುತ್ತಮ ಕ್ರಿಯಾಶೀಲ ಶಿಕ್ಷಕ ವರ್ಗ ಕಾಣೆಯಾಗುತ್ತಿರುವ ದ್ಯೋತಕವಾಗಿದೆ.   ಪ್ರಾಥಮಿಕ ಹಂತದಲ್ಲಿ ಅಕ್ಷರ ಕಲಿಯದೆ, ನಪಾಸಾಗದೆ ಮಾಧ್ಯಮಿಕ ಹಂತ ತಲುಪಿದ ವಿದ್ಯಾರ್ಥಿಗೆ ಆ ಹಂತ ಕಲಿಕೆಯ ಮೇಲಿನ ಹಂತವಾಗುತ್ತದೆ. ಅವನಿಗೆ ಮಾಧ್ಯಮಿಕ ಹಂತದಲ್ಲೆ ಕಲಿಯುವಿಕೆ ಅಸಾಮಾನ್ಯವಾಗಿಬಿಡುತ್ತದೆ. ಆತ ಕಲಿಯುವ ಪ್ರಯತ್ನ ಮಾಡದೆ ಅಕ್ಷರಗಳ ಪರಿಚಯದೊಂದಿಗೆ ಪ್ರೌಢಶಾಲೆಯ ಮೆಟ್ಟಿಲು ಏರುತ್ತಾನೆ. ವಿದ್ಯಾರ್ಥಿಯ ಕಲಿಕೆ ಮತ್ತು ವಿಷಯ ಗ್ರಹಿಕೆಯ ಮಟ್ಟಕ್ಕೂ ಪ್ರೌಢ ಮಟ್ಟದ ಪಠ್ಯ ವಿಷಯ ಮತ್ತು ನಿರೂಪಣೆಗಳ ನಡುವೆ ಅಂತರ ಉಂಟಾಗಿ ಕಲಿಕೆಯ ಪ್ರಕ್ರಿಯೆ ಮುರುಟುತ್ತ ಹೋಗುತ್ತದೆ ಮತ್ತು ಪ್ರಾಮಾಣಿಕ ಅಧ್ಯಾಪಕರು ಕಲಿಕೆಯ ತರಬೇತು ನೀಡುವ ಹಂತವನ್ನೂ ಮೀರುತ್ತದೆ. ಪರೀಕ್ಷೆ ಮತ್ತು ಫಲಿತಾಂಶ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಪರೀಕ್ಷೆಯಲ್ಲಿ ನಕಲು ಮಾಡುವುದು ಅನಿವಾರ್ಯವಾಗಿಹೋಗಿದೆ.ಹಾಗಾಗಿಯೇ ಅವರಿಬ್ಬರ ನಡುವೆ ಸುಪ್ತ ಒಪ್ಪಂದ ಏರ್ಪಡುತ್ತದೆ. ಕಲಿಯದೆಯೂ ನಪಾಸಾಗದೆ ಇರುವ ಈ ಕಲೆ ವ್ಯಕ್ತಿಯ ಜೀವನದಲ್ಲಿ ಉತ್ತಮ ವಿದ್ಯಾವಂತನೆಂಬ ಸರ್ಟಿಫೀಕೇಟನ್ನು ತಂದುಕೊಡುತ್ತದೆ. ವಿದ್ಯೆಯನ್ನು ಕಲಿಯದೆಯೆ ಅಡ್ಡ ಮತ್ತು ಸುಲಭದ ದಾರಿಯಲ್ಲಿ ಸರ್ಟಿಫಿಕೇಟುಗಳನ್ನು ಪಡೆದ ನಂತರದಲ್ಲಿ ಈ ಸರ್ಟಿಪೀಕೇಟುಗಳು ಉದ್ಯೋಗಕ್ಕಾಗಿ ಬೇಟೆ ನಡೆಸಲು ಅಗತ್ಯವಾದ ಆತ್ಮವಿಶ್ವಾಸ, ಉತ್ಸಾಹ, ಹುಮ್ಮಸ್ಸು ತಂದುಕೊಡುತ್ತದೆ. ಉದ್ಯೋಗ ಪಡೆಯಲು ವಿದ್ಯಾರ್ಹತೆ ನೆಪ ಮಾತ್ರವಾಗಿದ್ದು, ಹಣ ಮತ್ತು ರಾಜಕೀಯ ಶಿಫಾರಸ್ಸಿನ ಬಲ ಪ್ರಮುಖ ಪಾತ್ರ ವಹಿಸುತ್ತಿವೆ. ಮುಂದಿನ ಜೀವನದಲ್ಲಿ ಹಣ ಗಳಿಸುವುದು ಅತ್ಯಗತ್ಯ ಮತ್ತು ಜರೂರಿನದಾಗಿದ್ದು ಅದಕ್ಕಾಗಿ ನೌಕರಿಯೊಂದನ್ನು ಸರ್ವ ಪ್ರಯತ್ನಗಳೊಂದಿಗೆ ಪಡೆಯಲಾಗುತ್ತದೆ. ಇಂಥ ಅಭ್ಯರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಮಟ್ಟಗಳಲ್ಲಿ ಅಧ್ಯಾಪಕರಾಗಿಯೂ ನೇಮಕವಾಗುತ್ತಾರೆ. ಈ ಅಧ್ಯಾಪಕರು ತಾವೇ ಸರಿಯಾಗಿ ಕಲಿಯದಿದ್ದವರು, ಇನ್ನೂ ಶಾಲೆಗೆ ಬರುವ ಮಕ್ಕಳಿಗೆ ಕಲಿಸುವ ಮಾತು ದೂರವೇ ಉಳಿಯುತ್ತದೆ. ಶಾಲೆಗೆ ಸೇರಿದ ಮಕ್ಕಳ ಹೆಸರನ್ನು ಕಾಗುಣಿತ ತಪ್ಪಿಲ್ಲದೆ ಬರೆಯಲು ಬರದ ಅಧ್ಯಾಪಕರ ದೊಡ್ಡ ಸಂಖ್ಯೆಯೇ ಇಂದು ಪ್ರಾಥಮಿಕ ಶಾಲೆಗಳಲ್ಲಿ ಇರುವುದು ಮಕ್ಕಳ ದುರಾದೃಷ್ಟ. ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುವುದಾದರೆ, ಇಂಥ ಅಧ್ಯಾಪಕರೊಬ್ಬರು ಹಿರಿಯ ಅಧ್ಯಾಪಕರೆನಿಸಿ ಮುಖ್ಯೋಪಾಧ್ಯಾಯರಾಗಿ ಸಾಕಷ್ಟು ಕಾಲ ಸೇವೆ ಸಲ್ಲಿಸಿ ಮಕ್ಕಳ ಹೆಸರನ್ನು ದಾಖಲಾತಿ ಪುಸ್ತಕದಲ್ಲಿ ಸರಿಯಾಗಿ ನಮೂದಿಸದೆ ತದ ನಂತರದಲ್ಲಿ ತಿದ್ದಲೂ ಸಿದ್ಧವಿಲ್ಲದೆ ಆ ಮಕ್ಕಳ ಜೀವನದಲ್ಲಿ ಕಂಟಕರಾಗಿ ನಿಂತಿದ್ದಾರೆ, ಸರಕಾರಿ ಶಾಲೆಯಲ್ಲಿ ಇಂಥ ಅಧ್ಯಾಪಕರಿಂದ ಮಕ್ಕಳು ಏನನ್ನು ತಾನೇ ಕಲಿಯಲು ಸಾಧ್ಯ? ಅಕ್ಷರ ಕಲಿತ ತಂದೆತಾಯಿಯರು ತಮ್ಮ ಮಕ್ಕಳ ಕಲಿಕೆಯ ಜವಾಬ್ದಾರಿಯನ್ನು ತಾವೇ ಹೊರಬೇಕು ಇಲ್ಲದಿದ್ದ ಪಕ್ಷದಲ್ಲಿ ಕಲಿಸುವ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ತಂದೆತಾಯಿಯರು ಸರಕಾರಿ ಶಾಲೆಯ ಅಧ್ಯಾಪಕರಷ್ಟೆ ವಿದ್ಯಾವಂತರಾಗಿದ್ದರೆ ಅಥವಾ ತಾವು ಕೂಡ ಅರೆಬರೆ ವಿದ್ಯಾವಂತರಾಗಿದ್ದರೆ ಕಲಿಸುವ ಶಾಲೆಗೆ ಮಕ್ಕಳನ್ನು ಸೇರಿಸುವುದು ಅನಿವಾರ್ಯ. ಹೀಗೆ ಮಧ್ಯಮ ವರ್ಗದ ಮತ್ತು ನೌಕರಿದಾರರ ಮಕ್ಕಳು ಸರಕಾರಿ ಶಾಲೆಯಿಂದ ದೂರವಾದ ಮೇಲೆ ಇಂಗ್ಲಿಶ್ ಶಿಕ್ಷಣವೇ ಜೀವನದ ಹಾದಿಯೆಂದು ನಂಬಿರುವ ಬಡ ಮತ್ತು ತಳ ಸಮುದಾಯದ ಮಕ್ಕಳು ಸರಕಾರಿ ಶಾಲೆಯಿಂದ ದೂರವಾಗುತ್ತಿರುವುದು ಅಸಹಜವೇನಲ್ಲ. ಎಲ್ಲಿ ತಮ್ಮ ಮಕ್ಕಳಿಗೆ ನಿಜವಾದ ಕಲಿಕೆಯ ಅಗತ್ಯವಿದೆ ಎಂದು ಹೆತ್ತವರು ಮನಗಂಡಿದ್ದಾರೋ ಅಲ್ಲಿ ಅವರು ಸರಕಾರಿ ಶಾಲೆಗೆ ಸೇರಿಸದಿರುವ ಹಟವನ್ನೂ ತೊಟ್ಟಿರುತ್ತಾರೆ. ಹಾಗಾಗಿದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ತಗ್ಗಲು ಕಾರಣವಾಗಿದೆ. ಅನರ್ಹ ಅಧ್ಯಾಪಕರ ನೇಮಕ ಮಾಡಿಕೊಂಡಿರುವ ಸರಕಾರ ತಾನು ಎಡವಿರುವುದೆಲ್ಲಿ ಎಂದು ಆತ್ಮಾವಲೋಕನ ಮಾಡಿಕೊಂಡಲ್ಲಿ ಈ ಸಮಸ್ಯೆಯನ್ನು ಸರಿಪಡಿಸುವ ದಾರಿಗಳು ಕಾಣುತ್ತವೆ. ಅಧ್ಯಾಪಕರಾಗಿ ನೇಮಕಗೊಂಡ ಯಾವುದೇ ಅಭ್ಯರ್ಥಿಯ ಅಂಕಪಟ್ಟಿ ಆತನ ವಿದ್ಯಾರ್ಹತೆಯ ಗುಣಮಟ್ಟವನ್ನು ಸಾರುವುದಿಲ್ಲ ಎಂಬ ಸತ್ಯವನ್ನು ಮನಗಾಣಬೇಕಿದೆ. . ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವುದು ನಮ್ಮೆಲ್ಲರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ನೈತಿಕತೆಯೆ ಇಲ್ಲದ ಭ್ರಷ್ಟತೆ ತುಂಬಿಕೊಂಡಿರುವ ಸೂಚಕವಾಗಿದೆ. ನಮ್ಮ ಜೀವನದ ಕ್ರಮ ವಿಧಾನಗಳಲ್ಲಿ, ಮೌಲ್ಯಗಳಲ್ಲಿ, ಆದ್ಯತೆಗಳಲ್ಲಿ ಬದಲಾವಣೆಯಾಗಬೇಕಿದೆ. ಅಗತ್ಯ ನೈತಿಕತೆ ಮತ್ತು ಪ್ರಾಮಾಣಿಕತೆ ನಮ್ಮ ಜೀವನದ ಉಸಿರಾಗ ಬೇಕಿದೆ. ಕೇವಲ ಸೋಗು ಸಂಸ್ಕೃತಿಯನ್ನಷ್ಟೆ ಪೋಷಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಅಧೋಗತಿಯ ಚಲನೆಯನ್ನೆ ಉನ್ನತಿ ಸಾಧನೆಯ ಚಲನೆಯೆಂದು ಭ್ರಮಿಸಲಾಗುತ್ತಿದೆ. ಈ ಶೈಕ್ಷಣಿಕ ವಿಷಮ ಚಕ್ರದಿಂದ ಬಿಡುಗಡೆ ಹೊಂದುವ ಪ್ರಜ್ಞೆ, ಮೊಳೆತು, ಹೋರಾಟದ ಛಲ ಬೆಳೆದು ಸಾಧಕತನ ಮೈಗೂಡಿದಲ್ಲಿ ಮಾತ್ರ ಹೊಸಹಾದಿಯ ಕನಸು ಗರಿ ಕಟ್ಟುತ್ತದೆ. ನಕಾರಾತ್ಮಕ ಮುಖವನ್ನೆ ಪ್ರಮುಖವಾಗಿ ಚಿತ್ರಿಸಿದಂತೆ ಇದು ಕಾಣಬಹುದು. ಆದರೆ ನಕಾರಾತ್ಮಕ ಮುಖವೇ ನಮ್ಮ ಪ್ರಧಾನ ಮುಖವೂ ಆಗಿಬಿಟ್ಟಿರುವುದು ಸಮಸ್ಯೆಯ ಮೂಲವಾಗಿದೆ.]]>

‍ಲೇಖಕರು G

20 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading