ಕಿಚ್ಚು ದೈವವೆಂದು ಹವಿಯನಿಕ್ಕದಿರಿ
ಕೆ ನೀಲಾ
ಇನ್ನೇನು ಬೆಳಕಾಗುವುದು. ರಾತ್ರಿ ತಲೆದಿಂಬಿನಡಿ ಇಟ್ಟ ನೀಲಿ-ಬಿಳಿ ಬಣ್ಣದ ಸ್ಕರ್ಟು – ಶರ್ಟು ಗರಿಗರಿಯಾಗಿರುತ್ತದೆ. ಉಟ್ಟು ಥಾಟಾಗಿ ಪ್ರಭಾತಫೇರಿಯಲ್ಲಿ ಭಾಗವಹಿಸಿ ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿತರಿಸುವ ಬಹುಮಾನ ಪಡೆಯಲು ಮನಸು ಹಾತೊರೆಯುತ್ತಿತ್ತು. ಆದರೆ ಮುಂಜಾನೆದ್ದರೆ ಎಲ್ಲಕ್ಕೂ ತಣ್ಣೀರು ಚೆಲ್ಲುವಂತೆ ಅವ್ವ ನನ್ನ ಕೈಯಲ್ಲಿ ಐವತ್ತರ ನೋಟಿಟ್ಟು ‘ಇರಭದ್ದೇವ್ರ ಜಾತ್ರಿಗಿ ಹೋಗು. ಅಗ್ಗಿ(ಗ್ನಿ) ತುಳದು ಬಾ. ಇಲ್ಲಾಂದ್ರ ಭೆಂಕಿಯಂಥ ದೇವ್ರು ಸುಮ್ನಿರಾಲ’.
ನನಗಾಗ ಅಳುವುದೊಂದೇ ಬಾಕಿಯಿತ್ತು. ಥೇಟ್ ಇರಭದ್ದೇವರಂಥ ಕ್ವಾರಿ ಮೀಸಿಯುಳ್ಳ ಅಪ್ಪನಿಗೆ ಹೆದರಿ ತುಟಿ ಪಿಟಕ್ಕೆನ್ನದೆ ಕೆಂಪು ಬಸ್ಸು ಹತ್ತಿದ್ದೆ. ಕಿಟಕಿಯಿಂದ ಹೊರಗಿಣುಕಿದರೆ ಜನೆವರಿ 26ರ ಪ್ರಭಾತಫೇರಿಯಲ್ಲಿ ನನ್ನ ಓರಗೆಯ ಗೆಳೆ(ತಿ)ಯರು ಘೋಷಣೆ ಕೂಗುತ್ತ ನಲಿಯುತ್ತಿದ್ದರು. ಹುಮನಾಬಾದಿನ ಬಸ್ಸ್ಟ್ಯಾಂಡು ಬಂದ ಕೂಡಲೇ ಕಂಡಕ್ಟರ್ ಕೂತಲ್ಲೇ ದಾರ ಎಳೆದರೆ ಮುಂದಕ್ಕಿರುವ ಗಂಟೆ ಢಣ್ಣೆಂದಿತ್ತು. ಥೇರ್ ಮೈದಾನದಲ್ಲಿ ಅಗ್ನಿಕುಂಡದಿಂದ ಹೊಗೆ ಹೊರಹೊಮ್ಮುತ್ತಿತ್ತು. ಬೆಂಕಿ ಲಿಗಿಲಿಗಿಸುತ್ತಿತ್ತು. ಕೆಲವರು ಖರೆನೆ ಬೆಂಕಿ ತುಳಿಯುತ್ತಿದ್ದರು. ಕಟ್ಟಿಗೆ ತುಂಡನ್ನು ಕುಂಡಕ್ಕೆ ಹಾಕಿ ಸುತ್ತು ಬಂದು ಜಾತ್ರೆಯತ್ತ ಓಡಿದ್ದೆ.

ಸಾಲಾಗಿ ಬೆಂಡು-ಬತ್ತಾಸೆಯ, ಅಳ್ಳು-ಪುಟಾಣಿಯ, ಕುಂಕುಮ-ಬುಕೀಟಿನ, ಉಡುದಾರ ಶಿವದಾರ ಕರಿದಾರಗಳ, ವಿಭೂತಿಯ ಅಂಗಡಿಗಳು. ತರಹೇವಾರಿ ಆಟದ ಬೊಂಬೆಗಳು. ಅಗ್ಗದ ರೇಟಿನಲ್ಲಿ ಸಿಗುವ ಲೋಲಾಕು, ಸರಗಳು. ಎಷ್ಟೊಂದು ಬಣ್ಣದ ಬಳೆಗಳು! ಹೆಂಗೆಳೆಯರ ಮುಂಗೈಯನ್ನು ನುಣುಪುಗೊಳಿಸಿ ಬಿಗಿಯಾಗಿ ಬಳೆಗಳನ್ನು ಒಡೆಯದಂತೆ ತೊಡಿಸುವುದೊಂದು ಕಲೆ. ಬೊಂಬಾಯಿವಾಲಾ ಐದು ಪೈಸೆಗೆ ತೋರಿಸುವ ಹತ್ತಾರು ಫಿಲ್ಮುಗಳು. ಕೈಬೆರಳಿಗೆ ಗೆಜ್ಜೆ ಕಟ್ಟಿಕೊಂಡು ಲಯಬದ್ಧವಾಗಿ ಬಾರಿಸುತ ‘ಬಂಬಾಯ್ಕಿ ಹೀರೋನಿ ದೇಖೋ, ದಿಲ್ಲಿಕಿ ಕುತುಬ್ಮಿನಾರ್ ದೇಖೋ..’ ಮೂರು ಕಾಲಿನ ಅಡ್ಡಣಿಗಿಯ ಮೇಲೆ ಕುಳಿತ ಡಬ್ಬಿ. ಡಬ್ಬಿಗಿರುವ ಗೋಲಾಕಾರದ ಮುಖಕ್ಕೆ ಮಾರಿಯಿಟ್ಟು ನೋಡಿದರೆ ಒಳಗೆ ಸಿನೇಮಾದ ಹೀರೋ-ಹೀರೋಯಿನ್ಗಳ ರೀಲು ಓಡುತ್ತಿತ್ತು. ಬಂದೂಕಿನ ಗುರಿಗಾಗಿ ಕಾದ ಪುಗ್ಗಗಳು. ರುಂಡ-ಮುಂಡ ಬೇರ್ಪಡಿಸಿಕೊಂಡವರ ಫೋಟೋ ಹೊತ್ತ ಜಾದುಗಾರ ಟೆಂಟುಗಳು. ತೊಟ್ಟಿಲು, ಕುದುರೆ, ಕುಚರ್ಿಯ ಮೇಲೆಲ್ಲ ಅಡ್ಡಡ್ಡ -ಉದ್ದುದ್ದ ಗಿರ್ರೆನ್ನುತ್ತಿರುವವರು ಮಕ್ಕಳ್ಯಾಕೆ, ದೊಡ್ಡವರೂ. ಟೆಂಪರ್ವರಿ ಫೋಟೋ ಸ್ಟುಡಿಯೋಗಳು. ಕಲರ್ಫುಲ್ ರಿಬ್ಬನ್ನುಗಳು. ಹೇರ್ಪಿನ್ನು, ಕಾಟಾ, ಅಕಡಾಗಳೊಂದಿಗೆ ಕಾಡಿಗೆ, ಉಗುರುಬಣ್ಣ, ಪೌಡರು-ಸ್ನೋ, ಗಂಧದೆಣ್ಣೆ, ಕೇಶ್ತೈಲ್ ವಾಹ್ವ್ವಾ. ನಾನಾದರೋ ವಿಭೂತಿ ಶಿವದಾರದೊಂದಿಗೆ ದುಬಲಗುಂಡಿಯೆಂಬ ಹಳ್ಳಿಯ ಫೇಮಸ್ ಘಾಣದ ಉಂಡಿ ಮತ್ತು ಬೆಂಡು-ಬತ್ತಾಸೆಯೊಂದಿಗೆ ಒಂದೆರಡು ಸೇರು ಅಳ್ಳು ತಗೊಂಡು ಬಹುಮಾನ ವಿತರಿಸುವ ಕಾರ್ಯಕ್ರಮ ಸಿಕ್ಕಾತೇ ಎಂದು ಬಸವಕಲ್ಯಾಣದ ಬಸ್ಸು ಹತ್ತಿ ಓಡಿದ್ದೆ.
ನನ್ನ ಪುಟ್ಟ ಕಣ್ಣಿಗೆ-ಮೆದುಳಿಗೆ ಅಂದು ದಕ್ಕಿದ್ದು ಇಷ್ಟೆ. ಆದರೆ ನನ್ನೂರ ಜಾತ್ರೆ ಮತ್ತು ವೀರಭದ್ರೇಶ್ವರ ನನಗೀಗ ಬಹುವಾಗಿ ಕಾಡುವ, ಮತ್ತೆ-ಮತ್ತೆ ತನ್ನತ್ತ ಸೆಳೆಯುವ ಸಂಗತಿಗಳು. ನಾಡಿನ ಜನರೆಲ್ಲ ಅಗ್ನಿ ತುಳಿಯುವರು. ಊರಿಗೂರೇ ಜಾತ್ರೆಗೋಸ್ಕರ ಬರುವ ನೆಂಟರಿಗಾಗಿ ಬಾಗಿಲು ತೆರೆದು ಸತ್ಕರಿಸಲು ಸಜ್ಜುಗೊಂಡಿರುತ್ತದೆ. ಊರು ಬಿಟ್ಟು ಹೋದವರು ಸಹ ಜನೆವರಿ 26ರಂದು ಮರಳಿ ಗೂಡಿಗೆ ಬಂದೇ ಬರುವರು. ‘ಬರಬಾರದಂದರ್ನೂ ಇರಭದ್ದೇವ್ರ ಹ್ಯಾಂಗನಾ ಮಾಡಿ ಕರಸ್ಕೋತಾನ’ ಕಲಾವತಿ ಹೇಳುತ್ತಿದ್ದಳು. ಜಾತ್ರೆಯ ಎರಡು ದಿನ ಮೊದಲು ಊರಂಗಳ ಪೂತರ್ಿ ಛಳಿ ಹೊಡೆದು ಸಾರಿಸಿ ರಂಗೋಲಿಯ ಚಿತ್ತಾರದಲ್ಲಿ ಸಿಂಗರಿಸಲಾಗುತ್ತದೆ. ಯುವತಿಯರ ಬೆರಳಿನಿಂದ ನೆಲಸೋಕುವ ಬಣ್ಣಬಣ್ಣದ ರಂಗೋಲಿ. ಈಗಾಗಲೇ ಹುಟ್ಟಿ ತೊಟ್ಟಿಲಿಟ್ಟುಕೊಂಡು, ಬೆಳೆದು ಬಾಸಿಂಗು ಕಟ್ಟಿಕೊಂಡ ವೀರಭದ್ರೇಶ್ವರನು, ಶಿವನಿಂದಕ ದಕ್ಷಬ್ರಹ್ಮನ ಯಾಗವನ್ನು ಧ್ವಂಸ ಮಾಡಲು ಸಿದ್ದನಾಗಿರುತ್ತಾನೆ. ಆದ್ದರಿಂದಲೇ ರಾತ್ರಿಯಿಡೀ ಪಲ್ಲಕ್ಕಿ ಮೆರವಣಿಗೆ. ಈ ಪ್ರಕ್ರಿಯೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಭಕ್ತರು ತನ್ಮೂಲಕ ನಮ್ಮ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಪರಂಪರೆಯನ್ನು ಅನೂಚಾನವಾಗಿ ನಡೆಸಿಕೊಂಡು ಬರುವರು.
‘ಅಗ್ನಿಕುಂಡಕ್ಕ ಕಟ್ಟಿಗಿ ತುಂಡು ಹಾಕಿದ ಮ್ಯಾಲೇನು ಮಾಡಿದಿ?’ ಅಪ್ಪ ಕೇಳಿದ್ದ. ಕೈ ಮುಗಿದೆನೆಂದು ಹೇಳಿದ್ದೆ. ‘ಹುಚ್ಚಿ, ಕೈ ಮುಗಿಬಾರ್ದು. ಅಗ್ನಿ ತುಳ್ಯಾದು ಅಂದ್ರ, ಭೋಳೆ ಶಂಕರಗ ನಿಂದಿಸಿದಂಥ ದಕ್ಷಬ್ರಹ್ಮನಿಗಿ ಸಂಹರಿಸಿ ಇರಭದ್ದೇವ್ರ, ಹೋಮ-ಹವನವೆಲ್ಲ ಧ್ವಂಸ ಮಾಡಿದ್ದರ ಸಂಕೇತ. ಅದಕ್ಕಾಗಿನೇ ಅಗ್ಗಿ(ಗ್ನಿ) ತುಳಿಬೇಕು.’ ಇದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಅದಕ್ಕೇ ಇರಬೇಕು, ಜಾತ್ರೆಗೆಂದು ಬೆಂಗಳೂರಿನಿಂದ ಬಂದ ಶಶಿಕಲಾಳೊಂದಿಗೆ ಇದೇ ಊರಿನ ಮಲ್ಲಮ್ಮ ಪರಸ್ಪರ ಕುಶಲೋಪರಿ ವಿಚಾರಿಸಿಕೊಳ್ಳುತ್ತಲೇ, ‘ಬೆಂಗಳೂರಿಗಿ ಹೋಗಿ ನಮ್ಮ ಪದ್ಧತಿ ಯಾಕ ಬಿಟ್ಟೀದಿ? ಮಗನ ಮದ್ಯಾಗ ಹೋಮ ಮಾಡಿಸಿದಿಯಂತಲ್ಲ? ಯಾಕ? ನಾವು ಗಂಗಸ್ಥಳದ(ನೀರಿನ) ಪೂಜಾ ಮಾಡಾವ್ರೇ ಹೊರ್ತು ಸುಡಾ ಬೆಂಕಿಗಲ್ಲ. ಇರಭದೇವ್ರ ಕಡಕ್ ಹನಾ. ನಮ್ಮ ನೇಮಾ-ನಿಷ್ಠಿ ನಮ್ ಸಂಗಾಟ.’ ಶಶಿಕಲಾಗೆ ತಾನು ಹೋಮ-ಹವನ ಮಾಡಿಸಿದ್ದನ್ನು ಸಮರ್ಥಿಸಿಕೊಳ್ಳಲಾಗಲೇಯಿಲ್ಲ.
ವೀರಭದ್ರೇಶ್ವರ ನಮ್ಮ ನಾಡೆಲ್ಲ ಆವರಿಸಿಕೊಂಡಿರುವನು. ಮದುವೆಯಲ್ಲಿ ಪುರುವಂತ ಆಡುವವರು, ಆಹಾಹಾರೇ ವೀರ, ಕರಿವೀರಭದ್ರ, ಕಾಳಿಂಗರುದ್ರ, ಹ್ಯಾಂಗ ಬರ್ತಿ ಬಾ…. ಎನ್ನುತ ಅತ್ತಿಂದಿತ್ತ ಕುಣಿಯುತ ಆವೇಶದಿಂದಲೇ ಕೈಯಲ್ಲಿರುವ ಶಸ್ತ್ರದಿಂದ ಗಲ್ಲಕ್ಕೆ-ನಾಲಿಗೆಗೆ ಚುಚ್ಚಿಕೊಳ್ಳುವನು. ಕರ್ನಾಟಕದೊಂದಿಗೆ ಮಹಾರಾಷ್ಟ್ರ, ಆಂಧ್ರದ ಶೈವಾದಿಶೂದ್ರರ ಮನೆದೇವರು ವೀರಭದ್ರೇಶ್ವರ. ಹೆಚ್ಚಾನುಹೆಚ್ಚು ಊರುಗಳಲ್ಲಿ ವೀರಭದ್ರೇಶ್ವರ ಗುಡಿಗಳಿವೆ. ಒಂದಾನೊಂದು ಕಾಲದಲ್ಲಿ ಭಾರತದ ತುಂಬ ವೀರಭದ್ರೇಶ್ವರ ಗುಡಿಗಳಿದ್ದಿರಬಹುದಾದ ಉಲ್ಲೇಖಗಳು ದೊರೆಯುತ್ತವೆ. ವೀರಭದ್ರೇಶ್ವರ ದ್ರಾವೀಡರ ದೈವ. ಶೈವ ಮತ್ತು ವೈಷ್ಣವ ಸಮುದಾಯಗಳ ನಡುವಿನ ಸಂಘರ್ಷವೇ ದಕ್ಷಬ್ರಹ್ಮನ ಯಾಗ ಸಂಹಾರದ ಕಥೆಯಾಗಿ, ಈ ಕಥೆಯೇ ಶಿವನ ಪಂಚವಿಂಶತಿ ಲೀಲೆಗಳಾಗಿ ಶಿವಾಗಮಗಳ ಕಾಲದಿಂದಲೂ ಉಲ್ಲೇಖಿತಗೊಂಡಿವೆ. ಹಾಗೆ ನೋಡಿದರೆ ವೀರಭದ್ರೇಶ್ವರ ಅವತಾರದ ಕತೆಯು ಶಿವಭಕ್ತ ಮತ್ತು ವಿಷ್ಣುಭಕ್ತರಿಗೂ ನಡೆದ ಉಗ್ರ ಸಂಘರ್ಷಗಳನ್ನು ತನ್ನೊಡಲಲ್ಲಿ ಕಾಪಿಟ್ಟುಕೊಂಡಂತೆ ತೋರುತ್ತದೆ. ಹೀಗಾಗಿಯೇ ವೀರಭದ್ರೇಶ್ವರ ದೇವಸ್ಥಾನಗಳಿರುವೆಡೆಯಲ್ಲೆಲ್ಲ ಅಗ್ನಿ ತುಳಿಯುವ ಸಂಪ್ರದಾಯವಿದೆ.
ಅದೊಮ್ಮೆ ಶಿವವಿರೋಧಿಯಾದ ದಕ್ಷಬ್ರಹ್ಮ ಹಮ್ಮಿಕೊಂಡಿದ್ದ ಮಹಾಯಜ್ಞದಲ್ಲಿ ಪುಡಿದೇವರುಗಳಿಗೆಲ್ಲ ಆಮಂತ್ರಣ ಮತ್ತು ಹವಿಸ್ಸನ್ನರ್ಪಿಸಿ ಉದ್ದೇಶಪೂರ್ವಕವಾಗಿಯೇ ಶಿವನಿಗೆ ಹವಿಸ್ಸನ್ನು ಅರ್ಪಿಸದಿರುವ ಕಾರಣಕ್ಕೆ ಅಪಮಾನಿತಳಾದ ಗಿರಿಜೆಯು ಪ್ರತಿರೋಧವನ್ನೊಡ್ಡುತ್ತಾಳೆ. ತನ್ನ ಗಂಡನಿಗೆ ಸಲ್ಲಬೇಕಾದ ಹವಿಸ್ಸಿಗಾಗಿ ಹಕ್ಕೊತ್ತಾಯ ಮಾಡುತ್ತಾಳೆ. ಉಗ್ರವಿಷ್ಣುವಾದಿಯಾಗಿದ್ದ ದಕ್ಷಬ್ರಹ್ಮ ಹವಿಸ್ಸನ್ನರ್ಪಿಸುವುದಿರಲಿ ಮನಬಂದಂತೆ ಶಿವನಿಂದೆಗೈದು ಮನೆಮಗಳನ್ನೇ ವಾಚಾಮಗೋಚರವಾಗಿ ಹಳಿಯುತ್ತಾನೆ. ಅಪ್ಪನ ಜಾತಿಯನ್ನು ಧಿಕ್ಕರಿಸಿ ಗಿರಿಜೆ ತಾನಿಷ್ಟಪಟ್ಟ ವರನಾದ ಶಿವನೊಂದಿಗೆ ಮದುವೆಯಾದದ್ದೇ ದಕ್ಷಬ್ರಹ್ಮನ ಕೋಪಕ್ಕೆ ಕಾರಣವಾಗಿತ್ತು. (ಪ್ರಾಯಶಃ ಈ ಪಾರ್ವತಿ-ಪರಮೇಶ್ವರರ ಮದುವೆಯು ನಮ್ಮ ನಾಡಿನಲ್ಲಿ ಸಂಭವಿಸಿರಬಹುದಾದ ಮೊದಲ ಅಂತರ್ಧರ್ಮೀಯ ಪ್ರೇಮವಿವಾಹದ ಉದಾಹರಣೆಯಾಗಿರಲಿಕ್ಕು ಸಾಕು.) ಅಕ್ಕ-ತಂಗಿ ಸರೀಕರ ನಡುವೆ ಅಪಮಾನಿತಳಾಗಿ ಜರ್ಜರಿತಳಾಗುವ ಶಿವೆಯು, ಯಜ್ಞಕುಂಡದಲ್ಲಿ ಹಾರಿ ಪ್ರಾಣಾರ್ಪಣೆ ಮಾಡುತ್ತಾಳೆ. ಪ್ರಿಯಪತ್ನಿಯನ್ನು ಕಳೆದುಕೊಂಡ ಶಿವನು ರೌದ್ರರೂಪ ತಾಳಿ ಹಣೆಗಣ್ಣನ್ನೇ ತೆರೆಯಲಾಗಿ, ಅಲ್ಲಿಂದ ಮಾನಸಪೂತ್ರ ವೀರಭದ್ರನು ಉದಿಸಿ ದಕ್ಷಬ್ರಹ್ಮನ ಯಾಗಕುಂಡವನ್ನು ತೊತ್ತಳ ತುಳಿಯುವುದಲ್ಲದೆ ಅವನ ರುಂಡವನ್ನೇ ಚಂಡಾಡಿದ್ದು ಈಗ ಪುರಾಣ.
ಪುರಾಣಗಳಲ್ಲಿ ವಸ್ತುಸತ್ಯವಿರದಿದ್ದರೂ ಭಾವಸತ್ಯವಿದ್ದೇ ಇರುತ್ತದೆ. ಅಂದು ಪಾರ್ವತಿ ತನ್ನ ಧರ್ಮದವನಲ್ಲದ ವರ(ಶಿವ)ನೊಂದಿಗೆ ಮದುವೆಯಾದುದ್ದಕ್ಕಾಗಿ ಅಪಮಾನಕ್ಕೆ ಒಳಗಾಗಬೇಕಾಯಿತು. ತತ್ಪರಿಣಾಮ ಆತ್ಮಸಮರ್ಪಣೆ ಮಾಡಿಕೊಂಡಾಯಿತು. ಇವಳ ಗಂಡನಾದ ಶಿವ ಮಹಾಉಗ್ರರೂಪಿ ಮತ್ತು ಸ್ವಯಂಬಲಶಾಲಿಯಾಗಿದ್ದರಿಂದಲೇ ದಕ್ಷಬ್ರಹ್ಮನ ಸಂಹಾರ ಮಾಡಲು ಸಾಧ್ಯವಾಯಿತೇನೋ. ಆದರೆ ಇಂದಿನ ಅನ್ಯಧರ್ಮೀಯ ಪ್ರೇಮಿಗಳು ಅವಮರ್ಯಾದಾ ಹತ್ಯೆಗೆ ಬಲಿಯಾಗಬೇಕಾದ ಪ್ರಮೇಯಗಳು ತಲ್ಲಣವುಂಟಾಗಿಸುತ್ತಿವೆ. ಒಂದೊಮ್ಮೆ ಅನಿಸುತ್ತದೆ, ಈ ಯುವಜೋಡಿಗಳಿಗೂ ಶಿವನಂತೆ ರೌದ್ರರೂಪಿ ಶಕ್ತಿಯಿರುವುದಾದರೆ ಅವರೂ ತಮ್ಮ ನೈತಿಕಸ್ಥೈರ್ಯ ಮತ್ತು ಅದಮ್ಯ ಚೈತನ್ಯದಿಂದಲೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದೇನೋ.. ಇಂತಹದೊಂದು ವಿಚಾರಲಹರಿಗೆ ತಂದು ನಿಲ್ಲಿಸಿದ ವೀರಭದ್ರೇಶ್ವರ ಜಾತ್ರೆಯು ಈ ಕ್ಷಣಕ್ಕೂ ಧಾರ್ಮಿಕ ವೈಷಮ್ಯಗಳನ್ನು ನೆನಪಿಸುತ್ತಿರುವುದು ಅಕಾರಣವೇನಲ್ಲ.
ಭಾರತವು ಹಿಂದೂ ಮುಸ್ಲಿಂ ಕ್ರಿಶ್ಚನ್ ಎಂಬಿತ್ಯಾದಿ ಧರ್ಮಯುದ್ಧಗಳನ್ನು ಕಾಣುವ ಪೂರ್ವದಲ್ಲಿಯೇ ಶೈವ ವೈಷ್ಣವ ಜೈನ ಬೌದ್ಧ ಎಂಬಿತ್ಯಾದಿ ಮತಪಂಥಗಳ ಮದ್ಯೆ ಉಗ್ರವಾದ ಸಂಘರ್ಷಗಳೇ ನಡೆದಿರುವ ಸಾಕಷ್ಟು ಪುರಾವೆಗಳಿವೆ. ಧಾಮರ್ಿಕ ಸಂಘರ್ಷಕ್ಕೆ ಭಾರತದಲ್ಲಿ ಬಹುದೀರ್ಘವಾದ ರಕ್ತಸಿಕ್ತ ಚರಿತ್ರೆಯಿದೆ. ಹಾಗೆ ನೋಡಿದರೆ ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಧರ್ಮಯುದ್ಧಗಳ ಹಸಿಹಸಿ ವಿವರಗಳು ವಿಪುಲವಾಗಿಯೇ ದೊರೆಯುತ್ತವೆ. ಅವೆಲ್ಲವೂ ಪುರಾಣ ಮತ್ತು ಕಾವ್ಯತಂತ್ರಗಳಾಗಿ ಅಸ್ತಿತ್ವಗೊಳಿಸಲ್ಪಟ್ಟಿವೆಯಾದ್ದರಿಂದ ಚರಿತ್ರೆಯ ವ್ಯಾಧಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ. ನಾಡಿನಾದ್ಯಂತ ನಡೆಯುತ್ತಿರುವ ವೀರಭದ್ರೇಶ್ವರ ಜಾತ್ರೆಯಲ್ಲಿ ತುಳಿಯಲಾಗುವ ಅಗ್ನಿ, ವೀರಭದ್ರನ ಸೈನಿಕರೆಂದೇ ಪರಿಗಣಿಸುವ ಪುರವಂತರ ರೌದ್ರಾವೇಶದ ಕುಣಿತಗಳು ವಿವಿಧ ಕಾಲಘಟ್ಟಗಳಲ್ಲಿ ಸಂಭವಿಸಿರಬಹುದಾದ ಧಾಮರ್ಿಕ ಸಂಘರ್ಷಗಳನ್ನೇ ನೆನಪಿಸುತ್ತವೆ. ಅದೇನೇ ಇರಲಿ ವರ್ತಮಾನದ ಸಂದರ್ಭದಲ್ಲಿ ಜಾತ್ರೆ ಮತ್ತು ಅಲ್ಲಿನ ವೈಭವ ಆನಂದಗಳೇ ಮುಖ್ಯವಲ್ಲವೇ? ಜಾತ್ರೆಗೆ ಆಥರ್ಿಕ ಮುಖದಂತೆ ಚಾರಿತ್ರಿಕ ಸಾಂಸ್ಕೃತಿಕ ನೆಲೆಯೂ ಇದೆ. ಹೀಗಾಗಿ ಜಾತ್ರೆ ಉಗ್ರರೂಪಿ ವೀರಭದ್ರನದೇ ಇರಲಿ, ಸೌಮ್ಯವಾದಿ ಬಸವಣ್ಣ ಮತ್ಯಾರದೇ ಇರಲಿ ಅವುಗಳಿಗೆಲ್ಲ ಒಂದೇ ಗುಣಲಕ್ಷಣಗಳಿರುತ್ತವೆ. ಆದಾಗ್ಯೂ ವಿವಿಧ ದೈವಗಳ ಜಾತ್ರೆಯಲ್ಲಿ ಆಚರಿಸಲ್ಪಡುವ ಸಂಪ್ರದಾಯಗಳು ವೈವಿದ್ಯಮಯವಾಗಿರುವಂತೆ ಅವುಗಳ ಹಿಂದೆ ಚಾರಿತ್ರಿಕ ಸಂಘರ್ಷಗಳು ಹುದುಗಿಕೊಂಡಿರುತ್ತವೆ. ವೀರಭದ್ರನ ಜಾತ್ರೆಯಲ್ಲಿ ಅಗ್ನಿ ತುಳಿಯುವುದು ಪುರವಂತರ ಕುಣಿತ ಕಾಣಿಸಿಕೊಳ್ಳುವಂತೆ ಹೆಣ್ಣುದೇವರುಗಳ ಜಾತ್ರೆಯಲ್ಲಿ ಕೋಣ-ಕುರಿಗಳ ಬಲಿಯಿರುತ್ತದೆ. ಕೆಲವು