ವಿಶೇಷಾಂಕಗಳ ವಿಶೇಷ
ಡಿ ಎಸ್ ರಾಮಸ್ವಾಮಿ
ಹೊಸ ಬಟ್ಟೆ, ಸಿಹಿ ತಿಂಡಿಗಳ ಜೊತೆಜೊತೆಗೆ ಯುಗಾದಿ-ದೀಪಾವಳಿ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳು ಪ್ರಕಟಿಸುವ ವಿಶೇಷಾಂಕಗಳು ಹೊತ್ತು ತರುವ ಸಾಹಿತ್ಯಕ-ಸಾಂಸ್ಕೃತಿಕ ಸಂಗತಿಗಳು ಬೌದ್ಧಿಕ ವಿಕಸನಕ್ಕೆ ನೆರವಾಗುತ್ತಲೇ ಬಂದಿವೆ. ಇಷ್ಟಪಟ್ಟು ಹೊಲಿಸಿಕೊಂಡ ಬಟ್ಟೆ ಹರಿದುಹೋಗಿದೆ. ಸಿಹಿತಿಂಡಿಗಳ ಸ್ವರೂಪವೂ, ವೈವಿಧ್ಯವೂ ಬದಲಾಗುತ್ತಲೇ ಇದೆ. ಆದರೆ ಅದೆಷ್ಟೋ ವರ್ಷಗಳಿಂದ ಜತನವಾಗಿ ಕಾಪಾಡಿಕೊಂಡೇ ಬರುತ್ತಿರುವ ವಿಶೇಷಾಂಕಗಳ ಸಂಗ್ರಹ ಮಾತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಸಾಗಿದೆ. ಬೇಕಾದಾಗ, ಬೇಜಾರಾದಾಗ ತನ್ನ ತೆಕ್ಕೆಯೊಳಕ್ಕೆಳೆದುಕೊಂಡು ಸಾಂತ್ವನ ಹೇಳುತ್ತಲೇ ಇದೆ.
ವಿಶೇಷಾಂಕಗಳ ಕತೆ, ಕವಿತೆಗಳ ಜೊತೆಜೊತೆಗೇ ಆಯಾ ಕಾಲದ ಬಹುಚಚರ್ಿತ ಸಂಗತಿಗಳ ಮೇಲಣ ಚಿಕ್ಕ ಚೊಕ್ಕ ಬರಹಗಳು ಆಯಾ ಕಾಲಮಾನದ ಸಾಂಸ್ಕೃತಿಕ ಸಂಗತಿಗಳ ಮಾಪಕಗಳಾಗಿ ಉಳಿದಿವೆ. ಯಾವತ್ತೂ ಕಾಡುತ್ತಲೇ ಇರುವ ಮನುಷ್ಯ ಸಹಜ ನಿರಂತರ ಕಟ್ಟುವಿಕೆಯ ಸಾಕ್ಷಿಯಾಗಿ ಭವಿಷ್ಯದ ಭಾಷ್ಯ ಬರೆಯತ್ತಲೇ ವರ್ತಮಾನದ ಪುರಾವೆಗಳಾಗಿವೆ.
ವಿಶೇಷಾಂಕಗಳಿಗೆಂದೇ ನಡೆಸುವ ಕವಿತೆ-ಕಥಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದವರೇ ಆಯಾ ಕಾಲದ ಸಾಹಿತ್ಯ ಸಂದರ್ಭದ ಮುಖವಾಣಿಗಳಾಗಿ ಬೆಳೆದು ನಿಂತ ಸಂಗತಿ ನೆನಪಿಸಿಕೊಂಡಾಗಲೆಲ್ಲ, ಈ ವಿಶೇಷ ಸಂಚಿಕೆಗಳು ನಮ್ಮ ಬರಹಗಾರರನ್ನು ಬೆಳೆಸಿದ, ಪೋಷಿಸಿದ ಬಗೆಗೆ ಹೆಮ್ಮೆ ಗೌರವ ಮೂಡುತ್ತದೆ.
ಸಾಹಿತ್ಯ ಪತ್ರಿಕೆಗಳ ವಿಶೇಷಾಂಕಗಳ ಪರಿಮಳವಂತೂ ವಾಣಿಜ್ಯೋದ್ದೇಶದ ಬಹುಪ್ರಸಾರದ ಪತ್ರಿಕೆಗಳಿಗಿರುವ ಜಾಹೀರಾತಿನ ಬಲವಿಲ್ಲದೆಯೂ ಅವುಗಳೊಳಗಿರುವ ಸತ್ವಪೂರ್ಣ, ಸರ್ವಕಾಲೀಕ ಚರ್ಚೆಗಳ ಮೂಲಕ ನಮ್ಮೆಲ್ಲರ ಚಿಂತನೆಗಳಿಗೆ ಹೊಸದಿಕ್ಕು ದೆಶೆ ತೋರಿವೆ, ತಪ್ಪು ತಿಳುವಳಿಕೆಗಳನ್ನು ದೂರಾಗಿಸಿವೆ. ಸಿನಿಮಾ, ರಂಗಭೂಮಿ, ಶಿಕ್ಷಣ, ಭಾಷೆ, ತಂತ್ರಜ್ಞಾನ, ಫ್ಯಾಷನ್ ಹೀಗೆ ಹಲವು ಹತ್ತು ಸಂಗತಿಗಳ ಮೇಲಣ ಕೇಂದ್ರೀಕೃತ ಲೇಖನಗಳು ಹೊಸ ಚರ್ಚೆಗಳನ್ನು ಹುಟ್ಟುಹಾಕಿದಂತೆಯೇ ಅವನ್ನು ದಕ್ಕಿಸಿಕೊಳ್ಳುವ ಸುಲಭೋಪಾಯಗಳನ್ನೂ ಗ್ರಹಿಸಿವೆ, ಸಮರ್ಥಿಸಿವೆ. ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕೃತಿಗೆ ನೂರು ತುಂಬಿದ ಸಂದರ್ಭವನ್ನು ವಿಶೇಷ ಸಂಚಿಕೆಯ ವಿಷಯವನ್ನಾಗಿ ಆಯ್ದು ಕೊಳ್ಳುವ ಸಂಪಾದಕ ಇತಿಹಾಸಕ್ಕೆ ತಲೆಬಾಗುತ್ತಲೇ ಭವಿಷ್ಯವನ್ನು ಕುರಿತಂತೆ ಆಲೋಚಿಸುತ್ತಲೂ ಇರುತ್ತಾನೆನ್ನುವುದಕ್ಕೆ ಪುರಾವೆಯೊದಗಿಸುತ್ತದೆ.
ಋತು ವಿಶೇಷಗಳನ್ನು ಪ್ರಾಚೀನ ಅರ್ವಾಚೀನ ಕೃತಿಗಳಿಂದ ಸಂಗ್ರಹಿಸಿ ವರ್ತಮಾನದ ವಾತಾವರಣದೊಂದಿಗೆ ಬೆಸೆಯಿಸಿ ವರ್ಷವೊಂದರಲ್ಲಿ ಆರು ವಿಶೇಷಾಂಕಗಳನ್ನು ಪ್ರಕಟಿಸಿದ್ದ ಮಾಸಿಕವೊಂದರಲ್ಲಿ ಅಡಗಿಸಿದ್ದ ಮಾಹಿತಿಗಳು ಅಂತರ್ಜಾಲದಲ್ಲೂ ಲಭ್ಯವಿಲ್ಲದಿರುವುದನ್ನು ಗಮನಿಸಿದರೆ ಇಂಥ ಸಂಚಿಕೆಗಳನ್ನು ರೂಪಿಸುವ ಹಿಂದಿನ ಕಷ್ಟಗಳು ಅರಿವಾಗುತ್ತವೆ. ಆ ಸಂಚಿಕೆಗಳನ್ನು ರೂಪಿಸುವ ಹೃದಯ ಬುದ್ಧಿಗಳಿಗೆ ನಮೋ ಎನ್ನಲೇ ಬೇಕಾಗುತ್ತದೆ. ಏಕೆಂದರೆ ಮಾಹಿತಿ ಸಂಗ್ರಹಣೆಯ ಜೊತೆಜೊತೆಗೇ ಅವನ್ನು ವರ್ತಮಾನದ ಆವಶ್ಯಕತೆಗಳಿಗನುಗುಣವಾಗಿ ಬಳಸಿಕೊಳ್ಳುವ ಜಾಣ್ಮೆ ಮತ್ತು ಕುಶಲತೆ ಎರಡೂ ಇಲ್ಲಿ ಮುಖ್ಯವಾಗಿರುತ್ತವೆ.
ಆದರೂ ಏಕವ್ಯಕ್ತಿ ಪ್ರದರ್ಶನದ ಸ್ಥಳೀಯ ಪತ್ರಿಕೆಗಳು, ಟ್ಯಾಬ್ಲಾಯ್ಡ್ ಪತ್ರಿಕೆಗಳು ಜಾಹೀರಾತಿನ ಆಸರೆ (ಆಸೆ)ಯಿಂದ ಅತಿರಂಜಿತ ಕಪೋಲಕಲ್ಪಿತ ಸಂಗತಿಗಳನ್ನು ಕುರಿತೇ ವಿಶೇಷ ಸಂಚಿಕೆಗಳನ್ನು ರೂಪಿಸ ಹೋಗಿ ಸೋತು ಕೈ ಚೆಲ್ಲಿವೆ. ಅಂತೆಯೇ ವಿಶೇಷಾಂಕಗಳ ಪರಂಪರೆಗಿರುವ ಚರಿತ್ರೆಗೂ ಮಸಿ ಬಳಿದಿವೆ.
ಅಂತರ್ಜಾಲದಲ್ಲಿ ಜಾಲಾಡಿ ಕ್ಷಣಾರ್ಧದೊಳಗೆ ಮಾಹಿತಿ ಸಂಗ್ರಹಿಸಬಹುದಾದ ಈ ಕಾಲದ ಮಂದಿಗೆ ನಾಗಂದಿಗೆಯ ಮೇಲಿನ ಪುಸ್ತಕದ ಕಟ್ಟಿನ ಧೂಳು ಝಾಡಿಸಿ ಯಾವುದೋ ವಿಶೇಷಾಂಕವೊಂದರಲ್ಲಿ ಪ್ರಕಟವಾಗಿದ್ದ ಲೇಖನವೊಂದನ್ನು ಹೆಕ್ಕಿ ತೆಗೆಯುವುದು ಬಲು ಬೇಜಾರಿನ ಕೆಲಸವೇ ಹೌದಾದರೂ ಕಳೆದ ಇಪ್ಪತ್ತು ವರ್ಷಗಳ ಬಹುತೇಕ ಎಲ್ಲ ಪತ್ರಿಕೆಗಳ ವಿಶೇಷಾಂಕಗಳನ್ನೂ ಜತನವಾಗಿ ಕಾಪಾಡಿಕೊಂಡು ಬಂದಿರುವ ನನಗೆ ನನ್ನ ಈ ಸಂಗ್ರಹ ಬಲು ಬೇಜಾರಿನ ಕ್ಷಣಗಳ ಆಪ್ತ ಸಖನಾಗಿ, ಸಾಹಿತ್ಯಕ ಸಂಗತಿಗಳ ಸಂಗಾತಿಯಾಗಿ ಹಾಗೇ ಬೇಕು ಬೇಕಾದ ಮಾಹಿತಿಗಳ ಕಣಜವಾಗಿ ಕಂಡಿದೆ, ಕಾಣುತ್ತಿದೆ.




0 Comments