ಅಗ್ರಾಳ ಪುರಂದರ ರೈ ಅವರು ಒಬ್ಬ ಉತ್ತಮ ಸಾಹಿತಿ, ಪತ್ರಕರ್ತ, ಸಂಘಟಕ, ದೇಶಪ್ರೇಮಿ. ಅವರ ಅನುಭವ ಲೋಕ ‘ಬಿ ಎ ವಿವೇಕ ರೈ ‘ ಬ್ಲಾಗ್ ನಲ್ಲಿ ಬಿಚ್ಚಿಕೊಳ್ಳುತ್ತಿದೆ.ಇದು ಎರಡನೆಯ ಕಂತು.
ತಾವು ಸಾಹಿತ್ಯಕ್ಕೆ ಒಲಿದ ರೀತಿ, ಶಿವರಾಮ ಕಾರಂತರ ಜೊತೆಗೆ ಒದಗಿದ ಸಾಂಗತ್ಯ, ವಿವೇಕ ಎಂಬ ಹೆಸರನ್ನು ಮಗನಿಗೆ ಇಟ್ಟದ್ದು ಹೀಗೆ ಹಲ ರಸ ಪ್ರಸಂಗ ಇಲ್ಲಿದೆ.

ಕಾರಂತರ ಬಹುತೇಕ ಎಲ್ಲ ಕೃತಿಗಳನ್ನೂ ಅವು ಪ್ರಕಟವಾದ ತಕ್ಷಣ ಓದಿ ಮುಗಿಸುತ್ತಿದ್ದೆ. ಅವರ ಹರ್ಷ ಪ್ರಕಟಣಾಲಯದಿಂದ ಹೊರಬಂದ ಕೂಡಲೇ ಬಿಸಿಬಿಸಿಯಾಗಿಯೇ ಜೀರ್ಣಿಸಲು ಪ್ರಯತ್ನಿಸುತ್ತಿದ್ದೆ. ಹೆಚ್ಚಿನ ಅವರ ಕೃತಿಗಳ ಒಂದು ಪ್ರತಿಯನ್ನು ಅವರು ನನಗೆಯೇ ಕೊಡುತ್ತಿದ್ದರು. ಲೀಲಾ ಕಾರಂತರೂ ತಮ್ಮ ಸಾಹಿತ್ಯ ಕಲೆಗಳ ಜ್ಞಾನದ ಪಾಲನ್ನು ನನಗೆ ಒದಗಿಸುತ್ತಿದ್ದರು. ಹೀಗೆ ಓದುವ ಹಸಿವೆಯನ್ನು ಹಿಂಗಿಸಲು ಮೊದಲಾದ ನನ್ನ ಸಂಬಂಧವು ಕಾರಂತ ದಂಪತಿಗಳ ಕುಟುಂಬದ ಸದಸ್ಯನಂತೆ ಆತ್ಮೀಯವಾಗುತ್ತ ಮುಂದುವರಿಯಿತು. ಲೀಲಾ ಕಾರಂತರು ಮತ್ತು ಅವರ ಮಕ್ಕಳು ಅಗ್ರಾಳದ ನಮ್ಮ ಮನೆಯಲ್ಲಿ ಬಂದು ದಿನಗಟ್ಟಲೆ ಇರುತ್ತಿದ್ದರು. ನನ್ನ ಹೆಂಡತಿ ಯಮುನಾಳಿಗೆ ಲೀಲಾ ಕಾರಂತರೆಂದರೆ ಒಡಹುಟ್ಟಿದ ಅಕ್ಕನಿಗಿಂತ ಹೆಚ್ಚು. ಸಸ್ಯಾಹಾರದ ರುಚಿಕರವಾದ ಬಹುಬಗೆಗಳನ್ನು ಯಮುನಾ ಕಲಿತದ್ದು ಲೀಲಾ ಕಾರಂತರಿಂದ. ಮಾಲವಿಕಾ ಉಲ್ಲಾಸ ಕ್ಷಮಾ ಅಗ್ರಾಳಕ್ಕೆ ಬಂದರೆ ನಮ್ಮ ಮಕ್ಕಳ ಜೊತೆ ಆಟವಾಡಿ, ತೋಟದ ಪಕ್ಕದ ಕೆರೆಯಲ್ಲಿ ಮುಳುಗಿ ಈಜಾಡಿ ಖುಷಿಪಡುತ್ತಿದ್ದರು.
ನನಗೆ ಮೊದಲನೆಯ ಗಂಡು ಮಗು ಹುಟ್ಟಿದಾಗ, 1946ರಲ್ಲಿ ಮಗುವಿಗೆ ಹೆಸರು ಸೂಚಿಸಲು ಕಾರಂತರಲ್ಲಿಗೆ ಬಾಲವನಕ್ಕೆ ಹೋದೆ. ಅವರು ‘ವಿವೇಕ’ ಎಂದು ಇಡು ಎಂದರು. ನನಗೆ ಅದು ‘ವಿವೇಕಾನಂದ’ ಎಂದು ಕೇಳಿಸಿತು. ‘ವಿವೇಕಾನಂದ ಎಂದೇ?’ ಎಂದು ಕೇಳಿದೆ. ಆನಂದ ಗೀನಂದ ಏನೂ ಬೇಡ. ವಿವೇಕ ಇದ್ದರೆ ಆನಂದ ತನ್ನಿಂದ ತಾನೇ ಬರುತ್ತದೆ ಎಂದರು. ನನ್ನ ಎರಡನೆಯ ಮಗನಿಗೆ ‘ಉಲ್ಲಾಸ’ ಎಂದು ಹೆಸರು ಇಟ್ಟೆ. ಕಾರಂತರ ಮಗ ‘ಉಲ್ಲಾಸ’ನ ಹೆಸರಿನ ಪ್ರೇರಣೆಯಿಂದ ಇವನಿಗೆ ಆ ಹೆಸರು ಇಟ್ಟದ್ದು.
ಪೂರ್ಣ ಓದಿಗೆ ಭೇಟಿ ಕೊಡಿ : ಬಿ ಎ ವಿವೇಕ ರೈ
ವಿವೇಕ ಇದ್ದರೆ ಆನಂದ ತನ್ನಿಂದ ತಾನೇ ಬರುತ್ತದೆ..
ನಿಮಗೆ ಇವೂ ಇಷ್ಟವಾಗಬಹುದು…





0 Comments