ಜಾತ್ರೆಗಳಲ್ಲಿ ಥೇರು ಎಳೆಯುವುದು. ಮತ್ತೆ ಕೆಲವು ಜಾತ್ರೆಗಳಲ್ಲಿ ಪಲ್ಲಕ್ಕಿ ಉತ್ಸವ. ಹೀಗಾಗಿ ಜಾತ್ರೆಗಳು ತಮ್ಮೊಡಲಲ್ಲಿ ಅನೇಕ ಸಂಘರ್ಷದ ಚರಿತ್ರೆಗಳನ್ನು ಇಂಬಿಟ್ಟುಕೊಂಡಿವೆ. ಇವುಗಳ ಅಧ್ಯಯನವಾಗಬೇಕಿದೆ. ಆಳದಲ್ಲಿ ಹುದುಗಿಕೊಂಡ ದಾರ್ಶನಿಕ ನೆಲೆ(ಧಾರೆ)ಗಳನ್ನು ಪರಾಮರ್ಶಿಸಬೇಕಾದ ಅವಶ್ಯಕತೆಯಿದೆ.







What a wonderful attempt to analyse the ancient history of our so-called gods and goddesses! Of course, the well researched novel “Parva” of SL Bhairappa indeed speaks of all these gods and goddesses as persons belonging to the various cults/clans/tribes! Now all these pieces of ancient history form the myths for today and would continue to do so for centuries to come. An in-depth study and analysis of our mythology (weren’t they incidences) may change the mentality leading to disown the false prestige and provide the society to accept inter community/caste/religion marriages becoming common now a days and also to lead to universal peace. Smt. Neela, well written article! Keep it up!
madam, namma NATANA tanda mysoorali CHAAMA CHELUVE anno NAATAKA Maadteeve namma kadeya janpriya mooladhatiya kaavya adu…..nimma ee subjectge hattiravaagide….feb 1,2,3,4,,sanje 7k ..9480468327.
idu aryara dravidara horatavoo houdu
mahanteh navalkal