ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಲಂಕಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರೋತ್ಸವ

ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀಲಂಕಾ ಫಿಲಂ ಕಾರ್ಪೋರೇಷನ್ ಮತ್ತು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಯೋಗದಲ್ಲಿ ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್, ಶ್ರೀಲಂಕಾ ಈ ಉತ್ಸವವನ್ನು ಹಮ್ಮಿಕೊಂಡಿದೆ. ಶ್ರೀಲಂಕಾದಲ್ಲಿ ಏರ್ಪಡಿಸಿರುವ ಮೊಟ್ಟಮೊದಲ ಕನ್ನಡ ಚಲನಚಿತ್ರೋತ್ಸವದಲ್ಲಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಪ್ರಶಸ್ತಿ ವಿಜೇತ ನಾಲ್ಕು ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಶ್ರೀಲಂಕಾದ ಕೊಲಂಬೋದ ನ್ಯಾಷನಲ್ ಫಿಲಂ ಕಾರ್ಪೋರೇಷನ್ ಥಿಯೇಟರ್ ನಲ್ಲಿ ಮೇ 2 ಮತ್ತು 3ರಂದು ಚಿತ್ರೋತ್ಸವ ಜರುಗಲಿದೆ.

ಮೇ 2ರ ಬೆಳಗ್ಗೆ 10 ಗಂಟೆಗೆ ಶ್ರೀಲಂಕಾದ ವಾರ್ತಾ ಸಚಿವ ಡಾ. ಬಂಡೂಲಾ ಗುಣವರ್ಧನೆ ಅವರ ಅಧ್ಯಕ್ಷತೆಯಲ್ಲಿ ಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ. ಗೌರವಾನ್ವಿತ ಭಾರತೀಯ ರಾಯಭಾರಿ ಶ್ರೀ ಗೋಪಾಲ್ ಬಾಗ್ಲೆ, ಶ್ರೀಲಂಕಾದ ಭಾರತೀಯ ಸಿನೆಮಾಟೋಗ್ರಾಫರ್ಸ್ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಶ್ರೀ ವಿದುರ ವಿಕ್ರಮನಾಯ್ಕೆ ಮತ್ತು ಉನ್ನತ ಶಿಕ್ಷಣ ಸಚಿವ ಶ್ರೀ ಸುರೇನು ರಾಘವನ್ ಉಪಸ್ಥಿತರಿರುವರು.

ಚಲನಚಿತ್ರ ನಿರ್ಮಾಪಕ ಶ್ರೀ ಶಂಕರೇಗೌಡ, ಸಿನಿಮಾಟೋಗ್ರಾಫರ್ ಶ್ರೀ ಎಸ್.ಕೆ. ರಾವ್, ಪ್ರತಿಭಾನ್ವಿತ ನಟಿ ಕುಮಾರಿ ಕಾವ್ಯಾ ಶೆಟ್ಟಿ, ಪ್ರತಿಭಾನ್ವಿತ ನಟ ಶ್ರೀ ನಿರೂಪ್ ಭಂಡಾರಿ, ಹಿರಿಯ ಪತ್ರಕರ್ತರಾದ ಜಿ.ಎನ್. ಮೋಹನ್ ಮತ್ತು ಎಚ್.ಬಿ ಮದನ್ ಗೌಡ ಅವರು ನಿಯೋಗದಲ್ಲಿದ್ದಾರೆ.

ನಿರ್ದೇಶಕ ಡಾ. ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೆರಿಕ ಅಮೆರಿಕ’, ‘ಮಾತಾಡ್ ಮಾತಾಡ್ ಮಲ್ಲಿಗೆ’, ‘ಇಷ್ಟಕಾಮ್ಯ’ ಮತ್ತು ‘ಅಮೃತಧಾರೆ’ ಪ್ರದರ್ಶನಗೊಳ್ಳಲಿರುವ ಚಿತ್ರಗಳಾಗಿವೆ. ಈ ಎಲ್ಲ ಚಿತ್ರಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದಲ್ಲದೆ, ತಮ್ಮದೇ ಆದ ವಿಶಿಷ್ಟ ಶೈಲಿ ಕಥೆ ಮತ್ತು ನಿರೂಪಣೆ ಹಾಗೂ ಅತ್ಯುತ್ತಮ ಸಿನಿಮಾಟೋಗ್ರಫಿಗಾಗಿ ಸಾಕಷ್ಟು ಮೆಚ್ಚುಗೆಯನ್ನೂ ಗಳಿಸಿಕೊಂಡಿವೆ. ಈ ಚಿತ್ರಗಳನ್ನು ವೀಕ್ಷಿಸುವ ಮೂಲಕ ಭಾರತೀಯ ಸಿನಿಮಾರಂಗದ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಶ್ರೀಲಂಕಾದ ಚಲನಚಿತ್ರರಸಿಕರಿಗೆ ಅನುಕೂಲವಾಗಲಿದೆ.

ಈ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಚಿತ್ರ ಉದ್ಯಮದ ಹಾಗೂ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಶ್ರೀಲಂಕಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಚಲನಚಿತ್ರ ವಿಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿತ್ರೋತ್ಸವಕ್ಕೆ ಪೂರಕವಾಗಿ ಕಾರ್ಯಗಾರವನ್ನೂ ಏರ್ಪಡಿಸಲಾಗಿದೆ. ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಕಾರ್ಯಗಾರವನ್ನು ನಡೆಸಿಕೊಡಲಿದ್ದಾರೆ. ಚಿತ್ರ ನಿರ್ಮಾಣ, ಕಥೆ ಮತ್ತು ನಿರೂಪಣೆ, ನಿರ್ದೇಶನ, ಸಿನಿಮಾಟೋಗ್ರಫಿ ಮತ್ತು ಸಂಕಲನದ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಿದ್ದಾರೆ. ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಸಂವಾದವನ್ನೂ ಹಮ್ಮಿಕೊಳ್ಳಲಾಗಿದೆ.

ಇದರ ಜೊತೆಯಲ್ಲಿಯೇ ಪರ್ಯಾಯವಾಗಿ ಕನ್ನಡ ಚಲನಚಿತ್ರ ನಿಯೋಗದ ಸದಸ್ಯರಿಗಾಗಿ ಶ್ರೀಲಂಕಾದಲ್ಲಿನ ಸಿನೆಮಾ ಚಿತ್ರೀಕರಣ ತಾಣಗಳನ್ನು ಶ್ರೀಲಂಕಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯು ಪರಿಚಯಿಸಲಿದೆ.

ಶ್ರೀಲಂಕಾದ ಸಿನಿಮಾ ಉದ್ಯಮದ ಪ್ರಚಾರ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯಗಾರ ಕಾರ್ಯನಿರ್ವಹಿಸಲಿದೆ. ಚಿತ್ರರಂಗದಲ್ಲಿ ಈಗಾಗಲೆ ನೆಲೆ ಕಂಡುಕೊಂಡಿರುವವರ ಮೂಲಕ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡು, ಶ್ರೀಲಂಕಾದ ಸಿನಿರಂಗದ ಬೆಳವಣಿಗೆಗೆ ಸಹಕರಿಸುವ ನಿಟ್ಟಿನಲ್ಲಿ ಯುವ ಚಿತ್ರ ನಿರ್ಮಾಪಕರು ಮತ್ತು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಸಿಕ್ಕಂತಾಗಲಿದೆ.

ಭಾರತೀಯ ಸಿನಿಮಾ ರಂಗದ ಅತ್ಯುತ್ತಮ ಒಳನೋಟ ಒದಗಿಸುವ ಜತೆಗೆ, ಶ್ರೀಲಂಕಾದೊಂದಿಗೆ ಕನ್ನಡ ಸಿನಿಮಾ ಉದ್ಯಮದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸದೊಂದಿಗೆ ಈ ಕನ್ನಡ ಚಿತ್ರೋತ್ಸವವನ್ನು ಸಂಘಟಿಸಲಾಗಿದೆ.

ಶ್ರೀಲಂಕಾದಲ್ಲಿ ಜರುಗುತ್ತಿರುವ ಈ ಉತ್ಸವದ ನಿರ್ವಹಣೆಯನ್ನು ‘ಅವಧಿ ಫೌಂಡೇಷನ್’ ನಿರ್ವಹಿಸುತ್ತಿದೆ.

‍ಲೇಖಕರು avadhi

25 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading