ವಾಸುದೇವ ಶರ್ಮ
ಗಣ್ಯರು, ಲೋಕಮಾನ್ಯರು, ಮಹಾತ್ಮರ ನಿಧನ ಬೇಸರ ಮತ್ತು ದುಃಖದಾಯಕ. ನಿಜ. ಅವರನ್ನು ಕುರಿತು ಶ್ರದ್ಧಾಂಜಲಿ ಗೌರವ ಸಲ್ಲಿಕೆ ನ್ಯಾಯವೇ. ನಾವೆಲ್ಲರೂ ಎಲ್ಲ ದುಃಖತಪ್ತರೊಡನೆ ಪ್ರತಿಸ್ಪಂದಿಸುತ್ತೇವೆ.
ಅಂದು ಸಂವಿಧಾನ ಕುರಿತು ವಿಚಾರ ಸಂಕಿರಣವನ್ನು ಸರ್ಕಾರ ಏರ್ಪಡಿಸಿತ್ತು. ನೂರಾರು ಯುವಕ ಯುವತಿಯರು ಕಾರ್ಯಕ್ರಮದಲ್ಲಿ ನೊಂದಾಯಿಸಿಕೊಂಡು ಬೆಂಗಳೂರಿಗೆ ಬಂದು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಿಕೊಳ್ಳಲು ಸೇರಿದ್ದರು. ಕಾರ್ಯಕ್ರಮ ಆರಂಭವೂ ಆಯಿತಂತೆ. ಒಂದು ಗೋಷ್ಠಿಯ ನಂತರ ಕಾರ್ಯಕ್ರಮವನ್ನು ನಿಲ್ಲಿಸಲಾಯಿತಂತೆ. ಸಂವಿಧಾನ ಕಾರ್ಯಕ್ರಮ ನಿಂತುಹೋಯಿತು!
ಸಂಜೆ ಯಾವುದೋ ವಾರ್ತಾವಾಹಿನಿಯಲ್ಲಿ ಅಚಾನಕ್ ಆಗಿ ಒಂದೆರಡು ಸಾಲುಗಳು ಕಂಡಿತು. ‘ಮಾಧ್ಯಮಗಳ ಕಣ್ಣು ತಪ್ಪಿಸಿ ಸಂವಿಧಾನ ಕಾರ್ಯಕ್ರಮ ನಡೆಸಲು ಮುಂದಾಗಿದ್ದ ಬೇಜವಾಬ್ದಾರಿ ಅಧಿಕಾರಿಗಳು’. ಧಡಕ್ ಎಂದು ಎದ್ದು ಕುಳಿತೆ. ‘ಬೇಜವಾಬ್ದಾರರು ಯಾರು?’ ಎಂಬ ಪ್ರಶ್ನೆ ಕುಣಿಯಲಾರಂಭಿಸಿತು.
ಸರ್ಕಾರದ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಮನೋರಂಜನೆಗೆ ರಜೆ ಅರ್ಥವಾಗುತ್ತದೆ. ಆದರೆ, ಸಮಾಜದ ಜನರ ಜೀವನಾಡಿಯಾಗಿರುವ ಕಛೇರಿಗಳು, ಬ್ಯಾಂಕು, ನ್ಯಾಯಾಲಯಕ್ಕೆ ರಜೆ ಘೋಷಿಸುವುದು, ಪರೀಕ್ಷೆಗಳನ್ನು, ಉದ್ಯೋಗದ ಸಂದರ್ಶನಗಳನ್ನು ಮುಂದೂಡುವುದು ಎಷ್ಟು ಜನರಿಗೆ ತೊಂದರೆ ಎಂಬುದು ಯಾವುದೋ ಮಾಧ್ಯಮ ಪ್ರತಿನಿಧಿಗೆ ತಿಳಿದಿಲ್ಲ ಎನಿಸುತ್ತದೆ.
ಆ ದಿನದ ಸಂವಿಧಾನ ಚರ್ಚೆ ಯಶಸ್ವಿಯಾಗಿ ನಿಲ್ಲಿಸಿದ ಕೀರ್ತಿ ಯಾವುದೋ ಅಂತಹ ಒಂದೋ ಎರಡೋ ಮಾಧ್ಯಮ ಪ್ರತಿನಿಧಿಗಳಿಗೆ ಸಿಕ್ಕಿರಬಹುದು! ಅವರ CVನಲ್ಲಿ ಬರೆದುಕೊಳ್ಳಬಹುದು. ಮುಂದೆ ಇಂತಹ ಸಂದರ್ಭಗಳಲ್ಲಿ ಆ ಮಹಾತ್ಮ ಮಾಧ್ಯಮ ಪ್ರತಿನಿಧಿಗಳು ಕಾಣುತ್ತಿದ್ದಂತೆಯೇ ಕಾರ್ಯಕ್ರಮಗಳು ಅವರ ಹೂಂಕಾರವಿಲ್ಲದೆಯೇ ನಿಂತುಹೋಗಬಹುದು!
0 ಪ್ರತಿಕ್ರಿಯೆಗಳು