ವಾನಳ್ಳಿಯವರೂ.. 'ಕುಮಾರತ್ವ'ವೂ..

ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ ನಿರಂಜನ ವಾನಳ್ಳಿ ಅವರ ಮಾತು ಇಲ್ಲಿದೆ.
ಮೂಡಬಿದ್ರಿಯಲ್ಲಿ ಜರುಗಿದ ನುಡಿಸಿರಿಯಲ್ಲಿ ಮಾತನಾಡಿದ ಅವರು ಪತ್ರಕರ್ತನ ವಿಶ್ವಾಸಾರ್ಹತೆಯನ್ನು ಕನ್ಯತ್ವಕ್ಕೆ ಹೋಲಿಸಿದ್ದಾರೆ.
ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಸಾಕಷ್ಟು ಕಾಲ ಪತ್ರಿಕೋದ್ಯಮದ ಉಪನ್ಯಾಸಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ವಾನಳ್ಳಿ ಅವರ ಸಂವೇದನಾರಹಿತ ಮನಸ್ಸಿನ ಬಗ್ಗೆ ಚರ್ಚೆ ಶುರುವಾಗಿದೆ
ಅವಧಿಯ ಜುಗಾರಿ ಕ್ರಾಸ್ ಇರುವುದೇ ಇಂತಹ ಚರ್ಚೆ/ ಸಂವಾದಕ್ಕೆ ವೇದಿಕೆ ಒದಗಿಸಲು
ಬನ್ನಿ, ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ
ನೇರ ಇಲ್ಲಿಯೇ ಕಾಮೆಂಟ್ ಮಾಡಿ. ಇಲ್ಲವೇ [email protected] ಇಲ್ಲಿಗೆ ಇ ಮೇಲ್ ಮಾಡಿ

ಇಲ್ಲಿದೆ ಖ್ಯಾತ ಕಥೆಗಾರ್ತಿ ಸುಮಂಗಲಾ ಅವರ ಪ್ರತಿಕ್ರಿಯೆ 

ಸುಮಂಗಲಾ 
ವಾನಳ್ಳಿಯವರು “ಪತ್ರಿಕಾ ವಿಶ್ವಾಸಾರ್ಹತೆ ಕನ್ಯತ್ವಕ್ಕೆ ಸಮಾನ” ಎಂದಿದ್ದಾರೆ.
ಅಸಲಿಗೆ ಕನ್ಯತ್ವ ಎಂದರೆ ಏನು ಮತ್ತು ಅದು ಕಳೆದುಹೋಗುವುದು ಹೇಗೆ? ಮತ್ತೆ ಇದಕ್ಕೆ ಸಮನಾಗಿ ಪುರುಷರು ಕಳೆದುಕೊಳ್ಳಬಹುದಾದ “ಕುಮಾರತ್ವ” ಎಂಬುದೇನಾದರೂ ಇದೆಯೇ?
ಕನ್ಯತ್ವ ಎನ್ನುವುದು ಮೊದಲ ಸಲ ಲೈಂಗಿಕ ಸಂಪರ್ಕದಲ್ಲಿ ಕಳೆದುಹೋಗುವಂಥದು ಎಂದಾದರೆ ಕುಮಾರತ್ವ ಎನ್ನುವುದೂ ಇರ್ಲೇಬೇಕಲ್ಲವೇ? ಹಾಗಿದ್ದರೆ ಗಂಡಸರ “ಕುಮಾರತ್ವ” ಎನ್ನುವುದು ಎಂದಿಗೂ ಕಳೆದುಹೋಗುವುದಿಲ್ಲವೇ?”
ವಾನಳ್ಳಿಯವರು ಮದುವೆಯಾಗಿದ್ದರಿಂದ ಅವರ ಕುಮಾರತ್ವ ಕಳೆದುಹೋಗಲಿಲ್ಲವೇ? ಇಷ್ಟಾಗಿ ಅವರೇ ಹೇಳುವ ಪತ್ರಿಕಾ ವಿಶ್ವಾಸಾರ್ಹತೆಯನ್ನು ಅವರು ಎಷ್ಟರಮಟ್ಟಿಗೆ ಉಳಿಸಿಕೊಂಡಿದ್ದಾರೆ?
ಬಹಳ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಮೈಸೂರು ವಿವಿಯನ್ನು ಮೆನೋಪಾಸ್ ಆದ ಮಹಿಳೆಯಂತೆ ಜಡವಾಗಿದೆ ಎಂದಿದ್ದರು.
ಇದೇ ನಾಗತಿಹಳ್ಳಿಯವರು ಭೂಮಿ ಚಪ್ಪಟೆಯಾಗಿದೆ ಎಂಬ ತಮ್ಮ ಬಾಲ್ಯದ ನಂಬಿಕೆಯ ಕುರಿತು ಹೇಳುತ್ತ, ‘ಚಪ್ಪಟೆಯಾಗಿದ್ದಿ’ ಎಂದರೆ ಸಿನಿಮಾ ತಾರೆಯಂತೆ ನಮ್ಮ ಭೂತಾಯಿ ಏನೂ ಬೇಸರ ಪಟ್ಟುಕೊಳ್ಳುವುದಿಲ್ಲ!’ ಎಂದು ಬರೆದಿದ್ದರು.
ನೋಡಿ, ನಮ್ಮ ಬರಹಗಾರರಿಗೆ ಭೂಮಿ ಚಪ್ಪಟೆ ಎಂಬ ಹೋಲಿಕೆಗೆ ಸಿಗುವುದೂ ’ಚಪ್ಪಟೆಯಾಗಿರುವ’ ಮಹಿಳೆಯರೇ. ನಟಿ ಮಾತ್ರವಲ್ಲ, ಯಾವ ಮಹಿಳೆಗಾದರೂ ಚಪ್ಪಟೆಯಾಗಿದ್ದಿ ಎಂದರೆ ಬೇಸರವಾಗುವುದು ಸಹಜವೇ.
ಏಕೆಂದರೆ ’ಚಪ್ಪಟೆ’ಯಾಗಿರುವುದಾಗಲೀ ಅಥವಾ ಸಿನಿಮಾಗಳಲ್ಲಿ, ಇನ್ನಿತರ ಸಾಹಿತ್ಯಗಳಲ್ಲಿ ವರ್ಣಿಸುವಂತೆ ರಸಪೂರಿ ಮಾವಿನ ಹಣ್ಣೋ ಅಥವಾ ಇನ್ನೇನೋ ಆಗಿರುವುದು ಅವರ ಆಯ್ಕೆಯಲ್ಲ, ಅದೊಂದು ಜೈವಿಕ ಸಂಗತಿ.
ಒಂದು ನಿರ್ದಿಷ್ಟ ಲೈಂಗಿಕ ಮತ್ತು ಸಂತಾನೋತ್ಪತ್ತಿ ಉದ್ದೇಶದಿಂದ ರೂಪುಗೊಂಡಿರುವ ಸ್ತನಗಳ ಆಕಾರವೇ ಮುಖ್ಯವಾಗಿ, ಮಹಿಳೆಯೊಬ್ಬಳ ಇಡೀ ವ್ಯಕ್ತಿತ್ವವೇ ನಗಣ್ಯವೆಂಬಂತೆ ಸೂಕ್ಷ್ಮಜ್ಞರಾದ ಸಾಹಿತಿಗಳೂ ಆಲೋಚಿಸುತ್ತಾರೆ ಎಂದರೆ ಅವರ ಸಂವೇದನಾಶೀಲತೆಯ ಬಗ್ಗೆ ಇನ್ನೇನು ಹೇಳೋಣ?
 
ಇತ್ತೀಚೆಗೆ ಯುವ ಕಥೆಗಾರರೊಬ್ಬರು ತಮ್ಮ ಸಂಕಲನದ ಬಿಡುಗಡೆ ಸಂದರ್ಭದಲ್ಲಿ ನಡೆದ ಕಥನ ಸಂವಾದದಲ್ಲಿ ತಾವು ಮೊದಲು ಬರೆದ ಸುಮಾರು ನಲ್ವತ್ತು ಕಥೆಗಳನ್ನು ಯಾವುದೇ ಮೋಹ ಪ್ರೀತಿ ಇಟ್ಟುಕೊಳ್ಳದೇ ಹರಿದುಹಾಕಿದ್ದನ್ನು ಹೇಳುತ್ತ “ಹಿಂದೆ ನಲ್ವತ್ತು ಕಥೆಗಳು ಭ್ರೂಣಾವಸ್ಥೆಯಲ್ಲಿ ಅಬಾರ್ಶನ್ ಆದಂಗೆ ಅಲ್ಲೆ ಸತ್ತು ಹೋಗಿವೆ.” ಎಂದರು.
ಅರೆ… ಈ ಗಂಡಸರಿಗೆ ’ವಸ್ತು ಚೆನ್ನಾಗಿಲ್ಲ, ನಾನು ಏನು ಹೇಳಬೇಕು ಅದನ್ನು ಹೇಳುತ್ತಿಲ್ಲ, ನಾನು ಹೇಳಿದ್ದು ಕನ್ವೇ ಆಗಲ್ಲ, ಓದುಗನಿಗೆ ದಾಟಿಸಲು ಸಾಧ್ಯವಿಲ್ಲ’ ಎಂದು ಕಥೆಗಳನ್ನು ಹರಿದು ಹಾಕುವುದಕ್ಕೂ, ಯಾವುದೋ ಕಾರಣಕ್ಕೆ ಒಡಲಲ್ಲಿ ಚಿಗುರಿದ ಜೀವವೊಂದು ಅಬಾರ್ಶನ್ ಆಗಿ ಸತ್ತುಹೋಗುವ ಮಾನಸಿಕ ಹಾಗೂ ದೈಹಿಕವಾದ ಒಂದು ಆತ್ಯಂತಿಕ ದಾರುಣ ನೋವಿಗೂ ವ್ಯತ್ಯಾಸವೇ ಕಾಣದೇ, ಹ್ಯಾಗೆ (ಯಕಃಚಿತ್!) ಕಥೆಗಳನ್ನು ಹರಿದುಹಾಕುವುದು ಒಡಲ ಜೀವವೊಂದು ಸತ್ತುಹೋಗುವ ದಾರುಣತೆಗೆ ಸಮನಾಗಿಬಿಡುತ್ತದೆ ನೋಡಿ.
ಹೀಗೆ ಕಥೆ, ಕವನಗಳನ್ನು ಹರಿದು ಹಾಕುವುದು ಅಬಾರ್ಶನ್ ಹಾಗೆ ಅನ್ನಿಸಿದರೆ ಇನ್ನು ಕಥೆ, ಕಾದಂಬರಿ, ಕವನಗಳು ಸಂಕಲನ ಅಥವಾ ಪುಸ್ತಕವಾಗಿ ಪ್ರಕಟಗೊಳ್ಳುವುದು ನಮ್ಮ ಹೆಚ್ಚಿನ ಬರಹಗಾರರಿಗೆ (ಇದಕ್ಕೆ ಹಿರಿ ಕಿರಿಯ ಬೇಧವಿಲ್ಲ) ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಮಗು ಹುಟ್ಟಿದ ಹಾಗೆ. ಎಷ್ಟೆಲ್ಲ ಜನ (ಪುರುಷ!!) ಬರಹಗಾರರು ಬರವಣಿಗೆಯೆಂಬ ಸೃಜನಶೀಲ ಪ್ರಕ್ರಿಯೆಯನ್ನು ’ಪ್ರಸವ ವೇದನೆ’ಗೆ ಹೋಲಿಸಿಲ್ಲ ಹೇಳಿ…
ಚಿದಾನಂದ ಸಾಲಿಯವರು ಇತ್ತೀಚೆಗೆ “ಮೂರನೇ ಕಣ್ಣಿಗೆ ನೂರಾರು ಗಾಯ”  ತಮ್ಮ ಲೇಖನದಲ್ಲಿ ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ನಾಟಕದಲ್ಲಿರಬೇಕು ಒಂದು ಸ್ತ್ರೀಪಾತ್ರ ‘ಹಡಿಯೂದು ಅಂದ್ರೇನವ, ಹೂಸು ಬಿಟ್ಟಷ್ಟು ಹಗೂರ’ ಅಂತ ಮಾತಾಡ್ತದೆ ಎಂದು ಪ್ರಸ್ತಾಪಿಸಿದ್ದಾರೆ. ನೋಡಿ, ಹಡೆಯುವ ನೋವೇ ಗೊತ್ತಿಲ್ಲದ, ಹೂಸು ಬಿಡುವ ಅನುಭವ ಇರುವ ಗಂಡಸೊಬ್ಬರು ಹೆಂಗಸು ಪಾತ್ರದ ಮೂಲಕವೇ  ಹೀಗೆ ಹೇಳಿಸುತ್ತಾರೆ ಮತ್ತು ಇನ್ನೊಬ್ಬ, ಹಡೆಯುವ ನೋವೇ ಗೊತ್ತಿಲ್ಲದ, ಹೂಸು ಬಿಡುವ ಅನುಭವ ಇರುವವರು ಅದನ್ನು ತಮ್ಮ ಲೇಖನದಲ್ಲಿ ಪ್ರಸ್ತಾಪಿಸುತ್ತಾರೆ.
ಹೆಣ್ಣು ಎಂದರೆ ತಾವು ಎಲ್ಲ ಬಗೆಯಲ್ಲಿ ವ್ಯಾಖ್ಯಾನಿಸಬಹುದಾದ ಒಂದು ಪ್ರಾಣಿ, ಹೆಣ್ಣಿನ ದೇಹವೆಂದರೆ ಇಂತಿಂಥ ಸೌಂದರ್ಯ ಮಾಪಕಗಳಿಗೆ ಅನುಗುಣವಾಗಿರುವ, ಯಾವುದಕ್ಕಾದರೂ ಹೋಲಿಸಬಲ್ಲ ಅಂಗಾಂಗಗಳು ಎನ್ನುವುದು ಈಗ ಮಾತ್ರವಲ್ಲ, ಪ್ರಾಯಃ ಪುರುಷ ವರ್ಗ ಕಲೆ, ಸಾಹಿತ್ಯ ಇನ್ನಿತರ ರೀತಿಯ ಅಭಿವ್ಯಕ್ತಿ ಮಾಧ್ಯಮವನ್ನು ಕಂಡುಕೊಂಡಾಗಿನಿಂದಲೂ ಅಭಿವ್ಯಕ್ತಿಸಿಕೊಂಡೇ ಬಂದಿದೆ.
ಮತ್ತೆ ಹೆಣ್ಣಿಗೆ ತೀರ ಸಹಜವಾದ ಮತ್ತು ಜೀವಿಗಳ ಮುಂದುವರಿಕೆಗೆ ಕೆಲವು ಅನಿವಾರ್ಯವೂ ಆದ ಜೈವಿಕ ಪ್ರಕ್ರಿಯೆಗಳನ್ನು ಕ್ಲೀಷೆಯೆಂಬಷ್ಟರ ಮಟ್ಟಿಗೆ ಬೇರೆ ಯಾವುದಕ್ಕೋ ಹೋಲಿಸುವ ಮನೋಭಾವ ಎಲ್ಲಿಂದ ಹುಟ್ಟುತ್ತದೆ? ವಿಶ್ವದ ಸಕಲ ಚರಾಚರಗಳ ಕುರಿತು ವಿಮರ್ಶಿಸುವ, ಟೀಕಿಸುವ, ಹೇಳಿಕೆಕೊಡುವ, ಒಟ್ಟಾರೆಯಾಗಿ ಒಂದು ಅಂತಿಮ ಷರಾ ಬರೆಯುವ, ಆದಿಪತ್ಯ ಸಾಧಿಸುವ ಎಲ್ಲ ಹಕ್ಕು ತನಗಿದೆ ಎಂದು ಎಂದಿನಿಂದಲೋ ಪುರುಷರು ಭಾವಿಸಿಕೊಂಡು ಬಂದಿರುವುದು ಈ ಮನೋಭಾವದ ಹಿಂದಿದೆ ಎನ್ನಿಸುತ್ತದೆ.

‍ಲೇಖಕರು avadhi

December 5, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Sumangala

    ಅಯ್ಯಯ್ಯೋ… “ಖ್ಯಾತ ಕಥೆಗಾರ್ತಿ” ವಿಶೇಷಣ ನಂಗೆ ಹೆಚ್ಚಾಯ್ತೂರಿ!!

    ಪ್ರತಿಕ್ರಿಯೆ
  2. Gopinath Rao

    ವಾನಳ್ಳಿಯವರ ಪದಪ್ರಯೋಗಕ್ಕೂ ಕಂಬಾರರೋ ನಾಗತಿಹಳ್ಳಿಯವರೋ – ಕಥೆಗಾರರ ಪಾತ್ರವೊಂದರಲ್ಲಿ ಬರಬಹುದಾದ ವ್ಯಾಖ್ಯಾನಕ್ಕೂ ವ್ಯತ್ಯಾಸ ಇದೆ.
    ನಾವು ಬೆಳೆದು ಬಂದ ಪರಿಸರ, ಓದಿಕೊಂಡು ಬಂದ ಹಿಂದಿನವರ ಸಾಹಿತ್ಯ ಇಂತಹ ಉಪಮೆಗಳ ಪ್ರಯೋಗಕ್ಕೆ ಕಾರಣ. ಬರವಣಿಗೆಯಲ್ಲಿ ಈ ರೀತಿ ಬರದ ಹಾಗೆ ನೋಡಿಕೊಳ್ಳುವುದು ಲೇಖಕನ ಕರ್ತವ್ಯ. ಭಾಷಣದಲ್ಲಿ ಮಾತಿನಭರದಲ್ಲಿ ಇಷ್ಟೂ ದಿನ ಅವ್ಯಾಹತವಾಗಿ ತಾವು ಓದಿಕೊಂಡು ಬಂದಿದ್ದ ಸಾಹಿತ್ಯದ ಪ್ರಭಾವದಿಂದ ಕೆಲವೊಮ್ಮೆ ಈ ರೀತಿಯ ಮಾತುಗಳು ನುಸುಳಿ ಬಂದು ಬಿಡುವುದುಂಟು. ಈ ರೀತಿಯ ತಪ್ಪು ಮಾಡಿದ್ದೇನೆ ಎಂಬುದು ಅರಿವಾಗುವುದೂ ಕೆಲವೊಮ್ಮೆ ಇನ್ನೊಬ್ಬರು ತಿಳಿಸಿದ ಮೇಲೆಯೇ! ನಾರೀತ್ವದ ಅಪಮಾನ ಮುಖ್ಯ ಉದ್ದೇಶವಾಗಿಲ್ಲದ ಇಂತಹ ಹೇಳಿಕೆಗಳನ್ನು ಅವರ ಅವಗಾಹನೆಗೆ ತಂದು ಮರೆತು ಬಿಡುವುದು ಒಳ್ಳೆಯದು.
    ಸಾಹಿತಿಯೋರ್ವರು ತಮ್ಮ ಪಾತ್ರ ಚಿತ್ರಣದಲ್ಲಿ ಇಂತಹ ಹೇಳಿಕೆಗಳನ್ನು ಬಳಸಬಹುದೇ ಎನ್ನುವುದು ತರ್ಕಯೋಗ್ಯ ಪ್ರಶ್ನೆ. ಉದಾಹರಣೆಗೆ ಅಜ್ಜಿಯ ಪಾತ್ರವೊಂದು ಮೊಮ್ಮಗಳನ್ನು ಜರೆಯುವ ಸಮಯದಲ್ಲಿ ಅಜ್ಜಿ ಬಾಯಲ್ಲಿ ಬರುವ ಮಾತುಗಳು ಸ್ತ್ರೀದೂಷಣೆಗಳೇ ಆಗಿರುತ್ತವೆ. ಹಾಗೆಯೇ ಲೇಖಕ ಬರೆದರೆ ಅದು ಲೇಖಕನ ಮಾತು ಎನ್ನುವುದು ಎಷ್ಟು ಸಮಂಜಸ? ಪಾತ್ರ ಚಿತ್ರಣದ ಔಚಿತ್ಯ ಹಾಗೂ ಸ್ತ್ರೀತ್ವದ ದೂಷಣೆಗಳೆರಡರ ನಡುವೆ ಲೇಖಕ ಎಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು?
    ಯಾರೇ ಆಗಲಿ, ಮಾತನ್ನು, ಬರವಣಿಗೆಯನ್ನು ಹಿಂಪಡೆಯಬಹುದು, ತಿದ್ದಿಕೊಳ್ಳಬಹುದು. ಆಶಯ, ಮನಸ್ಸು ಶುದ್ಧವಾಗಿರಬೇಕಾದುದು ಮುಖ್ಯ.

    ಪ್ರತಿಕ್ರಿಯೆ
    • Sumangala

      ಒಂದು ಸ್ಪಷ್ಟೀಕರಣ – ನಾಗತಿಹಳ್ಳಿಯವರು ಅವರ ಕಥೆಯಲ್ಲಿ ಈ ಮಾತನ್ನು ಹೇಳಿರಲಿಲ್ಲ, ಅವರು ಮೈಸೂರು ವಿವಿಯನ್ನು ಮೆನೋಪಾಸ್ ಆದ ಹೆಂಗಸರಿಗೆ ಹೋಲಿಸಿದ್ದು ಮಯೂರದಲ್ಲಿ ಹಿಂದೆ ನಡೆದ ವಿವಿಗಳ ಗುಣಮಟ್ಟ ಕುರಿತ ಚರ್ಚೆಯಲ್ಲಿ. ಹಾಗೆಯೆ ಭೂಮಿಯನ್ನು ಚಪ್ಪಟೆ ಎದೆಗೆ ಹೋಲಿಸಿದ್ದು ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ಅವರ ಪ್ರವಾಸ ಕಥನದ (ನನಗೆ ಪ್ರವಾಸ ಕಥನದ ತಲೆಬರೆಹ ಮರೆತಿದೆ) ಲೇಖನದಲ್ಲಿ.

      ಪ್ರತಿಕ್ರಿಯೆ
  3. Ashalatha, Mangaluru

    ಲೇಖಕರೆಲ್ಲ ಹೆಣ್ಣನ್ನು ಹೋಲಿಸಿ ಕೊಡುವ ಉಪಮೆಗಳನ್ನು ಚೆನ್ನಾಗಿ ವಿಮರ್ಶೆ ಮಾಡಿದ್ದೀರಿ.

    ಪ್ರತಿಕ್ರಿಯೆ
  4. ಲೋಕೇಶ್ Mosale

    ವಾನಳ್ಳಿ ಯವರು ಕನ್ಯತ್ತ್ವ ಇಟ್ಟು ಕೊಂಡು ಈಗ ಪೀಠಾಧಿಪತಿ ಯಾಗಿದ್ದಾರೆ !!! ಏನೋ ರಾಮಕೃಷ್ಣ ಆಶ್ರಮದಲ್ಲಿ ಕಲಿತು (ಸ್ವಲಿಂಗಿಗಳೋದಿಗೆ) ಸಮಾಜಕ್ಕೆ “ಕನ್ಯತ್ತ್ವ ” ಪಾಠ ಮಾಡಿ ಮೌನವಹಿಸಿದ್ದಾರೆ . “ಕನ್ಯತ್ತ್ವ “ಇಟ್ಟುಕೊಂಡು ಬಾಳು ನಡೆಸುತ್ತಿರುವ ಇವರ ಬರಹ – ಬದುಕು ನಡೆ – ನುಡಿ-ಮಾತು- ದನಿ ಯಲ್ಲವೂ”ಕನ್ಯತ್ತ್ವ “ಉಳಿಸಿ ಕೊಂಡ “ಕನ್ಯೆ”ಯಂತೆಯೇ…ಶಾಂತಂ ಪಾಪಮ್….!! ಪಾಪ ಹೆಣ್ಣು ಮಕ್ಕಳ ತಂದೆಯಾಗಿ ನೂರಾರು ವಿದ್ಯಾರ್ಥಿಗಳ ಪ್ರೊಫೆಸರ್ ,ಗುರುಗಳಾಗಿ, ಡಾಕ್ಟರ್ ವಾನಳ್ಳಿ ಯವರು ಮಹಿಳೆಯರನ್ನು ನಿಂದಿಸುವುದು ಉಂಟೆ ? ಅವರ ಸಂಸ್ಕಾರ- “ಕನ್ಯತ್ತ್ವ”ವನ್ನು ದಯಮಾಡಿ ಹಾಳು ಮಾಡಬೇಡಿ . ಅಚ್ಛೆ ದಿನಗಳು ಬಹು ದೂರವಿಲ್ಲ,

    ಪ್ರತಿಕ್ರಿಯೆ
  5. ಆನಂದ್ ಋಗ್ವೇದಿ

    ಅದೊಂದು ತುಟಿ ಮೀರಿದ ಮಾತಷ್ಟೇ ಅಲ್ಲ. ಅದರಲ್ಲಿ ಈ ಸಮಾಜ ಪೋಷಿಸಿಕೊಂಡು ಬಂದ ಕನ್ಯತ್ವದ ಬಗೆಗಿನ ನಂಬುಗೆಯೇ ಗಟ್ಟಿಯಾಗಿ ಉಪಮೆಯಾಗಿದೆ. ಕಾನೀನರನ್ನು ಹೊಂದಿರುವ ಮಹಾಭಾರತವೇ ಇವರಿಗೆ ಪವಿತ್ರ ಗ್ರಂಥವಾಗಿರುವಾಗ ಕನ್ಯತ್ವ ಒಂದು ಪ್ರಶ್ನಾರ್ಹ ಸಂಗತಿ ಆಗಬಾರದಿತ್ತು. ಸಾರ್ವಜನಿಕ ವಿಶ್ವಾಸಾರ್ಹತೆ ಬಗ್ಗೆ ಹೋಲಿಕೆಗೂ ಈ ಪದ ಬಳಕೆ ಅನಗತ್ಯ ಎಂಬುದು ತಿಳಿದವರಷ್ಟೇ ಪ್ರಾಜ್ಞರು. ಉಳಿದವರು ಗಂಡಸರು ಮಾತ್ರ!!

    ಪ್ರತಿಕ್ರಿಯೆ
  6. .ಮಹೇಶ್ವರಿ.ಯು

    ಗೋಪಿನಾಥರಾವ್ ಅವರ ಪ್ರತಿಕ್ರಿಯೆಗೆ ನನ್ನದೂ ಸಹಮತವಿದೆ.ನಾವಾಡುವ ಭಾಷೆಯ ಹಿಂದೆ ನಮ್ಮ ಹಿರಿಯರಿದ್ದಾರೆ.ನಮ್ಮ ಸಾಮಾಜಿಕ ವ್ಯವಸ್ಥೆ ಇದೆ.ಭಾಷೆ ಎನ್ನುವುದು ಕಲಿತು ಬಂದಂಥದ್ದು.ಈ ಮತ್ತು ಇಂತಹ ಪ್ರಯೋಗಗಳು ನಮಗರಿವಿಲ್ಲದೆ ಬಂದು ಬಿಡಬಹುದು. ಉದಾಹರಣೆಗೆ’ ಕನ್ನೆನೆಲ’ದಂತಹ ಪ್ರಯೋಗಗಳು ಕೂಡ. ಇದಕ್ಕೆ ಆ.- ಈ ವ್ಯಕ್ತಿಹೊಣೆಗಾರರಾಗಿರುವುದಿಲ್ಲ.ಇಂತಹ ಪ್ರಯೋಗಗಳು ಲೇಖಕಿಯರಿಂದಲೂ ಬರಬಹುದು. ಹಾಗಂತ ಈ ಪ್ರಯೋಗಗಳನ್ನು ನಾನು ಸಮರ್ಥಿಸುತ್ತಿದ್ದೇನೆಂದು ಅರ್ಥವಲ್ಲ.ಈ ಸೂಕ್ಷ್ವವನ್ನು ತಿಳಿಯಹೇಳುವುದು, ಅದರ ಕುರಿತು ಗಮನ ಹರಿಸುವುದು ಮುಖ್ಯ ಹೊರತು ಒಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ಸ್ತ್ರೀದ್ವೇಷಿ ಎಂಬಂತೆ ಹಳಿಯುವುದು ವಿವೇಕವೆಂದು ನನಗನಿಸುವುದಿಲ್ಲ.

    ಪ್ರತಿಕ್ರಿಯೆ
    • Rekha Chouhan

      Well said Sumangala, they also undergo something called andropouse almost in the same age as women go through, they also loose shoulders and become flat, they also begin looking dull as they age . .They also incapable of doing many things much before a women of same age. But they must have enough sense to understand this dimension as well. The sensible Saahiti. . can never make such comments because only they can see life in many dimensions.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: