ಸಕ್ರೆಬೈಲು ಮತ್ತು ತ್ಯಾವರೆಕೊಪ್ಪದ ಸವಿನೆನಪು
– ಚಿನುವ ಪೈಲೂರ್
ನಾನು ಈಗಷ್ಟೆ ಶಿವಮೊಗ್ಗದಿಂದ ಬೆಂಗಳೂರಿಗೆ ವಾಪಸಾಗಿದ್ದೇನೆ. ಶಿವಮೊಗ್ಗದಲ್ಲ್ಲಿ ಸಕ್ರೆಬೈಲು ಮತ್ತು ತ್ಯಾವರೆಕೊಪ್ಪಕ್ಕೆ ಭೇಟಿನೀಡಿದ್ದು ಬಹಳ ಖುಷಿಯಾಯ್ತು. ಅಲ್ಲಿನ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಯಲ್ಲಿ 12 ಕಿ.ಮೀ. ದೂರದಲ್ಲಿರುವ ಸಕ್ರೆೆಬೈಲಿನಲ್ಲಿ 17 ಆನೆಗಳಿವೆ. ಅವು ಅಲ್ಲಿನ ಕಾಡಿನಲ್ಲಿರುತ್ತವೆ. ಪ್ರತಿದಿನ ಬೆಳಿಗ್ಗೆ ಆರೂವರೆಗೆ ಮಾವುತರು ಕಾಡಿಗೆ ಹೋಗಿ ಆನೆಗಳನ್ನು ಎಂಟೂವರೆಯೊಳಗೆ ಸಕ್ರೆಬೈಲಿನ ಆನೆಬಿಡಾರಕ್ಕೆ ಕರೆದುಕೊಂಡು ಬರುತ್ತಾರೆ. ಅಲ್ಲಿನ ಆನೆಗಳ ಹೆಸರುಗಳು ಸೂರ್ಯ, ಆಲೆ, ಅಮೃತಾ, ರಂಗ, ಗಣೇಶ, ಅಯ್ಯಪ್ಪ, ಇಂದ್ರ, ನ್ಯೂ ಟಸ್ಕರ್, ಕಾವೇರಿ, ಕಪಿಲಾ, ಸಾಗರ, ಗಂಗೆ, ನೇತ್ರಾ, ಮಣಿಕಂಠ, ರಾಜೇಂದ್ರ, ಗೀತಾ. ಇನ್ನೊಂದು ಆನೆಯ ಹೆಸರು ಗೊತ್ತಿಲ್ಲ. ಅಲ್ಲೇ ಹತ್ತಿರ ಗಾಜನೂರು ಅಣೆಕಟ್ಟೆ ಇದೆ. ಅದರ ಹಿನ್ನೀರಿನಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಾರೆ. ಅಲ್ಲಿ ಸುಮಾರು 30 ಮೊಸಳೆಗಳಿವೆಯಂತೆ!
ಸೂರ್ಯ
ಒಂದೂವರೆ ವರ್ಷದ ಈ ಆನೆ ಅಲ್ಲಿರುವ ಎಲ್ಲ ಆನೆಗಳಿಗಿಂತ ಸಣ್ಣದು (ವಯಸ್ಸಿನಲ್ಲಿ ಮತ್ತು ಗಾತ್ರದಲ್ಲಿ). ಅದು ತುಂಬಾ ತುಂಟಾಟ ಮಾಡುತ್ತದೆ. ಎಂಟೂವರೆಗೆ ಅಲ್ಲಿ ಎಲ್ಲ ಆನೆಗಳಿಗೆ ಸ್ನಾನ ಮಾಡಿಸುವಾಗ ತನಗೆ ಮಾವುತರಿಲ್ಲ ಎಂದು ತುಂಟಾಟ ಮಾಡುತ್ತದೆ (ತುಂಟಾಟವೆಂದರೆ ನೀರಿನಿಂದ ಎದ್ದು ಬರುವುದು. ಬೇರೆ ಆನೆಯ ಮಾವುತರು ಹಿಡಿಯಲು ಬಂದಾಗ ಓಡಿ ನೀರಿಗೆ ಹಾರುವುದು. ಮಾವುತರಿಗೆ ಟೈಮ್ ವೇಸ್ಟ್ ಆಗುತ್ತದೆ ಅಷ್ಟೆ. ಇನ್ನೂ ಹಲವಾರು ತುಂಟಾಟಗಳನ್ನು ಅದು ಮಾಡುತ್ತದೆ).
ಆಲೆ (7 ವರ್ಷ)
ಇದು ಸುಮ್ಮನೆ ಇರುತ್ತದೆ. ಯಾರಿಗೂ ತೊಂದರೆ ಕೊಡುವುದಿಲ್ಲ. ಏನೂ ಮಾಡುವುದಿಲ್ಲ.
ಅಮೃತಾ (7 ವರ್ಷ)
ಇದು ಎಲ್ಲರಿಗೂ ಚೆಂದವಾಗಿ ಪೋಸ್ ಕೊಡುತ್ತದೆ. ಇದೇ ಅದರ ವಿಶೇಷ. ಇದೂ ಆಲೆಯ ತರಹನೇ.
ಕಪಿಲಾ (80 ವರ್ಷ)
ಇದು ಅಲ್ಲಿರುವ ಆನೆಗಳ ಪೈಕಿ ಎರಡನೇ ದೊಡ್ಡ ಆನೆ. ಇದಕ್ಕೆ ತಲೆಯ ಭಾಗದಲ್ಲಿ ಏನೋ ಆಗಿದೆ. ಆದರೆ ಅದಕ್ಕೆ ಇನ್ನೂ ಶಕ್ತಿ ಇದೆ.
ಇಲ್ಲಿ 17 ಆನೆಗಳಿಗೆ 16 ಮಾವುತರು. ಏಕೆಂದರೆ ಸೂರ್ಯ ಆನೆ ಸಣ್ಣದೆಂದು ಅದಕ್ಕೆ ಮಾವುತನಿಲ್ಲ. ಅದಕ್ಕೆ ಏಳು ವರ್ಷ ಆದ ಮೇಲೆ ಮಾವುತನು ಇರುತ್ತಾನೆ. ಅದಕ್ಕೆ ಎಲ್ಲ ಆನೆಗಳಿಗೆ ಹಾಕಿದಂತೆ ಸರಪಳಿ ಇರುವುದಿಲ್ಲ. ಏಳು ವರ್ಷ ಆದ ಮೇಲೆ ಅದಕ್ಕೂ ಸರಪಳಿ ಹಾಕುತ್ತಾರೆ.
ಅಲ್ಲಿ ಆನೆಗಳಿಗೆ ಊಟ ತಿನ್ನಿಸುವುದು ಹೇಗೆಂದರೆ ಹುಲ್ಲಿನಿಂದ ಬಾಕ್ಸ್ ತರಹ ಮಾಡಿ ಅದರೊಳಗೆ ಆರೋಗ್ಯಕರ ಬೀಜಗಳನ್ನು ಹಾಕಿ ತಿನ್ನಿಸುವುದು. ನಮಗೆ ಎಣ್ಣೆ ಹಚ್ಚುವ ಹಾಗೆ ಆನೆಗಳಿಗೂ ಎಣ್ಣೆ ಹಚ್ಚುತ್ತಾರೆ. ಹನ್ನೊಂದೂವರೆಗೆ ಆನೆಗಳನ್ನು ಕಾಡಿಗೆ ಕರೆದೊಯ್ಯುತ್ತಾರೆ.
ಸಕ್ರೆಬೈಲಿನಲ್ಲಿ ಆನೆ ಸವಾರಿ ಇತ್ತು. ಈಗ ಇಲ್ಲ. ಆದರೆ ಬೋಟಿಂಗ್ ಇದೆ.
ಏಕೆ ಇಲ್ಲಿನ ಆನೆಗಳಿಗೆ ತರಬೇತಿ ಕೊಡುತ್ತಾರೆಂದರೆ ಪುಂಡಾನೆಗಳನ್ನು ಇಲ್ಲಿ ಪಳಗಿಸಲು.
ಸಕ್ರೆಬೈಲಿನಲ್ಲಿ ಒಂದು ಬೋಡರ್್ ಹಾಕಿ ಅದರಲ್ಲಿ ಎಲ್ಲ ಆನೆಗಳ ಹೆಸರು, ಚಿತ್ರ, ಅವುಗಳ ಪ್ರಾಯ ಬರೆಯಬೇಕು. ಇದರಿಂದ ಆ ಆನೆಗಳ ಬಗ್ಗೆ ಚೆನ್ನಾಗಿ ತಿಳಿಯಲು ಅನುಕೂಲ.
ತ್ಯಾವರೆಕೊಪ್ಪ
ತ್ಯಾವರೆಕೊಪ್ಪ ಶಿವಮೊಗ್ಗ ನಗರದ ಆಲ್ಕೊಳ ವೃತ್ತದಿಂದ 7 ಕಿ.ಮೀ. ದೂರದಲ್ಲಿದೆ. ಅಲ್ಲಿ ಹುಲಿ-ಸಿಂಹಧಾಮ ಇದೆ. ಅಲ್ಲಿ ಒಂದು ಸಣ್ಣ ಮೃಗಾಲಯವೂ ಇದೆ. ತ್ಯಾವರೆಕೊಪ್ಪದಲ್ಲಿ ಹುಲಿ, ಚಿರತೆ, ಬಿಳಿ ಚಿರತೆ, ಕರಡಿ, ಗುಳ್ಳೆನರಿ, ಕತ್ತೆಕಿರುಬ, ಮೊಸಳೆ, ಸಿಂಹ, ಹೆಬ್ಬಾವು, ಮುಳ್ಳುಹಂದಿ, ಜಿಂಕೆ, ಸಾರಂಗ, ಬೇರೆಬೇರೆ ಪಕ್ಷಿಗಳು ಇಷ್ಟೆಲ್ಲ ಇವೆ.
ಹುಲಿ, ಸಾರಂಗ, ಜಿಂಕೆ ಇವುಗಳಿಗೆ ಒಂದಷ್ಟು ಜಾಗ ಕೊಟ್ಟು ಸುತ್ತಲೂ ಬೇಲಿ ಹಾಕಿದ್ದಾರೆ. ಉಳಿದೆಲ್ಲವೂ ಪಂಜರದೊಳಗಿವೆ. ಇಲ್ಲಿ ಆನೆ ಇಲ್ಲ. ಮೊದಲು ವ್ಯಾನ್ನಲ್ಲಿ ಸಾರಂಗ, ಹುಲಿ, ಜಿಂಕೆ, ನವಿಲು, ಸಿಂಹ ಇರುವಲ್ಲಿಗೆ ಕರೆದುಕೊಂಡುಹೋಗುತ್ತಾರೆ. ನಂತರ ಉಳಿದೆಲ್ಲಾ ಪ್ರಾಣಿಗಳು ಇರುವ ಮೃಗಾಲಯ ನೋಡಲು ನಡೆದುಕೊಂಡು ಹೋಗಬೇಕು. ನಾವು ಒಂದು ಪ್ರಾಣಿ ಬಿಟ್ಟಿದ್ದೇವೆ. ಅದೇನೆಂದರೆ ಮಂಗ. ಅಲ್ಲಿ ಹಲವಾರು ಮಂಗಗಳಿವೆ. ಅವು ಮರದಿಂದ ಮರಕ್ಕೆ ಜಿಗಿಯುತ್ತಿರುತ್ತವೆ. ಸಾರಂಗ, ಹುಲಿ, ಜಿಂಕೆ ಇರುವಲ್ಲಿ ಬಹಳಷ್ಟು ನೀಲಗಿರಿ ಮರಗಳು ಹಾಗೂ ಒಂದೊಂದು ಬೇರೆ ಜಾತಿಯ ಮರಗಳು ಇವೆ. ಪಕ್ಕದಲ್ಲೇ ಒಂದು ಕ್ಯಾಂಟೀನ್ ಇದೆ.
]]>




ಆನೆ ಮರಿ ಚಾನ್ಸೋ ಚಾನ್ಸು! ಏಳು ವರ್ಷದವರೆಗೂ ಮಾವುತನೂ ಇಲ್ಲ ಯಾರೂ ಇಲ್ಲ. ನಮಗೂ ಹಾಗೇ ಇದ್ದಿದ್ರೆ ಗಮ್ಮತ್ತು ತುಂಟತನ ಮಾಡಬಹುದಿತ್ತು ಅಲ್ವ?
ಚೆನ್ನಾಗಿದೆ ಬರೆದಿದ್ದು. ಇನ್ನೂ ಬರಿ.
-ಎಚ್. ಸುಂದರ ರಾವ್
THANKS
CHINUA