ಲೋಕೇಶ್ ಮೊಸಳೆ
ಪ್ರತಿ ಮನುಷ್ಯನಿಗೆ ಜೀವಿತದ ಅವಧಿಯಲ್ಲಿ ತನ್ನದೇ ನೆನಪಿನ ದಿನಗಳು ಹಲವು ಕಾರಣಕ್ಕಾಗಿ ಇರುತ್ತದೆ. ಈ ಹಲವು ಕಾರಣಗಳಿಗೋಸ್ಕರ ಅಂತಹ ದಿನವನ್ನು ಸಂಭ್ರಮಕ್ಕೊ, ದುಃಖಕ್ಕೊ ನೆನಪಿಸಿಕೊಳ್ಳುತ್ತಿರುತ್ತೇವೆ.
ಒಟ್ಟಿನಲ್ಲಿ ಆ ದಿನ ನಮ್ಮ ಜೀವಿತದ ಒಂದು ಭಾಗವಾಗಿ ನಮ್ಮ ಸ್ಮೃತಿಪಟಲದಲ್ಲಿರುತ್ತದೆ. ಆಗಸ್ಟ್ ೧೯ನ್ನು ವಿಶ್ವ ಛಾಯಾಗ್ರಹಣ ದಿನವೆಂದು ಗುರುತಿಸಿಕೊಂಡಿರುವುದರಿ೦ದ ವಿಶ್ವದಾದ್ಯಂತ ಛಾಯಾಚಿತ್ರ ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ಏರ್ಪ ಡಿಸಿದ್ದಾರೆ.
ಅದೇನೇ ಇರಲಿ ಇಂದು ಛಾಯಾಗ್ರಹಣ ಎಂಬುದು ಎಲ್ಲರ ಪಾಲಿಗೆ ದಕ್ಕಿರುವ ವಿಷಯವಾಗಿದೆ.
ವಿಶಾಲ ಅರ್ಥದಲ್ಲಿ ಹೇಳುವುದಾದರೆ ನಮ್ಮ ಕಣ್ಣುಗಳೇ ಕ್ಯಾಮರಾ. ಮನಸ್ಸಿನಲ್ಲಿ ಉಳಿದಿರುವ ನೆನಪುಗಳೇ ಚಿತ್ರಗಳಾಗಿವೆ. ಚಿತ್ರಣಗಳು ನಮ್ಮ ಮನಸ್ಸಿನಲ್ಲಿ ಉಳಿಯದಿದ್ದರೆ; ನೆನಪುಗಳೂ ಕೂಡ ಉಳಿಯಲಾರವು. ಹೀಗಾಗಿ ಪ್ರತಿಯೊಬ್ಬನೂ ಕೂಡ ಛಾಯಾಗ್ರಹಕನೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ಪಾಲಿಗೆ ಆ.೧೯ ಪ್ರಮುಖ ದಿನವಾಗಿ ಉಳಿಯಬೇಕಿದೆ.

ಇಂದಿನ ತಾಂತ್ರಿಕ ಯುಗದಲ್ಲಿ ಸೆಲ್ ಫೋನ್ ಬಳಸುವವರೆಲ್ಲಾ ಛಾಯಾಗ್ರಾಹಕರೇ. ಇದು ಸೆಲ್ಫಿ ಯುಗ. ಛಾಯಾಗ್ರಹಣ ಯುಗವಾಗಿ ನಮ್ಮನ್ನಾವರಿಸಿದೆ. ವಿಶ್ವ ಛಾಯಾಗ್ರಹಣ ದಿನದ ಆಚರಣೆಯ ನೆಪದಲ್ಲಿ ನೆನಪು- ಘಟನೆಗಳನ್ನು ದಾಖಲಿಸುವುದು. ಇದು ಭಾವಚಿತ್ರವೇ ಇರಲಿ, ಲ್ಯಾಂಡ್ಸ್ಕೇಪ್ ಚಿತ್ರಗಳೇ ಇರಲಿ, ವನ್ಯಜೀವಿಗಳ ಚಿತ್ರಗಳೇ ಇರಲಿ, ಒಟ್ಟಿನಲ್ಲಿ ಆ ಕ್ಷಣದ ಭಾವನೆಗಳನ್ನು ದಾಖಲಿಸುವ ದಿನವಾಗಿ ಆ.೧೯ ರಂದುವಿಶ್ವ ಛಾಯಾಗ್ರಹಣ’ ದಿನವನ್ನಾಗಿ ಸಂಭ್ರಮಿಸುತ್ತಿದ್ದೇವೆ.
ವಿಶ್ವ ಛಾಯಾಗ್ರಹಣ ದಿನದೊಂದಿಗೆ ವಿಶ್ವ ಮಾನವೀಯ ದಿನವನ್ನಾಗಿ ಕೂಡ ಆಚರಿಸಲಾಗುತ್ತಿದೆ. ಈ ವಿಶ್ವ ಮಾನವೀಯ ದಿನದಂದು ಮಾನವೀಯ ಕಾರಣಗಳಿಗಾಗಿ ದುಡಿಯುವ; ಜನರ ನೋವು ನಲಿವನ್ನು ನೆನೆದು `ನೊಂದವರಿಗೆ ಮಿಡಿಯುವ ಪ್ರಾಣ ಮಿತ್ರ’ ರಿಗೆ ಅರ್ಪಣ ಮನೋಭಾವನೆಗಳನ್ನು ಸಲ್ಲಿಸುವ ದಿನವನ್ನಾಗಿ ಕೂಡ ಆಚರಿಸಲಾಗುತ್ತಿದೆ. ‘ತಮ್ಮ ಹಿತಾಸಕ್ತಿಗಳನ್ನು ಬಿಟ್ಟು ನೊಂದವರ ಬಾಳಿಗೆ ಬೆಳಕಾಗುವ ವೈದ್ಯರಿರಲಿ, ನರ್ಸ್ಗಳಿರಲಿ, ಯಾವುದೇ ಸ್ವಯಂ ಸೇವಕರಿರಲಿ, ಯಾವುದೇ ಜೀವಿಯ ಪಾಲಿಗೆ ನಿಲ್ಲುವ ಯಾವುದೇ ಜನರಿಗೆ ಕೃತಜ್ಞತೆ ಹೇಳುವ ದಿನವಾಗಿ ವಿಶ್ವ ಮಾನವೀಯ ದಿನವನ್ನಾಗಿ ಕೂಡ ಆಚರಿಸಲಾಗುತ್ತಿದೆ.

ಈ ದಿನವನ್ನು ಮಾನವೀಯತೆ ಅಂತಃಕರಣ, ಪ್ರೀತಿ ತುಂಬಿದ ಮನದಲ್ಲಿ ಮನುಷ್ಯ-ಮನುಷ್ಯರ ನಡುವೆ ಜಾತಿ, ಮತ, ಧರ್ಮ ಮೀರಿ ಮನುಷ್ಯ ಪ್ರೀತಿಯನ್ನು ತೋರುತ್ತಾ, ಕ್ಲಿಕ್ಕಿಸೋಣ. ಬದುಕಿನ ಕ್ಷಣಗಳನ್ನು ಪ್ರೀತಿ ತುಂಬಿದ ಚಿತ್ರಣಗಳನ್ನು ದಾಖಲಿಸೋಣ. ಫ್ರೆಂಡ್ಸ್, ಹ್ಯಾಪಿ, ಕ್ಲಿಕ್…ಕ್ಲಿಕ್…ಕ್ಲಿಕ್…ಕ್ಲಿಕ್……
ಸುಚಿತ್ರದಲ್ಲಿ ಚಿತ್ರ ಪ್ರದರ್ಶನ
ಕಳೆದ ನಾಲ್ಕು ದಶಕಗಳ ಇತಿಹಾಸವಿರುವ ಮೈಸೂರು ಫೋಟೋಗ್ರಫಿ ಅಸೋಷಿಯೇಷನ್ ವಿಶ್ವಛಾಯಾಗ್ರಹಣ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಗರದ ಕಲಾಮಂದಿರದಲ್ಲಿರುವ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಮೂರು ದಿನಗಳ ಪ್ರದರ್ಶನದಲ್ಲಿ ಸುಮಾರು ೩೦ ಛಾಯಾಗ್ರಾಹಕ ವನ್ಯಜೀವಿ, ನಿಸರ್ಗ, ಪತ್ರಿಕಾ ಛಾಯಾಗ್ರಹಣ, ಚಿತ್ರಾತ್ಮಕ ವಿಷಯಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ.
ಆಗಸ್ಟ್ ೧೯ರ ಬೆಳಿಗ್ಗೆ ೧೦.೩೦ಕ್ಕೆ ಪ್ರದರ್ಶನವನ್ನು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ ಉದ್ಘಾಟಿಸಲಿದ್ದಾರೆ.

























0 Comments