ನೆಂಪೆ ದೇವರಾಜ್
”ಇದೀಗ ಚುನಾವಣಾ ಪ್ರಚಾರದಲ್ಲಿ ತೊಡಗಿರುವವರು ಬೂತ್ವಾರು ಭಾಷಣಗಳನ್ನು ಮಾಡುತ್ತಾರೆ. ಒಂದು ಬೂತ್ ನಿಂದ ಮತ್ತೊಂದು ಬೂತ್ ಗೆ ಹೋಗುವಾಗ ಚಾಚೂ ತಪ್ಪದೆ ಈ ಹಿಂದೆ ಹೇಳಿದ್ದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಅದೇ ಭಾಷಣ ಮುಂದುವರಿಸುತ್ತಾ ಹೋಗುವುದು ಮಾಮೂಲಿ. ಆದರೆ ಶಾಂತವೇರಿ ಗೋಪಾಗೌಡರು ಐವತ್ತು ಅರವತ್ತರ ದಶಕದಲ್ಲಿ ತಮ್ಮ ಚುನಾವಣಾ ಪ್ರಚಾರ ಸಭೆಯಲ್ಲಿ ಒಂದು ಸಭೆಯಲ್ಲಿ ಮಾಡಿದ್ದ ಭಾಷಣವನ್ನು ಮತ್ತೊಂದು ಸಭೆಯಲ್ಲಿ ಹೇಳುತ್ತಿರಲಿಲ್ಲ”.
“ನೂರಾರು ಹಳ್ಳಿಗಳ ವೈವಿದ್ಯಮಯ ಸಮಸ್ಯೆಯ ಆಳವನ್ನು ತಿಳಿದುಕೊಂಡೇ ಮಾತಾಡುತ್ತಿದ್ದರು. ಕೇಳುಗರು ವೈವಿದ್ಯಮಯವಾದ ಗೌಡರ ಭಾಷಣ ಕೇಳಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಾ ತರಬೇತುಗೊಳ್ಳುತ್ತಿದ್ದರು. ಹಳ್ಳಿಯೊಂದರ ನೀರಿನ ಹಾಹಾಕಾರವನ್ನು ಅಂತರ್ರಾಷ್ಟ್ರೀಯ ನದಿನೀರಿನ ವ್ಯಾಜ್ಯಕ್ಕೆ ಸಮೀಕರಿಸುತ್ತಿದ್ದರು. ಕಾಂಗ್ರೆಸ್ಸಿನ ಘಟಾನುಘಟಿ ಮುಖಂಡರುಗಳೂ ಕೂಡಾ ಗೌಡರ ವೈವಿದ್ಯಮಯವಾದ ವಿಚಾರಪೂರ್ಣ ಭಾಷಣ ಕೇಳಲು ಹಾತೊರೆಯುತ್ತಿದ್ದರು”.
ಮಲೆನಾಡು ಭಾಗಕ್ಕೆ ‘ಶಿವಶಂಕರ ಟ್ರಾನ್ಸ್ ಪೋಟ್ ಕಂಪೆನಿ’ ಎಂಬ ಹೆಸರಿನ ಬಸ್ಸುಗಳ ಮೂಲಕ ಚಿರಪರಿಚಿತರಾದ ಕುಂದಾದ್ರಿಯ ಶ್ರೀನಿವಾಸ ಗೌಡರು ಪ್ರಭಾವ ಶಾಲಿಗಳು.. ಬಹುದೊಡ್ಡ ಹಿಡುವಳಿದಾರರು. ಎಸ್ಟೇಟ್ ಮಾಲೀಕರು.
ಇವರ ತಂದೆ ಕಾಂಗ್ರೆಸ್ಸಿನ ಮುಖ್ಯ ನಾಯಕರಲ್ಲಿ ಒಬ್ಬರು. ಕೆಂದಾಳಬೈಲಿಗೆ ಗೋಪಾಲ ಗೌಡರು ಭಾಷಣ ಮಾಡಲು ಬರುವ ಸಮಯವನ್ನು ಕೇಳಿ ತಿಳಿದು ತಪ್ಪದೆ ಹಾಜರಾಗಿ ಗೌಡರ ಮನಮುಟ್ಟಿಸುವ ಶೈಲಿಯ ಭಾಷಣ ಕೇಳಿ ಮನದುಂಬಿಸಿಕೊಂಡು ಮರಳುತ್ತಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಗೌಡರ ಸಭೆಗೆ ನೇರವಾಗಿ ಬರಲು ಹೆದರುತ್ತಿದ್ದರು. ಗಿಡ ಗಂಟಿಗಳ ಮರೆಯಲ್ಲಿ ಕದ್ದು ಕೂತು ಭಾಷಣ ಕೇಳಿಸಿಕೊಂಡು ಹೋಗುತ್ತಿದ್ದರು. ಸೋಷಲಿಸ್ಟ್ ಪಕ್ಷದ ಕಾರ್ಯಕರ್ತರಂತೂ ಬೆಂಕಿ ಹಾಕಿಕೊಂಡು ಗೌಡರ ಭಾಷಣಕ್ಕ್ಕಾಗಿ ರಾತ್ರಿ ಹನ್ನೆರಡಾದರೂ ಕಾದು ಕುಳಿತುಕೊಳ್ಳುತ್ತಿದ್ದರು.
ಆ ಕಾಲದಲ್ಲಿ ಮನಸ್ಸಿಗೆ ಹಿಡಿಸುವ ಭಾಷಣ ಮಾಡುತ್ತಾ ಮತದಾರರನ್ನು ಓಲೈಸುತ್ತಾ ಹೋಗುವ ಕಲೆಯಲ್ಲಿ ಗೌಡರನ್ನು ಮೀರಿಸುವುದು ಸಾಧ್ಯವೇ ಇರಲಿಲ್ಲ. ಒಂದೊಂದು ಮತ ಕೇಂದ್ರದಲ್ಲಿ ಒಂದೊಂದು ವಿಷಯಗಳನ್ನಿಟ್ಟುಕೊಂಡು ಮಾತಾಡುತ್ತಿದ್ದ ಗೌಡರ ಭಾಷಣದಿಂದ ಪ್ರಭಾವಿತರಾದ ಸೋಷಲಿಸ್ಟ್ ಪಕ್ಷದ ಕಾರ್ಯಕರ್ತರುಗಳೇ ಹಳ್ಳಿಗಳಲ್ಲಿ ಚುನಾವಣೆ ನಡೆಸುವಲ್ಲಿ ಸಮರ್ಥರಾಗುತ್ತಿದ್ದರು.
ಅಂದು ಗೌಡರ ಭಾಷಣಕ್ಕಾಗಿ ಜನ ಕಾಯುತ್ತಿದ್ದರು. ಆದರೆ ಇಂದೂ ಚುನಾವಣೆ ಸಮಯದಲ್ಲಿ ಮತದಾರರು ರಾತ್ರಿ ಹನ್ನೆರಡಾದರೂ ಕಾಯುತ್ತಾರೆ. ವ್ಯತ್ಯಾಸವೆಂದರೆ ಇಂದು ಕಾಯುವುದು ವಿಚಾರ ಪೂರ್ಣ ಚುನಾವಣಾ ಪ್ರಚಾರದ ಭಾಷಣಗಳಿಗಲ್ಲ! ಹಣ ಹಂಚುವವರು ಎಷ್ಟು ಹೊತ್ತಿಗೆ ತಮ್ಮ ಕಡೆ ಬರುತ್ತಾರೆ ಎಂಬುದಕ್ಕೆ ಕಾಯುತ್ತಾರೆ.!ಗೌಡರ ಕಾಲದಲ್ಲಿ ಹಣವೆಂಬುದು ಇರಲೇ ಇಲ್ಲ!”
ತಮ್ಮ ಎಂಭತ್ತೇಳು ವರ್ಷಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಸವೆಸಿರುವ ಮೂಡು ಬಾಗಿಲು ರಾಮಪ್ಪನವರು ಅಚಾನಕ್ಕಾಗಿ ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಸಿಕ್ಕರು.
ಆಗುಂಬೆ ಹೋಬಳಿಯ ಸಂಪೂರ್ಣ ಜವಾಬುದಾರಿಯನ್ನು ಹೊತ್ತು ಗೋಪಾಲ ಗೌಡರ ಚುನಾವಣೆಯನ್ನು ಯಶಸ್ವಿಯಾಗಿ ಪೂರೈಸಿದ ರಾಮಪ್ಪನವರನ್ನು ಮಾತಾಡಿಸಿದಾಗ ಹಳೆಯದನ್ನು ಮೆಲುಕು ಹಾಕತೊಡಗಿದರು. ಇವರ ಮೆಲುಕು ಹಾಕುವ ಉಲ್ಲಾಸಕ್ಕೆ ವಯಸ್ಸು ಹಿಂದೆ ಸರಿಯಿತು. ಸೋಷಲಿಸ್ಟ್ ಪಕ್ಷದ ವತಿಯಿಂದ ತಾಲೂಕು ಬೋಡ್ ಪ್ರವೇಶಿಸಿದ್ದು ಮಾತ್ರವಲ್ಲ. ರೈತ ಚಳುವಳಿ ಉತ್ತುಂಗ ಶಿಖರದಲ್ಲಿದ್ದಾಗ ಚಳುವಳಿ ಮುಂದುವರಿಯಲು ಇವರ ಕೊಡುಗೆ ಅಪಾರವಾಗಿತ್ತು. ಮೂಡು ಬಾಗಿಲು ರಾಮಪ್ಪನವರಲ್ಲಿ ಈಗಿನ ಚುನಾವಣೆಗಳು ಪ್ರಜಾ ಪ್ರಭುತ್ವವನ್ನು ಹಾಳು ಮಾಡುತ್ತಿರುವ ಬಗೆಗಿನ ನೋವು ಅವರನ್ನು ಕಾಡುತ್ತಿತ್ತು.
0 ಪ್ರತಿಕ್ರಿಯೆಗಳು